ಭಾನುವಾರ, ಮೇ 29, 2011

ಜಾಗತೀಕರಣ ಮತ್ತು ಸಂಸ್ಕೃತಿ



-ಏಜಾಜ್ ಅಹಮದ್


ಜಾಗತೀಕರಣದ ವಿರುದ್ಧ 2001ನೇ ಮಾರ್ಚ್ 21ರಿಂದ 23ರ ವರೆಗೆ ಜರುಗಿದ ಜನವಾದಿ ಸಮಾವೇಶದಲ್ಲಿ ಮಾಡಿದ ಭಾಷಣದ ಲೇಖನ ರೂಪ


ಗೆಳೆಯರೆ,
ನನಗಿಲ್ಲಿ ಮಾತಾಡಲು ಅವಕಾಶ ಕೊಟ್ಟಿರುವ ಈ ಸಮಾವೇಶದ ಸಂಘಟಕರಿಗೆ ಆಭಾರಿಯಾಗಿದ್ದೇನೆ. ನನಗಿಂತ ಮೊದಲು ಪ್ರಭಾತ್ ಪಟ್ನಾಯಕ್ ಅವರು ತುಂಬಾ ಯಶಸ್ವಿಯಾಗಿ ಮತ್ತು ಕ್ರಮಬದ್ಧವಾಗಿ ಮಂಡಿಸಿದ ವಿಚಾರ ಸಂತೋಷವನ್ನುಂಟು ಮಾಡಿದೆ. ನಮ್ಮ ಕಾಲದ ಸಾಮ್ರಾಜ್ಯಶಾಹಿ ಆರ್ಥಿಕ ರಾಜಕಾರಣ ಕುರಿತು ನನಗೆ ತಿಳಿದ ಮಟ್ಟಿಗೆ ಮಾತಾಡಬೇಕೆಂದಿದ್ದ ನನ್ನ ಕೆಲಸವನ್ನು ಇವರು ಹಗುರಗೊಳಿಸಿದ್ದಾರೆ. ಶ್ರೀ ಅಶೋಕ ಮಿತ್ರ ಅವರು ಈ ಸಭೆಯ ಅಧ್ಯಕ್ಷರಾಗಿರುವ ವಿಚಾರ ನನಗೆ ಅನುಕೂಲಕರವೂ ಗಾಬರಿ ತರಿಸುವ ವಿಚಾರವೂ ಆಗಿದೆ. ಅನುಕೂಲಕರ ಯಾಕೆಂದರೆ ಅವರು ಎಡಪಂಥೀಯ ಚಿಂತನೆಗಳಲ್ಲಿ ಪ್ರಾಜ್ಞರು. ಅದೇ ವಿಚಾರವಾಗಿ ನನಗೆ ಗಾಬರಿ ಕೂಡ. ಅವರು ಆರ್ಥಿಕ ರಾಜಕಾರಣವಷ್ಟೇ ಅಲ್ಲ 'ಸಂಸ್ಕೃತಿ' ಎಂದು ನಾವು ಕರೆಯುವ -ಅದಕ್ಕಿಂತ ಉತ್ತಮ ಪದದ ಕೊರತೆ ಇರುವ-ನಿಗೂಢ ವಿಚಾರದಲ್ಲೂ ನನಗಿಂತ ಹೆಚ್ಚು ತಿಳಿದವರು.
ಪ್ರಸ್ತುತ ಸಂದರ್ಭದಲ್ಲಿ 'ಸಂಸ್ಕೃತಿ' ಕುರಿತು ಮಾತಾಡಲು ನನಗೆ ಎದುರಾಗಿರುವ ತೊಡಕು ಮುಂದಿನ ಸತ್ಯಾಂಶದೊಂದಿಗೆ ತಳುಕು ಹಾಕಿಕೊಂಡಿದೆ. ಸಾಮ್ರಾಜ್ಯಶಾಹಿ ಜಾಗತೀಕರಣದ ಈ ಯುಗದಲ್ಲಿ ಸಾಂಸ್ಕೃತಿಕ ಕೈಗಾರಿಕೆಗಳು ಮತ್ತು ಬೃಹತ್ ಶೈಕ್ಷಣಿಕ ಸಮುಚ್ಚಯಗಳು ತಲೆ ಎತ್ತಿರುವುದನ್ನು ನಾವು ಕಂಡಿದ್ದೇವೆ. ಅವು ವಿಶ್ವಮಟ್ಟದಲ್ಲಿ ಒಂದೇ ಒಂದು ವಿಚಾರವನ್ನು, ಕರಾರುವಕ್ಕಾಗಿ ಹೇಳಬೇಕೆಂದರೆ ಸಾಂಸ್ಕೃತಿಕ ವಾದ (ಕಲ್ಚುರಲಿಸಂ)ವೆಂಬ ಒಂದು ವಿಚಾರವನ್ನು ಪ್ರಚಾರ ಮಾಡುವ ಕಾರ್ಯ ಕೈಗೆತ್ತಿಕೊಂಡಿವೆ. ಅಂದರೆ ಅವು ಸಂಸ್ಕೃತಿಯನ್ನು ಸಾಮಾಜಿಕ ಆಚರಣೆಗಳ ಸಮಗ್ರ ಅಂಶವನ್ನಾಗಿ ಮಾತ್ರವಲ್ಲದೆ ನಿರ್ಣಾಯಕ ಉದಾಹರಣೆಯನ್ನಾಗಿಯೂ ನಡೆಸಿಕೊಳ್ಳುತ್ತವೆ. ಇದು ನಮ್ಮ ಕಾಲದ ತಾತ್ವಿಕ ಉತ್ಪನ್ನದ ಮಹಾವ್ಯಂಗ್ಯಗಳಲ್ಲೊಂದು. ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬಂಡವಾಳಶಾಹಿ ಜಗತ್ತಿನಾದ್ಯಂತ ಆರ್ಥಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ಉತ್ಪನ್ನವಾಗಿಯೂ ಅತಿ ದೂರದಲ್ಲಿರುವವರನ್ನು ತಲುಪಲು ಅಂತಿಮವಾಗಿ ಸಾಗುತ್ತಿದ್ದಾಗ ಪಾಶ್ಚಿಮಾತ್ಯ ಶೈಕ್ಷಣಿಕ ಸಂಸ್ಥೆಯ ಎಲ್ಲ ಜನಪ್ರಿಯ ವೇದಿಕೆಗಳು ಪ್ರಚುರ ಪಡಿಸಿದ ವಿಚಾರವೊಂದು ತಲೆ ಎತ್ತಿದುದನ್ನು ನಾವು ಕಂಡಿದ್ದೇವೆ. ಅದು ನಿರ್ಣಯದ ನೆಲೆಯನ್ನು ಭೌತಿಕ ಉತ್ಪನ್ನದ ಕ್ಷೇತ್ರದಿಂದ ಸಂಸ್ಕೃತಿಗೆ ಬದಲಿಸಿದೆ.
ಸಂಸ್ಕೃತಿ ವಿಷಯ ಕುರಿತು ನಾನೀಗ ದೀರ್ಘವಾಗಿ ಮಾತನಾಡುತ್ತೇನೆ. ಮೊದಲು 'ಜಾಗತೀಕರಣ'ವನ್ನು ನಾನು ಹೇಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಎರಡು ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುತ್ತೇನೆ. ಅದರ ಆಧಾರದ ಮೇಲೆ ನಮ್ಮ ಕಾಲದ ಸಂಸ್ಕೃತಿಯ ಅರ್ಥವೇನು ಎಂಬುದನ್ನು ನನಗೆ ಅಂತಿಮವಾಗಿ ಕಂಡ ರೀತಿಯಲ್ಲಿ ಹೇಳುತ್ತೇನೆ. ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ 'ಜಾಗತೀಕರಣ' ವೆನ್ನುವುದು ಇತ್ತೀಚಿಗಿನ ಹಂತ ಎಂಬ ಅಂಶವನ್ನು ನಾನು ತಳ್ಳಿ ಹಾಕುವುದಿಲ್ಲ. ಇದರ ಕೇಂದ್ರ ಬಿಂದು ಬಂಡವಾಳ ಸ್ವರೂಪದಲ್ಲಿ ನಡೆದ ಐತಿಹಾಸಿಕ ಬದಲಾವಣೆಗಳ ಒಟ್ಟು ಮೊತ್ತವಾಗಿದೆ. ಈ ವಿಚಾರವಾಗಿ ಬೆಳಗ್ಗೆ ಮಾತನಾಡಿದ ಪ್ರಭಾತ್ ಪಟ್ನಾಯಕ್ ಅವರು ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಇದು ಸಾಮ್ರಜ್ಯಶಾಹಿಯ ಹೊಸಹಂತ ಮಾತ್ರವಲ್ಲ, ಆಮೂಲಾಗ್ರ ಹೊಸಹಂತ. ಹಲವಾರು ಪೂರ್ವ ಶರತ್ತುಗಳನ್ನು ಒಪ್ಪಿಕೊಂಡ ಪರಿಣಾಮವಾಗಿ ಈ ಹಂತ ಮೈ ತಳೆದಿದೆ. ಆ ಪೂರ್ವ ಶರತ್ತುಗಳಲ್ಲಿ ಬಹುಮುಖ್ಯವಾದುವು ಯಾವುವು? ಈ ಪ್ರಶ್ನೆಗೆ ಪರಸ್ಪರ ಸಂಬಂಧಪಟ್ಟ ಹದಿಮೂರು ಬಗೆಯ ಪ್ರಮೇಯಗಳ ಮೂಲಕ ಉತ್ತರಿಸುತ್ತೇನೆ. ಈ ಎಲ್ಲ ಅಂಶಗಳ ಒಟ್ಟು ಮೊತ್ತ ಈ ಹಂತದ ಆಮೂಲಾಗ್ರತೆಯ ನಾವಿನ್ಯತೆಯನ್ನು ವ್ಯಾಖ್ಯಾನಿಸಬೇಕು ಎಂದು ನಾನು ವಾದ ಮಾಡಲು ಬಯಸುತ್ತೇನೆ.
ನನ್ನ ನಂಬಿಕೆಯಂತೆ ಆ ಪೂರ್ವ ಶರತ್ತುಗಳಲ್ಲಿ ಮೊದಲನೆಯದು, ವಸಾಹತು ಸಾಮಾಜ್ಯ ತನ್ನಿಂದ ತಾನೆ ಮುಕ್ತಾಯಗೊಳ್ಳಬೇಕು ಮತ್ತು ಜಾಗತೀಕರಣದ ಆರಂಭದ ಕಾಲಘಟ್ಟವನ್ನು ವಿಶ್ವದ ಎರಡನೆಯ ಮಹಾಯುದ್ಧದ ನಂತರದ ಕಾಲದಲ್ಲಿ ನಿಗದಿಪಡಿಸಬೇಕು. ಆಗ ಬಂಡವಾಳಶಾಹಿ ವಾದದ ಆರಂಭದಿಂದಲೂ ಅಂರ್ತಗತಗೊಂಡಿದ್ದ  ಜಾಗತಿಕ ಸಮಗ್ರ ಮಾರುಕಟ್ಟೆಗೆ ಚಾಲನೆ ದೊರೆತ ಬಗ್ಗೆ ಮೊದಲ ಬಾರಿಗೆ  ಮಾರ್ಕ್ಸ್ ಎತ್ತಿ ಹೇಳಿದರು. ವಸಾಹತುಶಾಹಿ ಇಂಥ ಮಾರುಕಟ್ಟೆಯೊಂದನ್ನು ಹುಟ್ಟು ಹಾಕಲು ಪ್ರಮುಖ ಪಾತ್ರ ವಹಿಸಿತು. ಹಾಗಿದ್ದರೂ ಈ ಎಲ್ಲವೂ ಆರಂಭಗೊಂಡಿದ್ದು 15ನೆಯ ಶತಮಾನದ ಕೊನೆಯಲ್ಲಿ. 18ನೆಯ ಶತಮಾನದ ಕೊನೆಯ ತನಕ ನಿಜವಾದ ವಸಾಹತೀಕರಣ ಪ್ರಕ್ರಿಯೆ ಬಹುಪಾಲು ಅಮೆರಿಕಾದಲ್ಲೆ ಕೇಂದ್ರಿಕೃತಗೊಂಡಿತ್ತು. 19ನೆಯ ಶತಮಾನದಲ್ಲಿ ಏಷ್ಯಾ ಮತ್ತು ಆಫ್ರಿಕಾಗಳನ್ನು ವಸಾಹತುಗಳನ್ನಾಗಿಸುವ ಕಾರ್ಯ ತೀವ್ರಗೊಳಿಸಲಾಯಿತು. ಇದರಿಂದ ಪಾಶ್ಚಿಮಾತ್ಯ ಅಭಿವೃದ್ಧಿಶೀಲ ಕೈಗಾರಿಕಾ ಕೇಂದ್ರ ದೇಶಗಳ ಗುಂಪು ಮತ್ತು ಹಿಂದುಳಿದ ಬೃಹತ್ ಕೈಗಾರಿಕೆ ರಹಿತ ವಸಾಹತು ಮತ್ತು ಪರಾವಲಂಬಿ ದೇಶಗಳ ಗುಂಪಾಗಿ ವಿಶ್ವ ಒಡೆದುಹೋಯಿತು. ವಸಾಹತುಶಾಹಿ ತನ್ನ ಕೊನೆಯ ವೈಭವದ ದಿನಗಳಲ್ಲಿ ವಿಶ್ವ ಆರ್ಥಿಕತೆಗೆ ಸಮಾನವಾದಂಥದೊಂದನ್ನು ಹುಟ್ಟು ಹಾಕಿತು. ಆದರೆ ಅದು ನಿಜವಾದ ಅರ್ಥದಲ್ಲಿ ಪರಸ್ಪರ ತೊಡರುಗಾಲಾಗಿರುವ ಆರ್ಥಿಕ ವ್ಯವಸ್ಥೆಯಾಗಿತ್ತು. ಬೇರೆಬೇರೆ ವಸಾಹತುಶಾಹಿ ಶಕ್ತಿಗಳು ಬೇರೆ ಬೇರೆ ಭಾಗಗಳನ್ನು ನಿಯಂತ್ರಿಸಿದ್ದವು. ಹೊಸಹಂತದ ಸಮಗ್ರ ವಿಶ್ವ ಆರ್ಥಿಕತೆಗಾಗಿ ಆಗ ನಿರ್ವಸಾಹತೀಕರಣ ಮುಂದಿನ ಬಂಡವಾಳ ಬೆಳವಣಿಗೆಗೆ ಅಗತ್ಯವಾಗಿತ್ತು.  ತನ್ನ ಶತ್ರು ರಾಷ್ಟ್ರಗಳು ತಮ್ಮ ಸಾಮ್ರಾಜ್ಯವನ್ನು ಮತ್ತು ಸಾಮ್ರಾಜ್ಯಶಾಹಿ ಯೋಜನೆಗಳನ್ನು ಕಳೆದುಕೊಳ್ಳುವ ವರೆಗೂ ಅಮೆರಿಕಾ ಯಾಜಮಾನ್ಯ ಶಕ್ತಿಯಾಗಿ ಹೊರಹೊಮ್ಮಿತು.
ಇದು ಎರಡನೆಯ ಪೂರ್ವ ಶರತ್ತಿಗೆ ಕಾರಣವಾಯಿತು. ಅದೆಂದರೆ ವಿಶ್ವದ ಸಂಯುಕ್ತ ಸಾಮ್ರಾಜ್ಯವಾಗಿ ಪರಿವರ್ತನೆ ಹೊಂದಿದ ಹಲವಾರು ಸಣ್ಣ ಮತ್ತು ದೊಡ್ಡ ಸಾಮ್ರಾಜ್ಯಗಳನ್ನು  ಮೇಲ್ವಿಚಾರಣೆ ನಡೆಸಲು ಸರ್ವೋತ್ಕೃಷ್ಟವಾದ ಶಕ್ತಿಯೊಂದು ಇರಬೇಕಾಗಿದ್ದಿತು,  ವಿಶ್ವದ ಎರಡನೆಯ ಮಹಾಯುದ್ಧ ನಡೆದ ಇಪ್ಪತ್ತೊಂದು ವರುಷಗಳ ನಂತರ ಅಂಥ ಪರಿವರ್ತಿತ ಸಂಸ್ಥೆಗಾಗಿ ಅಮೆರಿಕ ತನ್ನ ಯಾಜಮಾನ್ಯದ ಸುವರ್ಣಯುಗದಂತೆ ವ್ಯವಹರಿಸಿದುದು ಇತಿಹಾಸದಲ್ಲಿ ಜರುಗಿಹೋಯಿತು. ಆ ಯಾಜಮಾನ್ಯದ ಅವನತಿಯ ಬಗ್ಗೆ ಇತ್ತೀಚೆಗೆ ಮಾತ್ರ ಹೆಚ್ಚು ಕೇಳಿಬರುತ್ತದೆ. ಅಂಥ ಅಸಾಧಾರಣ ಶಕ್ತಿಯ ಕೆಲವು ಅಂಶಗಳನ್ನು ಆಕ್ಷೇಪಿಸಲು ಪಶ್ಚಿಮ ಯುರೋಪು ಮತ್ತು ಜಪಾನು ಒಂದುಗೂಡಿದುದು ಖಂಡಿತವಾಗಿಯೂ ನಿಜ. ಬಂಡವಾಳಗಾರರ ಶಕ್ತಿಶಾಲಿ ಆರ್ಥಿಕ ದೇಶವಾಗಿ ಅಮೆರಿಕ ಮುಂದುವರೆಯಲಿದೆ ಎಂದು ಹೇಳುವುದೂ ಹೆಚ್ಚು ಸೂಕ್ತ.  ಹಣಕಾಸು ಮಾರುಕಟ್ಟೆಗಳಲ್ಲಿ ಪಶ್ಚಿಮ ಯುರೋಪು ಮತ್ತು ಜಪಾನಿನ ಬ್ಯಾಂಕುಗಳು ಅಮೆರಿಕಾದ ಫೆಡರಲ್ ರಿಸರ್ವ್ ಕೇಂದ್ರಪಾತ್ರವನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ನಿರ್ವಹಿಸಲಾರವು. ಅಲ್ಲದೆ ಅಮೆರಿಕಾದ ಸೈನ್ಯ ಶಕ್ತಿ ಪಶ್ಚಿಮ ಯುರೋಪು ಮತ್ತು ಜಪಾನಿನ ಸಂಯುಕ್ತಗೊಂಡ ಸೈನ್ಯ ಬಲಕ್ಕಿಂತ ಹೆಚ್ಚಿನದು. ನ್ಯಾಟೊ ಮೂಗು ತೂರಿಸುವುದೆಂದರೆ ಅಮೆರಿಕ ಮೂಗು ತೂರಿಸಿದಂತೆಯೆ. ಜಗತ್ತಿನಲ್ಲಿ ಸಾಂಸ್ಕೃತಿಕ ವಸ್ತುಗಳು ಮತ್ತು ಸಮಾಚಾರಗಳನ್ನು ಒದಗಿಸುವ ಹತ್ತು ಅತ್ಯುತ್ತಮ ಕಾಪೊರೇಷನ್ನುಗಳಲ್ಲಿ  ಆರು ಅಮೆರಿಕದವು. ಮೂರನೆಯ ಜಗತ್ತಿನ ತಾಂತ್ರಿಕ ವಿಜ್ಞಾನ ವ್ಯವಸ್ಥಾಪಕ ಗಣ್ಯರ ತರಬೇತಿಯಲ್ಲಿ ಅಮೆರಿಕ ಸರ್ವೋತ್ಕೃಷ್ಟವಾದ ಮತ್ತು ವಿಧ್ವಂಸಕ ಪಾತ್ರ ಹೊಂದಿದೆ ಎಂಬುದು ನನ್ನ ನಂಬಿಕೆ.
ಮೂರನೆಯದು, ನಾನೀಗ ತಾನೇ ಹೇಳಿದಂತೆ ವಸಾಹತುಶಾಹಿಯ ಅತ್ಯುತ್ಕೃಷ್ಟ ಯುಗ ಕೈಗಾರಿಕೆ ಕೇಂದ್ರೀತ ದೇಶಗಳು ಮತ್ತು ತುಂಬ ಹಿಂದುಳಿದ ಕೈಗಾರಿಕೆ ರಹಿತ ವಲಯಗಳೆಂದು ವಿಭಜನೆ ಹೊಂದಿತು. ಬಂಡವಾಳಶಾಹಿ ವಿಶ್ವ ವ್ಯವಸ್ಥೆಯ ಮೇಲ್ಮಟ್ಟವನ್ನು ಮುಟ್ಟಲು, ಅಭಿವೃದ್ಧಿಶೀಲ ಮತ್ತು ಹಿಂದುಳಿದ ಬಂಡವಾಳ ವಲಯಗಳ ನಡುವೆ ಜಗತ್ತು ಹೊಸ ಬಗೆಯಲ್ಲಿ ವಿಭಜನೆಗೊಳ್ಳುವುದು ಅವಶ್ಯಕವಿತ್ತು. ವಸಾಹತುಶಾಹಿ ಸಾಮ್ರಾಜ್ಯದ ಕೊನೆಗೊಳ್ಳುವಿಕೆ ತೃತೀಯ ಜಗತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೈಗಾರಿಕಾ ಕ್ರಾಂತಿಯ ರಾಷ್ಟ್ರೀಯ ಬೂರ್ಜ್ವಾ ಯೋಜನೆ ಸಾಧ್ಯವಾಗುವಂತೆ ಮಾಡಿತು ಮತ್ತು ಬಂಡವಾಳಶಾಹಿ ವ್ಯಾಪ್ತಿ ಹೀಗೆ ಬಹುವಿಸ್ತಾರಕ್ಕೆ ಮಾರ್ಪಾಟು ಹೊಂದುವಂತೆ ಮಾಡಿತು.ಅಮೆರಿಕ ಯಾವ ವಸಾಹತುಶಕ್ತಿಯೂ ಇದುವರೆಗೆ ಹೊಂದಿರದಿದ್ದ ಜಗತ್ತಿನ ಸರ್ವೋತ್ಕೃಷ್ಟ ಆರ್ಥಿಕ, ತಾಂತ್ರಿಕ ಮತ್ತು ಸೈನಿಕ ಶಕ್ತಿಯ ಹಾಗೆ ಸಮಗ್ರವಾದ ಹೊಸಬಗೆಯ ವ್ಯವಸ್ಥೆಯಾಗಿ ರೂಪುಗೊಳ್ಳಲು ಅಸಾಧಾರಣವಾಗಿ ಶಕ್ತವಾಗಿತ್ತು.
ನಾಲ್ಕನೆಯದು, ಸೊವಿಯತ್ ಒಕ್ಕೂಟ ಮತ್ತು ಪೂರ್ವ ಏಷ್ಯಾದ ಸಮಾಜವಾದಿ ದೇಶಗಳ ಇರುವಿಕೆ 'ಜಾಗತೀಕರಣ'ಕ್ಕೆ ಮೂರು ವಿಧಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ಅವು ಹೆಚ್ಚು ಕಡಿಮೆ ತೃತೀಯ ಜಗತ್ತನ್ನು ರೂಪಿಸಿಕೊಂಡಿದ್ದವು. ಈ ಮೂರನೆಯದೊಂದು ಭಾಗ ಅಷ್ಟು ಸುಲಭವಾಗಿ ಬಂಡವಾಳಶಾಹಿ ಜಾಗತೀಕರಣಕ್ಕೆ ಒಳಗಾಗುತ್ತಿರಲಿಲ್ಲ. ಅವು ವಿಶ್ವಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥಗೆ ಸವಾಲಾಗುವ ಸಾಧ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದವು. ತೃತೀಯ ಜಗತ್ತಿನ ದೇಶಗಳಿಗೆ ತಾಂತ್ರಿಕತೆ, ತರಬೇತಿ, ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಪರ್ಯಾಯ ಮೂಲವಾಗಿ ಸೇವೆ ಸಲ್ಲಿಸುತ್ತಿದ್ದವು. ಸೊವಿಯತ್ ಒಕ್ಕೂಟದ ವಿಘಟನೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಚೀನಾ ದೇಶ ಸಮ್ಮಿಳನಗೊಂಡ ಮಾತ್ರದಿಂದಲೆ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಯಾಗಬಹುದಿತ್ತು. ಅದು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ನೆರವೇರಿತು.
