ಶುಕ್ರವಾರ, ಜೂನ್ 1, 2012

ಬುದ್ಧಿಜೀವಿಗಳು ಮರೆಯಾಗಿರುವ ವಿದ್ವತ್ ವಲಯ


                                                                                           ಇಂಗ್ಲಿಷ್ ಮೂಲ-ಎ.ಆರ್.ವಾಸವಿ
ತತ್ವನಿಷ್ಟವಾದ ಮತ್ತು ಕಷ್ಟಕರ ಸ್ಥಿತಿಯಿಂದ ವಿಲಕ್ಷಣ ಬಗೆಯಲ್ಲಿ ದೂರ ಸೆಳೆವುದು ನಿಮಗೆ ತಿಳಿದಂತೆ ಸರಿದಾರಿಯಾಗಿದ್ದರೂ ನೀವು ಭಾಗವಹಿಸಬಾರದೆಂದು ನಿರ್ಧರಿಸಿದ್ದೀರಿ. ಹೀಗೆ ತಡೆಗಟ್ಟುವುದನ್ನೇ ಉದ್ದೀಪಿಸುವ ವಿದ್ವಾಂಸರ ಮನೋಹವ್ಯಾಸಗಳಿಗಿಂತ ಯಾವುದೂ ಹೆಚ್ಚು ನಿಂದನಾರ್ಹವಲ್ಲ್ಲ. ನೀವು ಹೆಚ್ಚು ರಾಜಕೀಯವಾಗಿ ಕಾಣಿಸಿಕೊಳ್ಳಲೂ ಬಯಸುವುದಿಲ್ಲ. ವಿವಾದಿತ ವ್ಯಕ್ತಿಯಾಗಿ ಎಲ್ಲಿ ಕಾಣುವೆನೋ ಎಂದು ಹೆದರುತ್ತೀರಿ. ನಿಮಗೆ ನಿಮ್ಮ ಬಾಸ್ ಅಥವಾ ಅಧಿಕೃತ ವ್ಯಕ್ತಿಯ ಅನುಮತಿ ತೀರಾ ಅಗತ್ಯವಿದೆ. ಸಮತೂಕ ಮನಸ್ಥಿತಿಯವರು, ವಸ್ತುನಿಷ್ಟ, ಮತ್ತು ಉದಾರ ಮನಸ್ಸಿನವರು ಎಂದು ನೀವು ಪ್ರಸಿದ್ಧಿ ಗಳಿಸಿದ್ದನ್ನು ಉಳಿಸಿಕೊಳ್ಳಲು ಬಯಸುತ್ತೀರಿ. ಯಾವುದಾದರೂ ಮಂಡಳಿ ಅಥವಾ ಘನತೆವೆತ್ತ ಸಮಿತಿಯ ಸದಸ್ಯರಾಗಲು ಬಯಸಿ ಸಂಪರ್ಕ ಮಾಡಲು ಹಿಂಜರಿದರೂ ಅದನ್ನು ಪಡೆವ ಭರವಸೆ ಹೊಂದಿದ್ದೀರಿ. ಆದರೂ ಮುಂಚೂಣಿಯ ಜವಾಬ್ದಾರಿ ಸ್ಥಾನದಲ್ಲೇ ಉಳಿದಿದ್ದೀರಿ. ಮುಂದೊಮ್ಮೆ ಗೌರವ ಪದವಿ, ಪ್ರಶಸ್ತಿ ಅಥವಾ ಒಂದು ದೊಡ್ಡ ಬಹುಮಾನ, ಅದಿಲ್ಲದಿದ್ದರೆ ಬಹುಶಹ ರಾಯಭಾರಿ ಹುದ್ದೆಯನ್ನಾದರೂ ಪಡೆವ ಭರವಸೆ  ಹೊಂದಿದ್ದೀರಿ.      
                                                                         -ಎಡ್ವರ್ಡ್ ಸೈದ್, ಬೌದ್ಧಿಕ ಪ್ರತಿನಿಧಿತ್ವ, 1994

ಎಡ್ವರ್ಡ್ ಸೈದ್ ಭಾರತೀಯ ವಿದ್ವತ್ವಲಯವನ್ನು ಬಹು ಸುಲಭವಾಗಿ ವಿವರಿಸಿದ್ದಾರೆ. ದೆಹಲಿಯ ಬಹು ಬಗೆಯ ವಿದ್ವತ್ ವೃತ್ತಗಳಿಂದ ಆರಂಭಿಕ ಅತ್ಯುತ್ಸಾಹದ ತಾಣಗಳವರೆಗೂ ಭಾರತದ ಬಹುಪಾಲು ವಿದ್ವತ್ ವಲಯವಿದೆ.  ಇದು ವಿದ್ವತ್ತಿನ ಮೂಲ ಉದ್ದೇಶ ಮಾತ್ರವಲ್ಲದೆ ಬೌದ್ಧಿಕ ಸಾಧ್ಯತೆಯನ್ನೆ ಕಳೆದುಕೊಂಡಂತೆ ತೋರುತ್ತ್ತಿದೆ. ಮೇಲ್ಮುಖ ಸಾಮಾಜಿಕ ಹಂಬಲಗಳು, ಅನುಕೂಲವಾದಿ ರಾಜಕಾರಣ, ಮತ್ತು ಸಾಮೂಹಿಕ ಮರೆವುಗಳ `ನೈತಿಕ ತತ್ತರ'ದ ವಶದಲ್ಲಿರುವಂತೆಯೂ ತೋರುತ್ತದೆ. ಈ ನಡುವೆ ರಾಷ್ಟ್ರ ಮತ್ತು ಸಮಾಜದ ಯುಗ ಪರಿವರ್ತನೆ ಬಗ್ಗೆ, ರಾಷ್ಟ್ರದ ಆಗುಹೋಗುಗಳ ಬಗ್ಗೆ, ವಿದ್ವತ್ಜನತೆ ತಮ್ಮ ಸಲಹೆ ಸೂಚನೆ ನೀಡುವುದಕ್ಕಾಗಲೀ ಟೀಕೆ ಟಿಪ್ಪಣಿ ಮಾಡುವುದಕ್ಕಾಗಲೀ  ದನಿಯನ್ನೂ ಎತ್ತುವುದಿಲ್ಲ ಭಾಗವಹಿಸುವುದೂ ಇಲ್ಲ್ಲ. ಇದಕ್ಕಿಂತಲೂ ಕೆಟ್ಟದ್ದಾದ ಗುಣಸ್ವಭಾವಗಳಿವೆ. ಇವು ವಿದ್ವತ್ತು ಮತ್ತು ಬೌದ್ಧಿಕತೆ, ನಿಷ್ಟತೆ, ಮುಕ್ತತೆ, ವಿಶಾಲ ಜಗತ್ತಿನೊಂದಿಗೆ ತೊಡಗಿಸಿಕೊಳ್ಳುವಿಕೆ, ಸರಳ ಸಾಮಾನ್ಯ ಒಳಿತಿಗಾಗಿ ಬದ್ಧವಾಗುವ ಪ್ರಜ್ಞೆ ಇವನ್ನು ವ್ಯಾಖ್ಯಾನಿಸುವ ಸ್ವಭಾವ ಯಾವುದಿರಬೇಕು ಎಂಬುದನ್ನು ನಿರಾಕರಿಸಲೆಂದೆ ಜೊತೆಗೂಡಿವೆ. ಹಾಗಾಗಿ ವಿದ್ವತ್ ವಲಯದ ಪ್ರಮಾಣ ಅಧಿಕವಾಗುತ್ತಿದ್ದರೂ ಬುದ್ಧಿಜೀವಿಗಳ ಇಳಿಮುಖ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣುತ್ತೇವೆ.
ಭಾರತೀಯ ವಿದ್ವತ್ ವಲಯದ ಈ ಕಳಪೆ ವ್ಯಕ್ತಿತ್ವ ಹಲವು ಮೂಲಗಳಿಂದ ಒಡೆದುಮೂಡಿದೆ. ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಯಲ್ಲಿ ಇದು ಶೈಕ್ಷಣಿಕ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಎಲ್ಲ ಶ್ರೇಣಿಗಳ ಹಿನ್ನೆಲೆಯಿಂದ- ಸ್ಥಾಪಿತ ಧೀಮಂತ ಕುಟುಂಬಗಳಿಂದ, ಭೂಮಾಲಿಕ ಮನೆತನಗಳಿಂದ, ವೃತ್ತಿನಿರತ ಮತ್ತು  ಸರಕಾರಿ ಸೇವೆಯ ಹಿನ್ನೆಲೆಯಿಂದ ಹಿಡಿದು ಅನಾನುಕೂಲ ಜಾತಿ ಸಮುದಾಯಗಳ ವರೆಗೆ- ಬಂದ ವಿದ್ವತ್ ವಲಯ ಹಿಂದಿನ ಗ್ರಹಿಕೆಯನ್ನು  ಸಾಮಾಜೀಕರಣಗೊಳಿಸಿದಂತೆ ತೋರುತ್ತದೆ. ಇಂಥ ಹಿಂದಿನ ಗ್ರಹಿಕೆಯ ಮನಸ್ಥಿತಿ ಹೆಚ್ಚಾಗಿ ವೃತ್ತಿ ಜೀವನದಲ್ಲಿ ಸುಭದ್ರತೆ (ವೃತ್ತಿ ಜೀವನದ ಮಹತ್ವಕಾಂಕ್ಷೆಯೂ ಅಲ್ಲದ) ಸೀಮಿತ ಲೋಕದೃಷ್ಟಿಯಾಗಿದೆ. ಇದು ತಮ್ಮ ಜಾತಿ, ಮತ, ಕೋಮು ಸಮುದಾಯಗಳ ಹಿನ್ನೆಲೆಯಲ್ಲಿ ಮುಂದುವರೆದು ವ್ಯಾಖ್ಯಾನಕ್ಕೊಳಗಾಗಬೇಕಿದೆ. ಅಲ್ಲದೆ  ಸಂಕುಚಿತ ಸಾಮಾಜಿಕ ಸಂಬಂಧಗಳಲ್ಲಿ ಮುಗಿತಾಯ ಕಂಡಿದೆ. ತನ್ನ ಸಮುದಾಯದಲ್ಲಿ ಆಳವಾಗಿ ಬೇರುಬಿಟ್ಟ ಸ್ತ್ರೀ-ಪುರುಷ ಸದಸ್ಯರಿಂದ ಕೂಡಿದ ಭಾರತೀಯ ವಿದ್ವತ್ ವಲಯ ದೊಡ್ಡಮಟ್ಟದಲ್ಲಿ ವಿರ್ಮಶೆಗೆ ಒಳಪಡದೆ ಉಳಿದುದರಿಂದ ಇಂಥ ಇಕ್ಕಟ್ಟಿನ ಮನಸ್ಥಿತಿಯಲ್ಲೆ ಒಡಮೂಡುತ್ತಿದೆ. ಪಾರಂಪರಿಕ ಸಾಮಾಜಿಕ ಸಹವಾಸ ಮತ್ತು ಹಿಂದಿನ ಗ್ರಹಿಕೆಗಳಿಂದ ಸ್ವತಂತ್ರನಾದ ಯಾವುದೇ ಒಬ್ಬ ವ್ಯಕ್ತಿ ಯಾರಿಗಾದರೂ ಒಬ್ಬರಿಗೆ ಅಪರೂಪಕ್ಕೆ ಭೇಟಿಯಾಗಬಹುದು. ಅದರೆ ಇಂಥ ಹಿಂದಿನ ಗ್ರಹಿಕೆಯ ಮನಸ್ಸು ಮತ್ತು ನಡವಳಿಕೆ ಯಾವುದೇ ಬಗೆಯಲ್ಲಿ ಬೌದ್ಧಿಕ ಬೆಳವಣಿಗೆಯಾಗದಂತೆ ತಡೆಯುತ್ತದೆ. ಅಷ್ಟೇಅಲ್ಲ ಅವನಲ್ಲಿ ಮುಚ್ಚಿದ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಒಟ್ಟಿನಲ್ಲಿ ಆಲೋಚಿಸಲು ವಿಫಲನಾಗುವ ಮತ್ತು ಎಲ್ಲ ಹೊಸ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಲು ಸಾಧ್ಯವಿಲ್ಲದ ಸೀಮಿತ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇತ್ತೀಚೆಗೆ ಒಬ್ಬ ಯುವ ಪರಿಸರವಾದಿ ತಾನು ವಾಸಿಸುವ ಕ್ಯಾಂಪಸ್ ಮನೆಯ ಆವರಣದಲ್ಲಿ ನಿರ್ವಹಣ ಅಭ್ಯಾಸ ಮತ್ತು ನಿರುಪಯೋಗಿ ಪುಷ್ಪಾವರಣಗಳನ್ನು ಒಟ್ಟಿಗೆ ಜೋಡಿಸುವ ಕಾರ್ಯದಲ್ಲಿ ನಿರಾಸೆ ಅನುಭವಿಸಿದ್ದನ್ನು ನಿರೂಪಿಸಿದ್ದಾನೆ. ಮರುಬಳಕೆಯ ಯೋಜನೆಯಡಿ ಬಹುಪಾಲು ಅಧ್ಯಾಪಕರು ನಿರುಪಯೋಗಿ ಪುಷ್ಪಾವರಣ ಜೋಡಿಸುವ ಕಾರ್ಯವನ್ನೊಪ್ಪಿಕೊಂಡಿದ್ದರು. ಆದರೂ ಅದರಲ್ಲಿ ಪಾಲುಗೊಳ್ಳಲು ಒಲ್ಲದ ಮನಸ್ಸುಳ್ಳವರಾಗಿದ್ದರು. ಆಗ ಹಿರಿಯ ಅಧ್ಯಾಪಕರೊಬ್ಬರು ಅವನನ್ನೇ ಆ ಕೆಲಸಕ್ಕೆ ಹಚ್ಚಿದ್ದಾರೆ. ಅಲ್ಲದೆ ತಾನಾಗಲೀ ತನ್ನ ಹೆಂಡತಿಯಾಗಲೀ ಏಕೆ ತಮ್ಮ ಕೈಗಳನ್ನು ಹೊಲಸು ಮಾಡಿಕೊಳ್ಳಬೇಕು ಎಂದು ಒತ್ತಾಯಮಾಡಿ ಕೇಳಿದ್ದಾರೆ. ತಮ್ಮ ಹೆಂಡತಿ ಇಂಥ ಕೆಲಸಗಳನ್ನು ಮಾಡಲು ಒಪ್ಪಿಕೊಳ್ಳುವಳೆಂದು ಅವರು ಯೋಚಿಸಿದ್ದಾರೆಯೆ?