ಐದನೆಯದು, ಆರ್ಥಿಕವಾಗಿ ಸದೃಢವಾಗುಳ್ಳ ತೃತೀಯ ಜಗತ್ತಿನ ಕೆಲವೊಂದು ದೇಶಗಳು ಯಾವ ಪ್ರತಿಬಂಧಕಗಳನ್ನು ಹೊಂದಿರದಿದ್ದರೂ ಸಣ್ಣ ಪ್ರಮಾಣದ ತಡೆಯನ್ನು ಒಡ್ಡಿದವು. ಈ ಮೂಲಕ ರಕ್ಷಣಾತ್ಮಕ ನಿಲುವು, ದೇಶೀಯ ಕೈಗಾರಿಕೆಯ ಬೆಳವಣಿಗೆಗೆ ಪ್ರಭುತ್ವದ ಬಳಕೆ, ತಾಂತ್ರಿಕ ಮತ್ತು ಆರ್ಥಿಕ ಸಹಾಯದ ಪರ್ಯಾಯ ಮೂಲ ದೇಶಗಳೊಂದಿಗೆ ಸಂಬಂಧ ಮುಂತಾದ ಹಲವಾರು ಉಪಾಯಗಳನ್ನು ತಮ್ಮ ಸಮಾಜಗಳ ಮೇಲೆ ಸಾಮ್ರಾಜ್ಯಶಾಹಿ ಪ್ರಭಾವ ತಡೆಯಲು ಬಳಸಿಕೊಂಡವು. ಈ ಹಂತ  ತೃತೀಯ ಜಗತ್ತಿಗೆ ಬಹುಪಾಲು 1970ರ ವೇಳೆಗೆ ಕೊನೆಗೊಳ್ಳತೊಡಗಿತು. ವಾಸ್ತವವಾಗಿ ಆ ದೇಶಗಳೆಲ್ಲ -ಅಂದರೆ ಈಜಿಪ್ಟ್, ಇಂಡೋನೇಷ್ಯಾ, ಘಾನ, ಬ್ರೆಜಿಲ್, ಗ್ವಾಟೆಮಾಲಾ -ಪರಾವಲಂಬಿ ವ್ಯವಸ್ಥೆಗೆ ಮರಳತೊಡಗಿದವು.  ಹೀಗಾಗಿ ಬೆರಣಿಕೆಯಷ್ಟು ಉಳಿದ ದೇಶಗಳು ಹಟವಾದಿಗಳಾದವು ಮತ್ತು ಅರೆಮನಸ್ಸಿನಿಂದ ಪ್ರತಿಭಟನೆ ತೋರುತ್ತ ಕೇವಲ ಸ್ಥಳೀಯ ದ್ವೀಪಗಳಾಗಿ ಉಳಿದುಬಿಟ್ಟವು.

ಆರನೆಯದು, ವಿಶ್ವದ ಹಣಕಾಸು ಮಾರುಕಟ್ಟೆಗಳನ್ನು ಸಮಗ್ರತೆಗೆ ಒಳಪಡಿಸಲು ಹೊಸ ತಂತ್ರಜ್ಞಾನದ ಅವಶ್ಯಕತೆಯಿತ್ತು. ಅದಕ್ಕೆ ಉತ್ಪಾದನಾ ಬಂಡವಾಳವನ್ನೇ ಹೆಚ್ಚು ಹೆಚ್ಚು ಸಂಚಲಿತ ಬಂಡವಾಳವನ್ನಾಗಿ ಮಾಡಬೇಕಿತ್ತು. ಇದು ಆರ್ಥಿಕ, ಮಾಹಿತಿ, ವಾಣಿಜ್ಯ ಸಮಾಚಾರಗಳು, ಮನರಂಜನಾ ವಸ್ತುಗಳು ಮತ್ತು ವೈಯಕ್ತಿಕ ವ್ಯವಹಾರವೆಲ್ಲ ಒಂದಾದ ಅವ್ಯಕ್ತ ಹರಿವು, ರಾಷ್ಟ್ರಗಳ ಭೂ ಪ್ರದೇಶ ಗಡಿಗಳನ್ನು ಮೀರಿದ ಮತ್ತು ಲಕ್ಷಾಂತರ ಹಾದಿಗಳನ್ನೊಳಗೊಂಡ ಒಂದು ಅತ್ಯುತ್ಕೃಷ್ಟ ಮಾಹಿತಿ ಹೆದ್ದಾರಿ ನಿರ್ಮಾಣದಂಥ ಹಲವು ವಿಷಯಗಳನ್ನು ಒಳಗೊಂಡಿತ್ತು. ಜಾಗತಿಕ ಮಟ್ಟದ ಯಾವುದೇ ಅರ್ಥ ವ್ಯವಸ್ಥೆಯಾಗಲೀ ಇಲ್ಲವೆ ಸಂಸ್ಕೃತಿಯಾಗಲೀ ವಿಶ್ವ ಮಟ್ಟದ ಯಾವುದೇ ಕ್ರೀಡೆಯಾಗಲೀ ಇಲ್ಲವೆ ಮನರಂಜನೆಯಾಗಲೀ ಯಾವುದೆ ದೇಶಗಳ ನಡುವಿನ ವ್ಯಾಪಾರ ವ್ಯವಹಾರದಷ್ಟು ಜಾಗತೀಕರಣಗೊಳ್ಳುವುದು ಅಗತ್ಯವಾಗಿತ್ತು. ಜಗತ್ತಿನ ಪ್ರತಿಯೊಂದು ಮನೆಯಲ್ಲೂ ಈ ಸಂಕೇತಗಳು ಬೆಳಗಬೇಕಾಗಿತ್ತು ಮತ್ತು ಹಣಕಾಸಿನ ಪರಿಣಾಮಕಾರಿ ನಿರ್ಣಯಗಳನ್ನು ಕೈಗೊಳ್ಳಲು ಬೇಕಾದ ಪ್ರಯಾಣದ ಕಾಲವನ್ನು ಪೂರ್ತಾ ಉಳಿಸಬೇಕಾಗಿತ್ತು. ವಸಾಹತುಶಾಹಿಯ ಆಕ್ರಮಣ ಪೂರ್ಣಗೊಳ್ಳಲು ಎರಡನೆಯ ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನಗಳು ಅವಶ್ಯಕವಾಗಿದ್ದ ಹಾಗೆಯೆ ಈ ಹೊಸ ಬಗೆಯ ವಿಶ್ವಾತ್ಮಕವಾದ ಸಾಮ್ರಾಜ್ಯಶಾಹಿಯ ಆರಂಭಕ್ಕೆ ಜಾಗತಿಕ ಯುದ್ಧಾನಂತರದ ಕಾಲದ ಬೃಹತ್ ತಂತ್ರಜ್ಞಾನ ಅನ್ವೇಷಣೆಯೂ ಅತ್ಯವಶ್ಯಕವಾಗಿತ್ತು ಎಂದು ಯಾರೂ ಸಲಹೆ ನೀಡಬಹುದಿತ್ತು.
ಏಳನೆಯದು, ಈ ಸಮಗ್ರವಾದ ಸರಣಿಯನ್ನು ಎರಡು ದೃಷ್ಟಿಕೋನಗಳಿಂದ ಅಸ್ಪಷ್ಟವಾಗಿರುವ ಕಾನೂನು ನಿಯಮಗಳ ಸಂಕೀರ್ಣ ವ್ಯವಸ್ಥೆಯಿಂದ ಎತ್ತಿ ಹಿಡಿಯಲಾಗಿದೆ. ಅವು ಐಎಂಎಫ್, ವಿಶ್ವಬ್ಯಾಂಕ್, ಐಎಫ್ಐ, ಗ್ಯಾಟ್, ವಿಶ್ವ ವ್ಯಾಪರ ಸಂಸ್ಥೆ ಮೊದಲಾದ ನಿಯಮಿತ ಆಡಳಿತ ಪದ್ಧತಿಗಳಲ್ಲೆಲ್ಲ ಮೊದಲನೆಯವು. ಇವು ಒಟ್ಟಿಗೆ ಸೇರಿ ಜಗತ್ತಿನ ಮೇಲೆ- ಏಕರೂಪದ ನೀತಿ ನಿರ್ಧಾರಗಳನ್ನು , ಕರಾರುಗಳನ್ನು ಮತ್ತು ಶರತ್ತುಗಳನ್ನು ಹೇರುವ ಹೊಸ ಜಾಗತಿಕ ಸರಕಾರವಾಗಿ ತ್ವರಿತಗತಿಯಲ್ಲಿ ರೂಪ ತಳೆಯುತ್ತಿತ್ತು. ಈ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸುವಲ್ಲಿ ಈ ಸಂಸ್ಥೆಗಳೇ ಕೇಂದ್ರವಾಗಿದ್ದವು. ಪ್ರತಿಯೊಂದು ರಾಷ್ಟ್ರದ ಪ್ರಭುತ್ವ ಒಪ್ಪಿ ಅನುಸರಿಸುವಂಥ ತಮ್ಮದೆಯಾದ ಅತಿ ಸಂಕೀರ್ಣವಾದ ಕಾನೂನು ಚೌಕಟ್ಟುಗಳು ಮತ್ತು ನಿಯಮಿತ ಆಡಳಿತ ಪದ್ಧತಿಗಳನ್ನು ಅವು ಹೊಂದಿದ್ದವು. ಆದರೆ ಈ ಜಾಗತೀಕರಣದ ಕಾಯಿದೆ ಮತ್ತು ಪರಮಾಧಿಕಾರದಷ್ಟೇ ಸಮಾನವಾದ ಮತ್ತು ತುಂಬಾ ಮುಖ್ಯವಾದ ದೃಷ್ಟಿಕೋನವೆಂದರೆ ಅಮೆರಿಕಾದ ಕಾಯಿದೆಗಳಿಗೆ ಹೆಚ್ಚು ಹೊಂದಿಕೆಯಾಗುವಂಥ-ಪಡಿಯಚ್ಚಿನಂಥ- ಕಾಯಿದೆಗಳನ್ನಾಗಿ ತಮ್ಮ ದೇಶದ ಕಾಯಿದೆಗಳನ್ನು ಬದಲಿಸಲು ರಾಷ್ಟ್ರೀಯ ಸರಕಾರಗಳನ್ನು ನಿರಂತರವಾಗಿ ಒತ್ತಾಯ ಪಡಿಸುತ್ತಲೇ ಇರುವುದು. ವಾಷಿಂಗ್ಟನ್ಅನ್ನು ತನ್ನ ರಾಜಧಾನಿಯನ್ನಾಗಿ ಪಡೆದ ಭೌಗೋಳಿಕ ಗಡಿರೇಖೆ ರಹಿತ ಸಾಮ್ರಾಜ್ಯ ದೂರದೂರದಲ್ಲ್ಲಿರುವ ರಾಷ್ಟ್ರ ಪ್ರಭುತ್ವಗಳ ಒಳಡಾಳಿತಗಳಲ್ಲಿ ಈ ಕೆಳಗಿನ ಮೂರು ಸಂದರ್ಭಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತದೆ.  1. ರಾಷ್ಟ್ರದ ಆಚೀಚಿನ ಖಾಸಗಿ ಬಂಡವಾಳದ ಶಕ್ತಿ ಮತ್ತು ಸೆಳೆತದ ಮೂಲಕ, 2. ರಾಷ್ಟ್ರಾತೀತ ಸಂಸ್ಥೆ (ವಿಶ್ವ ವ್ಯಾಪರ ಸಂಸ್ಥೆ ಮೊದಲಾದವು)ಗಳ ನಿಯಮಿತ ಆಡಳಿತ ಪದ್ಧತಿಗಳ ಮೂಲಕ, 3. ಬೇರೆ ಬೇರೆ ದೇಶಗಳ ಕಾಯಿದೆಗಳನ್ನು ಅಮೆರಿಕ ಕಾಯಿದೆಯ ನಕಲನ್ನಾಗಿ ಮಾಡುವುದರ ಮೂಲಕ.
ಎಂಟನೆಯದು, ಈ ಹೊಸಬಗೆಯ ಜಾಗತಿಕ ಸಾಮ್ರಾಜ್ಯಶಾಹಿಗೆ ನವೀನ ಮಾದರಿಯ ಸೈನಿಕ ತಂತ್ರಜ್ಞಾನದ ಅಗತ್ಯತೆ ಉಂಟಾಯಿತು. ಪ್ರಖ್ಯಾತ 'ಸ್ವಯಂಚಾಲಿತ ರಣರಂಗ ' ಇದಕ್ಕೊಂದು ಉದಾಹರಣೆಯಾಗಿದೆ.  ಈ ಮೂಲಕ ಪ್ರಪಂಚದಾದ್ಯಂತ ಬೆಳೆಯುತ್ತಿರುವಂತೆ ಗ್ರಹಿಸಲಾಗಿರುವ ಸಣ್ಣ ಪುಟ್ಟ ಬೇರೆ ಬೇರೆ ಶತ್ರುಗಳ ವಿರುದ್ಧ ಸಾಮ್ರಾಜ್ಯಶಾಹಿಯ ಶಕ್ತಿ ಪರಿಣಾಮಕಾರಿಯಾಗಿ ಮತ್ತು ತೀವ್ರಗತಿಯಲ್ಲಿ ದಾಳಿ ಮಾಡಲು ಸಾಧ್ಯವಾಗಿದೆ. ಹಿಂದಿನ ಯುಗೋಸ್ಲಾವಿಯಾ ಮತ್ತು ಇತ್ತೀಚೆಗೆ ಇರಾಕ್ ಮೇಲೆ ದಾಳಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಈ ಎರಡೂ ಸಂದರ್ಭಗಳು ಸಾಮ್ರಾಜ್ಯಶಾಹಿಯ ನೈತಿಕ ಹಕ್ಕು ಸ್ಥಾಪನೆ ಮತ್ತು ಸೈನಿಕ ತಂತ್ರಜ್ಞಾನಗಳ ಪರಿಕ್ಷಾರ್ಥ ಸಾಧನಗಳಾಗಿ ಬಳಕೆಯಾಗಿವೆ.
ಒಂಬತ್ತನೆಯದು, ರಾಷ್ಟ್ರೀಯ ಸಂಸ್ಥೆಗಳು ಹೊಸ ಸಾಮ್ರಾಜ್ಯಶಾಹಿ ಆಡಳಿತ ಕಾಯಿದೆಗಳನ್ನು ಹೇರಲು ಬಳಸುವ ಹಾಗೆಯೆ ಸಾಮ್ರಾಜ್ಯಶಾಹಿ ಆಕ್ರಮಣದ ನೈತಿಕ ಸಮರ್ಥನೆಗಾಗಿ ಕುಂದಿದ ಪರಮಾಧಿಕಾರ ಮತ್ತು  ನಿಯಮಾವಳಿಗಳನ್ನು, ವಿಶ್ವಸಂಸ್ಥೆಯೊಂದಿಗೆ ವಿಶೇಷವಾಗಿ ಭದ್ರತಾ ಮಂಡಳಿಯೊಂದಿಗಿನ ಸಂಬಂಧಗಳನ್ನು ಸತತವಾಗಿ ಮರುಕರಾರಿಗೆ ಒಳಪಡಿಸುತ್ತಿರುತ್ತವೆ. ಅಮೆರಿಕಾದ ಸೈನಿಕ ಕಾರ್ಯಾಚರಣೆಗಳನ್ನು ಅಧಿಕೃತಗೊಳಿಸಲು ವಿಶ್ವಸಂಸ್ಥೆಯನ್ನು ಬಳಕೆ ಮಾಡಿಕೊಂಡಿರುವುದು 1950ರ ಕೊರಿಯಾ ವಿರುದ್ಧದ ಯುದ್ಧದಷ್ಟು ಹಳೆಯದು. ನಂತರದ ಆ ಮುಂದಿನ ಇಪ್ಪತ್ತು ವರುಷಗಳ ಕ್ರಾಂತಿಕಾರಿ ಉತ್ಥಾನ ಕಾಲದಲ್ಲಿ ಈ ಅಪವಿತ್ರ ಮೈತ್ರಿ ಕುಸಿದು ಬಿತ್ತು. 1970ರ ಮಧ್ಯಕಾಲದ ಸ್ಥಿತ್ಯಂತರ ಸಂದರ್ಭದಲ್ಲಿ, ವಿಯೆಟ್ನಾಂ ಸ್ವಾತಂತ್ರ್ಯಗೊಳ್ಳುವ ಸಮಯದಲ್ಲಿ ವಿಶ್ವಸಂಸ್ಥೆಯೂ ಆ ಕಾಲದ ಕ್ರಾಂತಿಕಾರಿ ಮನಸ್ಥಿತಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿತ್ತು. ಹಾಗಾಗಿ 1974ರಲ್ಲಿ ಪ್ರಭುತ್ವದ ಆರ್ಥಿಕ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತ ಶಾಸನವನ್ನು ಜಾರಿಗೆ ತಂದಿತು. ಈ ಮೂಲಕ ಸದಸ್ಯ ರಾಷ್ಟ್ರಗಳು 'ವಿದೇಶಿ ಬಂಡವಾಳದ ಮೇಲೆ ಕಾನೂನು ಮತ್ತು ಅಧಿಕಾರ ಚಲಾಯಿಸುವ '  ಮತ್ತು 'ಬಹುರಾಷ್ಟ್ರೀಯ ಸಂಸ್ಥೆಗಳ ಚಟುವಟಿಗಳ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುವ ' ಅಲ್ಲದೆ 'ವಿದೇಶಿ ಆಸ್ತಿಗಳ ಮಾಲಿಕತ್ವ ಬದಲಿಸುವ ಅಥವಾ ಸ್ವಾಧೀನ ತಪ್ಪಿಸುವ, ರಾಷ್ಟ್ರೀಯಗೊಳಿಸುವ ' ಹಕ್ಕು ಹೊಂದಿರುವುದನ್ನು ಘೋಷಿಸಿತು. ನಾನಿಲ್ಲಿ ನಿಮಗೆ ಏನು ನೆನಪಿಸುತ್ತಿದ್ದೇನೆಂದರೆ 1966ರ ಮೂಲಸ್ವರೂಪದ ರಾಷ್ಟ್ರೀಯವಾದಗಳು ಮತ್ತು ಕ್ರಾಂತಿಕಾರತನದ ಉತ್ಕರ್ಷಗಳಿಂದಾಗಿ ಸಾಧಿಸಿದ ವಿಶ್ವದ ಬಲಾಬಲಗಳ ವಿಭಿನ್ನ ಹೊಂದಾಣಿಕೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ತೃತೀಯ ಜಗತ್ತಿನ ಹಣಕಾಸು ರಾಷ್ಟ್ರೀಯವಾದದ ಮೂಲಭೂತ ಆಶೋತ್ತರಗಳನ್ನು ತಾನೆ ಮುಂದಾಗಿ ಒಪ್ಪಿಕೊಂಡುಬಿಟ್ಟಿತು. ನಂತರ ಇದು ಭದ್ರತಾ ಮಂಡಳಿಯ ಮರು ಅಮೆರಿಕೀಕರಣದ ಉಸ್ತುವಾರಿ ವಹಿಸಿಕೊಂಡಿದ್ದ ಕೋಫಿ ಅನ್ನಾನ್ ಅವರಿಗೆ ಘೋರತರವಾಗಿ ಪರಿಣಮಿಸಿತು. ಕೊಲ್ಲಿ ಯುದ್ಧದ ಆಕ್ರಮಣ ಕಾಲದಲ್ಲಿ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಕಾರ್ಯದರ್ಶಿ ಮತ್ತೆ ಸಾಮ್ರಾಜ್ಯಶಾಹಿ ನೀತಿಯನ್ನು ಅನುಸರಿಸುವ ಪರಿಕರವಾಗಿ ಬದಲಾದವು. ಅಲ್ಲದೆ ಅನ್ನಾನ್ ಅವರ ಕೆಲಸವನ್ನು ತುಂಬ ಸುಲಭ ಮಾಡಿದವು.
ಹತ್ತನೆಯದು, ಅಮೆರಿಕ ಆಕ್ರಮಣದ ನೈತಿಕ ಸಮರ್ಥನೆಯನ್ನು ಭದ್ರತಾ ಮಂಡಳಿಯಿಂದ ಪಡೆದುದೇ ಅಲ್ಲದೆ ಜಗತ್ತಿನ ಬುದ್ಧಿ ಜೀವಿಗಳಲ್ಲಿ ನೈತಿಕ ಒತ್ತಡ ಉಂಟುಮಾಡಲು, ತನ್ನ ಆಲೋಚನೆ ಅಧಿಕೃತಗೊಳಿಸಲು ಮತ್ತು ಸಾಂಸ್ಕೃತಿಕ ಒಪ್ಪಿಗೆ ಪಡೆಯಲು ಅದಕ್ಕೆ ಸಂಕೀರ್ಣ ಬಲವೊಂದರ ಅಗತ್ಯವಿತ್ತು. ಅದನ್ನು ಎಲ್ಲ ಬಗೆಯ ಎನ್ ಜಿಒಗಳಿಂದ, ನವ್ಯೋತ್ತರವಾದ ಅತ್ಯುತ್ತಮ ಚಿಂತಕರಿಂದ, 'ಇತಿಹಾಸ ಮುಗಿತಾಯ' ಚಿಂತನೆಗಳವರೆಗೂ ಪಸರಿಸಿದ ಹಲವು ಬಗೆಯ ದೊಡ್ಡ ದೊಡ್ಡ ಮಾದರಿಗಳನ್ನು ಪಡೆದುಕೊಂಡಿತು. ಅಮೆರಿಕೆಯ ವಿಶ್ವವಿದ್ಯಾನಿಲಯಗಳ ನಯವಂತಿಕೆಯ ನೈತಿಕ ತತ್ವಶಾಸ್ತ್ರಜ್ಞರು 'ನ್ಯಾಯಯುತ ಯುದ್ಧ ' ಪರಿಕಲ್ಪನೆಯ ಅನುಕೂಲವನ್ನು ಹೊಸದಾಗಿ ರೂಪುಗೊಳ್ಳುತ್ತಿರುವ ಸಾಮ್ರಾಜ್ಯಶಾಹಿಯ ನೈತಿಕ ಆರ್ಥಕತೆಯಲ್ಲಿ ಪ್ರತಿಪಾದಿಸುತ್ತಿರುವುದು ನಮಗೆ ಕೇಳಿ ಬರುತ್ತದೆ. ಆಸಕ್ತಿಯ ವಿಷಯವೆಂದರೆ ಮಾನವ ಹಕ್ಕುಗಳು ಮುಂತಾದ ಸಂಸ್ಥೆಗಳ ಪರವಾಗಿ 'ಮೂಗು ತೂರಿಸುವ ಹಕ್ಕು' ರೋಮ್ ಸಾಮ್ರಾಜ್ಯದಲ್ಲಿ ಮೊದಲಿಗೆ ಬೆಳವಣಿಗೆಯಾದುದು. ಅದು ಜಾಗತಿಕ ಪರಿಣಾಮ ಹೊಂದಿರುವುದು ಗಣನೀಯ. ಸಾಮ್ರಾಜ್ಯಶಾಹಿಯ ಕೇಂದ್ರಗಳಲ್ಲಿ ಆರಂಭವಾದರೂ ಸಾಮ್ರಾಜ್ಯಶಾಹಿಯ ಗಿರಾಕಿಗಳಾದ ಮೂರನೆಯ ಜಗತ್ತಿನ ದೇಶಗಳಲ್ಲಿ ಹರಡಿಕೊಂಡಿದೆ. ಸದ್ದಾಂ ಹುಸೇನ್ ಮಾನವ ಹಕ್ಕುಗಳ ವಿಷಯದಲ್ಲಿ ಒಬ್ಬ ರಾಕ್ಷಸನೇ ಇದ್ದಿರಬಹುದು. ಆದರೆ 'ದುಷ್ಟ ಸಾಮ್ರಾಜ್ಯ' ಎಂಬ ಮಾತನ್ನು ಶೀತಲ ಸಮರದ ಕಾಲದಿಂದ ಹಿಡಿದು ಇಂದಿನವರೆಗೂ ಮರುಚಾಲನೆ ನೀಡಲು ಸಾಧ್ಯ. ಅಲ್ಲದೆ ಅಸಹಾಯಕ ಮಕ್ಕಳು, ಹಿಮ್ಮೆಟ್ಟಿದ ಸೈನಿಕರು ಸೇರಿದಂತೆ ಹತ್ತು ಸಾವಿರ ಇರಾಕಿಗಳ ಸಾವು ನ್ಯಾಯಯುತ ಯುದ್ಧದ ವಿಷಾದನೀಯ ದೃಷ್ಟಿಕೋನವೆಂಬುದನ್ನು ಪ್ರತಿನಿಧಿಸಬೇಕಿದೆ. ಈ ನೈತಿಕ ಆರ್ಥಿಕತೆ ಕೂಡ ತನ್ನದೇ ಆದ ಸಂಕೇತಗಳು ಮತ್ತು ಸ್ಥಿತಿಸ್ಥಾಪಕ ಗುಣಗಳನ್ನು ಹೊಂದಿರುತ್ತದೆ ಎಂಬುದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು ಶ್ರೇಷ್ಠ ಮೌಲ್ಯಗಳು. ಆದರೆ ಇವು ಸೌದಿ ಅರೇಬಿಯಾದಂಥ ಪ್ರದೇಶಗಳಲ್ಲಿ ಹೆಚ್ಚು ಶ್ರೇಷ್ಠವಾಗಿ ಉಳಿದಿಲ್ಲ. ಆಫಘಾನಿಸ್ತಾನದ ಕೊಲೆಪಾತಕಿ ಧರ್ಮಾಂಧರು ಮತ್ತು ಮಾದಕ ವ್ಯವಹಾರಿಗಳು ನೀತಿವಂತ ಏಜೆಂಟರ ಹಾಗೆ ಚಿತ್ರಿಸಲ್ಪಡುತ್ತಾರೆ. ಅಮೆರಿಕ ಪ್ರಪಂಚದಾದ್ಯಂತ ನಡೆಸಿದ ಕಮ್ಯೂನಿಸ್ಟ್  ವಿರೋಧಿ ಯುದ್ಧದಲ್ಲಿ ಬಹುಕಾಲದವರೆಗೆ ಕಾಲಾಳಾಗಿ ಸೇವೆ ಸಲ್ಲಿಸಿದ 'ಮುಜಾಹಿದ್ದೀನ್'ನಂಥವರೂ ಕೂಡ ಬೃಹತ್ ಇಸ್ಲಾಮಿಕ್ ನ ಕಾರಣ ಮುಂದೊಡ್ಡುತ್ತಾರೆ. ಆದರೆ 'ಇಸ್ಲಾಂ ಮೂಲಭೂತವಾದ'ದ ಹೆಸರಿನಲ್ಲಿ ಬರಲಿರುವ ಮಹಾ ಕೆಡಕನ್ನು ಅವರು ವೈಯಕ್ತಿಕಗೊಳಿಸುತ್ತಾರೆ ಹಾಗೂ ಕಮ್ಯೂನಿಷ್ಯರನ್ನು ಆದಷ್ಟು ಬೇಗ ಸೋಲಿಸಿದ ನಂತರ ತುಂಬಾ ಉಲ್ಲಾಸದಿಂದಿರುತ್ತಾರೆ. ಇಂಥ ಸಿನಿಕ ಏರುಪೇರುಗಳು ಜಾಗತಿಕ ಮಾಧ್ಯಮದ ಪಿತೂರಿ ಮತ್ತು ಮಾನವ ಹಕ್ಕುಗಳ ಯಾಂತ್ರಿಕ ಸಂಸ್ಥೆಗಳು ಸೃಷ್ಟಿಸಿದ ನೈತಿಕ ವ್ಯವಸ್ಥೆಯ ಪೂರ್ವಸ್ಥಿತಿಗೆ ವಂದಿಸಿ ಯಾರೊಬ್ಬರ ಗಮನಕ್ಕೂ ಬಾರದೆ ಹಾಗೆ ಕಣ್ಮರೆಯಾಗುತ್ತವೆ.