ಇಂಥ ಅಧ್ಯಾಪಕರು ಕೆಲಸ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ವಿದ್ವತ್ ಜನತೆ, ಪದವೀಧರರು ಮತ್ತು ವಿದ್ಯಾರ್ಥಿಗಳು ಇರುತ್ತಾರೆ. ಅವರೊಂದಿಗೆ ಪ್ರಜಾಪ್ರಭುತ್ರ ವಿರೋಧಿ ಮತ್ತು ಸಂಕುಚಿತ ಸ್ವಭಾವಗಳ ಸಂಸ್ಕೃತಿಯೂ  ಹಿಂದಿನ ಗ್ರಹಿಕೆಗಳೂ ಅದರ ಮಿತಿಗಳೂ ಕೂಡಿಕೊಂಡಿವೆ. ವ್ಯಾಪಕವಾದ ಏಣಿ ಶ್ರೇಣಿ ವ್ಯವಸ್ಥೆ, ಪುರುಷ ಪರ ನಿಲುವು ಮತ್ತು ಜಾತಿ ವ್ಯಾಖ್ಯಾನಿತ ಸಂಸ್ಕೃತಿಯೂ ಬಹಳಷ್ಟು ವಿದ್ಯಾಸಂಸ್ಥೆಗಳಲ್ಲಿವೆ. ಆದ್ದರಿಂದ ಇವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಮತ್ತು ಸಾಮೂಹಿಕ ಬದ್ಧತೆಯನ್ನು ಪಾಲನೆ ಮಾಡುವ ವಾತಾವರಣ ಒದಗಿಸಲು ಸೋಲುತ್ತವೆ. ಈ  ಸಂಸ್ಕೃತಿ ಪ್ರತಿಯೊಂದು ತಲೆಮಾರಿನಲ್ಲೂ ದಾಕ್ಷಿಣ್ಯ, ಭಟ್ಟಂಗಿತನ, ಮತ್ತು ದಾಸಾನುದಾಸ ಸಂಸ್ಕೃತಿಯನ್ನು ಸಾರಾಸಗಟಾಗಿ ಮರುಹುಟ್ಟು ಹಾಕುತ್ತದೆ. ಇಂಥ ಸಾಂಸ್ಥಿಕ ಸಾಮಾಜೀಕರಣದ ಫಲವಾಗಿ ಬಹಳಷ್ಟು ವಿದ್ವತ್ ಜನರಲ್ಲಿ ಸ್ವಂತ ನಿಲುವು ತಳೆಯಲಾಗದ, ತಮ್ಮ ಮನಸ್ಸನ್ನು ಸಮರ್ಥವಾಗಿ ವ್ಯಕ್ತಪಡಿಸಲಾಗದ, ಸ್ವತಂತ್ರ ನಿರ್ಣಯ ಮಾಡಲಾಗದ ಬೌದ್ಧಿಕ ಅಸಾಮರ್ಥ್ಯತೆ ಎದ್ದು ಕಾಣುತ್ತದೆ. ಹೀಗಿದ್ದರೂ ಇಂಥ ದಾಸಾನುದಾಸ ಸಂಸ್ಕೃತಿ ಸಂಪೂರ್ಣವಾಗಿ ಅಂಕೆಯಲ್ಲಿರುವ ವಿದ್ವಾಂಸರನ್ನೂ ಹುಟ್ಟಿಸುವುದಿಲ್ಲ. ದಮನ ನೀತಿಯನ್ನನುಸರಿಸಿ ಸಂಸ್ಥೆಯಲ್ಲಿ ಮೈತ್ರಿಯ ಪರಿಸರವನ್ನೂ ಪೋಷಿಸುವುದಿಲ್ಲ. ಹಲವಾರು ಸಂಸ್ಥೆಗಳಲ್ಲಿ ವಿದ್ವತ್ ಜನರೇ ಸಂಸ್ಥೆಯನ್ನೂ ಅದರ ಕಾರ್ಯ ಚಟುವಟಿಕೆಗಳನ್ನೂ ಮತ್ತಷ್ಟು ಹಾಳುಮಾಡುತ್ತಾರೆ. ಪ್ರಾತಿನಿಧಿಕ ಮತ್ತು ಪರೋಕ್ಷ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆ. ಬಹುಪಾಲು ವಿದ್ವತ್ ಜನತೆ ಸ್ವತಂತ್ರ ಚಿಂತಕರಾಗಲೀ ವಿದ್ವಾಂಸರಾಗಲೀ ಆಗುವುದಿಲ್ಲ. ಬದಲಿಗೆ ಗುಂಪು ಅಥವಾ ಸಣ್ಣ ಕೂಟಗಳಲ್ಲಿ ಕ್ರಿಯಾಶೀಲರಾಗಿ ಬೌದ್ಧಿಕ ಪರಿಧಿಯ ರಾಜಕೀಯ ವಿಷವರ್ತುಲದೊಳಗೆ ಮರುಹುಟ್ಟು ಪಡೆಯುತ್ತಾರೆ. 
ಈ ರೋಗದ ಕೆಲವಂಶಗಳು ಪ್ರಭುತ್ವ ಮತ್ತು ಬೌದ್ಧಿಕ ವಲಯಗಳ ನಿಕಟ ಬಾಂಧವ್ಯದಿಂದಲೂ ಗಣನೆಗೆ ಬರುತ್ತದೆ. ಪ್ರಭುತ್ವ ಬೆಂಬಲಿತ ಉನ್ನತ ಶಿಕ್ಷಣವೆ, ಸುರಕ್ಷಿತ ವಿಶಾಲ ನೆಲೆಗಟ್ಟು ಮತ್ತು ಸಾರ್ವಜನಿಕ ಬೆಂಬಲವಿರುವ ಅವಕಾಶಗಳಿಗೆ ದಾರಿಯಾಗಿರುವಂತೆ ಹಲವು ಬಗೆಗಳಲ್ಲಿ ಕಾಣುತ್ತದೆ. ಆದರೂ ಉನ್ನತ ಶಿಕ್ಷಣದ ರಾಜಕೀಯವೆಂದರೆ ರಾಜ್ಯ ವ್ಯವಸ್ಥೆ ಶಿಕ್ಷಣವನ್ನು ರಾಜಕೀಯಗೊಳಿಸುವ ಮಾರ್ಗವಾಗಿರುವುದು ಮಾತ್ರವಲ್ಲ. ಅದು ವಿದ್ವತ್ ವಲಯದ ಮೌನ ಮತ್ತು ಸಹಕಾರವನ್ನು ಪ್ರಭುತ್ವ ಅಥವಾ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಾಗಿ ಬದಲಾಯಿಸುತ್ತದೆ. ಉನ್ನತ ಹುದ್ದೆಗಳಿಗೆ ಮುಂಬಡ್ತಿ ಕೋರಿ ಓಲೈಸುವಿಕೆ ಬಯಸುವುದು ಮತ್ತು ಕೆಲಸ ಮಾಡಿಕೊಡುವ ರಾಜಕಾರಣಿಗೆ ಕಾಣಿಕೆ ನೀಡುವುದು, ಹಲವಾರು ವಿದ್ವಾಂಸರನ್ನು ಮತ್ತು ಸೃಜನಶೀಲ ಬರಹಗಾರರನ್ನು ಪ್ರಭುತ್ವದ ದಾಸರನ್ನಾಗಿ ಮಾಡಿದೆ. ಇದರಿಂದ ಅವರು ಎರಡು ಬಗೆಗಳಲ್ಲಿ ದಾರಿ ತಪ್ಪುತ್ತಾರೆ. ಹಲವು ಬಗೆಗಳಲ್ಲಿ ಬೌದ್ಧಿಕ ವಿರೋಧಿ ಪ್ರಸ್ತಾಪ ಮಾಡುವ ಹಾಗೆ ಆಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಭುತ್ವ ನಾಶ ಮಾಡಿದಾಗ ಅಥವಾ ಮಿತಿ ಮೀರಿ ಕಾನೂನುಭಂಗ ಮಾಡಿದಾಗ ತನ್ನ ವಿರುದ್ಧ ಅಭಿಪ್ರಾಯ ವ್ಯಕ್ತಮಾಡದಂತೆ ಮೊದಲಿಗೆ ಹತ್ತಿಕ್ಕುತ್ತದೆ. ಮತ್ತೆ ಕೆಲವರು ಪ್ರಭುತ್ವದ ಆಂತರಿಕ ಸಲಹೆಗಾರರಾಗುವ, ರಾಜಕಾರಣಿಗಳಿಗೆ ವಕ್ತಾರರಾಗುವ, ಅಲ್ಲದೆ ಸಮಸ್ಯೆಗಳ ಪರಿಹಾರಕರೂ ಹಳಸಿದ ಮತ್ತು ಸುಳ್ಳು ಮಾಹಿತಿ ಒದಗಿಸುವವರೂ ರಾಜಕೀಯ ಮೇಲಾಟಗಳಿಗೆ ತಕ್ಕಂತೆ ಮಾಹಿತಿ ಮರುವ್ಯಾಖ್ಯಾನ ಮಾಡುವವರೂ ಆಗುವ ದಾರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ನಾನೊಂದು ವರದಿಯನ್ನು ಪರಿಶೀಲನೆ ಮಾಡಿದೆ. ಅದು ಸಮರ್ಥರಾದ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ಕೃಷಿ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲ್ಲಿ ಸಿದ್ಧವಾಗಿತ್ತು. ಕರ್ನಾಟಕ ಸರಕಾರ ತನ್ನ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗಗಳು ಮಾಡಿದ ಲೆಕ್ಕಾಚಾರಗಳು ತಪ್ಪು ವಿಧಾನಗಳನ್ನು ಆಧರಿಸಿವೆ ಎಂದೂ ಅವು ವರದಿಯ ವಿಶ್ಲೇಷಣೆಯನ್ನು ಅನುಸರಿಸಿ ಒಂದು ಸಲ ತಿದ್ದುಪಡಿ ಮಾಡಿಕೊಂಡಿದ್ದರೆ ರಾಜ್ಯದ ಕೃಷಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತಿತ್ತು ಎಂದೂ ಘೋಷಿಸಲು ಅವಕಾಶ ಒದಗಿಸಿತ್ತು! ಇಂಥ ಬೌದ್ಧಿಕ ಬೆಂಬಲದಿಂದ ವಾಸ್ತವವೆ ನಿರಾಕರಣೆಗೆ ಒಳಗಾಯಿತು. ಅಲ್ಲದೆ ಸುಳ್ಳನ್ನು ಸತ್ಯವೆಂದು ಘೋಷಣೆ ಮಾಡುವ ಕಾರ್ಯ ನಡೆದುದರಿಂದ ಬಹಳಷ್ಟ ಜನರಿಗೆ ಕೆಡುಕುಂಟಾಯಿತು. ಪ್ರಭುತ್ವದ ಪ್ರಶಸ್ತಿ ಮತ್ತು ಅನುದಾನಗಳು ಕೂಡ ಬಹುಪಾಲು ವಿದ್ವತ್ ಜನರನ್ನು ರಾಜಕೀಯ ಪರಿಧಿಯೊಳಗಿರಿಸಿವೆ. ವೈಯಕ್ತಿಕವಾಗಿ ನೀಡುವ ಕಾಣಿಕೆಗಳು ಮತ್ತು ಓಲೈಸುವಿಕೆಗಳು, ಹಾಗೂ ನಿಕಟ ವರ್ತುಲದಲ್ಲಿ ಉಳಿಸಿಕೊಳ್ಳುವ ಸೌಲಭ್ಯಗಳ ಬಳಕೆ ಅವರನ್ನು ಸರಕಾರದ ದಾಸರನ್ನಾಗಿ ಮಾಡುತ್ತ್ತಿದೆ. ಬಹಳಷ್ಟು ವಿದ್ವತ್ ಜನರು ಪ್ರಭುತ್ವದೊಂದಿಗೆ ಕರಾರು ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ನೀತಿ ನಿರೂಪಣೆಯ ಉದ್ದೇಶ ಈಡೇರಿಸಲು, ಒತ್ತಡದ ಗುಂಪಾಗಿ ಕೆಲಸ ಮಾಡಲು ಅಥವಾ ನ್ಯಾಯಾಲಯದ ತೀಪುಗಳನ್ನು ಜಾರಿಗೊಳಿಸುವ ಹೊಣೆ ಹೊರಲು ಒಪ್ಪಂದದ ಅಗತ್ಯವಿದೆ. ಆದರೆ ಕೆಲವರು ತಮ್ಮ ತರಬೇತಿ ಮತ್ತು ವೃತ್ತಿ ಜೀವನದ ಏಕೈಕ ಉದ್ದೇಶವಾಗಿ ಅಂಥ ಒಪ್ಪಂದವನ್ನು ಕಾಣುತ್ತಾರೆ.
ಈ ಬಗೆಯಲ್ಲಿ ಪ್ರಭುತ್ವದೊಂದಿಗೆ ಕೂಡಿಕೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಹಲವು ಜನ ಸಮಾಜ ವಿಜ್ಞಾನಿಗಳು ಈಗ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕಾಗಿ ಏಜೆಂಟರು ಅಥವಾ ಪಾಲುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಹಭಾಗಿತ್ವಗಳು ಈ ಅಧ್ಯಯನಗಳ ತಾತ್ವಿಕ ತಳಹದಿಗೆ ಅಲ್ಪ ಸ್ವಲ್ಪ ಅಥವಾ ಯಾವುದೇ ಕಾಣಿಕೆ ನೀಡದ ಸ್ಥಳೀಯ ಮಾಹಿತಿ ಸಂಗ್ರಹಕಾರರು ಮತ್ತು ಅವರ ನಂತರದ ಹಂತದಲ್ಲಿ ಹಾಗೂ ಸಂಶೋಧನೆಯ ಪ್ರಚಾರ ಕಾರ್ಯದಲ್ಲಿ ವಿದ್ವತ್ ಜನರನ್ನು ಬಳಸಿಕೊಳ್ಳುತ್ತವೆ. ಕೆಲವು ಪ್ರಗತಿಪರ ಅಂತಾರಾಷ್ಟ್ರೀಯ ಯೋಜನೆಗಳು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಈ ಮಿತಿಗಳನ್ನು ಎತ್ತಿ ಹೇಳಲು ಕೇಳಿಕೊಳ್ಳುತ್ತವೆ. ತಮ್ಮಿಂದಾಗಿಯೆ ಹೆಚ್ಚು ಪ್ರಜಾಸತ್ತ್ತಾತ್ಮಕವಾಗಿ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕರೊಂದಿಗೆ ಆತ್ಮಸಾಕ್ಷಿಯಂತೆ ಮೂಲ ಸಾಮಗ್ರಿಗಳನ್ನು ಹಂಚಿಕೊಳ್ಳಲಾಯಿತೆಂಬ ಗೌರವವನ್ನೂ ಪಡೆಯುತ್ತವೆ. ಈ ಸಂದರ್ಭದಲ್ಲೆ ಇಂಥ ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕೋರುವ ಅನೇಕ ಭಾರತೀಯ ವಿದ್ವತ್ ಜನರ ಪಾತ್ರವನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ವಿಶ್ವ ಬ್ಯಾಂಕು, ಏಷ್ಯಾ ಅಭಿವೃದ್ಧಿ ಬ್ಯಾಂಕು, ಮತ್ತು ಇತರ ಸಹಾಯಕ ಅಥವಾ ರಾಷ್ಟ್ರದಾಚೆಯ 'ಅಭಿವೃದ್ಧಿ' ಸಂಸ್ಥೆಗಳಂಥ ಸಂಸ್ಥೆಗಳು ಮತ್ತು ಏಜೆನ್ಸಿಗಳ ಪರವಾಗಿ ಕೆಲಸ ಮಾಡಲಾಗುತ್ತಿದೆ. ಇದರಿಂದ ಅವರ ಸ್ವಂತ ಸಾಮರ್ಥ್ಯ ಗುರುತಿಸಿಕೊಳ್ಳುವ, ಡಾಲರ್ ಮೊತ್ತದಲ್ಲಿ ದಿನಗೂಲಿ ಸಂಭಾವನೆ ಲೆಕ್ಕ ಹಾಕಲಾಗುವ ಮತ್ತು ಸರಾಸರಿ ವೇತನಕ್ಕಿಂತ ದೊಡ್ಡ ಮೊತ್ತವನ್ನು ಕಾಣುವ ಅವಕಾಶ ಸಾಧ್ಯವಾಗಿದೆ. ಆದರೂ ಈ ಏಜೆನ್ಸಿಗಳಿಗೆ ಅವರು ಗುಲಾಮರಾಗಿಯೆ ಉಳಿಯಲು ಸಮರ್ಥರನ್ನಾಗಿಸಿದೆ. ಇಂಥ ಅಂತಾರಾಷ್ಟ್ರೀಯ ಸಹಭಾಗಿತ್ವ ಅವರ ವಿದ್ವತ್ ಗ್ರಹಿಕೆಗಳನ್ನು ಗಮನಾರ್ಹವಾಗಿ ಉತ್ತಮಪಡಿಸಿಲ್ಲ. ಅವರ ವಿದ್ವತ್ ಸಾಮರ್ಥ್ಯ ಮತ್ತು ಸಂಶೋಧನ ವರದಿಗಳನ್ನು ಉನ್ನತ ಮಟ್ಟಕ್ಕೂ ಎತ್ತರಿಸಿಲ್ಲ. ಇದು ಹೆಚ್ಚು ಆತಂಕಕಾರಿಯಾದ ಬೆಳವಣಿಗೆಯಾಗಿದೆ.
ಭಾರತೀಯ ವಿದ್ವತ್ ವಲಯದ ವಿಫಲತೆಯಲ್ಲಿ ಸಂಪೂರ್ಣ ಮುಳುಗಿರುವ ಬುದ್ಧಿಜೀವಿಗಳ ಹಲವು ಸಂದರ್ಭಗಳು, ನಿದರ್ಶನಗಳು ಕಣ್ಣಿಗೆ ಬೀಳುತ್ತವೆ. ಮುಖ್ಯ ಮತ್ತು ಸೂಕ್ಷ್ಮ ಸಾರ್ವಜನಿಕ ಚರ್ಚೆಗಳನ್ನು ಹೊರತು ಪಡಿಸಿದರೂ ಭಾರತದ ಬಹಳಷ್ಟು ವಿದ್ವಾಂಸರಲ್ಲಿ ಯಾರೊಬ್ಬರೂ ಮೈಕೊಡವಿ ತಮ್ಮ ನಿಲುವು ವ್ಯಕ್ತಪಡಿಸುವ ಧೈರ್ಯ ಮಾಡುವುದಿಲ್ಲ. ಸಮಸ್ಯೆಗಳ ಚರ್ಚೆಗಳನ್ನು ಅವರು ಯಾವಾಗಲೂ ಸ್ವೀಕೃತ ವಿಚಾರಗಳು ಮತ್ತು ಅಭಿಪ್ರಾಯಗಳ ಮಿತಿಯಲ್ಲೆ ರೂಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೇಳಿ ಬಂದ ಸಂಶೋಧನೆ ಅಥವಾ ವಿಚಾರಗಳೂ ಅವರ ಮಾತುಗಳಲ್ಲಿ ಕಾಣುವುದಿಲ್ಲ. ಹಲವಾರು ವರ್ಷಗಳಿಂದ ನಾನು ಕಂಡ 'ಮಾನ್ಯ ವಿದ್ವಾಂಸರೊಬ್ಬರು' ಸಮಸ್ಯೆಗಳ ಕುರಿತು ಎತ್ತಿದ ದನಿಯಲ್ಲಿ ಕಲಿತ ಹೊಸ ಅಂಶವೊಂದೂ ಇರದೆ ವೈಯಕ್ತಿಕ ಹಳಸಲು ಅಭಿಪ್ರಾಯಗಳೆ ತುಂಬಿಹೋಗಿವೆ. ನಾನು ನೆನಪಿಸಿಕೊಳ್ಳಬಹುದಾದ ಇನ್ನೂ ಕೆಲವು ಸಂದರ್ಭಗಳು ಹೀಗಿವೆ.