ಹನ್ನೊಂದನೆಯದು, ನಾಗರಿಕ ಹಕ್ಕು ಮತ್ತು ಪರಮಾಧಿಕಾರದ ಹೊಸ ವ್ಯವಸ್ಥೆಯೊಂದು ಮೈಪಡೆಯುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈಗಾಗಲೇ ನಾನು ಹೊಸಕಾನೂನಿನ ಆಡಳಿತ ವ್ಯವಸ್ಥೆ ರೂಪತಳೆದುದನ್ನು ತಿಳಿಸಿದ್ದೇನೆ. ಅವಳಿ ನಗರಗಳಾದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಈ ಸಾಮ್ರಾಜ್ಯದ ಸಂಯುಕ್ತ ರಾಜಧಾನಿಯ ಹಾಗೆ ಕಾರ್ಯ ನಿರ್ವಹಿಸುತ್ತವೆ ಎಂದು ಯಾರೂ ಹೇಳಬಹುದು. ಏಕೆಂದರೆ ಇವು ಅಮೆರಿಕಾ ಸಂಯುಕ್ತ ಸಂಸ್ಥಾನ ಸರಕಾರದ ಕೇಂದ್ರ ಕಾರ್ಯಸ್ಥಾನ ಮಾತ್ರವಾಗಿರದೆ ಈ ಹೊಸ ಸಾಮ್ರಾಜ್ಯದ ಪರಮಾಧಿಕಾರ ಹೊಂದಿದ ಪ್ರಮುಖ ಕೇಂದ್ರೀಯ ಸಂಸ್ಥೆಗಳ ಕೇಂದ್ರ ಕಾರ್ಯಸ್ಥಾನವೂ ಆಗಿದೆ. ಅವುಗಳೆಂದರೆ: ವಾಲ್ ಸ್ಟ್ರೀಟ್, ಐಎಂಎಫ್, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವಸಂಸ್ಥೆ ಮುಂತಾದವು, ಈ ನಡುವೆ ನಾಗರಿಕ ಹಕ್ಕುಗಳು ಮೂರು ಬಗೆಗಳಲ್ಲಿ ಪುನರ್ಸಂಘಟನೆಯಾಗಬಹುದು. ಅತಿ ಮುಖ್ಯ ದೇಶಗಳಲ್ಲಿ ಕೀನ್ಸಿಯನ್ ವಾದದ ಕುಸಿತ ಮತ್ತು ತೃತೀಯ ಜಗತ್ತಿನಲ್ಲಿ ಸುಧಾರಣಾವಾದಿ ರಾಷ್ಟ್ರೀಯವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕ ಅರ್ಹತೆಗಳು ನಾಗರಿಕ ಹಕ್ಕನ್ನು ಕಟ್ಟಿಹಾಕಿರುವುದು ಈಗ ಸೈದ್ಧಾಂತಿಕವಾಗಿಯೂ ಕಡಿಮೆಯಾಗಿದೆ ಹಾಗೂ ಸಮಾಜ ಹಿತದ ಅಂತಿಮ ನ್ಯಾಯಕಾರನ ಹಾಗೆ ಮಾರುಕಟ್ಟೆಗೆ ಹೆಚ್ಚು ದೂರವಾಗಿದೆ. ಬಂಡವಾಳಶಾಹಿ ಬಯಸುವ ಹಾಗೆ ಮಾರುಕಟ್ಟೆ ಆದಾಯವನ್ನು ಕೆಳಹಂತಗಳ ಬದಲು ಮೇಲು ಹಂತಗಳಿಗೆ ಮರು ಹಂಚಿಕೆ ಮಾಡಿದರೆ - ಜಾಗತೀಕರಣದ ವಿರುದ್ಧ ಈ ಜನವಾದಿ ಸಮಾವೇಶ ಅಪೇಕ್ಷೆ ಪಡುವ ಹಾಗೆ - ಕೆಳವರ್ಗದಲ್ಲಿರುವವರು ತಲೆ ಎತ್ತಲಾಗದಂತೆ ಸೊರಗುತ್ತಾರೆ. ಕುವೈತ್ ತನ್ನ ಬಂದಿಗಳನ್ನು, ಹೊರದೇಶದ ಜನರನ್ನು, ಪೌರರಲ್ಲದ ಕಾರ್ಮಿಕರನ್ನು ನಡೆಸಿಕೊಂಡ ರೀತಿಯಲ್ಲೆ ಅವರನ್ನೂ ಜಗತ್ತಿನಾದ್ಯಂತ ನಡೆಸಿಕೊಳ್ಳಲಾಗುತ್ತದೆ. ಇಲ್ಲವೆ ಮ್ಯಾಡ್ ಲೈನ್ ಆಲ್ ಬ್ರೈಟ್ ಅಂಥವರು ಮತ್ತು ಆಧುನಿಕೋತ್ತರದ ಅತ್ಯುತ್ತಮ ಚಿಂತನಕಾರರು- ರಾಷ್ಟ್ರೀಯ ಪ್ರಭುತ್ವ ಪ್ರತಿನಿತ್ಯ ನಾಶವಾಗುವುದನ್ನು ನಾಗರಿಕ ಹಕ್ಕು ಉಳಿಸಬಲ್ಲುದೆ? ಅಂದರೆ ರಾಷ್ಟ್ರೀಯ ಪ್ರಭುತ್ವವನ್ನು ವಿಭಿನ್ನವಾದ ಜನಾಂಗೀಯ ಅನನ್ಯತೆಯ ಯೋಜನೆಯಿಂದ ಮರುಸಂಘಟಿಸಬೇಕಿದೆಯೆ ಹೊರತು ನಾಗರಿಕ ಹಕ್ಕುಗಳ ಸಂಯುಕ್ತ ಯೋಜನೆಯಿಂದ ಅಲ್ಲ-ವೆಂದು ಆತುರಾತುರದಲ್ಲಿ ಸಂಯುಕ್ತ ಹೇಳಿಕೆ ನೀಡುತ್ತಾರೆ.  ಒಂದು ಕಾಲದಲ್ಲಿ ಸಮಾನತೆಯಾಗಿದ್ದುದು ಇಂದು ಅನನ್ಯತೆಯಾಗಿದೆ. ಸಾಮ್ರಾಜ್ಯಶಾಹಿವಾದ ಅಂತಿಮವಾಗಿ ಕಟ್ಟಕಡೆಯ ವರ್ಗದ ಧ್ರುವೀಕರಣವನ್ನು ಜಾಗತಿಕ ಮಟ್ಟದಲ್ಲಿ ತರುವುದೆಂದರೆ ಎಲ್ಲ ಕಡೆ ಸಾಮ್ರಾಜ್ಯದ ಪ್ರಜೆಗಳನ್ನು ಕಾಣುವುದು ಎಂದರ್ಥ. ಬಾಂಬೆ, ದೆಹಲಿ, ಸಾವೊಪೌಲೆ, ಟೋಕಿಯೋ, ಫ್ರಾಂಕ್ ಫರ್ಟ್, ನ್ಯೂಯಾರ್ಕ್, ಬೀಜಿಂಗ್ ನಂಥ ನಗರಗಳಲ್ಲೂ ಕೂಡ ಅಲ್ಲಿಯ ಪೌರರಲ್ಲದವರೆ ತುಂಬಿಕೊಳ್ಳುತ್ತಾರೆ. ಈ ನಗರಗಳಲ್ಲಿ ವಾಸಿಸುವವರು ನಗರದ ಹೊರವಲಯಗಳಲ್ಲಿ , ನಿಷೇಧಿತ ಸ್ಥಳಗಳಲ್ಲಿ, ಇಕ್ಕಟ್ಟಿನ ವಠಾರಗಳಲ್ಲಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉಳಿಯುತ್ತಾರೆ. ಶಾಂಘೈನಂಥ ನಗರಗಳಲ್ಲಿ ರೈತರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿದೆ. ಈಗಾಗಲೇ ಆ ನಗರದಲ್ಲಿ ಕೋಟಿಗಟ್ಟಲೆ ಜನ ಹಿಂದುಳಿದ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಆದರೂ ಅವರು ತಮ್ಮ ಸರಕಾರದಿಂದ ತಾವು ಎಲ್ಲಿಬೇಕಾದರೂ ನೆಲೆಸಬಹುದೆಂಬ ಅನುಮತಿಯನ್ನೇನೂ ಪಡೆದುಕೊಂಡಿಲ್ಲ. ಅವರು ಅತತವಾಗಿ ತಲೆಮರೆಸಿಕೊಂಡಿರಬೇಕಿದೆ ಮತ್ತು ಸರಕಾರದ ಅಂಕಿಅಂಶಗಳಲ್ಲಿ ವ್ಯಕ್ತಿಗಳಾಗದೆ ಉಳಿಯಬೇಕಾದ ಸಂದರ್ಭವೊದಗಿದೆ.
ಹನ್ನೆರಡನೆಯದು, ಜಾಗತೀಕರಣದ ವಿಚಾರಧಾರೆ ರಾಷ್ಟ್ರೀಯ ಪ್ರಭುತ್ವದ ಆಕ್ಷೇಪಣೆಗೆ ಎದುರಾಗಿ ಅಸಂಬದ್ಧವಾದುದನ್ನೇ ಹೆಚ್ಚು ಹುಟ್ಟು ಹಾಕಿದೆ ಹಾಗೂ ಬಂಡವಾಳದ ವಿರಾಟ್ ರೂಪದೆದುರು ತನ್ನ ಅವಸಾನವನ್ನೂ ಕಲ್ಪಿಸಿಕೊಂಡಿದೆ. ವಾಸ್ತವವಾಗಿ, ರಾಷ್ಟ್ರೀಯ ಪ್ರಭುತ್ವದ ಸ್ವರೂಪ ಜೀವಂತವಾಗಿರಬೇಕಿದ್ದು, ಚಿಗುರೊಡೆಯುತ್ತಿರಬೇಕಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಹೆಮ್ಮೆಯಿಂದ  ಬೀಗುವಂಥ ರಾಷ್ಟ್ರೀಯವಾದಿ ಮನೋಭಾವ ಕೇಂದ್ರಿತವಾದ ರಾಷ್ಟ್ರೀಯ ಮಟ್ಟದ ಸೈನ್ಯ ವ್ಯವಸ್ಥೆಯನ್ನು ಹೊಂದಿದೆ. ಯುರೋಪ್ ಒಕ್ಕೂಟದ ಅತಿ ಶಕ್ತಿಶಾಲಿ ಸದಸ್ಯ ರಾಷ್ಟ್ರವಾದ ಜರ್ಮನಿ ಪೂರ್ವವಲಯವನ್ನು ಪರಿಣಾಮಕಾರಿ ವಸಾಹತುವನ್ನಾಗಿಸಿಕೊಂಡು ವಿಶಾಲ ರಾಷ್ಟ್ರ ಸಂಘಟನೆಯನ್ನು  ಇತ್ತೀಚೆಗಷ್ಟೆ ಸಾಧಿಸಿದೆ. 'ಪೂರ್ವ ಏಷಿಯಾದ ಹುಲಿಗಳು' ಎಂದೇ ಕರೆಯಲಾಗುವ ದೇಶಗಳ ಅಸಾಧಾರಣ ಬೆಳವಣಿಗೆಯನ್ನು ಪ್ರಬಲ ಮಧ್ಯಸ್ಥಗಾರ ರಾಷ್ಟ್ರದ ನೆರವಿಲ್ಲದೆ ಯೋಚಿಸುವುದು ಕಷ್ಟ.  ನವ ಉದಾರ ಖಾಸಗೀಕರಣ ನೀತಿಯನ್ನು ಪ್ರತಿಯೊಂದು ರಾಷ್ಟ್ರ ಪ್ರಭುತ್ವವೂ ಪ್ರಪಂಚದಾದ್ಯಂತ ಕಾರ್ಯರೂಪಕ್ಕೆ ತಂದವು. ಬಂಡವಾಳ ಯಾವುದೇ ನಿರ್ಬಂಧಗಳನ್ನು ಬಯಸುವುದಿಲ್ಲ. ಆದರೂ ಕಾರ್ಮಿಕ ಆಡಳಿತ ವ್ಯವಸ್ಥೆ ಯಾವಾಗಲೂ ರಾಷ್ಟ್ರೀಯವಾಗಿರುತ್ತದೆ. ವಲಸಿಗರು ಒಂದು ರಾಷ್ಟ್ರೀಯ ಆಡಳಿತ ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಗೆ ಚಲಿಸಿದರೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ನೀವು ಮೆಕ್ಸಿಕೋ ನಗರದಲ್ಲಿ ಮೆಕ್ಸಿಕನ್ನರನ್ನು ಮಾತ್ರ ಕೇಳಬೇಕು ಇಲ್ಲವೆ ಕ್ಯಾಲಿಫೋರ್ನಿಯಾದಲ್ಲಿ ಅದಲು ಬದಲು ಮಾಡಿ ಕೇಳಬೇಕು. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಕಾರ್ಮಿಕರ ಬಗ್ಗೆ ಏನೂ ಮಾತನಾಡುವ ಹಾಗಿಲ್ಲ. ಜಾಗತೀಕರಣ ಏನನ್ನು ಬಯಸುತ್ತದೆ ಎಂದರೆ ರಾಷ್ಟ್ರೀಯ ಪ್ರಭುತ್ವ ಕಾರ್ಮಿಕರ ಸಂಬಂಧದಲ್ಲಿ ದುರ್ಬಲವಾಗಿರಬೇಕು, ಬಂಡವಾಳದ ಪರವಾಗಿ ಹೆಚ್ಚು ಬದ್ಧವಾಗಿರಬೇಕು ಎಂದು.
ಅಂತಿಮವಾಗಿ ಸಂಸ್ಕೃತಿಯ ಪುನರ್ ಸಂಘಟನೆ ವ್ಯಾಪಕವಾಗಬೇಕಿದೆ. ಇಲ್ಲಿನ ಕೇಂದ್ರೀಕೃತ ಸತ್ಯವೆಂದರೆ ನನ್ನ ದೃಷ್ಟಿಯಲ್ಲಿ ನಾವು ಜಗತ್ತಿನಾದ್ಯಂತ ಬಂಡವಾಳಶಾಹಿ ನಾಗರಿಕತೆಯೊಂದು ಮೈ ಪಡೆದುಕೊಳ್ಳುತ್ತಿರುವುದಕ್ಕೆ ಸಾಕ್ಷೀದಾರರಾಗಿದ್ದೇವೆ. ಅದರಲ್ಲಿ ಏಕರೂಪ ನಾಗರಿಕತೆಯಲ್ಲಿ ಹಲವು ವೈವಿಧ್ಯತೆಗಳ ಹಾಗೆ ರಾಷ್ಟ್ರೀಯ, ಪ್ರಾಂತೀಯ, ಮತ್ತು ಸ್ಥಳೀಯ ಸಂಸ್ಕೃತಿಗಳನ್ನು ಪುನರ್ಸಂಘಟಿಸಬೇಕಿದೆ.  ನಾಗರಿಕತೆಯ ಏಕರೂಪತೆಯಲ್ಲಿ ವಸ್ತು ಉಪಯುಕ್ತತೆಯ ಮಟ್ಟ ತೀರಾ ತಳಮಟ್ಟದಲ್ಲಿರುತ್ತದೆ. ಆದರೆ ಎರಡನೆಯ ಹಂತದಲ್ಲಿ ಅಂದರೆ ಆದೇಶಿತ ವಾಸ್ತವದಲ್ಲಿ ವಸ್ತುವಿನ ಮೂಲರೂಪ ಎಲ್ಲ ಬಗೆಯ ವ್ಯತ್ಯಾಸಗಳನ್ನು ಉಳಿಸಿಕೊಂಡು ಬರುತ್ತದೆ, ಉತ್ತೇಜಿಸುತ್ತದೆ, ಉತ್ಪಾದನೆಯನ್ನು ಮಾಡುತ್ತದೆ. ಏಕೆಂದರೆ ಆ ವೈವಿಧ್ಯತೆ ಇಲ್ಲದೆ ಸ್ವಾತಂತ್ರ್ಯದ ಭ್ರಮೆ ಮತ್ತು ಆಯ್ಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಮಾರುಕಟ್ಟೆಯ ಅತ್ಯಂತ ಮೂಲಭೂತ ಅಂಶ. ಆದ್ದರಿಂದ ಜನಾಂಗೀಯತೆ ಎಂಬುದು ಆಧುನಿಕ ಮಾದರಿಯ ವಿನ್ಯಾಸದಲ್ಲಿ ಅಷ್ಟೊಂದು ಪ್ರಮುಖ ಭಾಗವಾಗಿದೆ. ಉದಾಹರಣೆಗೆ, ಜಗತ್ತಿನ ಮಾರುಕಟ್ಟೆಗಳನ್ನು ಮತ್ತು ರಾಷ್ಟ್ರಮಟ್ಟದ ಮಾರುಕಟ್ಟೆಗಳನ್ನು ಮೆಟ್ರೋಪಾಲಿಟನ್ ಮಾರುಕಟ್ಟೆಗಳ ಮಾದರಿಯಲ್ಲಿ ಮರುಏರ್ಪಾಟು ಮಾಡಿರಬೇಕಿತ್ತು. ಫ್ರೆಡರಿಕ್ ಎಂಜೆಲ್ಸ್ ಒಮ್ಮೆ ಆಶಾವಾದದಿಂದ ಹೀಗೆ ಬರೆದ - 'ಸಂಸ್ಕೃತಿಯ ಕ್ಷೇತ್ರದಲ್ಲಿಡುವ ಪ್ರತಿಯೊಂದು ಹೆಜ್ಜೆ ಸ್ವಾತಂತ್ರ್ಯದ ಕಡೆಗಿಡುವ ಹೆಜ್ಜೆ'. ಬಂಡವಾಳಶಾಹಿಯ ಮೂಲಭೂತ ಸಾಂಸ್ಕೃತಿಕ ಯೋಜನೆ ಉಳ್ಳವರ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯದ ರೂಪದಲ್ಲಿ ಚಲಾಯಿಸುವ ಪ್ರತಿಯೊಂದು ಉತ್ಪಾದನಾ ವಸ್ತುವಿನ ಸ್ವತಂತ್ರಹೀನ ಕಂತೆಯಾಗಿ ಇರುತ್ತದೆ ಎಂದು ಬಡವನಾದವನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ವಾಲ್ಟರ್ ಬೆಂಜಮಿನ್ ನಾಗರಿಕತೆಯ ಪ್ರತಿಯೊಂದೂ ದಾಖಲೆ ಅದೇ ಕಾಲದಲ್ಲಿ ಅನಾಗರಿಕತೆಯ ದಾಖಲೆಯೂ ಆಗಿರುತ್ತದೆ ಎಂದು ಹೇಳಿದಾಗ ಬಹುಶಹ ಆತ ಸತ್ಯಕ್ಕೆ ಹತ್ತಿರವಿದ್ದ. ನಾಗರಿಕತೆ ಎಂದರೆ ಆತನ ಅರ್ಥದಲ್ಲಿ ಬಂಡವಾಳಶಾಹಿ ನಾಗರಿಕತೆಯಲ್ಲಿ  ಸೌಂದರ್ಯೀಕರಣ ಕ್ರಿಯೆ ಮತ್ತು ಸಂಪತ್ತೀಕರಣ ಕ್ರಿಯೆ ಜೊತೆಯಲ್ಲಿ ಕೈ ಹಿಡಿದು ಸಾಗುತ್ತವೆ. ಹಾಗಾಗಿ ಅದರ ವಿನಿಮಯ ಮೌಲ್ಯದ ಹೆಸರಿನಿಂದ ಕರೆಯಲಾಗುವ ಪೈಶಾಚಕತ್ವದೊಂದಿಗೆ ಹೆಣೆದುಕೊಳ್ಳಲಾರದೆ ಹೋದರೆ ನಮಗೆ ಉಪಯುಕ್ತತೆಯ ಮೌಲ್ಯ ದೊರಕುವುದು ಸಾಧ್ಯವಿಲ್ಲ.