ಅ. ಜಾತಿ ಮತ್ತು ಮಾನವ ಅಭಿವೃದ್ಧಿ ಚರ್ಚೆಯಲ್ಲಿ, ವಿಜ್ಞಾನಿಯೊಬ್ಬರು ಜಾತಿ ಆಧಾರಿತ ಬುದ್ಧಿಮತ್ತೆ ಕುರಿತು ತಳಿಶಾಸ್ತ್ರ ಅಧ್ಯಯನ ಮಾಡಲು ಕರೆ ನೀಡಿದ್ದರು.
ಇ. ಸಂಸ್ಕೃತ ಬೋಧನೆ ಮತ್ತು ಕಲಿಕೆಯ ಸ್ಥಿತಿಗತಿ ಪರಿಶೀಲಿಸುವ ಸಭೆಯಲ್ಲಿ, ಆಡಳಿತ ಮತ್ತು ಜನಪ್ರಿಯ ಭಾಷೆಯಾಗಿ ಹೀಬ್ರೂವನ್ನು ಯಶಸ್ವಿಯಾಗಿ ಜಾರಿಗೆ ತಂದ ಇಸ್ರೇಲಿನ ಹಾದಿ ತುಳಿಯಬೇಕೆಂದು ಯುವಕನೊಬ್ಬ ಸಲಹೆ ಮಾಡಿದ್ದ.
ಉ. ಜನಸಂಖ್ಯೆಯ ಪ್ರವೃತ್ತಿ ಕುರಿತ ರಾಷ್ಟ್ರಮಟ್ಟದ ಚರ್ಚೆಯಲ್ಲಿ ಕಡ್ಡಾಯ ಕುಟುಂಬ ಯೋಜನೆಯನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಜಾರಿಗೊಳಿಸಬೇಕೆಂದು ಕೆಲವರು ಸಲಹೆ ನೀಡಿದ್ದರು.
ಎ. ಶಿಕ್ಷಣ ನೀತಿಯ ಪ್ರವೃತ್ತಿಗಳು ಕುರಿತ ಚರ್ಚೆಗಳು, ಶಿಕ್ಷಣದ ಖಾಸಗೀಕರಣ ಮತ್ತು ಪ್ರಮಾಣಿತ ಪರೀಕ್ಷೆಯ ಮೂಲಕ ಮೆರಿಟ್ಅನ್ನು ಗೊತ್ತು ಮಾಡಬೇಕೆಂಬ ಸಲಹೆಗಳಿಂದ ತುಂಬಿಹೋಗಿತ್ತು.
ಒ. ರಾಷ್ಟ್ರಮಟ್ಟದ ಹೆಸರಾಂತ ವಿಜ್ಞಾನಿಯೊಬ್ಬರು, ಭಾರತದ ಬೇಸಾಯಗಾರರನ್ನು ಉನ್ನತ ತಂತ್ರಜ್ಞಾನ ಬಳಕೆ ಮಾಡುವಂಥ 'ರೈತ ತಂತ್ರಜ್ಞ'ರನ್ನಾಗಿ ಬದಲಿಸಬೇಕು, ಆ ಮೂಲಕ ಭಾರತದ ವ್ಯವಸಾಯ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕರೆ ನೀಡಿದ್ದರು.
ಈ ಎಲ್ಲ ಸಂದರ್ಭಗಳಲ್ಲಿ ಆಲೋಚನಾ ರಹಿತ ಎಳೆಯೊಂದು ನಿರಂತರವಾಗಿ ಹರಿದಿದೆ. ವೈಯಕ್ತಿಕ ಮತ್ತು ನಿಕಟ ವಲಯಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ವಿಚಾರವಾಗಿ ಮಂಡಿಸಲಾಗಿದೆ. ವಿಶೇಷವಾಗಿ ನ್ಯಾಯ, ಸಮಾನತೆ ಮತ್ತು ಮುಕ್ತತೆಯ ನಿಯಮ ಆಧರಿಸಿದ ಬಹಳಷ್ಟು ಹೊಸ ವಿಚಾರಗಳನ್ನು ವಾಸ್ತವವಲ್ಲವೆಂದು ವ್ಯಂಗ್ಯ ಮಾಡಲಾಗಿದೆ. ಸಾಮಾನ್ಯ ತಿಳುವಳಿಕೆಯನ್ನು ಮರುಹುಟ್ಟಿಸುವ ಈ ಹೊಸ ಪ್ರಯತ್ನದಲ್ಲಿ ಕೆಲವರಿಗೆ ಮೀಸಲಾಗಿದ್ದ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಿದೆ. ಈಗಿರುವ ವ್ಯವಸ್ಥೆಯನ್ನು ಒಪ್ಪಿಕೊಳ್ಳಿ ಇಲ್ಲವೆ ಆದರ್ಶಗೊಂಡ ಪ್ರಾಚೀನ ಕಾಲಕ್ಕೆ ಮರಳಿ ಎಂಬ ಒಳದನಿಯೂ ಇದರಲ್ಲಿದೆ. ಈ ಎಲ್ಲ ನಿಲುವು ಮತ್ತು ಸ್ಥಿತಿಗಳು ಭಾರತೀಯ ಸಮಾಜದ ಸಂಕೀರ್ಣತೆ ಅರಿಯುವಲ್ಲಿನ ಕೊರತೆಯನ್ನೂ ಪ್ರಜಾಪ್ರಭುತ್ವದ ಪಾತ್ರ ಮತ್ತು ಹೊಸ ಅರ್ಥಶಾಸ್ತ್ರದ ಪ್ರಭಾವವನ್ನೂ ಸೂಚಿಸುತ್ತವೆ.