ಈ ಅಭಿಪ್ರಾಯದೊಂದಿಗೆ 'ಜಾಗತೀಕರಣ'ದ ವಿಷಯವನ್ನು ಇಲ್ಲಿಗೆ ಕೈ ಬಿಡೋಣ. ಈ ವಿಷಯದಲ್ಲಿ ನಾನು ವಾಸ್ತವಿಕವಾಗಿ ಇಷ್ಟು ವಿಸ್ತಾರವಾಗಿ ಮಾತಾಡಬೇಕೆಂದುಕೊಂಡಿರಲಿಲ್ಲ. ಇನ್ನು ಸಂಸ್ಕೃತಿಯ ವಿಷಯಕ್ಕೆ ಬರೋಣ. ಈ ವಿಚಾರದಲ್ಲಿ ನಾನು ತಜ್ಞನಲ್ಲದಿದ್ದರೂ ಅಲ್ಪಸ್ವಲ್ಪ ತಿಳುವಳಿಕೆಯಿದೆ ಎಂಬುದು ನಿಮ್ಮಲ್ಲಿ ಕೆಲವರ ನಂಬಿಕೆ. ಬಂಡವಾಳಶಾಹಿ ಜಾಗತೀಕರಣದ ಈ ಯುಗದಲ್ಲಿ 'ಸಂಸ್ಕೃತಿ' ಪದದ ಅರ್ಥ ಸಾಧ್ಯತೆಗಳು ಏನಾಗಿರಬಹುದೆಂದು ನಾನು ಮತ್ತೆ ಮತ್ತೆ ಅಚ್ಚರಿ ಪಟ್ಟಿರುವುದು ನಿಜ. ಆದರೂ ಈಗ ಕೃಷಿ ಮೂಲದ ಎಲ್ಲ ಆಯಾಮಗಳನ್ನು ಮತ್ತು ಜೀವನಾವಶ್ಯಕವಾದ ಆರ್ಥಿಕತೆಯನ್ನು ಏಕರೂಪದ ಜಾಗತಿಕ ನಿಯಮದಡಿ ತರಲಾಗುತ್ತಿದೆ. ಸಮೀರ್ ಅಮೀನ್ ಮಂಡಿಸಿರುವ ಹಾಗೆ ತೀರಾ ಕೆಳಹಂತದಲ್ಲಿರುವ ಜನರಿಗೆ ಸಂಸ್ಕೃತಿ ಗೋಳಾಕಾರವಾಗಿ ಕಾಣಿಸಿಕೊಳ್ಳುತ್ತದೆ.  ಅಲ್ಲಿ ಬಳಕೆ ಮೌಲ್ಯಗಳನ್ನು ಬಲಪ್ರಯೋಗ ಮಾಡದ ಮತ್ತು ಸಹಕಾರಿಯುತ ಬಳಕೆ ಮೌಲ್ಯಗಳ ಹಾಗೆ ಉತ್ಪಾದಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ. ಅಲ್ಲದೆ ಜೀವನಾವಶ್ಯಗಳನ್ನು ತೃಪ್ತಿ ಪಡಿಸುವುದಕ್ಕಾಗಿ , ವಿನಿಮಯ ಮೌಲ್ಯದ ಮಧ್ಯಸ್ಥಿಕೆ ಇಲ್ಲದ, ಸೌಂದರ್ಯದ ಅಗತ್ಯತೆ ಸ್ಪಷ್ಟವಾಗಿ ಒಳಗೊಂಡಿರುತ್ತದೆ. ಮೂಲಭೂತ ವಿಚಾರದಲ್ಲಿ ಸಾಂಸ್ಕೃತಿಕವಾಗಿ ಉತ್ಪಾದನೆ ಹೀಗೆ ಸಂಸ್ಕೃತಿಯ ನಿರಾಕರಣೆಯಂಥದ್ದಕ್ಕೆ ಸಮಾನವಾಗಿರುತ್ತದೆ. ಇದನ್ನು ನಾನು ಜಗತ್ತಿನಾದ್ಯಂತ ಸ್ಥಳೀಯ ಜನರು ಅಥವಾ ಆದಿವಾಸಿಗಳು ಮತ್ತು ಭಾರತದ ಅತಿ ಬಡ ರೈತ ಸಮುದಾಯಗಳ ಸಾಂಸ್ಕೃತಿಕ ಹಕ್ಕುಗಳು ಒಳಗೊಂಡಿರುವ ಹಕ್ಕುಗಳನ್ನು ನಾವು ಸಮರ್ಥನೆ ಮಾಡುವಾಗ ಏನು ಆಗಿರುತ್ತೇವೆಯೋ ಅದೇ ಎಂದು ನಂಬುತ್ತೇನೆ. ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪಗಳ ಕಾರಣಗಳಿಂದ ಅವರು ಬಂಡವಾಳಶಾಹಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಅರಗಿಸಿಕೊಂಡರು ಮತ್ತು ಅದರಿಂದ ಹೆಚ್ಚು ಶೋಷಣೆಗೆ ಒಳಗಾದರು. ಅವರ ವಸ್ತು ಉತ್ಪಾದನೆಗಳಿಗೂ ಬಂಡವಾಳಶಾಹಿಯ ಅವಶ್ಯಕತೆಯಾಗಿದ್ದ ವ್ಯಕ್ತಿಗತ ಮಾದರಿಗಳು ಮತ್ತು ಸಂಗ್ರಹಿತ ರಾಶಿಯ ಆಜ್ಞಾರೂಪಗಳಿಗೂ  ಯಾವುದೇ ರೀತಿಯ ಹೊಂದಾಣಿಕೆಯಾಗಲಿಲ್ಲ -ವಿಶೇಷವಾಗಿ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಬೂರ್ಜ್ವಾಗಳಲ್ಲದೆ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಅಧಿಕಾರಿಶಾಹಿಗಳ ವಿಚಿತ್ರಕೂಟ ನಮ್ಮ ಗಿಡ ಮರ ಮತ್ತು ನೀರಿನ ಬಗ್ಗೆ ವಿಮರ್ಶಾತ್ಮಕ ನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ತಮಗೆ ತಾವೇ ಕಾಯ್ದಿರಿಸಿಕೊಂಡ ಬಂಡವಾಳಶಾಹಿ ಜಾಗತೀಕರಣ ಹಂತದ ಸಂದರ್ಭದಲ್ಲಿ. ಬಂಡವಾಳಶಾಹಿ ಸಾರ್ವತ್ರೀಕರಣಗೊಳ್ಳುತ್ತಿರುವ ಈ ಹೊಸಯುಗದಲ್ಲಿ  'ಸಂಸ್ಕೃತಿ' ಎಂಬ ಪದವನ್ನು ಬೇರೆ ರೀತಿಯಾಗಿಯೆ ಅರ್ಥ ಮಾಡಿಕೊಳ್ಳಬೇಕಿದೆ.
ಸಮೀರ್ ಅಮೀನ್ ಅವರಿಂದ ಪಡೆದ ಸಂಸ್ಕೃತಿ ಕುರಿತ ಈ ವ್ಯಾಖ್ಯೆಯನ್ನು ಈಗ ನನ್ನದೆ ಉದ್ದೇಶಗಳಿಗಾಗಿ ಮಾರ್ಪಾಟು ಮಾಡಿಕೊಂಡಿದ್ದೇನೆ.  ಅದು ಒಂದು ವಿಶಿಷ್ಟ ವಿಚಾರವನ್ನು ಹೊಂದಿದೆ. ಸಂಸ್ಕೃತಿ ವಿನಿಮಯ, ಮಾರುಕಟ್ಟೆ, ಬೆಲೆ ನಿಗದಿಕರಣ, ಜಾಹಿರಾತು ಮುಂತಾದುವುಗಳ ಬೇಲಿಯೊಳಗೆ ಸಿಕ್ಕಿ ಹಾಕಿಹೊಂಡಾಗ ಸೌಂದರ್ಯಾತ್ಮಕ  ಆನಂದ ಮತ್ತು ಕಲಾಕೃತಿ ಬಳಕೆಯ ಮೌಲ್ಯಗಳ ಪಾವಿತ್ರ್ಯತೆ ಜರೂರಾಗಿ ಕುಗ್ಗುತ್ತದೆ ಅಥವಾ ಕೊನೆಯ ಪಕ್ಷ ರೂಪಾಂತರ ಹೊಂದುತ್ತದೆ. ಅಲ್ಲದೆ ಸಂಸ್ಕೃತಿ ಸಾಮಾಜಿಕ ಘನತೆ ಮತ್ತು ಅವಕಾಶ ಗಳಿಸುವ ಉದ್ದೇಶಗಳಿಗಾಗಿ ಶೇಖರವಾದಾಗ ಅದು ಒಂದು ಬಗೆಯಲ್ಲಿ ಬಂಡವಾಳದ ಹಾಗೆ ಕೆಲಸ ಮಾಡಲುತೊಡಗುತ್ತದೆ. ಹೀಗಿದ್ದರೂ ಸಂಸ್ಕೃತಿ ಸಂಬಂಧದಲ್ಲಿ ಬಂಡವಾಳಶಾಹಿ ಪಾತ್ರ- ಅದರ ಎಲ್ಲ ಹಂತಗಳಲ್ಲಿ ಇತ್ತೀಚಿನ ಹಂತವೂ ಸೇರಿರುವ- ಇತರ ಹಲವಾರು ಉನ್ನತ ವಿಚಾರಗಳ ಜೊತೆಗಿನ ಸಂಬಂಧ ಒಂದೇ ರೀತಿಯದಾಗಿರುವುದರಿಂದ ಅದಕ್ಕೆ ಕೆಲವನ್ನು ಸೇರಿಸಬೇಕಾದ ಅಗತ್ಯವಿದೆ. ಉತ್ಪಾದನೆಯ ಮಾರ್ಗಗಳನ್ನು ಉತ್ತಮಪಡಿಸುವುದರಿಂದ ಸಾಧ್ಯತೆಯ ಹಲವು ಅವಕಾಶಗಳು ಹೆಚ್ಚುತ್ತವೆಯಾದರೂ ತನ್ನದೇ ಆದ ಉತ್ಪಾದನೆಯ ಸಾಮಾಜಿಕ ಸಂಬಂಧಗಳು ಮತ್ತು ವಿನಿಮಯ ಅವಕಾಶ ಮಾಡಿಕೊಟ್ಟ ಸಾಧ್ಯತೆಯ ಮೂಲವನ್ನೇ ಹಾಳು ಮಾಡುತ್ತದೆ. ಉದಾಹರಣೆಗೆ, ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಬಂಡವಾಳಶಾಹಿಯ ಸಾಂಸ್ಕೃತಿಕ ಸಾಮಗ್ರಿಗಳಿಗಾಗಿ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿತು. ಈ ಮೂಲಕ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ಶ್ರೀಮಂತರ ಆಶ್ರಯದಿಂದ ಬಿಡುಗಡೆಗೊಳಿಸಿತು. ಕರಕುಶಲ ಉತ್ಪನ್ನಗಳಿಗೆ ಮೀರಿದ ಮತ್ತು ಕಲೆಯ ಸ್ವತಂತ್ರ ಪರಿಧಿಯಾಚೆಗಿನ ಸಾಮರ್ಥ್ಯವನ್ನು ಹೆಚ್ಚಿಸಿತು. ಆದರೆ ನಂತರ ಕಲಾ ಉತ್ಪನ್ನವನ್ನು ಒಂದು ಮಾರಾಟದ ವಸ್ತುವನ್ನಾಗಿ ಬದಲಾಯಿಸುತ್ತ ಅದೇ ಕಲಾವಿದರನ್ನು ಅದೇ ಮಾರುಕಟ್ಟೆಯಿಂದ ನಿರ್ಬಂಧಕ್ಕೆ ಒಳಪಡುವಂತೆ ಮಾಡಿತು. ಈ ಕಾರ್ಯಗತಿಯಲ್ಲಿ ಮಾರುಕಟ್ಟೆಯಿಂದ ನ್ಯೂನತೆಗಳು ಕಲೆ ಮತ್ತು ಸಂಸ್ಕೃತಿಯ ಆವರಣವನ್ನು ಸ್ಥಳೀಯ ಮತ್ತು ರಾಷ್ಟ್ರೀಯವೆಂದು ವಿಭಜನೆ ಮಾಡುವುದರಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಪರಿಧಿ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹವಣಿಸುತ್ತಿದ್ದರೆ ಸ್ಥಳೀಯ ಪರಿಧಿ ಮಾರುಕಟ್ಟೆಯ ಅಸ್ತಿತ್ವವನ್ನು ಇಲ್ಲವಾಗಿಸಿಬಿಡುತ್ತಿತ್ತು ಅಥವಾ ಬಿಗಿಯಾದ ನಿರ್ಬಂಧಕ್ಕೆ ಒಳಪಡಿಸುತ್ತಿತ್ತು. ಜಾಗತೀಕರಣದ ಇಂದಿನ ಹಂತಗಳಲ್ಲಿ ನಡೆಯುತ್ತಿರುವುದೇನೆಂದರೆ  ಸ್ಥಳೀಯವಾದುದು ಕೂಡ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹೆಚ್ಚು ಹೆಚ್ಚು ಹಂಬಲಿಸುತ್ತಿರುವುದು ಮತ್ತು ಸ್ವಂತಂತ್ರ ಪರಿಧಿಯ ಒಪ್ಪಂದವನ್ನು ಉಳಿಸಿಕೊಂಡಿರುವುದೇ ಆಗಿದೆ.
ಉದಾಹರಣೆಗೆ, ತೃತೀಯ ಜಗತ್ತಿನ ಪ್ರತಿಯೊಂದೂ ದೇಶವೂ ಸ್ವಾತಂತ್ರ್ಯ್ರ ಪಡೆದ ಮರು ದಿನದ ಸಂದರ್ಭದಲ್ಲಿ ಸರಕಾರ ಪ್ರ್ರಾಯೋಜಿತ ವಲಯದ ಕರಕುಶಲಗಳ ಸಂಸ್ಥೆಯ ಹಾಗೆ ಇರುವುದಕ್ಕೆ ಸಾಕ್ಷಿ. ಇದು ಸರಕಾರದ ಪ್ರ್ರಾಯೋಜನೆ ಮತ್ತು ಸಣ್ಣ ಪುಟ್ಟ ಸಾಮಗ್ರಿ ಉತ್ಪಾದನೆಗಳ ವಿಷಮ ಮಿಶ್ರಣವಾಗಿದೆ. ಈ ಮೂಲಕ ಹಳ್ಳಿಯ ವಿಶ್ವಾಸಾರ್ಹತೆಯನ್ನು ನಗರದ ಮನೆಯಂಗಳಕ್ಕೆ ಕರೆದು ತರಲಾಗುತ್ತಿದೆ. ನಂತರ ಇದು ಏಕವ್ಯಕ್ತಿ ಪ್ರವಾಸಿಗರ ಪ್ರವಾಸೋದ್ಯಮದಲ್ಲಿ ಹೆಚ್ಚು ಸಂಬಂಧ ಸಾಧಿಸುತ್ತದೆ, ಕೊನೆಗೆ ಜಾಗತಿಕ ಮಟ್ಟದ ರಫ್ತು ಮಾರುಕಟ್ಟೆಗಳನ್ನು ತನ್ನದನ್ನಾಗಿಸಿಕೊಳ್ಳುತ್ತದೆ. ಕೆಲವು ಎನ್ ಜಿಒ ವಲಯದ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾಗಿಯೋ ಉದ್ದೇಶಪೂರ್ವಕವಲ್ಲದೆಯೋ ವಿಷಮ ಸಹಭಾಗಿತ್ವ ಬೆಳೆದಿದೆ. ಕೆಲವು ಎನ್ ಜಿಒಗಳು ಸಾಮ್ರಾಜ್ಯದ ನೈತಿಕ ಆರ್ಥಿಕ ಸ್ಥಿತಿಯನ್ನು ಸಂಘಟಿಸುವಲ್ಲಿ ನೆರವಾಗುತ್ತಿವೆ. ಈ ಮೂಲಕ ಮಾನವ ಹಕ್ಕುಗಳಂಥ ವಿಷಯಗಳನ್ನು ರಾಷ್ಟ್ರೀಯ ಪ್ರಭುತ್ವದ ಸಮರ್ಥನೆಗಾಗಿ ಬಳಸುತ್ತಿದ್ದು, ಇವು ಕ್ರೂರವೂ ಕಾನೂನು ಬಾಹಿರವೂ ಆಗಿವೆ. ಅಲ್ಲದೆ ಅವು ಸಾಮ್ರಾಜ್ಯಶಾಹಿ ದೇಶಗಳನ್ನು ಮತ್ತು ಬಹುರಾಷ್ಟ್ರೀಯ ಏಜೆನ್ಸಿಗಳನ್ನು ಆ ಮಾನವ ಹಕ್ಕುಗಳ ಸಂರಕ್ಷಕರ ಹಾಗೆ ನೇಮಕ ಮಾಡುತ್ತವೆ. ಇದಕ್ಕೆ ಸಮಾನಾಂತರವಾಗಿ ಸಣ್ಣ ಪುಟ್ಟ ವಸ್ತು ಉತ್ಪಾದನೆ ಮಾಡುವಂಥ ಅರೆಸಾಂಸ್ಕೃತಿಕ ಹಾಗೂ ಅರೆಸೌಂದರ್ಯಾತ್ಮಕ ವಲಯವನ್ನು ಸಂಘಟಿಸಲಾಗಿದೆ. ಈ ಸಂಘಟನೆಯಲ್ಲಿ ಸಮಾಜದ ಕೆಳ ದಲಿತ ವರ್ಗದಿಂದ ಬಂದ ರೈತರು, ಬುಡಕಟ್ಟು ಮಹಿಳೆಯರಂಥ ಕೆಲವರಿಗೆ ರಾಷ್ಟ್ರೀಯ ಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಬಳಸಲಾಗುವಂಥ ವಸ್ತುಗಳನ್ನು ಉತ್ಪಾದಿಸಲು ಉತ್ತೇಜಿಸಲಾಗಿದೆ.  ನಾನಿಲ್ಲಿ ಯಾವುದೇ ಉದ್ದೇಶವನ್ನಿಟ್ಟುಕೊಂಡು ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಏಕೆಂದರೆ ಈ ಉದ್ದೇಶಗಳು, ಆಶಯಗಳು, ಮೇಲಿಂದ ಮೇಲೆ ಮೆಚ್ಚುಗೆಗೆ ಒಳಗಾಗುತ್ತವೆ, 'ಅಧಿಕಾರತ್ವ' ಎಂದು ಕರೆಯಲಾಗಿರುವುದನ್ನು ಅನುಸರಿಸಲು ಇದನ್ನೆಲ್ಲ ಮಾಡಲಾಗಿದೆ. ನನಗಿಲ್ಲಿ ಹೆಚ್ಚು ಆಸಕ್ತಿ ಇರುವುದು- ಈ ಬಗೆಯ ಅಂತರ್ಗತ ಯೋಜನೆಗಳಿಂದಾಗಿ ತಂತಾನೆ ವಿಸ್ತಾರಗೊಳ್ಳುವ ಮಾರುಕಟ್ಟೆಯ ಸಾಮರ್ಥ್ಯದಲ್ಲಿ ಮತ್ತು ತನ್ನ ನೈತಿಕ ಏಜಂಟರು ಹಾಗೂ ಸಾಂಸ್ಕೃತಿಕ ಪ್ರತಿನಿಧಿಗಳ ಹಾಗೆ ಉತ್ತಮವಾಗಿ ಆಲೋಚಿಸುವ ಜನರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ. ನನಗೆ ವಿವಾದಾತ್ಮಕ ಸತ್ಯದಲ್ಲೆ ಆಸಕ್ತಿ. ಅಲ್ಲಿ ಅಧಿಕಾರತ್ವದ  ಆ ಯೋಜನೆಗಳು ಮಾರುಕಟ್ಟೆಯ ಆರ್ಥಿಕತೆಯೊಳಗೆ ಕಾರ್ಯಗತವಾಗುತ್ತ ಜಾಗತೀಕರಣದ ಮತ್ತೊಂದು ಮುಖದಂತೆ ಮತ್ತೆ ಮತ್ತೆ ಕಾಣುತ್ತಿರುತ್ತದೆ.
ಮಾರ್ಕ್ಸ್ ವಾದಿಯಾದವನಿಗೆ ಸಂಸ್ಕೃತಿಯ ದರ್ಶನವೆಂಬುದು ಯಾವುದೇ ಸಂದರ್ಭದಲ್ಲಿ ಆಲೋಚನೆಯ ಕಷ್ಟದಿಂದ ಓಡಿ ಹೋಗುವುದಲ್ಲ. ಅದು ಸೌಂದರ್ಯಾತ್ಮಕ ಅಗತ್ಯಗಳನ್ನು ಒಳಗೊಂಡ, ಸಾಮಾನ್ಯರ ಅಗತ್ಯಗಳನ್ನು ಪರಿಹರಿಸುವ ಸಲುವಾಗಿ ವಿನಿಮಯ ಮೌಲ್ಯದ ಮಧ್ಯವರ್ತಿ ಇಲ್ಲದೆ ಹಂಚಿಕೊಳ್ಳುವ ಮತ್ತು ಯಾವ ಬಲಾತ್ಕಾರವಿಲ್ಲದೆ ಉತ್ಪಾದನೆಯಾದ ಬಳಕೆಯ ಮೌಲ್ಯಗಳನ್ನು ಒಂದು ವಲಯದ ಹಾಗೆ ಭಾವಿಸುತ್ತದೆ. ತಾತ್ವಿಕ ಅಮೂರ್ತತೆಯ ಕೆಳಹಂತದಲ್ಲಿ ಸಂಸ್ಕೃತಿಯ ವಿಷಯವನ್ನು ಯಾರೊಬ್ಬರೂ ಬೇರೆ ಬೇರೆ ವ್ಯಾಖ್ಯೆಗಳ ಮೂಲಕ ಮಾತನಾಡಲು ಸಾಧ್ಯವಾದರೂ ಅದು ಮೂಲತಹ ಸಮಾಜಶಾಸ್ತ್ರೀಯ ಮತ್ತು ಮಾನವೀಯ ನೆಲೆಯುಳ್ಳದ್ದಾಗಿರುತ್ತದೆ. ಅಂಥ ಮೂರು ವ್ಯಾಖ್ಯೆಗಳ ಬಗ್ಗೆ ನನಗೆ ಆಸಕ್ತಿ. ಮೊದಲನೆಯದು, ಸಂಸ್ಕೃತಿ ಸೌಂದರ್ಯ ಮತ್ತು ಬೌದ್ಧಿಕತೆಯ ವಲಯ ಎಂಬುದು; ಎರಡನೆಯದು, ಸಂಸ್ಕೃತಿ 'ಸಮಗ್ರ ಜೀವನ ವಿಧಾನ' ಎಂಬುದು; ಮೂರನೆಯದು, ಪ್ರಾಪಂಚಿಕ ಜೀವನದ ಮೇಲೆ ಹೆಚ್ಚು ಒತ್ತು ನೀಡಿರುವ ಸಂಸ್ಕೃತಿ ಸಂವಹನದ ಆಚರಣೆಗಳ ಮತ್ತು ಹಾದಿಗಳ ಒಟ್ಟು ಮೊತ್ತವಾಗಿದ್ದು, ಅರ್ಥವಂತಿಕೆಗಳು ಮತ್ತು ಮೌಲ್ಯಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರಸಾರ ಮಾಡುತ್ತದೆ.