 ದಿನನಿತ್ಯದ ಬೆಳವಣಿಗೆಗಳಿಂದ ವಿದ್ವತ್ ಜನತೆ ಹೊರಗುಳಿದಿದ್ದಾರೆ. ಅವರು ಧಾರ್ಮಿಕ ಮೂಲಭೂತವಾದದ ಕಡೆ ವಾಲಿರುವುದಕ್ಕೆ ಕಳೆದ ದಶಕಗಳು ಕೂಡ ಸಾಕ್ಷಿಯಾಗಿವೆ. ಆದರ್ಶೀಕರಿಸಿದ ಪ್ರಾಚೀನವನ್ನು ಮರುಕೊಳಿಸಲು ಅಥವಾ ಪ್ರಾಚೀನವನ್ನು ಮರುಕಟ್ಟಲು ಇಲ್ಲವೆ ರಮ್ಯಗೊಳಿಸಲು ಅಥವಾ ವಿಕಾರಗೊಳಿಸಲು ಪ್ರಯತ್ನಿಸಲಾಗಿದೆ. ಅದಕ್ಕಾಗಿ ಸಂಕೀರ್ಣತೆ, ಸಮಸ್ಯೆ, ಭಿನ್ನಾಭಿಪ್ರಾಯ ಮತ್ತು ಅವ್ಯವಸ್ಥೆಗೆ ಮೊರೆ ಹೋಗಲಾಗಿದೆ. ಧಾರ್ಮಿಕ ಪಠ್ಯಗಳ ಮೂಲಭೂತವಾದಿ ವ್ಯಾಖ್ಯಾನಗಳ ವಿಮರ್ಶಕರಿಂದ ದೂರವಾದ, ವಿಜ್ಞಾನ, ಪಾಂಡಿತ್ಯ, ಧರ್ಮ ಮತ್ತು ರಾಜಕಾರಣಗಳೆಲ್ಲ ಒಳಗೊಂಡ ಧಾರ್ಮಿಕ ಹಿಂದಿನ ಗ್ರಹಿಕೆಯ ಅಲೆಯೊಂದಿದೆ. ಹಲವಾರು ವರ್ಷಗಳಿಂದ ಸಮಾಜ ವಿಜ್ಞಾನದ ಪಾರಂಪರಿಕ ವಿಷಯಗಳಲ್ಲಿ ಮಾತ್ರವಲ್ಲದೆ, ಗಣಿತ ಮತ್ತು ಪರಿಸರ ವಿಜ್ಞಾನ, ತರ್ಕಬದ್ಧ ವೈಜ್ಞಾನಿಕ ಶಾಸ್ತ್ರಗಳಂಥ ವಿಭಿನ್ನ ಜ್ಞಾನಕ್ಷೇತ್ರಗಳಲ್ಲೂ 'ಧರ್ಮ ಮತ್ತು...' ಹಾಗೂ 'ಧರ್ಮದಲ್ಲಿ...' ಮುಂತಾದ ಹೆಸರಿನಲ್ಲಿ ಸಾಲು ಸಾಲು ಸಮ್ಮೇಳನಗಳನ್ನು ಗಮನಿಸಿದ್ದೇನೆ, ಅವುಗಳಿಗೆ ಸಾಕ್ಷಿಯಾಗಿದ್ದೇನೆ. ಈ ಎಲ್ಲ ಜ್ಞಾನಕ್ಷೇತ್ರಗಳ ನಡುವಿನ ಪ್ರತಿಯೊಂದೂ ಸಂಬಂಧವನ್ನಾಗಲೀ ಈ ವಿಭಿನ್ನ ಜ್ಞಾನಕ್ಷೇತ್ರಗಳ ಮೇಲೆ ಧರ್ಮ ಬೀರಿದ ಪ್ರಭಾವವನ್ನಾಗಲೀ ಇವು ಪರಿಶೀಲನೆ ಮಾಡಿಲ್ಲ. ಬದಲಿಗೆ ವಿಭಿನ್ನ ಜ್ಞಾನಕ್ಷೇತ್ರಗಳ ಬೆಳವಣಿಗೆಯಲ್ಲಿ ಧರ್ಮ ವಹಿಸಬಲ್ಲ ಪಾತ್ರ ಕುರಿತು ಪ್ರಾಥಮಿಕ ಹಂತದ ಊಹೆಗಳನ್ನು ಮಾತ್ರ ಮಂಡಿಸಿವೆ. ಇದರೊಂದಿಗೆ ವಿದ್ವತ್ಪೂರ್ಣವಾದ ಮತ್ತು ತಾತ್ವಿಕವಾದ ಕಲ್ಪನೆಗಳೂ ಇವೆ. ಅವು ಅಭಿಜಾತ ಧಾರ್ಮಿಕ ಪಠ್ಯಗಳಿಂದ ಮತ್ತು ಅಂಥ ಪಠ್ಯಗಳಲ್ಲಿರುವ ವಿಚಾರಗಳನ್ನೂ ನೆಲೆಗೊಳಿಸುವ ಪ್ರಯತ್ನದಲ್ಲಿವೆ. ಅಲ್ಲದೆ ಮೂಲಭೂತವಾದಿಯ ಮೊದಲ ಪ್ರಸ್ತಾಪದಂತೆ ಬಹುಪಾಲು ತಪ್ಪು ವ್ಯಾಖ್ಯಾನದ ನಿರ್ವಹಣೆಯ ಜೊತೆಗೂ ಸೇರಿಕೊಂಡಿವೆ. ಇದು ಎಲ್ಲ ಬಗೆಯ ವಾಸ್ತವವನ್ನು ವ್ಯಾಖ್ಯಾನ ಮಾಡುವ ಹಾಗಿದೆ. ಇದರಿಂದ ಧರ್ಮದೊಂದಿಗೆ ಹೊಸ ಬಗೆಯ ಮತ್ತು ಸಾಮಾನ್ಯವಲ್ಲದ ವಿದ್ವತ್ತು ಪುನರುಚ್ಛಾರವಾಗುತ್ತದೆ. ಮಾತ್ರವಲ್ಲ, ಅದರ ಅಧಿಕೃತತೆ ಎಲ್ಲ ಜ್ಞಾನಶಿಸ್ತುಗಳ ತಳಹದಿಯ ಹಾಗೆ ಮೂಡುತ್ತಿದೆ. ವಿದ್ವತ್ವಲಯದ ಇಂಥ ಅಡೆತಡೆಗಳಿಲ್ಲದ ಹಿಂದಿನ ಗ್ರಹಿಕೆಗಳು ಕೂಡಲೇ ಪ್ರಗತಿಪರ ಮತ್ತು ಸೂಕ್ಷ್ಮ ವಿದ್ವತ್ತಿನ ಅನೇಕ ಫಲಿತಗಳಿಗೆ ತಿರುವು ಮುರವು ಸ್ಥಿತಿಯನ್ನು ಉಂಟುಮಾಡುತ್ತವೆ.
ಧಾರ್ಮಿಕ ಪಠ್ಯಗಳ ಸರದಿ ಬಂದ ಹಾಗೆ, ಜಾತಿ ವ್ಯವಸ್ಥೆ ಕುರಿತು ಮರುವ್ಯಾಖ್ಯಾನ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇದು ಜಾತಿಯ ಕುರುಹನ್ನು ಹುಟ್ಟಿನಿಂದ ಗುರುತಿಸದೆ ವ್ಯಕ್ತಿಯ ಗುಣವನ್ನು ಆಧರಿಸಿದೆಯೆಂದು ಮಂಡಿಸುತ್ತಿದೆ. ಇದರೊಂದಿಗೆ ವರ್ಗೀಕರಣ ಆಧಾರಿತ ಹೊಸ ಜಾತಿ ಕುರಿತು ಸಶಕ್ತವಾದ ಸಾಲು ಸಾಲು ವ್ಯಾಖ್ಯಾನಗಳಿವೆ. ಜಾತಿ ವ್ಯವಸ್ಥೆಯಲ್ಲಿ ಯಾವುದು ಆತಂಕಕಾರಿಯೆಂದು ಗ್ರಹಿಸಲಾಗಿತ್ತೋ ಅದನ್ನು ಎಲ್ಲ ಸಮಸ್ಯೆಗಳಿಗೂ ಸಂಬಂಧ ಕಲ್ಪಿಸಿ ಪರಿಹಾರಗಳನ್ನು ನೀಡಿದೆ. 'ಉತ್ತಮ ಮತ್ತು ಸಮರ್ಥ ನಾಗರಿಕತೆ'ಯಂತೆ ಅದರ ಸುವ್ಯವಸ್ಥಿತ ಕಾರ್ಯನಿರ್ವಹಣೆಯ ಅಂಶಗಳನ್ನೂ ಸೇರಿಸಿಕೊಂಡಿದೆ.
ಇಂಥ ದೃಷ್ಟಿಕೋನಗಳ ಕ್ರೋಢೀಕರಣ ಮತ್ತು ಸಮರ್ಥನೆ ಎಲ್ಲ ಬಗೆಯ ವಿಮರ್ಶಾ ದನಿಗಳ ಸದ್ದನ್ನು ಅಡಗಿಸುತ್ತದೆ. ಹಾಗೆಯೇ ಪ್ರಭುತ್ವದ ಬಗ್ಗೆ, ಸಮಾಜದ ಪ್ರವೃತ್ತಿಗಳ ಬಗ್ಗೆ ಮತ್ತು ನೇತಾರರ ಬಗ್ಗೆ ವಿಮರ್ಶೆಯನ್ನು ಅರ್ಥಮಾಡಿಕೊಳ್ಳುವಲ್ಲಿಯೆ ಅಲ್ಪ ಸಹನೆ ತೋರಿದೆ. ರಾಷ್ಟ್ರ ಅಥವಾ ಸಮಾಜದ ಅನಿವಾರ್ಯ ಪ್ರವೃತ್ತಿಗಳನ್ನು ಹೊಗಳದ ವಿಮರ್ಶಕರು ವಿಘ್ನಸಂತೋಷಿಗಳೂ ನಿರಾಶವಾದಿಗಳೂ ಆಗಿರುವಂತೆ ಕಾಣಲಾಗಿದೆ. 