ಸಂಸ್ಕೃತಿಯ ಈ ಮೂರು ವ್ಯಾಖ್ಯೆಗಳಲ್ಲಿ 'ಸಮಗ್ರ ಜೀವನ ವಿಧಾನ'ದ ಹಾಗೆ ಎಂಬುದು ಬಹುಶಹ ಹೆಚ್ಚು ಸಾರ್ವಜನಿಕವಾದ. ಸರ್ವ ಸಮ್ಮತವಾದ ವ್ಯಾಖ್ಯೆ. ಈ ಚಿಂತನಾಕ್ರಮದಿಂದಲೇ 'ರಾಷ್ಟ್ರೀಯ ಸಂಸ್ಕೃತಿ', 'ಭಾರತೀಯ ಸಂಸ್ಕೃತಿ', 'ಹಿಂದೂ ಸಂಸ್ಕೃತಿ', 'ಪಾಶ್ಚಾತ್ಯ ಸಂಸ್ಕೃತಿ' ಇನ್ನೂ ಮುಂತಾದ ವಿಚಾರಗಳನ್ನು ಪಡೆದಿದ್ದೇವೆ. ಅಧಿಕಾರ ಮತ್ತು ಅಧಿಕಾರರಹಿತವೆಂಬ ಗೆರೆಯನ್ನು ಅನುಸರಿಸಿ ಬುಡಮಟ್ಟದಿಂದ ವಿಭಜನೆಗೊಂಡ ಸಮಾಜ ವರ್ಗ ಅಧಿಕಾರಗಳು ಅಥವಾ ಹೆಣ್ಣಿನ ಮೇಲೆ ಪುರುಷನ ಅಧಿಕಾರ ಅಥವಾ ಧಾರ್ಮಿಕ ನಂಬುಗೆಯ ಒಂದು ಸಮುದಾಯದಲ್ಲಿನ ಅಧಿಕಾರ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಮೂಲಭೂತ ವೈರುಧ್ಯಗಳಿಂದ ತುಂಬಿ ತುಳುಕುವ ಸಮಾಜ ಏಕ ಸಂಸ್ಕೃತಿಯನ್ನು ಕಷ್ಟದಿಂದ ಹೊಂದಿರಲು ಸಾಧ್ಯ. ಇಂಥ ಸಂದರ್ಭಗಳಲ್ಲಿ ಸಂಸ್ಕೃತಿ ರಾಷ್ಟ್ರೀಯ ಚೈತನ್ಯವನ್ನು ಹೊರಹೊಮ್ಮಿಸುವ ಹಾಗೆ ಕಾರ್ಯನಿರ್ವಹಿಸದೆ ಹೋರಾಟ ಮತ್ತು ಕಿತ್ತಾಟದ ಕಣದ ಹಾಗೆ ಕಾರ್ಯ ನಿರ್ವಹಿಸುತ್ತದೆ. ಏಕೀಕೃತ ಅಸ್ತಿತ್ವದ ಹಾಗೆ ಪ್ರಧಾನ ವಾಗ್ವಾದಗಳಲ್ಲಿ ಸಾಮಾನ್ಯವಾಗಿ ಪ್ರತಿನಿಧಿಸುವ ಭಿನ್ನ ನಂಬುಗೆಯ ಸಮುದಾಯಗಳಿಗೂ ಇದೇ ಮಾತು ಅನ್ವಯವಾಗುತ್ತದೆ. ಏಕೀಕೃತ ಸಂಸ್ಕೃತಿಯನ್ನು ಹೊಂದಿರುವ ಜಾತಿ ಸಮಾಜಕ್ಕೆ ಮಾತ್ರ ಇದು ಅಸಾಧ್ಯವಾದುದಲ್ಲ. ಶುದ್ಧ ಬ್ರಾಹ್ಮಣವಾದದ ಚರಿತ್ರೆ ಮತ್ತು ಅದರ ವಿರುದ್ಧ ಎದ್ದ ಆಸ್ತಿಕವಾದಿ ಭಿನ್ನ ಮತಗಳೂ ಒಳಗೊಂಡಂತೆ ಹಲವು ಭಿನ್ನ ಮತಗಳು ನಮಗೆ ಏಕೀಕೃತವಾದ ಅತ್ಯತ್ತಮ ಧಾರ್ಮಿಕ ಸಂಸ್ಕೃತಿಯ ವಿಚಾರವನ್ನು ಕಳೆದುಕೊಳ್ಳಲು ಓಲೈಸುತ್ತದೆ. ಧರ್ಮ ಅಥವಾ ರಾಷ್ಟ್ರವನ್ನು ಸಂಸ್ಕೃತಿಯೊಂದಿಗೆ ಸಮೀಕರಿಸುವುದು ಸುಲಭದ ಹಾದಿ ಮತ್ತು ದೋಷಯುಕ್ತವೆಂದು ನನಗೆ ತೋರುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ನಮಗೆ ಕಂಡುಬರುವುದು ಏಕೀಕೃತ ಸಂಸ್ಕೃತಿಯಲ್ಲ, ಹಿತಕರವಾದ ನುಡಿಗಟ್ಟಿನಲ್ಲಿ ಹೇಳುತ್ತಿರುವ ಏಕತೆಯಲ್ಲಿ ವೈವಿಧ್ಯತೆಯಲ್ಲ, ಆದರೆ ವಿವಿಧ ಸಂಸ್ಕೃತಿಗಳ ಪರಸ್ಪರ ಸೆಣಸಾಟ. ಅತಿ ಸುಂದರಗೊಳಿಸಿದ ಸಂಸ್ಕೃತಿಗಳ ತಿಳುವಳಿಕೆಗಳು ಅದನ್ನು ರಮ್ಯಗೊಳಿಸಲು ಪ್ರಯತ್ನಿಸಿರುವ ಹಾಗೆ ಸಂಸ್ಕೃತಿ ಎಂದೆಂದಿಗೂ ಸ್ಥಾವರವಲ್ಲ, ಚರಿತ್ರಾತೀತ ಬಗೆಯದಲ್ಲವೆ ಅಲ್ಲ. ಆಧುನಿಕ ಜಗತ್ತಿನಲ್ಲಿ ಕೊನೆಯ ಪಕ್ಷ ಸಾಂಸ್ಕೃತಿಕ ಆಚರಣೆಗಳಲ್ಲಿ ಬದಲಾಗದಿರುವುದೇನು ಅಂದರೆ ಸ್ವತಹ ಬದಲಾಗುವ ಪ್ರಕ್ರಿಯೆ ಮತ್ತು ಅದರ ಮೂಲತತ್ವ.. ಅಂತಿಮವಾಗಿ ಸಂಸ್ಕೃತಿ ಎಂಬುದು ಯಾವಾಗಲೂ ಇರುವ ಸ್ವಾತಂತ್ರ್ಯದ ವಲಯವಲ್ಲ, ಸ್ವಂತ ಅಭಿವ್ಯಕ್ತಿಯಲ್ಲ, ಆತ್ಮಾವಲೋಕನವಲ್ಲ, ಸಾಮೂಹಿಕ ಸಹಭಾಗಿತ್ವವಲ್ಲ, ಏನೇನೂ ಅಲ್ಲ. ಪರಂಪರಾಗತ ಸಂಸ್ಕೃತಿಯನ್ನು ಒಳಗೊಂಡಿರುವ ಸಂಸ್ಕೃತಿ ನಿರ್ದಿಷ್ಟ ಸಮುದಾಯಗಳ ತುಳಿತಕ್ಕೆ ಒಳಪಟ್ಟ ಯಾವುದೇ ಪ್ರಮಾಣದ ಜನರು ನಿಮಗೆ ಹೇಳುವ ಹಾಗೆ, ಅದು ಮತ್ತೆ ಮತ್ತೆ ಕುತಂತ್ರ ಮತ್ತು ಮುಕ್ತವಲ್ಲದ ವಲಯದ ಹಾಗೆ, ಅಷ್ಟೆ.
ಸಂಸ್ಕೃತಿ ಎಂದರೇನೆಂದು ಹೇಳಲು ಇಂಥ ಕೆಲವು ನಕಾರಾತ್ಮಕ ವ್ಯಾಖ್ಯೆಗಳನ್ನು ಪರಿಶೀಲಿಸಲು ಬಯಸುತ್ತೇನೆ. ಸಂಸ್ಕೃತಿ ಯಾರದು ಎಂಬುದು ಯಾವಾಗಲೂ ಇರುವ ನಿಜವಾದ ಪ್ರಶ್ನೆ. ಅಲ್ಲದೆ ಜಾಗತೀಕರಣಕ್ಕೆ ಸಂಬಂಧಿಸಿದ ಪ್ರಶ್ನೆ ಎಂದರೆ ರಾಷ್ಟ್ರದೊಳಗಿನ ಸಂಸ್ಕೃತಿ ಯಾರದು, ಅದು ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆಯೇ, ಯಾರ ಸಂಸ್ಕೃತಿಯ ವಿಚಾರಧಾರೆಯನ್ನು ಅದು ಬೆಂಬಲಿಸುತ್ತದೆ ಮತ್ತು ಭೌತಿಕವಾಗಿ ಬಲಗೊಳಿಸುತ್ತದೆ, ವಿದ್ಯುನ್ಮಾನ ಮಾರ್ಗಗಳು, ದೂರ ಸಂಪರ್ಕ ಮಾರ್ಗಗಳು, ಮತ್ತು ಸಂಖ್ಯೀಕರಣ(ಡಿಜಿಟಲೈಜೇಷನ್), ಠೇವಣಿ ಇಡಬಲ್ಲ ಬಂಡವಾಳದ ಕೇಂದ್ರೀಕರಣ ಮುಂತಾದ ಎಲ್ಲ ಬಗೆಯ ಮಾರ್ಗಗಳ ಮೂಲಕ ಅದು ಕೆಲವು ಸಾಂಸ್ಕೃತಿಕ ಆಚರಣೆಗಳು ದೊರಕುವಂತೆಯೂ ಮತ್ತೆ ಕೆಲವನ್ನು ನಿರಾಕರಿಸುವಂತೆಯೂ ಮಾಡುತ್ತದೆ. ಭಾರತದಲ್ಲಿ ಜಾಗತಿಕ ಬಂಡವಾಳದ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ನಾನು ವಿರೋಧಿಸುವಾಗ ಸಾಂಪ್ರದಾಯಿಕ ರಾಷ್ಟ್ರೀಯವಾದಿ ಒರಟು ದೇಶಾಭಿಮಾನಿಯ ಬಲೆಯಲ್ಲಿ ಬೀಳಲು ಬಯಸುವುದಿಲ್ಲ. ಜಾಗತೀಕರಣದ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ, ತೃತೀಯ ಜಗತ್ತಿನ ಸಂಸ್ಕೃತಿ ಮುಂತಾದ ಹೆಸರಿನಲ್ಲಿ ವಿರೋಧಿಸುವುದಲ್ಲ. ನನ್ನ ವಿರೋಧ ಹೆಚ್ಚು ಮೂಲಭೂತವಾದುದು. ಜಾಗತೀಕರಣ ಸಂಸ್ಕೃತಿ ಭಾರತದೊಳಗಿನ ಹಲವು ಬಗೆಯ ಜೀವನ ವಿಧಾನಗಳನ್ನು ಹಾಳು ಮಾಡುತ್ತದೆ ಹಾಗೂ ಇತರ ಕೆಲವನ್ನು ಪುಷ್ಟಿಗೊಳಿಸುತ್ತದೆ. ಅದು ಕೆಲವರ ಕೈಯಲ್ಲಿ ಹೆಚ್ಚು ಅಭಿವೃದ್ಧಿಗೊಂಡ ಸಾಂಸ್ಕೃತಿಕ ಸೆಣಸಾಟದ ಮಾರ್ಗಗಳನ್ನು ನೀಡುತ್ತದೆ ಹಾಗೂ ಉಳಿದವರಿಗೆ ನಿರಾಕರಿಸುತ್ತದೆ. ಅದು ನಮ್ಮ ವಿಶಿಷ್ಟ ಬಗೆಯ ಸಾಂಸ್ಕೃತಿಕ ಒಳಜಗಳಗಳಲ್ಲಿ ಅನಾಗರಿಕವಾಗಿ ಮೂಗು ತೂರಿಸುತ್ತದೆ. ರಾಷ್ಟ್ರದೊಳಗೆ ಸೆಣಸಾಡುವವರ ನಡುವಿನ ಈ ವಿಷಯಗಳನ್ನು ನಾವು ನಮ್ಮದೆ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆಯಾದರೂ ಈ ಸಾಧ್ಯತೆಯನ್ನು ಅದು ಬರಿದುಗೊಳಿಸಲು ಪ್ರಯತ್ನಿಸುತ್ತದೆ. ಇಂಥ ಸಂದರ್ಭದಲ್ಲಿ ನಾನು ರಾಷ್ಟ್ರೀಯವಾದಿ ರೀತಿಯನ್ನು ಪೂರ್ತಾ ತೊರೆದು ಪ್ರಗತಿ ವಿರೋಧಿ ನಿಲುವನ್ನು ತಳೆದುಬಿಡುತ್ತೇನೆ. ರಾಷ್ಟ್ರೀಯ ಸಂಸ್ಕೃತಿ ರಕ್ಷಣೆ ಬಗೆಗೆ ಅರಗಿಸಿಕೊಳ್ಳದ ತಿಳುವಳಿಕೆಯಿಂದಾಗಿ ಏನನ್ನು ರಕ್ಷಿಸಿಕೊಳ್ಳಲಾಗುತ್ತದೆಯೋ ಅದನ್ನು ಈಗಾಗಲೇ ನೆಲೆಸಿರುವ ರಾಷ್ಟ್ರೀಯ ಸಂಸ್ಕೃತಿ ಎಂಬ ರಕ್ಷಣಾತ್ಮಕ ನಿಲುವಿಗೆ ದುಡುಕಿ ತಲುಪಿಬಿಡುತ್ತೇನೆ. ಯಾವುದೇ ಒಬ್ಬ ವ್ಯಕ್ತಿ ನಿಜವಾಗಿಯೂ ರಕ್ಷಿಸಲು ಬಯಸುವುದು ಏನನ್ನು? ಜಾಗತಿಕರಣಕ್ಕೆ ಬಲಿಯಾದವರ ಸಂಸ್ಕೃತಿಗಳನ್ನೆ? ಅದರ ಫಲಾನುಭವಿಗಳ ಸಂಸ್ಕೃತಿಗಳನ್ನು ಅಲ್ಲವೆ? ನಮ್ಮದೆ ಜನರ ಅವಶ್ಯಕತೆಗಳು ಮತ್ತು ತುರ್ತು ಅಗತ್ಯಗಳನ್ನು ಅನುಸರಿಸಿ ದೇಶಕ್ಕೆ ನ್ಯಾಯ ಒದಗಿಸುವಂಥ ನಮ್ಮದೆ ರಾಷ್ಟ್ರೀಯ ಸಂಸ್ಕೃತಿಯನ್ನು ಜಾಗತೀಕರಣದ ದವಡೆಯಲ್ಲಿ ಯಾರೇ ಆಗಲೀ ರಕ್ಷಿಸಲು ಬಯಸಬೇಕು. ಈ ವ್ಯಾಖ್ಯೆಯ ಪ್ರಕಾರ ರಾಷ್ಟ್ರೀಯ ಸಂಸ್ಕೃತಿಯೆಂಬುದು ಪರಂಪರಾಗತವಾಗಿ ಹರಿದು ಬಂದದ್ದು ಅಥವಾ ಈಗಾಗಲೇ ಸಾಧಿತವಾಗಿರುವಂಥದ್ದು ಅಲ್ಲ. ಅದಿನ್ನೂ ಮುಟ್ಟಬೇಕಿರುವ ಬಾನಿನ ಅಂಚು. ಸಾಮಾಜಿಕ ಬದಲಾವಣೆಗಾಗಿ ಅತಿ ಮೂಲಭೂತವಾದ ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು - 'ಪ್ರಜಾಸತ್ತಾತ್ಮಕ ಬೇಡಿಕೆ' ಎಂಬುದನ್ನು ಪ್ರತಿಭಟನಾತ್ಮಕ ಮನೋಧರ್ಮವುಳ್ಳದೆಂದು ಅರಿಯಬೇಕು- ಸಾಮೂಹಿಕವಾಗಿ ಪಡೆದುಕೊಳ್ಳಲು ಹೊರಡದಿದ್ದರೆ ಆ ಬಾನಿನ ಅಂಚು ಕೈಗೆಟುಕದೆ ದೂರದಲ್ಲಿಯೇ ಉಳಿದುಬಿಡುತ್ತದೆ. ಇಂಥ ತುಂಬ ಮೂಲಭೂತವಾದ ಅರ್ಥದಲ್ಲಿ ಜಾಗತೀಕರಣವೆನ್ನುವುದು ತನ್ನನ್ನು ತಾನು ಖಾಯಂ ಆಗಿ ಉಳಿದುಕೊಳ್ಳಲು ಪ್ರಯತ್ನಿಸುವಂಥ ಬರಿದುಗೊಳಿಸುವ  ಮುನ್ನಿನ ಒಂದು ಪ್ರತಿ ಕ್ರಾಂತಿ (ಕೌಂಟರ್ ರೆವಲ್ಯೂಷನ್) ಯಾಗಿದೆ.
ಆಚರಣೆಗಳು ಮತ್ತು ರೂಢಿಗಳ ಮೂಲಕ ಮೌಲ್ಯಗಳು ಮತ್ತು ಅರ್ಥವಂತಿಕೆಗಳನ್ನು ಹುಟ್ಟುಹಾಕಿದ ಹಾಗೆ ಹೆಚ್ಚು ಪರಿಶುದ್ಧವಾದ , ಹೆಚ್ಚು ಭೌತಿಕವಾದ ಸಂಸ್ಕೃತಿಯ ವ್ಯಾಖ್ಯೆಯ ಕಡೆಗೆ ಹಿಂದಿರುಗುತ್ತೇನೆ. ಈ ವ್ಯಾಖ್ಯೆಯನ್ನು ನಾನು ಇಷ್ಟ ಪಡುತ್ತೇನೆ. ಏಕೆಂದರೆ 'ಹುಟ್ಟುವಳಿ' ವಿಚಾರದ ಅರ್ಥ 'ಸಂಸ್ಕೃತಿ' ವಿಚಾರಕ್ಕೆ ಗತಕಾಲದ ಬದಲಾಗಿ ಭವಿಷ್ಯತ್ತಿನ ನೆಲೆಯನ್ನು ನೀಡುತ್ತದೆ. ತಲತಲಾಂತರದಿಂದ ಹರಿದು ಬರುತ್ತಿರುವ ಮತ್ತು ಕಟ್ಟುವಿಕೆಯ ಆಯಾಮ ಕೂಡ ಪಡೆದುಕೊಂಡ ಸಮಾಜದೊಳಗಿನ ಹಲವಾರು ಶಕ್ತಿಗಳ ಸೆಣಸಾಟ ಮೀರಿದ ಸಾಮಾನ್ಯ ಸ್ವತ್ತಿನ ವಿಚಾರವಾಗಿ ನಿಲ್ಲುತ್ತದೆ. ಆಚರಣೆಗಳ ಮತ್ತು ಅರ್ಥವಂತಿಕೆಗಳ ಮೊತ್ತದ ವ್ಯಾಖ್ಯೆ ಸಂಸ್ಕೃತಿಗೆ 'ಭಾವನೆಯ್ಗೆ' ಎಂಬಂಥ ನುಡಿಗಟ್ಟುಗಳಲ್ಲಿ ಒಳಗೊಂಡಿರುವ ಎಲ್ಲ ಅನುಭವದಾಚೆಗಿನ ಸ್ವಂತ ಭೌತಿಕತೆಯನ್ನು ತಂದುಕೊಡುತ್ತದೆ. ಒಬ್ಬ ಏನು ಮಾಡುತ್ತಾನೆಯೋ ಅದೇ ಸಂಸ್ಕೃತಿ. ಸಂಸ್ಕೃತಿಯೆಂಬುದು ಸೆಣಸಾಡುತ್ತಿರುವ ಗುಂಪುಗಳ ಒಟ್ಟು ಆಚರಣೆಗಳ ವೈರುದ್ಧ್ಯಾತ್ಮಕ ಒಟ್ಟು ಮೊತ್ತ ಎಂದಾದರೆ ಸಾಂಸ್ಕೃತಿಕ ಆಚರಣೆಗಳು ಹಿಂಸೆ ಮತ್ತು ಪ್ರಾಬಲ್ಯಗಳ ಜೊತೆ ನಿಸ್ಸಂಶಯವಾಗಿ ಗಾಢವಾಗಿ ರಾಜಿ ಮಾಡಿಕೊಂಡಿರುತ್ತವೆ. ಆದರೆ ಇತರ ಸಂದರ್ಭಗಳಲ್ಲಿ ಎಂದರೆ ಪ್ರತಿಭಟನಾತ್ಮಕ ಸಾಂಸ್ಕೃತಿಕ ಆಚರಣೆಯ ಸಂದರ್ಭಗಳಲ್ಲಿ ಯಾವಾಗಲೂ ಅಸಾಧ್ಯವಾದುದನ್ನೆ ಕಲ್ಪಿಸಿಕೊಳ್ಳುವುದನ್ನು ಮುಂದುವರೆಸುತ್ತದೆ. ಈ ಮೂಲಕ ಭವಿಷ್ಯತ್ತಿನಲ್ಲಿ ಭರವಸೆಯನ್ನು ಇರಿಸುತ್ತದೆ.
ಭವಿಷ್ಯತ್ತನ್ನು ಕುರಿತ ಈ ಪೂರ್ವನೆಲೆ ಮತ್ತು ಅಸಾಧ್ಯವಾದುದನ್ನು ಕಲ್ಪನೆ ಮಾಡಿಕೊಳ್ಳುತ್ತ ಸಾಗುವ ಶಕ್ತಿ- ಇವನ್ನು ಜಾಗತೀಕರಣದ  ಸಂಸ್ಕೃತಿ ಭಯಂಕರವಾಗಿ ಹಾಳುಮಾಡಲು ಪ್ರಯತ್ನಿಸುತ್ತದೆ. ಹೇಗೆ? ಇನ್ನೊಂದು ಬಗೆ ಸಂಸ್ಕೃತಿಯ ಕೆಲವು ಪ್ರಮುಖ ಗಮನೀಯ ದೃಷ್ಟಿಕೋನಗಳು ಯಾವುವು? ಅದು ತನ್ನದೆ ಮೌಲ್ಯಗಳನ್ನು ಮತ್ತು ಅರ್ಥಗಳನ್ನು ಹುಟ್ಟಿ ಹಾಕುವುದಿಲ್ಲವೆ? ಈಗಾಗಲೆ ಅದರ ಮೂಲ ಲಕ್ಷಣಗಳನ್ನು ಕುರಿತು ಮಾತಾಡಿದ್ದೇನೆ. ಆದಷ್ಟು ಬೇಗ ಇನ್ನುಳಿದ ಕೆಲವು ಲಕ್ಷಣಗಳಿಗೆ ಪ್ರಾಧಾನ್ಯತೆ ನೀಡುತ್ತೇನೆ. ವಿಶೇಷ ಆಹ್ವಾನಿತರ ಮುಂದೆ ನಿಂತು ಮಾತನಾಡುತ್ತಿರುವುದರಿಂದ ಏಕಸ್ವಾಮ್ಯತೆ ಮುಂತಾದವುಗಳ ಬಗ್ಗೆ ವಿವರ ನೀಡುವುದನ್ನು ನಾನಿಲ್ಲಿ ಕೈ ಬಿಡುತ್ತೇನೆ.
ಮೊದಲು ಅದರ ಆಕ್ರಮಣಶೀಲತೆಯ ವ್ಯಾಪ್ತಿ : ನಾವು ಈ ವ್ಯಾಪ್ತಿಯನ್ನು ಗ್ರಹಿಸಿಕೊಳ್ಳಲು ದೇಶದ ಮಕ್ಕಳನ್ನು ಅತಿಸಣ್ಣ ಪ್ರಮಾಣದಲ್ಲಿ ಪರಿಚಯ ಮಾಡಿಕೊಡುವ ಹಂತ ತಲುಪಿರುವಂಥ ವಸಾಹತುಶಾಹಿ ಶಾಲಾ ತರಗತಿಯನ್ನು ನೆನಪಿಸಿಕೊಳ್ಳಲೆಬೇಕು. ವಸಾಹತುಶಾಹಿ ವಿಚಾರಧಾರೆಯನ್ನು ಪಠ್ಯಪುಸ್ತಕಗಳ ಬೆನ್ನಲ್ಲೆ ಅವು ಇದ್ದ ಹಾಗೆ ಅಸಮಾನವಾಗಿಯೇ ಹಂಚಿಕೊಳ್ಳಲಾಗುತ್ತಿತ್ತು. ಆ ತರಗತಿಗಳಲ್ಲಿ ಮಕ್ಕಳು ಈ ಸಂಬಂಧವಾಗಿ ಕೆಲವು ಗಂಟೆಗಳನ್ನೋ ದಿನಗಳನ್ನೋ ಕಳೆಯುತ್ತಿದ್ದರು. ನಂತರ ಅವರು ತರಗತಿಯ ವಿಚಾರಗಳಿಂದ ಕಳಚಿಕೊಂಡಂಥ ಮನೆಗಳಿಗೆ ಹಿಂದಿರುಗುತ್ತಿದ್ದರು. ಬಹುಶಹ ಶೇಕಡ ಹತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿರದ ಜನಸಾಮಾನ್ಯರೂ ಈ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಜಾಗತೀಕರಣದ ಸಂಸ್ಕೃತಿ ನೇರ ಶಾಲಾ ತರಗತಿಯಿಂದಲೇ ವೈರುಧ್ಯಮಯವಾಗಿ ತಲೆದೋರುತ್ತದೆ ಎಂದೇನಲ್ಲ. ಈಗ ಅದು ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣವನ್ನೂ ಒಳಗೊಂಡಿದೆ. ಈ ಜಾಗತೀಕರಣ ಸಂಸ್ಕೃತಿ ದಿನವಹಿ ಆಧಾರದ ಮೇಲೆ ಟೆಲಿವಿಷನ್ ಮತ್ತು ವ್ಯಾಪರೀಕರಣಗೊಂಡ ಸಂಗೀತದ ಉಪಕರಣಗಳ ಮೂಲಕ ಮನೆಯ ವ್ಯವಹಾರಗಳೊಳಗೆ, ಮಧ್ಯಮ ವರ್ಗದವರಲ್ಲೆ ಖಚಿತವಾಗಿ ಹೆಚ್ಚು ಕೇಂದ್ರೀಕೃತಗೊಳ್ಳುತ್ತದೆ.  ಮನೆ ಯಜಮಾನಿಕೆಯ ಮೇಲೆ ನಡೆದ ಈ ಆಕ್ರಮಣದ ತೀವ್ರತೆ ಆಲೋಚನೆಯ ವಿಧಾನವನ್ನಷ್ಟೆ ಅಲ್ಲ , ಜೀವಿತದ ಮೌಲ್ಯ ವ್ಯವಸ್ಥೆ , ಉಪಭೋಗದ ಮಾದರಿಗಳು ಮತ್ತು ಮಾನವನ ಪ್ರಾಕೃತಿಕ ಬಯಕೆಗಳಾದ ಪ್ರೀತಿ ಮತ್ತು ಕಾಮನೆಗಳನ್ನೂ ಬದಲಿಸಿಬಿಡುತ್ತದೆ. ಸಾಂಪ್ರದಾಯಿಕ ಅರ್ಥದಲ್ಲಿನ ಸಾಕ್ಷರತೆ ವಸಾಹತು ಕಾಲಕ್ಕಿಂತ ಹೆಚ್ಚುಹಬ್ಬಿದೆ.  ಇಂದಿನ ಭಾರತದಲ್ಲಿ ವಿದ್ಯುನ್ಮಾನ ಸಾಕ್ಷರತೆ (ಇಲೆಕ್ಟ್ರಾನಿಕ್ ಲಿಟರಸಿ) ವಸಾಹತು ಕಾಲಕ್ಕಿಂತ ಹೆಚ್ಚು ಹರಡಿದೆ. ಅಲ್ಲದೆ ಸಾಮಾನ್ಯ ಸಾಕ್ಷರತೆಯಾದ ಓದು, ಬರೆಹಗಳಿಗಿಂತ ಜೀವಂತ ಸಂಸ್ಕೃತಿಯನ್ನು ಪರಿವರ್ತನಶೀಲವನ್ನಾಗಿಸಿ ಇರಿಸುವುದರಲ್ಲೆ ಹೆಚ್ಚು ಕ್ರಿಯಾಶೀಲವಾಗಿದೆ.  ಈ ಪ್ರಕ್ರಿಯೆಗಳ ನೇರಪ್ರಭಾವ ಶ್ರೀಮಂತ ವರ್ಗಗಳ ಮೇಲೆಂಬುದು ಮಹತ್ತರವಾದುದು. ಆದರೆ ವರ್ಗ ಸಂಸ್ಕೃತಿಗಳನ್ನು ರೂಪಿಸುವಲ್ಲಿ ಪ್ರಧಾನವಾಗಿರುವ  ಆ ವರ್ಗಗಳು ಕೂಡ ನಿರ್ಣಾಯಕ ವರ್ಗಗಳಾಗಿವೆ. ಶ್ರೀಮಂತರ ಮಧ್ಯವರ್ತಿ ಜೀವನದಿಂದ ಬಂದ ದುಡಿಮೆಗಾರರನ್ನು ಅಪಮಾನಿಸಲು ಚೀನಾದ ಮಹಾಗೋಡೆಗಳಂಥವು ಇಲ್ಲವೆ ಇಲ್ಲ. ವಸಾಹತು ಶಾಲಾ ತರಗತಿ ಆಲೋಚನೆಯ ಗತಿಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸುವ ಉದ್ದೇಶ ಹೊಂದಿದ್ದರೆ, ಜಾಗತೀಕರಣದ ಮಧ್ಯವರ್ತಿ ಸಂಸ್ಕೃತಿ ಈ ಎಲ್ಲವನ್ನೂ ಮಾಡುತ್ತದೆ. ಮಾತ್ರವಲ್ಲದೆ, ಸುಪ್ತಪ್ರಜ್ಞೆಯನ್ನು ತನ್ನ ವಸಾಹತುವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ, ಈ ಕಾರ್ಯದಲ್ಲಿ ಯಶಸ್ವಿಯೂ ಆಗುತ್ತದೆ.
ಅನಂತರ ಜಾಗತೀಕರಣದ ಸಾಂಸ್ಕೃತಿಕ ರೂಪ. ಸಮೂಹ ಸಂಸ್ಕೃತಿಯ ಸಂಸ್ಥೆಗಳು ಮತ್ತು ಜನಪ್ರಿಯ ಮನರಂಜನೆಗಳು ಶ್ರಮಿಕ ವರ್ಗದ ಪ್ರಾಂತಗಳಲ್ಲಿ ಮತ್ತು ಹಳ್ಳಿಗಾಡಿನಲ್ಲಿ ಈ ಹಿಂದಿಗಿಂತ ಹೆಚ್ಚು ಗಾಢತರವಾದ ವ್ಯಾಪ್ತಿಯನ್ನು ಹೊಂದಿವೆ.  ಇವು ಅಮೆರಿಕಾದ ಪ್ರಧಾನ ಮಾಧ್ಯಮದ ವಿಚಾರಧಾರೆಯಾಗಿ, ರಾಜಕೀಯವಾಗಿ, ಸೌಂದರ್ಯಶಾಸ್ತ್ರವಾಗಿ ಮತ್ತು ಅಭಿವ್ಯಕ್ತಿ ಮಾಧ್ಯಮವಾಗಿ ಇನ್ನೂ ಹೆಚ್ಚು ನಿಕಟವಾಗಿ ಸಂಯೋಜನೆಗೊಂಡಿವೆ. ನವ-ಉದಾರೀಕರಣದ ಬಿರುಸು ದಾಳಿಯನ್ನಾಗಲೀ ಟಿವಿ ಚಾನೆಲ್ ಗಳಲ್ಲಿ ವಿದೇಶಿ ಮಾಧ್ಮಮಗಳೇ ಪ್ರಧಾನವಾಗಿರುವುದನ್ನಾಗಲೀ ಕೇವಲ ಒಂದು ದಶಕದ ಮೊದಲು ಭಾರತದಲ್ಲಿ ಇದನ್ನು ಊಹಿಸಲು ಕೂಡ ಅಸಾಧ್ಯವಾಗಿದ್ದುದಾಗಲೀ ಹೇಳಬಾರದ ಸತ್ಯವಾಗಿದೆ. ಭಾರತದ ಸಮಗ್ರ ಮಧ್ಯಮ ವರ್ಗ ದೂರದರ್ಶನ ವೀಕ್ಷಿಸುವ ಪ್ರತಿಯೊಂದು ಕಾಲಾವಧಿಯನ್ನು ಕೆಲವೊಂದು ಬಗೆಯ ವಿಚಾರಧಾರೆ ಮತ್ತು ಸಾಂಸ್ಕೃತಿಕ ಅಭಿರುಚಿ ಅರಿಯುವ ಅಧ್ಯಯನ ವೇದಿಕೆಯನ್ನಾಗಿ ಹೊರಹೊಮ್ಮಿಸಬಹುದಾಗಿದೆ. ಜಾಗತೀಕರಣದ ಈ ಸಾಂಸ್ಕೃತಿಕ ರೂಪ ಮತ್ತು ಗಾಢ ಬಯಕೆಯ ಮಾದರಿಗಳನ್ನು ಜಾಹಿರಾತು, ಲಾಂಛನದ ಉತ್ತೇಜನ ಮತ್ತು ಸ್ವತಹ ಮನರಂಜನೆಯೆ ಆದ ಈ ಎಲ್ಲ ಅಂತರ ಸಂಬಂಧಗಳ ಮೂಲಕ ಗಣನೀಯವಾಗಿ ಸಾಧಿಸಲಾಗುತ್ತದೆ. ಅಂಥ ಸಂಸ್ಕೃತಿ ಕೈಗಾರಿಕೆಯ ಮೂರ್ತಿ ಚಿತ್ರಗಳನ್ನು ನಿರ್ದಿಷ್ಟವಾದ ಉತ್ಪನ್ನಗಳು ಮತ್ತು ಉತ್ಪದನಾ ಚಿಹ್ನೆಗಳೊಂದಿಗೆ ನಿಕಟವಾಗಿ ಪತ್ತೆ ಹಚ್ಚಲಾಗುತ್ತದೆ. ಪೆಪ್ಸಿಯ ಮಾರಾಟದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶಾರೂಕ್ ಖಾನ್ ಪರಸ್ಪರ ಅದಲು ಬದಲಾಗುವ ಸಮೂಹ ಸಂಸ್ಕೃತಿಯ ಮೂರ್ತಿಗಳು. ಸಾಮಗ್ರಿ ಹಾಗೂ ಮನರಂಜನೆಯ ಹಾಗೆ ಕ್ರೀಡೆಗಳನ್ನೂ ಮಾರಾಟ ಮಾಡುತ್ತಿರುವ ಕೇಂದ್ರ ವ್ಯಕ್ತಿ ಅಮೆರಿಕಾದ ಬೇಸ್ ಬಾಲ್ ಹೀರೋ ಮೈಕೆಲ್ ಜೋರ್ಡಾನ್ ನ ಮಾದರಿಯಲ್ಲಿ ಮಾಂತ್ರಿಕ ಬ್ಯಾಟ್ಸ್ ಮನ್ ಸಚಿನ್ ಸ್ವತಹ ಒಬ್ಬ ಮನರಂಜಿಸುವವನು ಮತ್ತು ಮಾರಾಟಗಾರನಾಗಿದ್ದಾನೆ. ನಂತರ ಇದನ್ನು ಜಾಗತೀಕರಣದ ಕೆಲವು  ಜಾಹಿರಾತು ಪ್ರತೀಕಗಳೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಚಾನಲ್ಅನ್ನು ಬದಲಿಸುತ್ತಿರುವಾಗಲೇ ಈಡನ್ ಗಾರ್ಡನ್ನಿನ ಕ್ರಿಕೆಟನ್ನು ನನಗದು ತೋರಿಸುತ್ತದೆ. ನಾನು ಕಪ್ಪು ಕೂದಲಿನ ಜಲಪಾತದ ನದಿಯಲ್ಲಿ ಭಿನ್ನ ಬಗೆಯ ಈಡನ್ನಿನಲ್ಲಿ ಇದ್ದ ಹಾಗೆ ಇರುತ್ತೇನೆ. ಅದು 'ಹೆಡ್ ಅಂಡ್ ಶೋಲ್ಡರ್' ಶಾಂಪೂನ ಜನಪ್ರಿಯ ಜಾಹಿರಾತು ಆಗಿತ್ತೆಂದು ಭಾವಿಸುತ್ತೇನೆ. ಅದನ್ನು ಸಾಕಷ್ಟು ಸಾರಿ ಭಾರತದ ದೂದದರ್ಶನದಲ್ಲಿ ನೋಡುತ್ತಿರುವುದನ್ನು  ಮಾತ್ರ ಕಂಡುಕೊಳ್ಳುತ್ತೇನೆ. ಈಗ ಕಪ್ಪನೆ ಹೊಳೆಯುವ  ದೃಶ್ಯ ಚಿತ್ರ ಅದೇ ಆಗಿದ್ದು, ಕೊಂಚ ಭಿನ್ನದನಿಯ್ಲಲಿ ಮತ್ತು ಭಿನ್ನ ಮಾತನಾಡುವ ಪಠ್ಯದೊಂದಿಗೆ ಬಂದಿದೆಯಷ್ಟೆ. ಈ ಹೋರಾಟಮಯ ಸಾಂಸ್ಕೃತಿಕ ಜಾಗತೀಕರಣದ  ಗುರಿಯ ಒಂದು ಭಾಗವೆಂದರೆ ಅಮೆರಿಕಾದ ಜೀವನ ಮಾದರಿಗಳೊಂದಿಗೆ ಕಲೆತ ಹೊಸ ಅಭಿರುಚಿಗಳನ್ನು ಹುಟ್ಟು ಹಾಕುವುದು ಮತ್ತು ಹೀಗೆ ಭಾರತದ ಮಧ್ಯಮ ವರ್ಗಗಳಿಗೆ ಜಾಗತಿಕ ಸಾಂಸ್ಕೃತಿಕ ದೃಶ್ಯವಿದ್ದಲ್ಲಿಗೆ ತಲುಪಿರುವ ಭಾವನೆ ತಂದುಕೊಡುವುದು. ಉದಾಹರಣೆಗೆ, ಕ್ರೀಡಾ ಚಾನಲ್ ಗಳು ಗಾಲ್ಫ್ ಮತ್ತು ಬೇಸ್ ಬಾಲ್ ಗಳಂಥ ಆಟಗಳನ್ನು ನಿರಂತರವಾಗಿ ತೋರಿಸುವುದನ್ನು ಗಮನಿಸಿ. ಅವು ಭಾರತದಲ್ಲಿ ಕೇಬಲ್ ಟಿವಿ ಬರುವ ಮೊದಲು ಕೇವಲ ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲೆ ಇರಲಿಲ್ಲ. ವಾಣಿಜ್ಯ ಮತ್ತು ಮನರಂಜನೆಯ ಈ ಅಂತರ ವಿಭಾಗದಲ್ಲಿ ಸಂಸ್ಕೃತಿಗೆ ಒಪ್ಪಿಗೆಯಾಗುವುದಾಗಿದ್ದರೂ ಜಾಗತಿಕ ಮಟ್ಟದ ವಿದ್ಯುನ್ಮಾನ ಸಾಂಸ್ಕೃತಿಕ ವೇದಿಕೆಯ ಮುಖ್ಯ ತಂತ್ರೋಪಾಯವೆಂದರೆ  ಸಮೂಹ ಸಂಸ್ಕೃತಿ ಮತ್ತು ಅತ್ಯುತ್ಕೃಷ್ಟ ಸಂಸ್ಕೃತಿಯನ್ನು ಒಂದೇ ಬೀಸಿನಲ್ಲಿ ಬದಲಾವಣೆಗೆ ಒಳಪಡಿಸಲು ಪ್ರಯತ್ನ ಮಾಡುವುದು. ವಸಾಹತುಶಾಹಿ ಸಾಂಸ್ಕೃತಿಕ ಯೋಜನೆ ಭಾರತದ ಉನ್ನತ ಶ್ರೇಣಿಯ ಪುರೋಹಿತಶಾಹಿ ವರ್ಗಗಳ ಆಶೋತ್ತರಗಳಿಗೆ ಗಾಢವಾಗಿ ಬೆಸೆದುಕೊಂಡಿದೆ.  ಈ ಪುರೋಹಿತಶಾಹಿ ಜನ ತಮ್ಮ ಕನಸಿನ ಆಕ್ಸ್ ಬ್ರಿಡ್ಜ್ ಇಂಗ್ಲಿಶಿನವನ ಮಾದರಿಗೆ ಹತ್ತಿರ ಚಲಿಸಲು ಬಯಸಿದ ಹಾಗೆಯೆ ಉಳಿದ ಭಾರತೀಯ ಸಮಾಜದಿಂದ ಬಲು ದೂರ ನಡೆದಿರುತ್ತಾರೆ. ವಸಾಹತು ಸಂಸ್ಕೃತಿಯ ಆಂಗ್ಲೀಕರಣದ ಹಾಗೆ ಭಾರತೀಯ ಸಮಾಜದ ಶ್ರೀಮಂತರು ಮತ್ತು ಬಡವರ ನಡುವೆ ಸಾಂಸ್ಕೃತಿಕ ಅಂತರವನ್ನು 'ಹೆಚ್ಚಿಸಲು' ಹೆಚ್ಚಿನ ಬದ್ಧತೆಯನ್ನುಂಟು ಮಾಡುತ್ತದೆ. ಮತ್ತೊಂದೆಡೆ ಬಂಡವಾಳಶಾಹಿ ಜಾಗತೀಕರಣದ ಸಾಂಸ್ಕೃತಿಕ ಯೋಜನೆ ಸಮಮಟ್ಟದ ಪರಿಣಾಮ ಹೊಂದಿರುವುದು ಕುತೂಹಲಕರವಾಗಿದೆ. ಅಲ್ಲದೆ ಸ್ವತಹ ಅಮೆರಿಕವೇ ಹೆಚ್ಚುತ್ತಿರುವ  ಡಿಸ್ನೀಕರಣ ಪ್ರಕ್ರಿಯೆಗೆ ಒಳಗಾಗುತ್ತಿದೆ. ನಂತರ ಅದನ್ನು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದದ ಬಂಡವಾಳ ವಲಯಗಳ ಎಲ್ಲ ವರ್ಗಗಳಿಗೂ ರಫ್ತು ಮಾಡುತ್ತದೆ. ಏಕೆಂದರೆ ಎಲ್ಲ ವರ್ಗಗಳ ಆತ್ಮೋನ್ನತೀಕರಣ ದೂರದರ್ಶನಕ್ಕೆ ಹಾದಿ ಒದಗಿಸಿದೆ ಅಥವಾ ಯಾರು ಹಾದಿಯಾಗಿರುತ್ತಾರೋ ಅವರು ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ.
ಈ ವ್ಯಾಪ್ತಿಗೆ ವಿರುದ್ಧವಾಗಿ ಸಮತೋಲನದಲ್ಲಿಡುವುದು ಎಂದರೆ ಇಂಟರ್ ನೆಟ್ ಮತ್ತು ವಿಶ್ವವ್ಯಾಪಿ ಜಾಲವೆಂದು ಕರೆಯುವ - ವಿಶೇಷವಾಗಿ ಹರಿತ ಹತಾರ ತಂತ್ರಜ್ಞಾನಗಳಾದ-ಪ್ರಪಂಚದಾದ್ಯಂತ ವ್ಯಾಪಿಸುತ್ತಿರುವ ತಂತ್ರಜ್ಞಾನಗಳ ಇತರೆ ಕ್ಷೇತ್ರದಲ್ಲಿನ ಸವಲತ್ತಿನ ಕೇಂದ್ರೀಕರಣ ಇಂದಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿರುವ ಮಾಹಿತಿ ತಂತ್ರಜ್ಞಾನದ ಪ್ರಜಾಪ್ರಭುತ್ವವಾದಿ ಪರಿಣಾಮವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಯೋಗ್ಯ. ಇದು ಜಗತ್ತಿನಾದ್ಯಂತ ಲಭ್ಯವೆಂದು ಹೇಳಲಾಗುವ ಮಾಹಿತಿ. ಬಿಲ್ ಗೇಟ್ಸ್ ಸುಂದರವಾಗಿ ಹೇಳಿರುವ ಹಾಗೆ- 'ವಾಸ್ತವ ಸತ್ಯದಲ್ಲಿ ಎಲ್ಲವೂ ಸಮಾನ '. ಸತ್ಯಸ್ಯ ಸತ್ಯವಾದ ಸಂಗತಿಯೆಂದರೆ ಜೀವಿತ ಮಾನವ ಕುಲದಲ್ಲಿ ಅರ್ಧದಷ್ಟು ಜನ ದೂರವಾಣಿ ಕರೆಯೊಂದನ್ನು ಮಾಡದಿರುವುದು ಹಾಗೂ ಆಫ್ರಿಕಾದಲ್ಲೆಲ್ಲ ಇರುವುದಕ್ಕಿಂತ ಹೆಚ್ಚು ದೂರವಾಣಿ ಸಂಪರ್ಕಗಳು ನ್ಯೂಯಾರ್ಕ್ ನ ಮ್ಯಾನ್ ಹಟನ್ ದ್ವೀಪವೊಂದರಲ್ಲೆ ಇರುವುದು. ಹಾಗಾದರೆ ಸತ್ಯಸ್ಯ ಸತ್ಯದಿಂದ ವಾಸ್ತವ ಸತ್ಯದೆಡೆಗೆ ಸಾಗುವುದು ಹೇಗೆ? ಜಗತ್ತಿನ ಜನಸಂಖ್ಯೆಯಲ್ಲಿ ಕೆಲವರು ಜಗತ್ತಿನ ಆದಾಯದ ಶೇಕಡ 70ರಷ್ಟು ಸಂಪಾದಿಸುತ್ತಾರೆ ಹಾಗೂ ಶೇಕಡ 15ರಷ್ಟು ವ್ಯಯ ಮಾಡುತ್ತಾರೆ. ಮಾಹಿತಿ ಸಾಮಗ್ರಿಗಳಿಗಿದು ಪ್ರವೇಶವಾಗಿರುವುದನ್ನು ತುಂಬಾ ಚೆನ್ನಾಗಿ ಪ್ರತಿನಿಧಿಸುತ್ತದೆ. ಉತ್ತರ ಅಮೆರಿಕಾ ಮತ್ತು ನೈರುತ್ಯ ಯುರೋಪ್ ಗಳು ಒಟ್ಟುಗೂಡಿ ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟಿದ್ದರೂ ಜಗತ್ತಿ ಶೇಕಡ 70ರಷ್ಟು ಆದಾಯವನ್ನು ಹೊಂದಿರುವುದು ಅಚ್ಚರಿಯ ವಿಷಯವೇನಲ್ಲ. ಹಾಗಾಗಿ ಅವರು ಜಗತ್ತಿನ ಮೂರನೆಯ ಎರಡರಷ್ಟು ಟಿವಿ, ರೇಡಿಯೋ ಸೆಟ್ಟುಗಳನ್ನು ಹೊಂದಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೂಡ ಯಾವುದೇ ಪರಿಶೀಲನಾರ್ಹ ಒಳ ದಾರಿಗಳ ಯಜಮಾನಿಕೆ ವರ್ಗ ಸವಲತ್ತುಗಳಿಗೆ ಸಂಬಂಧ ಹೊಂದಿರುತ್ತದೆ. ಅತ್ಯಾಧುನಿಕವಾದ ಮತ್ತು ಶಕ್ತಿಯುತವಾದ ಉಪಕರಣಗಳನ್ನು ಹೊಂದಲು ಆರಂಭಿಕ ವೆಚ್ಚ ಕನಿಷ್ಟ 2000 ಡಾಲರ್ ಗಳಾಗಿರುತ್ತದೆ. ನಂತರ ಅವನ್ನು ಕ್ರಮವಾಗಿ ಬದಲಿಸುತ್ತಿರಬೇಕು ಇಲ್ಲವೆ ಪ್ರತಿ ಕೆಲವು ವರುಷಗಳಿಗೊಮ್ಮೆ ಕೊನೆಯ ಪಕ್ಷ ಮುಖ್ಯಭಾಗಗಳನ್ನಾದರೂ ಮೇಲ್ದರ್ಜೆಗೇರಿಸುತ್ತಿರಬೇಕಾಗುತ್ತದೆ. ಇಂಟರ್ ನೆಟ್ ನ ಸತತ ಬಳಕೆ ಮತ್ತು ಅತಿಹೆಚ್ಚು ಆದಾಯಗಳ ನಡುವೆ ಯಾವುದೇ ಅಚ್ಚರಿಯಿಲ್ಲ.  ಉಪಭೋಗಿಗಳಲ್ಲಿ ಮೂರನೇ ಒಬ್ಬನಿಗೆ ಬಿಟನ್ನಿನಲ್ಲಿ 25,000 ಪೌಂಡ್ ಗಳ ವಾರ್ಷಿಕ ಆದಾಯವಿದ್ದರೆ, ಅಮೆರಿಕಾ ಮತ್ತು ಕೆನಡಾಗಳಲ್ಲಿ 80,000 ಡಾಲರ್ಗಳಿಗಿಂತಲೂ ಹೆಚ್ಚು ಗಳಿಕೆ ಇದೆ.