ಜ್ಞಾನಶಿಸ್ತುಗಳನ್ನು ಮಾರ್ಪಡಿಸುವ ಸ್ವಭಾವ ಕೂಡ ವಿದ್ವತ್ವಲಯದಲ್ಲಿ ಅಸ್ತವ್ಯಸ್ತತೆ ಮತ್ತು ಗೊಂದಲ ಉಂಟುಮಾಡಿದೆ. ಹೊಸ ತತ್ವಸಿದ್ಧಾಂತಗಳು ಸಮಾಜ ವಿಜ್ಞಾನಗಳೊಳಗಿನ ಹಳೆಯ ಸಿದ್ಧಾಂತಗಳನ್ನು ಗುಡಿಸಿಹಾಕಿದ್ದು ಗಮನಿಸಬೇಕಾದ ವಾಸ್ತವ ಸಂಗತಿಯಾಗಿದೆ. ಹೊಸ ಸಿದ್ಧಾಂತಗಳ ಪೂರ್ವದಲ್ಲಿರುವ ಗ್ರಹಿಕೆಗಳು ಹಳೆಯ ತತ್ವಗಳ ಅಳಿಸಲಾಗದ ಗಡಿರೇಖೆಗಳನ್ನೂ ಸ್ಥಾಪಿತ ಸಿದ್ಧಾಂತಗಳನ್ನೂ ಪ್ರಶ್ನಿಸುತ್ತಿವೆ. ಅಷ್ಟೇ ಅಲ್ಲದೆ, ಅನೇಕ ಜ್ಞಾನಶಿಸ್ತುಗಳನ್ನೂ ಅತಂತ್ರಗೊಳಿಸಿವೆ. ಅಂತಾರಾಷ್ಟ್ರೀಯವಾಗಿ ಆಧುನಿಕ ಮತ್ತು ಪ್ರಧಾನ ಸಿದ್ಧಾಂತಗಳನ್ನು ಅತಿಯಾಗಿ ಎರವಲು ಪಡೆಯಲಾಗುತ್ತಿದೆ. ಇದರಿಂದ ರಾಷ್ಟ್ರೀಯ ಮಟ್ಟದಲ್ಲೂ ಅಸ್ತಿತ್ವ ಪಡೆಯದ ಸುಸಂಬದ್ಧ ಸಿದ್ಧಾಂತಗಳು ಮತ್ತು ದೃಷ್ಟಿಕೋನಗಳು, ಪರ್ಯಾಯ ದೃಷ್ಟಿಕೋನ ಒದಗಿಸುವ ತಮ್ಮ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಳ್ಳಲಿವೆ. ವಿದ್ವತ್ ವಲಯದ ಸಾಧನೆಯನ್ನು ಅಂತಾರಾಷ್ಟ್ರೀಯ ಮಾನದಂಡದಲ್ಲಿಟ್ಟು ಅಥವಾ ಜಾಗತಿಕ ಮಟ್ಟದ ಸಮ್ಮೇಳನಗಳು ಮತ್ತು ಸಮಾರಂಭಗಳ ಭಾಗವಾಗಿ ನೋಡುವ ಪ್ರವೃತ್ತಿ ಇದಕ್ಕೆ ಕಾರಣವಾಗಿದೆ. ಬರವಣಿಗೆ ಅಂತಾರಾಷ್ಟ್ರೀಯ ಶ್ರೋತೃಗಳ ಬರವಣಿಗೆಯೊಂದಿಗೆ ಸೇರಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಪ್ರವೃತ್ತಿಗಳನ್ನೂ ಉಳಿಸಿಕೊಂಡಿದೆ.
ಜಾಗತಿಕನಾಗಿರುವ ಒತ್ತಡದಲ್ಲಿ, ಇತ್ತೀಚೆಗಷ್ಟೇ ತಲೆ ಎತ್ತಿದ ಕಾರ್ಪೊರೇಟ್ ಬಳಗಗಳು ಕೆಲವು ವಿದ್ವಾಂಸರ ಸಹಾಯ-ಸಹಕಾರ ಪಡೆಯಲು ಮುಂದಾಗಿವೆ. ಉಪನ್ಯಾಸ ನೀಡಿ ಜನಪ್ರಿಯತೆ ಗಳಿಸಿರುವ ಕೆಲವು ಹೆಸರಾಂತ ವ್ಯಕ್ತಿಗಳು ಈಗ ಅಂಥ ಕಾರ್ಪೋರೇಟ್ ವ್ಯಕ್ತಿಗಳ ನಿಕಟ ಸ್ನೇಹ ವಲಯದಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಚಿಂತಕರು ಮತ್ತು ನೇತಾರರ ಹಾಗೆ ಕಾರ್ಪೋರೇಟ್ ವ್ಯಕ್ತಿಗಳು ತಮ್ಮ ಹೊಸ ಅಸ್ತಿತ್ವ ಸ್ಥಾಪಿಸಲು ಬಯಸಿದ್ದಾರೆ. ಅವರ ಉದ್ಯಮದಲ್ಲಿ ನೆರವಿನ ಹಸ್ತ ಚಾಚುವ, ತಮ್ಮ ಸ್ವಂತ ಮೊತ್ತದಿಂದ ನಿಧಿ ಒದಗಿಸುವ ಅಥವಾ ಅವರ ಕಾರ್ಪೊರೇಟ್ ಗುಂಪಿನ ದಾನ ಸಂಸ್ಥೆಗಳಲ್ಲಿ ವಿದ್ವತ್ ಜನರು ಭಾಗವಾಗುತ್ತಿದ್ದಾರೆ. ಅಲ್ಲದೆ ಇವುಗಳಲ್ಲಿ ಕೆಲವು ಕಾರ್ಪೋರೇಟ್ ಬಳಗಗಳಿಗೆ ಯೋಜನೆ ಮತ್ತು ಪರಿಣತಿಯ ಸಾರಾಂಶವನ್ನೂ ಒದಗಿಸುತ್ತಿದ್ದಾರೆ, ಅವರನ್ನು ಬೆಂಬಲಿಸುತ್ತಿದ್ದಾರೆ. ಇಂಥ ಹೊಸ ಸಹಭಾಗಿತ್ವಗಳು ಕಾರ್ಪೋರೇಟ್ ವ್ಯಕ್ತಿತ್ವಗಳ ಕೊಡುಗೆ ಮತ್ತು ಪಾತ್ರ ನಿರ್ವಹಣೆಯ ಮುಂದುವರೆದ ಭಾಗವಾಗಿವೆ. ಅದರ ಎಲ್ಲ ವಿಭಾಗಗಳಲ್ಲಿ ಖಾಸಗೀಕರಣದ ಬಹಿರಂಗ ಆಚರಣೆ ನಡೆದಿದೆ. ಕಾರ್ಪೋರೇಟ್ ಬಳಗಗಳ ಬೆಳವಣಿಗೆಗೆ ಪ್ರಾತಿನಿಧಿಕ ಬೆಂಬಲ ನೀಡಿ ಹೊಸ ಸಹಭಾಗಿತ್ವಗಳು ಕಾರ್ಯಕ್ರಮಗಳನ್ನೂ ನೀಡಿವೆ. ಮರೆತುಹೋದ, ಅಳಿಸಿಹೋದ ಎಲ್ಲವಕ್ಕೂ ಸ್ವತಂತ್ರ ಅಸ್ತಿತ್ವ ಇರುತ್ತದೆ. ಹಾಗೆಯೇ ಬುದ್ಧಿಜೀವಿಯಾದ ಪ್ರತಿಯೊಬ್ಬ ವಿದ್ವಾಂಸನೂ ತನ್ನದೇ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ.
ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿ ದೇಶದ ಒಟ್ಟಂದದ ರಾಜಕೀಯ ಮತ್ತು ಸಾಮಾಜಿಕ ಅಸ್ತವ್ಯಸ್ತತೆ ಎಂದರೆ ದೇಶದ ಬಹುಪಾಲು ಸಮಸ್ಯೆಗಳಿಗೆ ಸಂಬಂಧಿಸಿ ನಡೆದ ಸಾಮಾಜಿಕ ಮತ್ತು ಪರ್ಯಾಯ ಚಳವಳಿಗಳು ಅಡ್ಡಿಯುಂಟುಮಾಡಿರುವುದೆ ಆಗಿದೆ. ಇಂಥ ಅನೇಕ ಚಳವಳಿಗಳಲ್ಲಿ ವಿದ್ವತ್ ಜನರ ಪಾತ್ರ ಮಿತವಾಗಿದೆ. ಇದಕ್ಕೆ ಅಪವಾದವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಹಾರದ ಹಕ್ಕಿಗಾಗಿ ನಡೆದ ಹೋರಾಟಕ್ಕೆ ಒತ್ತಾಸೆ ನೀಡಿದೆ. ಇದರೊಂದಿಗೆ ವಿದ್ವತ್ ಜನತೆಯೂ ಕೂಡಿಕೊಂಡಿದ್ದಾರೆ. ಆದರೂ ಜನತೆ ತಮ್ಮ ಹಕ್ಕಿಗಾಗಿ ನಡೆಸಿದ ಹೋರಾಟದ ಪ್ರಯತ್ನಗಳಲ್ಲಿ ಅಥವಾ ಸಾರ್ವಜನಿಕ ಕಾರಣಗಳಿಗಾಗಿ ವಿದ್ವತ್ ಜನರ ಪಾತ್ರವೆ ಇಲ್ಲವಾಗಿದೆ. ಆಳಿಕೆಯ ಪರಂಪರೆಗೆ ಪರ್ಯಾಯವಾದ ದೃಷ್ಟಿಕೋನಗಳು ಮತ್ತು ಚಳವಳಿಗಳಲ್ಲಿ ಆಸಕ್ತಿ ಇಲ್ಲದಿರುವುದರಿಂದ, ಸಾಮಾನ್ಯವಾಗಿ ಸಾರ್ವಜನಿಕ ಸಮಸ್ಯೆಗಳಲ್ಲಿ ಕಾಲಕಾಲಕ್ಕೆ ಭಾಗವಹಿಸದೆ, ತೊಡಗಿಸಿಕೊಳ್ಳದೆ ಇರುವುದರಿಂದ, ವಿದ್ವತ್ ಜನರ ಬುಡ ಭದ್ರವಾಗದೆ ಉಳಿದಿದೆ.
ಐದನೆಯ ಹಾಗೂ ತೀರಾ ಇತ್ತೀಚೆಗೆ ಆರನೆಯ ವೇತನ ಆಯೋಗ ತನ್ನ ಭರವಸೆಯಂತೆ ವಿದ್ವತ್ ಜನರ ಸ್ಥಾನ-ಮಾನ, ಸಂಬಳ ಮತ್ತು ಸೌಲಭ್ಯಗಳನ್ನು ಹೆಚ್ಚಿಸಿದೆ. ಶ್ರೀಮಂತ ಜೀವನ ಶೈಲಿಗಿಂತ ಹೆಚ್ಚು ಭದ್ರತೆಯನ್ನು ವಿದ್ವತ್ ಜನರಿಗೆ ಒದಗಿಸಿದೆ. ಆಲೋಚನಾ ದಾರಿದ್ರ್ಯ ಮತ್ತು ರಾಜಕೀಯ ಪಕ್ಷದ ಆಂತರಿಕ ಸಲಹೆಗಾರನಾಗಿರುವ ವಿಕಲತೆ ಇವುಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಕೆಲವೇ ಕೆಲವು ವಿದ್ವತ್ ವ್ಯಕ್ತಿಗಳು ಮಾತ್ರ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯೋನ್ಮುಖರಾಗಿದ್ದಾರೆ. ವಿವಾದಿತ ಸಿಂಗೂರು ಮತ್ತು ನಂದಿಗ್ರಾಮ ಸಮಸ್ಯೆಗಳ ಕುರಿತು, ಕಾಶ್ಮೀರ ಮತ್ತು ಶ್ರೀಲಂಕಾ ಕುರಿತು, ಧಾರ್ಮಿಕ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು, ಸರಕಾರ ಮತ್ತು ಖಾಸಗಿ ವಲಯಗಳ ಪಾತ್ರ ಕುರಿತು ಮತ್ತು ಇತರ ಎಲ್ಲ ಸಮಸ್ಯೆಗಳು, ಸಂಕೀರ್ಣವಾದ ರಾಷ್ಟ್ರವೊಂದರ ಮತ್ತು ಇನ್ನೂ ಹೆಚ್ಚು ಸಂಕೀರ್ಣವಾದ ಅದರ ಸಮಾಜವನ್ನು ಕುರಿತಿಲ್ಲ. ಆದರೂ ಇವು ರಾಜಕೀಯ ಸ್ಥಿತಿಗತಿಗಳನ್ನು ಕುರಿತು ಪ್ರಾಥಮಿಕ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿವೆ.
ಹೀಗೆ ಅಂತರ ಮತ್ತು ಅನರ್ಹತೆ ಬೆಳೆಯುತ್ತಿರುವ ವಿದ್ವತ್ ವಲಯದಲ್ಲಿ ಬುದ್ಧಿಜೀವಿಗಳಾಗಿರುವುದು ಎಂದರೆ ವಿಚಾರ ಮತ್ತು ಜ್ಞಾನಗಳ ಗುಣಮಟ್ಟದಲ್ಲಿ ಸವೆತ ಉಂಟುಮಾಡುವುದಾಗಿದೆ. ಬುದ್ಧಿಜೀವಿಗಳಾಗಿ ಬೆಳೆದ ವಿದ್ವತ್ ಜನತೆ ಒಂದು ಹೊಸ ರಾಷ್ಟ್ರ ಕಟ್ಟುವ ಸವಾಲುಗಳನ್ನು ಎದುರಿಸುವರಾಗಿದ್ದಾರೆ. ರಾಷ್ಟ್ರದ ಚಹರೆ ಮತ್ತು ವಿಚಾರಗಳು ಇನ್ನೂ ಹೆಚ್ಚು ಮರುವ್ಯಾಖ್ಯಾನಕ್ಕೆ ಒಳಪಡಬೇಕಾದ ಮತ್ತು ಜಾಗತಿಕ ಅರ್ಥಿಕತೆಯೊಂದಿಗೆ ಸಮಗ್ರವಾಗಿರುವ ಇಂದಿನ ಕಾಲದ ತತ್ ಕ್ಷಣದ ಸ್ವಾತ್ರಂತ್ಯೋತ್ತರ ಅವಧಿಗೆ ಹೋಲಿಸಿದಲ್ಲಿ, ಅವರು ಬೌದ್ಧಿಕ ಲೋಕದ ಪ್ರವೇಶ ದ್ವಾರದಲ್ಲೇ ಖಾಲಿತನ ಆವರಿಸಿರುವುದಕ್ಕೆ ಸಾಕ್ಷಿಯಾಗಿದ್ದಾರೆ.
 ಪದಕೋಶ
ಚಿಛಿಚಿಜಜಟಛಿ- ವಿದ್ವತ್ವಲಯ, ವಿದ್ವತ್ಜನತೆ 
ಛಿಠರಟಿಚಿಣತಜ ಛಿಜಟಿಛಿಜ- ತರ್ಕಬದ್ಧ ವೈಜ್ಞಾನಿಕ ಶಾಸ್ತ್ರಗಳು
ಛಿಠಟಟಜಛಿಣತಜ ಚಿಟಟಿಜಚಿ -ಸಾಮೂಹಿಕ ಮರೆವು
ಛಿಠಟಠಿಠಣಟಿಜ- ಕೂಡಿಕೆ, ಕೂಡು, ಸೇರು
ಜಠಿಠಛಿಚಿಟ ಣಡಿಚಿಟಿಜಿಠಡಿಟಚಿಣಠಟಿ- ಯುಗ ಪರಿವರ್ತನೆ
ಜಿಚಿತಠಣಡಿ- ಓಲೈಸುವಿಕೆ
ಚಿಛಣ ಠಜಿ ಟಟಿಜ- ಮನೋಹವ್ಯಾಸ
ಟಠಜಿಣಟ- ಆರಂಭಿಕ ಅತ್ಯುತ್ಸಾಹ
ಟಠಡಿಚಿಟ ಣಣಣಣಜಡಿಟಿರ- ನೈತಿಕ ತತ್ತರ
ಠಡಿಜಟಿಣಚಿಣಠಟಿ- ಹಿಂದಿನ ಗ್ರಹಿಕೆಗಳು, ಪೂರ್ವದಲ್ಲಿರುವ ಗ್ರಹಿಕೆಗಳು
ಠಿಟಚಿಟಿಣಡಿಠಠಿಛಿ ಜಿಠಣಟಿಜಚಿಣಠಟಿ- ದಾನ ಸಂಸ್ಥೆಗಳು
ಡಿಜಠಿಡಿಜಜಟಿಛಟಜ- ನಿಂದನಾರ್ಹ
ಜರಡಿಜರಚಿಣಠಟಿ - ಪುಷ್ಪಾವರಣ
ಣಥಿಟಜ- ಅಡ್ಡಿಮಾಡು
ಣಛಜಡಿತಜಟಿಛಿಜ- ದಾಸಾನುದಾಸ

ಇಂಗ್ಲಿಶ್ ಮೂಲ -ಎ.ಅರ್.ವಾಸವಿ
ಕನ್ನಡ ರೂಪ - ಶ್ರೀಧರ ಪಿಸ್ಸೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