ಇಂಟರ್ ನೆಟ್ ಒಂದು ದಶಕದಷ್ಟು ಹಳೆಯದಲ್ಲ. ಅದು ಈಗಾಗಲೇ ಎಲ್ಲ ಕಡೆ ಪಸರಿಸಿಕೊಂಡಿದೆ ಎಂದೇ ಹೇಳಬಹುದು. ಇನ್ನೆರಡು ದಶಕಗಳಲ್ಲಿ ಅದು ಬಹುಶಹ ಭೂಮಿಯ ಮೂಲೆ ಮೂಲೆಗೂ ತಲುಪಲಿದೆ. ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಇಂಟರ್ ನೆಟ್ ಬೃಹತ್ತಾಗಿ ಪಸರಿಸುವುದೆಂದು ನನಗೆ ತೋರುತ್ತದೆ. ಆದರೆ ಪ್ರತಿಯೊಬ್ಬರೂ ಅಥವಾ ಅರ್ಧಕ್ಕಿಂತ ಹೆಚ್ಚು ಪಾಲು ಜನರಿಗೆ ಮುಂಬರುವ ಯಾವುದೇ ಭವಿಷ್ಯದಲ್ಲೂ ಇಂಟರ್ನೆಟ್ ಸಂಪರ್ಕ ಹೊಂದಿತ್ತಾರೆಂದು ನನಗೆ ಸ್ಪಷ್ಟವಾಗಿ ತೋರುವುದಿಲ್ಲ. ಮೊದಲ ಟೆಲಿಗ್ರಾಫ್ ಸಂಪರ್ಕವನ್ನು 1830ರಲ್ಲಿ ಹಾಕಲಾಯಿತು. ನಂತರ 1865ರಲ್ಲಿ ಲಂಡನ್ ಮತ್ತು ಬಾಂಬೆ ನಡುವಿನ ಟೆಲಿಗ್ರಾಫ್ ಸಂಪರ್ಕದ ಕೆಲಸ ಪೂರ್ಣವಾಯಿತು.  ಪಶ್ಚಿಮ ದೇಶಗಳಲ್ಲಿ ವ್ಯಾಪಕವಾಗಿ ಹಾಗೂ ತೃತೀಯ ಜಗತ್ತಿನ ಕೈಗಾರಿಕಾ ವಲಯದ ನಗರ ಮಧ್ಯಮ ವರ್ಗದಲ್ಲಿ ಟೆಲಿಫೋನ್ ಸಂಪರ್ಕವನ್ನು ಹೊಂದುವುದು ತುಂಬಾ ಸುಲಭವಾಗಿಬಿಟ್ಟಿದೆ. ಆದರೆ ಅರ್ಧಕ್ಕಿಂತ ಹೆಚ್ಚು ಮಾನವ ಕುಲ ಒಂದು ಟೆಲಿಗ್ರಾಮನ್ನೂ ಕೂಡಾ ಸ್ವೀಕರಿಸಿಲ್ಲ. ನಾನೀಗ ತಾನೆ ಹೇಳಿದಂತೆ ಮಾನವ ಕುಲದ ಅರ್ಧದಷ್ಟು ಜನ ಫೋನ್ ಕರೆಯನ್ನು ಮಾಡಲು ಇನ್ನೂ ಕಾಯುತ್ತಿದ್ದಾರೆ.
ಅಹಿತಕರವಾದ ಸಂಗತಿಯೆಂದರೆ, ದೇಶೀಯ ಜನರು ಯಾರೇ ಆಗಿರಲಿ ಅವರು ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರೂ ಸವಲತ್ತು ಪಡೆದ ಸಾಂಸ್ಕೃತಿಕ ಪರಿಕರವೂ ಆಗಿರುತ್ತಾರೆ. ವೈಯಕ್ತಿಕ ಅಥವಾ ಸಾಂಸ್ಥಿಕವಾಗಿ ಬಳಸಿಕೊಳ್ಳುವ ಹಾದಿ ಹೊಂದಿದ ಪರಿಣತ ಸಂಸ್ಕೃತಿ ಅತ್ಯಧಿಕ ಪ್ರಮಾಣದಲ್ಲಿ ಲಾಭ ಮಾಡುತ್ತದೆ. ಸಂಶೋಧನೆ ಮತ್ತು ಸಂಶೋಧನೆಯ ಫಲಿತಗಳನ್ನು ತಲುಪಿಸುವ ಕೆಲಸ ತ್ವರಿತವಾಗಿ ಮತ್ತು ಹೆಚ್ಚು ವ್ಯಾಪಕವಾಗಿರುತ್ತದೆ. ಯಾವುದೇ ನಿರ್ದಿಷ್ಟ ಸಂದರ್ಭದಲ್ಲೂ ಸುಲಭ ಸಂಪರ್ಕ ಸಾಧನ ಪರಿಣತರ ವಿಶಾಲ ಸಮುದಾಯದೊಂದಿಗೆ ನೇರ ಸಂಪರ್ಕವನ್ನು ತಂದುಕೊಡುತ್ತದೆ. ಈ ಪರಿಣತರ ಸಮುದಾಯ ಮಾಹಿತಿ ಬೃಹತ್ ಪ್ರಜಾಪ್ರಭುತ್ವೀಕರಣ ಮತ್ತು ಅದರ ಪ್ರವೇಶದಂಥ ಸಮಗ್ರ ಪ್ರಕ್ರಿಯೆಯ ಅನುಭವ ಪಡೆಯಲು ತಾನೇ ಬಯಸುತ್ತದೆ. ವಾಸ್ತವದಲ್ಲಿ ಇದುವರೆಗಿನ ಯಾವುದೇ ಮುದ್ರಣ ತಂತ್ರಜ್ಞಾನ ಸಾಧಿಸಿರುವುದರ ಆಚೆಗೆ ಪರಿಣತ ಸಂಸ್ಕೃತಿ ವಿಸ್ತರಿಸಿಕೊಂಡಿದೆ ಹಾಗೂ ಕ್ರೋಢೀಕರಿಸಿಕೊಂಡಿದೆ. ಆದರೂ ಪರಿಣತ ಮತ್ತು ಪರಿಣತವಲ್ಲದ ಸಂಸ್ಕೃತಿಗಳ ನಡುವಿನ ಅಂತರ ಮುಂಬರುವ ಕಾಲದಲ್ಲಿ ಬೃಹತ್ತಾಗಿ ಬೆಳೆದಿರುತ್ತದೆ. ನಿರಂತರವಾಗಿ ಈ ಮೇಲ್ ಗಳನ್ನು ರವಾನಿಸುವವರು ಮತ್ತು ಪಡೆಯುವವರು ಹಾಗೂ ಈ ಮೇಲ್ ಇಲ್ಲದವರ ನಡುವೆ ಜಗತ್ತು ಶೀಘ್ರವೇ ವಿಭಜನೆಯಾಗಲಿದೆ. ಇಂಟರ್ ನೆಟ್ ನ ಹೆಚ್ಚು ವಿಸ್ತೃತವಾದ ಬಳಕೆ ಸವಲತ್ತು ಪಡೆದಿರುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ನೀವು ಇಂಟರ್ ನೆಟ್ಅನ್ನು ಹೊಂದಿದ್ದರೆ ದೆಹಲಿಯ ಮತ್ತೊಂದು ಮೂಲೆಯಲ್ಲಿ ಪೋನ್ ಸಂಪರ್ಕವಿಲ್ಲದೆ ವಾಸಿಸುತ್ತಿರುವವರಿಗಿಂತ ಚಿಕಾಗೋದಲ್ಲಿ ವಾಸಿಸುತ್ತಿರುವವರೊಂದಿಗೆ ಸತತ ಸಂಪರ್ಕಕ್ಕೆ ಬರುತ್ತೀರಿ, ಹೆಚ್ಚು ಆತ್ಮೀಯರಾಗುತ್ತೀರಿ.
ನಾನೇನು ಒತ್ತಿ ಹೇಳಲು ಬಯಸುತ್ತೇನೆ ಅಂದರೆ, ಪ್ರತಿಯೊಂದು ಹೊಸ ತಂತ್ರಜ್ಞಾನ ವೈರುದ್ಧಾತ್ಮಕ ಪರಿಣಾಮವನ್ನು ಹೊಂದಿರುತ್ತದೆ. ಸಂಸ್ಕೃತಿ ಮತ್ತು ಸಂಪರ್ಕ ಕ್ಷೇತ್ರದಲ್ಲಿನ ಪ್ರತಿಯೊಂದು ಹೊಸ ತಂತ್ರಜ್ಞಾನ ಬಿಡುಗಡೆಗೊಳಿಸುವ ಶಕ್ತಿಯನ್ನು ಪಡೆದಿದೆ. ಅದು ಶ್ರಮದ ಅವಧಿಯನ್ನು ಕಡಿಮೆಗೊಳಿಸಬಲ್ಲದು, ಶ್ರಮದ ಪ್ರಕ್ರಿಯೆಯನ್ನು ವಿಚಾರವಾಗಿಸಬಲ್ಲದು; ಸಾಂಸ್ಕೃತಿಕ ಸಂಪರ್ಕದ ಸಮುದಾಯವನ್ನು ಹೆಚ್ಚಿಸಬಲ್ಲದು ಹಾಗೂ ಆಧುನಿಕ ಸಾಂಸ್ಕೃತಿಕ ಉತ್ಪನ್ನಗಳ ವ್ಯಾಪ್ತಿಯೊಳಗೆ ಹೆಚ್ಚು ಜನರನ್ನು ಒಳತರಬಲ್ಲದು; ಪ್ರಯೋಗ ಮತ್ತು ಅನ್ವೇಷಣೆಯ ಹೊಸಕ್ಷೇತ್ರಗಳನ್ನೆ ತೆರೆದಿಡಬಲ್ಲದು. ಹಾಗಾಗಿಯೆ ಆಧುನಿಕತೆ ವಿರೋಧಿ ಬಲೆಯೊಳಗೆ ಬೀಳುವುದಾಗಲೀ ತಂತ್ರಜ್ಞಾನವನ್ನೇ ವಿರೋಧಿಸಲು ತೊಡಗುವುದಾಗಲೀ ಯಾರೂ ಎಂದಿಗೂ ಮಾಡುವುದಿಲ್ಲ. ಸ್ವಾತಂತ್ರ್ಯದ ಪ್ರತಿಯೊಂದೂ ಶಕ್ತಿಯನ್ನು ಪ್ರಾಬಲ್ಯದ ಸಾಧನವನ್ನಾಗಿ ಬದಲಿಸುವಂಥ ಉತ್ಪಾದನೆ ಮತ್ತು ಉಪಭೋಗದ ಸಾಮಾಜಿಕ ಸಂಬಂಧಗಳನ್ನು ಯಾರೇ ಆಗಲಿ ನಿಜವಾಗಿಯೂ ನಿರಂತರವಾಗಿ ವಿರೋಧಿಸುತ್ತಾರೆ.
ಜಾಗತೀಕರಣದ ಯುಗದಲ್ಲಿ ಭಾರತಕ್ಕೆ  ಬಂದ ಸಂಪರ್ಕದ ಪ್ರಮುಖ ಹೆದ್ದಾರಿಗಳನ್ನು ಕುರಿತು ಇದುವರೆಗೆ ನನ್ನ ಮಾತನ್ನು ಕೇಂದ್ರೀಕರಿಸಿದ್ದೇನೆ. ಆದರೆ ಸಂಸ್ಕೃತಿ ಬಗೆಗಿನ ಮುಖ್ಯ ವಿಚಾರವೆಂದರೆ ಅದು ಬದುಕಿನ ಎಲ್ಲ ಮುಖಗಳಲ್ಲೂ ನೆಲೆಸಿರುತ್ತದೆ. ಆರ್ಥಿಕ, ರಾಜಕೀಯ, ಮಿಲಿಟರಿ ಮತ್ತು ಇತರ ವಲಯಗಳಿಂದ ಸರಳವಾಗಿ ಬೇರೆ ಮಾಡಲು ಸಾಧ್ಯವಾಗದಿರುವುದು. ಭಾರತಕ್ಕೆ ನವ-ಉದಾರವಾದ ಬಂದ ಪರಿಣಾಮವಾಗಿ ಸಮಗ್ರ ರಾಜಕೀಯ ಸಂಸ್ಕೃತಿ ತೀವ್ರ ಅವನತಿಗೆ ಒಳಗಾಗಿರುವುದನ್ನು ಕಂಡಿದ್ದೇವೆ. ಕೊನೆಯ ಪಕ್ಷ ದೇಶಾದ್ಯಂತ ಪ್ರಸಾರವುಳ್ಳ ಇಂಗ್ಲಿಶ್ ದಿನ ಪತ್ರಿಕೆಗಳೂ ಸೇರಿದಂತೆ ಇಂದು ಯಾವ ಪತ್ರಿಕೆಗಳೂ ಜಾಹಿರಾತಿಗಿಂತ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಪತ್ರಿಕೆಗಳಾಗಿ ಉಳಿದಿಲ್ಲ.  ಟೈಮ್ಸ್ ಆಫ್ ಇಂಡಿಯಾ 1980ರಷ್ಟು ಹಿಂದೆ ಗಂಭೀರ ಪತ್ರಿಕೆಯಾಗಿ ಉಳಿದಿತ್ತು.  ಆದರೆ ನಂತರ ಅದು ಹೆಚ್ಚಾಗಿ ಅರೆಲಂಪಟ ಸಾಹಿತ್ಯದ ದೊಡ್ಡ ಕಾಗದದ ಹಾಳೆಯಾಗಿಬಿಟ್ಟಿದೆ. ಅದು ಸಣ್ಣ ಪುಟ್ಟ ಸುದ್ದಿಗಳನ್ನು ಜಾಹಿರಾತುಗಳ ನಡುವೆ ಉಳಿದ ಜಾಗ ಭರ್ತಿ ಮಾಡಲು ಬಳಸುತ್ತದೆ. ಲಂಪಟ ಸಾಹಿತ್ಯದ ಶಕ್ತಿ ಎಂಬ ಮತ್ತೊಂದು ಬಗೆಯ ಲಂಪಟ ಸಾಹಿತ್ಯಕ್ಕೆ ಇದು ಸಂಬಂಧ ಹೊಂದಿದೆ. ಇರಾಕ್ ಸಮುದಾಯಗಳ ಜನತೆ ಸಾಮ್ರಾಜ್ಯಶಾಹಿ ಆಕ್ರಮಣದ ಅತ್ಯಂತ ಬರ್ಬರ ಮಾರ್ಗಗಳ ಮೂಲಕ ನಿರ್ದಯವಾಗಿ ನಾಶವಾದ ಹಾಗೆಲ್ಲ ಭಾರತದ ದಿನಪತ್ರಿಕೆಗಳು 'ಸ್ವಯಂಚಾಲಿತ ರಂಣರಂಗ 'ದಲ್ಲಿ ಅಳವಡಿಸಿಕೊಂಡಿದ್ದ ಅಮೆರಿಕದ ಇತ್ತೀಚಿನ ಅಸ್ತ್ರಗಳ ಅದ್ಭುತ ತಾಂತ್ರಿಕ ಹಿರಿಮೆಯನ್ನು ಮೆಚ್ಚುಗೆಯಿಂದ ವರದಿ ಮಾಡುತ್ತಿದ್ದವು. ಅದೇ ಕಾಲಕ್ಕೆ ಈ ಪತ್ರಿಕೆಗಳು ಅಲ್ಪತನದಲ್ಲಿ ಪರಿಣತಿ ಪಡೆದಿದ್ದ ವ್ಯಾಪಕ ಪ್ರಸಾರದ ಅಮೆರಿಕದ ದಿನಪತ್ರಿಕೆಗಳ ಮಾದರಿಗೆ ತಮ್ಮನ್ನು ತಾವು ಮರುರೂಪಿಸಿಕೊಳ್ಳುತ್ತಿದ್ದವು. ಅಮೆರಿಕದ ಈ ದಿನಪತ್ರಿಕೆಗಳಲ್ಲಿ ಒಂದು ದಿನ ಭಾರತ ಸುಂದರಿಯ ಸುದ್ದಿ ಮುಖಪುಟವನ್ನು ಅಲಂಕರಿಸಿಕೊಂಡಿದ್ದರೆ ಮತ್ತೊಂದು ದಿನ ಅಮೆರಿಕ ಚಲನಚಿತ್ರ ತಾರೆಯರ ವಿವಾಹ ವಿಚ್ಛೇದನದ ಸುದ್ದಿ ತುಂಬಿಕೊಂಡಿರುತ್ತಿತ್ತು.
ಅಂಥ ಹಲವಾರು ವಿಷಯಗಳು ಇವೆ. ಆದರೆ ಅವನ್ನೆಲ್ಲ ಕುರಿತು ಮಾತನಾಡಲು ಸಮಯ ಉಳಿದಿಲ್ಲ. ಈ ಮಾತನ್ನು ಮುಗಿಸುತ್ತ ಹೀಗೆ ಹೇಳಬಹುದು. ಜಾಗತೀಕರಣ ಸಂಸ್ಕೃತಿಯನ್ನು ಸರಳವಾಗಿ ಹೊರಗಿನಿಂದ  ಹೇರಿದುದಲ್ಲ.  ಭಾರತದೊಳಗಿನ ಶ್ರೀಮಂತ ವರ್ಗಗಳು ಈ ಹಿಂದಿನಿಂದ ಅಪ್ರಯತ್ನಪೂರ್ವಕವಾಗಿ ನಡೆಸಿಕೊಂಡು ಬಂದ ಜೀವನ ವಿಧಾನಗಳಿಂದಲೂ ಹುಟ್ಟಕೊಂಡಿದೆ. ಆದ್ದರಿಂದ ಇದನ್ನು ಆಕ್ರಮಣ ಮತ್ತು ರಕ್ಷಣೆ ಎಂಬ ಪಾರಿಭಾಷಿಕ ಪದಗಳಲ್ಲಿ ನಡೆಸಿಕೊಳ್ಳಕೂಡದು. ಆಧುನಿಕ ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಪ್ರಗತಿ ಪರ ಹಾಗೂ ಮಹತ್ವಪೂರ್ಣವಾದ ಮಾರ್ಕ್ಸ್ ವಾದ, ಕಮ್ಯೂನಿಸಂ, ಉದಾರವಾದಿ ಪ್ರಜಾಪ್ರಭುತ್ವ, ಜಾತ್ಯತೀತವಾದ, ಟ್ರೇಡ್ ಯೂನಿಯನ್, ಮುದ್ರಣ ತಂತ್ರಜ್ಞಾನ, ಮುಕ್ತ ಪತ್ರಿಕೋದ್ಯಮ, ಆಧುನಿಕ ಸಿವಿಲ್ ಹಾಗೂ ಕ್ರಿಮಿನಲ್ ಕೋಡುಗಳು, ಸ್ವತಂತ್ರ ನ್ಯಾಯಾಂಗ- ಇವು ಆರಂಭದಿಂದಲೇ ಯುರೋಪಿನಿಂದ ಬಂದಿತೆಂಬುದನ್ನು ನೆನಪು ಮಾಡಿಕೊಳ್ಳುವುದು ಉಪಯುಕ್ತ. ಅವೆಲ್ಲ ಅಮೆರಿಕದಲ್ಲಿ ಹುಟ್ಟಿದವು, ಅವನ್ನು ಕೂಡ ರೈಲು, ಫ್ಯಾಕ್ಟರಿ ತಯಾರಿಸಿದ ಸಾಮಗ್ರಿಗಳನ್ನು ಬಳಸಿದ ಹಾಗೆ ನಮ್ಮ ಉದ್ದೇಶಗಳಿಗೆ ಬಳಸುತ್ತಿದ್ದೇವೆ. ಸರ್ವವ್ಯಾಪಿ ಬಂಡವಾಳಶಾಹಿಯಾಗಿ ಸಮಗ್ರ ಭಾರತ ತಳೆದ ಅತ್ಯಂತ ಹೀನ ದೃಷ್ಟಿಕೋನವೆಂದರೆ ಅದು ಪಾಶ್ಚಿಮಾತ್ಯ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಅತಿ ಕೆಡುಕಿನ ಅಂಶಗಳನ್ನು ತಂದುಕೊಂಡಿತೆ ವಿನಾ ಅತ್ಯುತ್ತಮ ಅಂಶಗಳನ್ನು ತಂದುಕೊಳ್ಳಲಿಲ್ಲ. ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ಬಂಡವಾಳ ಸಂಸ್ಕೃತಿಗಳ ಅತ್ಯುತ್ತಮ ಭಾಗಗಳಲ್ಲಿ ನಮಗೆ ಅಗತ್ಯವಾದುದು ಹೆಚ್ಚಿನದಿದ್ದು, ನಮ್ಮ ಉದ್ದೇಶಗಳಿಗಾಗಿ ಅದನ್ನು ಮೆಚ್ಚಬೇಕಿದೆ.  ಈ ನಡುವೆ 'ಪಾಶ್ಚಾತ್ಯ ಆಕ್ರಮಣ'ವೆಂದು ಕರೆಯಲಾಗುವುದರ ವಿರುದ್ಧ ಕಾಲಕಾಲಕ್ಕೆ ಗಲಭೆ ಪ್ರದರ್ಶನ ನಡೆಸುವವರು-ಅಂದರೆ ಶಿವಸೇನೆ, ಸ್ವದೇಶಿ ಚಾಗರಣ ಮಂಚ ಮತ್ತಿತರರು- ಸರಕಾರ ಮತ್ತು ರಾಜಕೀಯ ಪಕ್ಷಗಳ ಏಜಂಟರುಗಳೇ ಆಗಿದ್ದು ಭಾರತದ ಮಾರುಕಟ್ಟೆಗಳು ಪಾಶ್ಚಾತ್ಯ ಬಂಡವಾಳಕ್ಕೆ ತೆರೆದಿಕೊಳ್ಳಲು ಹಾಗೂ ಹಣ ಹೂಡುವ ಅಮೆರಿಕನ್ನರಿಗೆ ಸರಿ ಹೊಂದುವಂತೆ ಭಾರತದ ಕಾನೂನುಗಳಿಗೆ ತಿದ್ದುಪಡಿ ತರಲು ಅತ್ಯಂತ ತೀವ್ರವಾಗಿ ಒಪ್ಪಿಸಿಕೊಂಡವರು. ಅವರು ಕೇವಲ ಸಾಂಕೇತಿಕ ನಡಾವಳಿಗಳನ್ನು ಮೀರಿ ಹೋಗಲು ಸಾಧ್ಯವೆ ಇಲ್ಲ. ಏಕೆಂದರೆ ಅವರ ಸರಕಾರವಷ್ಟೆ ಅಲ್ಲ ಅವರ ಮುಖ್ಯ ಸಾಮಾಜಿಕ ನೆಲೆಯಾದ ಮೇಲುವರ್ಗ, ಮೇಲುಜಾತಿ, ದೊಡ್ಡ ನಗರಗಳ ವ್ಯಾಪಾರಿ ಬೂರ್ಜ್ವಾಗಳು ಮತ್ತು ಕೇಸರಿ ಬಟ್ಟೆ ಧರಿಸಿದ ಹೌದಪ್ಪಗಳು ಕೂಡ ಉದಾರೀಕರಣದ ಅತ್ಯಂತ ಅತ್ಯುತ್ಸಾಹಿಗಳನ್ನು ಒಳಗೊಂಡಿದೆ.
ನಮ್ಮ ಇತಿಹಾಸದ ಐವತ್ತು ವರುಷಗಳನ್ನು ಹಿಂದಿರುಗಿ ನೋಡಿದಾಗ ನಾವು ಪ್ರತ್ಯಕ್ಷವಾಗಿ ತುಂಬಾ ಮಹತ್ವದ ವೈರುಧ್ಯವನ್ನು ಕಾಣುತ್ತೇವೆ. ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ಜಾತ್ಯತೀತತೆ, ಆಧುನಿಕತೆ ಮತ್ತು ದೇಶದ ಆರ್ಥಿಕತೆ 'ಸಮಾಜವಾದಿ ಹಾಗೂ ಯೋಜನಾ ಬದ್ಧ ಅಭಿವೃದ್ಧಿ' ನೆಲೆಯ ವಿಚಾರಧಾರೆಗಳನ್ನು ಅನುಸರಿಸಿದ ರಾಷ್ಟ್ರೀಯ ಬೂರ್ಜ್ವಾ ವರ್ಗಗಳು ಅಲಿಪ್ತ ಹಾಗೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತು ದೇಶದೊಳಗಿನ ವಿಚಾರದಲ್ಲಿ ಒಂದು ಬಗೆಯ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ವಿರೋಧಿ ನಿಲುವನ್ನು ಕೂಡ ತಳೆದಿದ್ದರು. ಇದಕ್ಕೆ ವಿರುದ್ಧವಾಗಿ ಇಂದು ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಮಂಡಿಸುವ ಅತ್ಯಂತ ಬಲಪಂಥೀಯ ಪ್ರಚಾರಕರು ಭಾರತದ ನಿಜವಾದ ಧರ್ಮ ಮತ್ತು ಪರಂಪರೆ ಮುಂತಾದುವನ್ನು ಅತ್ಯಂತ ವ್ಯಾಪಕವನ್ನಾಗಿಯೂ ಸಾಮ್ರಾಜ್ಯಶಾಹಿ ಬಂಡವಾಳಕ್ಕೆ ಶೀಘ್ರ ಶರಣಾಗುವಂಥದ್ದನ್ನಾಗಿಯೂ ಮಾಡಿದ್ದಾರೆ. ಇದು ಕಮ್ಯೂನಿಸಂಗೆ ತುಂಬಾ ವಿಚಿತ್ರ ಬಗೆಯ ಆಕ್ರಮಣಶೀಲತೆಯನ್ನು ತಂದುಕೊಡುತ್ತದೆ. ನಾನು ಬೇರೊಂದು ಕಡೆ ಪ್ರತಿಪಾದಿಸಿದಂತೆ ಭಾರತದಂಥ ದೇಶದಲ್ಲಿ ವಸಾಹತು ವಿರೋಧಿ ರಾಷ್ಟ್ರೀಯವಾದ ಸಂಪ್ರದಾಯಗಳು ಹಿಂದಿನ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿದ್ದು, ವರ್ತಮಾನದಲ್ಲಿ ಸಾಮ್ರಜ್ಯಶಾಹಿ ಪ್ರಾಬಲ್ಯದ ಗುರಿಯೆ ರಾಷ್ಟ್ರೀಯವಾದಿ ವಿಚಾರಧಾರೆಯ ಉದ್ದೇಶಿತ ಅಗತ್ಯವಾಗಿದೆ. ಅಲ್ಲದೆ ಪ್ರಗತಿಪರ ಶಕ್ತಿಗಳು ಈ ರಾಷ್ಟ್ರೀಯವಾದದ ಸೆಳೆತವನ್ನು ಮುನ್ನಡೆಸಿ ಸಾಮ್ರಾಜ್ಯಶಾಹಿ ವಿರುದ್ಧ ಸಾಗಲು ಸಾಧ್ಯವಾಗದಿದ್ದರೆ ಆ ಸ್ಥಾನವನ್ನು ಭ್ರಷ್ಟ ಹಾಗೂ ಪ್ರಗತಿ ವಿರೋಧಿ ಶಕ್ತಿಗಳು ಖಂಡಿತವಾಗಿ ಅಲಂಕರಿಸಲು ಯತ್ನಿಸುತ್ತವೆ. ಪ್ರಸ್ತುತ ಆರೆಸ್ಸೆಸ್ ಮತ್ತು ಅದರ ಪರಿವಾರ ಸಂಘ ಸಂಸ್ಥೆಗಳಿಗೆ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದ ಕಾರ್ಯಗತಗೊಳಿಸಲು ಧೈರ್ಯವಿಲ್ಲದುದರಿಂದ ಅವು ಕೋಮುವಾದಿ ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಪಸರಿಸಲು ಬಯಸಿವೆ. ಅವರು ನಿಜವಾದ ಯುದ್ಧ ಮರೆಯಲು ಅವರನ್ನು ಹೀಗೆ ಉದ್ದೀಪಿಸಲಾಗಿದೆ ಎಂಬ ನಂಬಿಕೆಯಿಂದ ಸಾಂಕೇತಿಕ ಯುದ್ಧ ಹೂಡಲಾಗಿದೆ. ನಿಜವಾದ ದಮನಕಾರರು ವಿಶ್ವ ವ್ಯಾಪಾರ ಸಂಸ್ಥೆ ಅಥವಾ ಅಮೆರಿಕ ಎಂಬುದನ್ನು ತಳ್ಳಿ ಹಾಕಲಾಗದ ಮತ್ತು ತಳ್ಳಿ ಹಾಕಲು ಸಾಧ್ಯವಿಲ್ಲದ ಮಾತಾಗಿರುವುದರಿಂದ ಅವರು ಕೆಂಟುಕಿ ಫ್ರೈಡ್ ಚಿಕನ್ ಶಾಖೆಗಳ ವಿರುದ್ಧ ಸಾಂಕೇತಿಕ ಚಳವಳಿ ನಡೆಸುತ್ತಾರೆ. ಅಮೆರಿಕದ ಯಾವುದೇ ಅಸ್ತ್ರದ ಮೇಲೆ ನಡೆಸುವ ಯಾವುದೇ ಬಗೆಯ ನಿಜವಾದ ದಾಳಿ ಸಾಂಸ್ಥಿಕ ಬಂಡವಾಳದ ಉಳಿದ ಸಾಂಸ್ಥಿಕ ಹಣ ಹೂಡಿಕೆದಾರರನ್ನು ಉಳಿಯಗೊಡದಂತೆ ಮಾಡುತ್ತದೆ. ಆದ್ದರಿಂದ ಸಾಮ್ರಾಜ್ಯಶಾಹಿಗೆ ಶರಣಾಗತರಾಗಿದ್ದರೂ ಅವರಿಗೆ ಸಾಂಕೇತಿಕ ಯದ್ಧದಲ್ಲೂ ತಡೆಯೊಡ್ಡುವ ಧೈರ್ಯವಿಲ್ಲ. ಹಾಗಾಗಿ 'ವಿದೇಶಿ ಆಕ್ರಮಣ' ಅವೈಚಾರಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯ ನೆಲೆಯಲ್ಲಿ ನಿರಂತರ ಪುನರ್ವ್ಯಾಖ್ಯಾನಕ್ಕೆ ಒಳಗಾಗಿದೆ. ಭಾರತವನ್ನು ಬೆದರಿಸಿರುವುದು ಇಂದಿನ ಸಾಮ್ರಾಜ್ಯಶಾಹಿ ಆಕ್ರಮಣವಲ್ಲ, ಮಧ್ಯಯುಗದ 'ಮುಸ್ಲಿಂ' ಆಕ್ರಮಣ, ವಿದೇಶಿ ಸಾಂಸ್ಥಿಕ ಬಂಡವಾಳವಲ್ಲ ಆದರೆ 'ವಿದೇಶಿ ಧರ್ಮ'ಗಳಲ್ಲಿ ಮುಖ್ಯವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳೆಂಬ ದೃಷ್ಟಿಕೋನದ ಮೇಲೆ ಒತ್ತು ಹಾಕಿದೆ. ಆದುದರಿಂದ ಒಂದು ಹಾಡಿಗಾಗಿ ದೇಶದ ಸಾರ್ವಜನಿಕ ಆಸ್ತಿಗಳು ವಿದೇಶಿ ಹೂಡಿಕೆದಾರರಿಗೆ ಮತ್ತು ಬಂಡವಾಳದಾರರಿಗೆ ಮಾರಾಟವಾಗುತ್ತಿದ್ದ ಹಾಗೆ ಈ ವಿದೇಶಿ ಧರ್ಮಗಳ ಜೀವಂತ ಸಂಕೇತಗಳಾದ ಮಸೀದಿ ಮತ್ತು ಚರ್ಚುಗಳ ನಾಶ ನಿರ್ದಿಷ್ಟ ಸಮಯದಲ್ಲಿ ರಾಷ್ಟ್ರೀಯ ಗೌರವದ ವಿಮೋಚನೆಯ ಕೃತ್ಯವಾಗಿ ಮಂಡಿತವಾಗಿದೆ. ಸಂಕ್ಷಿಪ್ತವೆಂದರೆ- ಹಿಂದೂ ಜಾಗರಣ ಮಂಚ ರಾಷ್ಟ್ರದ ನಿಜವಾದ ಯಾವುದೇ ಆಸ್ತಿಯನ್ನು ಸಂರಕ್ಷಿಸುವುದರಲ್ಲಿ ಅಸಮರ್ಥವಾಗಿತ್ತು ಮತ್ತು ಸಂಪೂರ್ಣ ನಗೆಪಾಟಿಲಿಗೆ ಈಡಾಗಿತ್ತು. ಆದುದರಿಂದ ಅದು ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದದ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ತುಂಬಾ ಆಕ್ರಮಣಕಾರಿಯಾಗಿತ್ತು.
 -ಏಜಾಜ್ ಅಹಮದ್

ಪುರುಷತ್ವದ ಪುನಾರಚನೆ: ರಾಜ್ ಕುಮಾರ್ ಮತ್ತು ಕನ್ನಡ ಸಾರ್ವಜನಿಕ ವಲಯ




-ತೇಜಸ್ವಿನಿ ನಿರಂಜನ

ಇಂದು ಕನ್ನಡಿಗನಾಗಿರುವುದು ಅಂದರೇನು ಎಂಬ ಕನ್ನಡ ಭಾಷೆಯ ಗುರುತಿನ ಪ್ರಶ್ನೆಯನ್ನು ಕುರಿತ ಹೊಸ ಅನುಸಂಧಾನಗಳಿಗೆ ವೀರಪ್ಪನ್ ನಿಂದಾದ ರಾಜ್ ಕುಮಾರ್ ಅಪಹರಣ ಪ್ರೇರಣೆ ಒದಗಿಸಿದೆ. ಈ ಬಿಕ್ಕಟ್ಟು ಕಳೆದ ಹಲವು ವರುಷಗಳ ಸಾಮಾಜಿಕ ತಳಮಳ ಮತ್ತು ಆತಂಕಗಳಿಗೆ ಮರುನುಡಿ ಕೊಟ್ಟಿದೆ. ಅದನ್ನು ಚಾರಿತ್ರಿಕ ಪರಿಪ್ರೇಕ್ಷ್ಯದಲ್ಲಿಟ್ಟು ಜಾನಕಿ ನಾಯರ್ ಅವರ ಲೇಖನ ನೋಡಿದೆ. ಈ ಎಲ್ಲ ತವಕ-ತಲ್ಲಣಗಳ ಕೇಂದ್ರಬಿಂದು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಪುರುಷತ್ವದ ಬಿಕ್ಕಟ್ಟು ಎಂದು ನಾನು ಈ ಲೇಖನದಲ್ಲಿ ವಾದಿಸುತ್ತಿದ್ದೇನೆ. ನಾನಿಲ್ಲಿ ಪರಿಶೀಲನೆಗೆ ಎತ್ತಿಕೊಂಡಿರುವ ಪಠ್ಯಗಳಲ್ಲಿ ಚರ್ಚಿತವಾಗಿರುವ, ಅಪಾಯಕ್ಕೆ ಸಿಲುಕಿದ ಭಾಷೆಯ ಪ್ರತಿಪಾದಕರ 'ಪುರುಷತ್ವ' ಏರಿದ ದನಿಯಲ್ಲಿ ಚರ್ಚೆಗೊಳಗಾಗಿದೆ.
ಕನ್ನಡ ಭಾಷೆಗೆ ಸಂಬಂಧಿಸಿದ ಹಾಗೆ ಅಪಹರಣದ ಪ್ರಕರಣ ಮಂಡಿಸುವ ಹೊಸ ಸಾಂಸ್ಕೃತಿಕ ಕಾರ್ಯಸೂಚಿಗಳು ಅನೇಕ ಬಗೆಯ ಜನಪ್ರಿಯ ವಾದಗಳನ್ನು ಹುಟ್ಟುಹಾಕಿದೆ.  ಅವು ಮತ್ತೆ ಮತ್ತೆ ರಾಜ್ ಕುಮಾರ್ ರವರ ತಾರಾ ಜೀವನದ ಒಂದು ಭಾಗವಾಗಿರುವಂತೆ ಕಾಣುತ್ತವೆ (ನನ್ನ ರಕ್ತ ಕನ್ನಡ, ನನ್ನ ಜೀವನ ಕನ್ನಡ, ನನ್ನ ಮೈ ಮನಸು ಕನ್ನಡ-ಈ ಬಗೆಯ ನುಡಿಗಟ್ಟುಗಳು ಅವರ ಅನೇಕ ಚಲನಚಿತ್ರಗಳ ಸಂಭಾಷಣೆ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ). ಜನಪ್ರಿಯ ಪತ್ರಿಕೆಯೊಂದು ಅಪಹರಣ ಕುರಿತು ಲೇಖನ ಪ್ರಕಟಿಸಿ, ಅದರ ತಲೆಬರಹದ ಮೂಲಕ 'ಭಾಷೆಯ ಮೂಲ ಅಸ್ತಿತ್ವಕ್ಕೆ ಕೊಡಲಿ ಏಟು' ಬಿದ್ದಿತೆಂದು ಘೋಷಿಸಿತು(ತರಂಗ, ಸೆಪ್ಟಂಬರ್ 14, 2000). ಕನ್ನಡ ಗುರುತಿನ ಹೋರಾಟದ ಚಿತ್ರಣದಲ್ಲಿ ಏಕೆ ಭಾಷಾ ವಿವಾದ ಪ್ರಧಾನ ನೆಲೆಯಲ್ಲಿ ಕಾಣುತ್ತದೆ? ತೆಲುಗು ಅಥವಾ ಮಲೆಯಾಳಂ ಹೋರಾಟಗಳಲ್ಲಿ ಇದು ತೀರಾ ಬೇರೆ ರೀತಿಯಲ್ಲಿ ಪ್ರತಿಪಾದಿತವಾಗುತ್ತದೆ. ಕನ್ನಡ ಭಾಷಾಭಿಮಾನ ಏಕೆ ಮತ್ತೆ ಮ್ತತೆ ತಮಿಳು ಅಭಿಮಾನದೊಂದಿಗೆ ಹೋಲಿಸಿ ಅದರ ವಿರುದ್ಧವಾಗಿ ನಿರ್ವಚನಗೊಳ್ಳುತ್ತಿದೆ? ತಾರಾ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವ ಈ ಪ್ರಕ್ರಿಯೆ ರಾಜ್ಯದ ಉಳಿದ ಭಾಗಗಳಿಗಿಂತ ದಕ್ಷಿಣಭಾಗದ ಜಿಲ್ಲೆಗಳಲ್ಲೆ ಏಕೆ ಹೆಚ್ಚು ಪ್ರಮುಖ ವಿಷಯವಾಗಿದೆ?
ಅಪಹರಣ ಕುರಿತು ಬಂದಿರುವ ಪ್ರತಿಕ್ರಿಯೆಗಳು ಆಕ್ರಮಣಕಾರಿ ಪೌರುಷ್ಯತ್ವದ ಸಾರ್ವಜನಿಕ ವಲಯದ ಭಾಗವಾಗಿ ಒಡಮೂಡಿರುವುದನ್ನು ನೋಡಬಹುದಾಗಿದೆ. ಈ ಸ್ವರೂಪದ ಸಾರ್ವಜನಿಕ ವಲಯ ಈ ರೂಪವನ್ನು ಬೆಂಗಳೂರಿನಲ್ಲಿ 1990ರಲ್ಲಿ ತಳೆದಿತ್ತು. ಉಪೇಂದ್ರರ ಯಶಸ್ವಿ ಚಿತ್ರಗಳು, ವಿಶೇಷವಾಗಿ 'ಎ' (1998), 'ಸ್ವಸ್ತಿಕ್' (1999) ಮತ್ತು 'ಉಪೇಂದ್ರ' (2000) ಹಾಗೂ ರಾಜಕೀಯ ವಿಮರ್ಶೆ ಮತ್ತು ಸ್ಥಳೀಯ ಹಗರಣಗಳನ್ನು ಸಮಾನ ಪ್ರಮಾಣದಲ್ಲಿ ವಿವರವಾಗಿ ಬರೆಯುವ ವಾರಪತ್ರಿಕೆಗಳಾದ ಹಾಯ್ ಬೆಂಗಳೂರು, ಅಗ್ನಿ, ಪೋಲಿಸರ ಹೋರಾಟ, ಕ್ರೈಮ್ ನ್ಯೂಸ್, ಸ್ಟಾರ್ ಆಫ್ ಬೆಂಗಳೂರು ಅಥವಾ ಸಂಜೆ ಸ್ಫೋಟಗಳು ಈ ಹೊಸ ಮಾದರಿಯ ಕನ್ನಡ ಸಾರ್ವಜನಿಕ ವಲಯಕ್ಕೆ ನುಡಿಕೊಡುವಲ್ಲಿ ನಿರ್ಣಾಯಕ ವಾದುವು. ಮೊದಲಿನೆರಡು ವಾರಪತ್ರಿಕೆಗಳು ಉಳಿದವುಗಳಿಗಿಂತ ಭಿನ್ನವಾಗಿವೆ. ಸಾಹಿತ್ಯ ವಲಯದ ಸಂಬಂಧವನ್ನು ಉಳಿಸಿಕೊಂಡಿರುವ ಹಾಗೂ ಸಾರ್ವಜನಿಕ ರಂಗದಲ್ಲಿ ಕಣ್ಣುಕಟ್ಟುವಂಥ ರೀತಿಯಲ್ಲಿ ಅವು ತಲೆ ತೂರಿಸಬಯಸುತ್ತವೆ1. ಲಂಕೇಶ್ ಪತ್ರಿಕೆ (ಸುಮಾರು ಒಂದು ಲಕ್ಷ ಪ್ರತಿ ಮಾರಾಟವಾಗುತ್ತಿದ್ದು) ಈ ಕ್ಷೇತ್ರದಲ್ಲಿ ಮೊದಲಿನದು. ಖ್ಯಾತ ಸಾಹಿತಿ ಪಿ.ಲಂಕೇಶ್ ಇಪ್ಪತ್ತೈದು ವರುಷಗಳ ಹಿಂದೆ ಪ್ರಾರಂಭಿಸಿದ ಈ ಪತ್ರಿಕೆಯನ್ನು ಈಗ ಅವರ ಮಗಳು ಗೌರಿ ಲಂಕೇಶ್ ತಮ್ಮ ಕಚೇರಿಯ ಪುರುಷ ಸಿಬ್ಬಂದಿಗಳ ನೆರವಿನಿಂದ ನಡೆಸುತ್ತಿದ್ದಾರೆ. ಈಗದು ಅದರ ಯಶಸ್ವಿ ಸಂಚಿಕೆಗಳಿಗಿಂತ ಭಿನ್ನವಾಗಿದೆ. ಆಗ ಅವರೊಂದಿಗೆ ಹಲವಾರು ಕವಿಗಳು, ಕಾದಂಬರಿಕಾರರು, ಲೇಖಕರು ಸದಾಶಯವನ್ನು ಹೊಂದಿ ತಮ್ಮ ಪ್ರತಿಭೆಯ ನೆರವನ್ನು ನೀಡಿ ಪತ್ರಿಕೆಗಾಗಿ ಬರೆಯುವ ಮೂಲಕ ಅದನ್ನು ಒಂದು ಬಗೆಯಲ್ಲಿ ತುಂಬ ವ್ಯಾಪಕವಾದ ಕನ್ನಡ ಸಾಹಿತ್ಯ ಪತ್ರಿಕೆಯ ಜನಪ್ರಿಯ ರೂಪವನ್ನಾಗಿಸಿದರು.
ರವಿ ಬೆಳಗೆರೆ ಸಂಪಾದಿಸುತ್ತಿರುವ ಹಾಯ್ ಬೆಂಗಳೂರು ಮತ್ತು ಶ್ರೀಧರ್ ಸಂಪಾದಿಸುತ್ತಿರುವ ಅಗ್ನಿ-ಈ ಎರಡು ವಾರಪತ್ರಿಕೆಗಳ ಕೆಲವು ವಿವರಗಳನ್ನು ನಾನಿಲ್ಲಿ ಮಂಡಿಸುತ್ತೇನೆ. ಈ ಇಬ್ಬರೂ ಸಂಪಾದಕರು ಸಾಹಿತಿಗಳು, ಬರಹಗಾರರು. ಮೊದನೆಯವರು ಕವಿಯೂ ಆಗಿದ್ದಾರೆ. ಇವರಿಬ್ಬರಿಗೂ ಪಾತಕಲೋಕದೊಂದಿಗೆ ಸಂಬಂಧವಿದೆ ಎನ್ನುವ ಗಾಳಿಸುದ್ದಿ ಇದೆ. ಎರಡನೆಯವರು ತಮ್ಮ 'ಅಪರಾಧ' ಜಗತ್ತಿನ ತಿಳಿವಳಿಕೆಯನ್ನು ತಮ್ಮ ಬರವಣಿಗೆಯಲ್ಲಿ ಮೆರೆದಿದ್ದಾರೆ. ರುಚಿಕಟ್ಟಾದ ಜೆನ್ ಉಲ್ಲೇಖಗಳು, ತಮ್ಮ ಎಸ್ಟೀಮ್ ಮತ್ತು ರೆಡ್ ಜಿಪ್ಸಿ ಕಾರುಗಳು, ಪಡ್ಡೆ ಹುಡುಗರ ಭಾಷೆ ('ಲವ್ ಲವಿಕೆ' ಕಾಲಂ) ಅಳವಡಿಸಿಕೊಂಡಿರುವ ಬೆಳಗೆರೆಯ 'ಹಾಯ್ ಬೆಂಗಳೂರ್' 'ಅಗ್ನಿ'ಯಂತೆಯೆ ಜಾಗತೀಕರಣ ವಿರೋಧಿ ಭಾವನೆಗಳನ್ನು ಅಭಿವ್ಯಕ್ತಿಸಿದೆ. ಈ ಪತ್ರಿಕೆ ವರದಿಗಾರರ ಹಲವು  ಲೇಖನಗಳು ಕನ್ನಡ ಪರವಾದ 'ಅನ್ಯ'  ವಿರೋಧಿ ನಿಲುವನ್ನು ಬಿಂಬಿಸಿದೆ. ಅನ್ಯರು ಯಾವಾಗಲೂ ಮೇಲ್ದರ್ಜೆಯವರಾಗಿದ್ದು, ಹಣವಂತರು, ವ್ಯಾಪಾರಿಗಳು ಮತ್ತು ಸಾಫ್ಟ್ ವೇರ್ ಕ್ಷೇತ್ರದವರಾಗಿದ್ದಾರೆ. ಅವರೆಲ್ಲ ಜಯನಗರ ಅಥವಾ ಇಂದಿರಾ ನಗರದಂತಹ ಸುರಕ್ಷಿತ ಹೊರವಲಯದಲ್ಲಿ ವಾಸಿಸುತ್ತಿದ್ದಾರೆ. ಉನ್ನತ ಶಿಕ್ಷಣಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳೆಲ್ಲ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳ ಪಬ್ ಗಳಲ್ಲಿರುತ್ತಾರೆ. ವಲಸಿಗ ತಮಿಳು ಕೂಲಿಕಾರರು ಮತ್ತು ಬೀದಿ ವ್ಯಾಪಾರಿಗಳಂಥ ಬಡ ಅನ್ಯಭಾಷಿಕರು ಸಾಮಾನ್ಯವಾಗಿ ಕನ್ನಡ ಪರ ಹಿಂಸೆಯ ಪರಿಣಾಮಗಳನ್ನು ಅನುಭವಿಸುವವರು. ಇವರ ಬಗ್ಗೆ ಈ ಪತ್ರಿಕೆಗಳು ಚಕಾರವೆತ್ತುವುದಿಲ್ಲ. ತಮಿಳು ವಿರೋಧಿ ಹೇಳಿಕೆಗಳ ಪರಿಣಾಮ ಇವರನ್ನು ಸ್ಪಷ್ಟವಾಗಿ ಗುರಿಪಡಿಸಿದೆ.
ನವೀನ ಮತ್ತು ಅಗ್ಗದ ತಂತ್ರಜ್ಞಾನ ಎಲ್ಲ ಕಡೆ ವಿಭಿನ್ನ ಬಗೆಯ ಜನಪ್ರಿಯ ಸಾಂಸ್ಕೃತಿಕ ಕಲಾ ಮಾಧ್ಯಮವಾದ ಆಡಿಯೋ ಕ್ಯಾಸೆಟ್ಅನ್ನು ಒದಗಿಸಿದೆ. ಇದು ಕನ್ನಡದಲ್ಲಿ ಇಂದು ಮೊದಲ ಬಾರಿಗೆ ಭಕ್ತಿಗೀತೆ, ಜನಪದ ಗೀತೆ ಮತ್ತು ಮಿಮಿಕ್ರಿ ಪರಂಪರೆಯಿಂದಾಚೆಗೆ ಹೊರಟು ಸಮಕಾಲೀನ ರಾಜಕಾರಣದ ವೀಕ್ಷಕ ವಿವರಣೆ ಕ್ಷೇತ್ರಕ್ಕೆ ಕಾಲಿರಿಸಿದೆ2.  ರಾಜಕುಮಾರ್ ಅಪಹರಣದ ಹಿನ್ನೆಲೆಯಲ್ಲಿ ಹನ್ನೊಂದು ಆಡಿಯೋ ಕ್ಯಾಸೆಟ್ಟುಗಳನ್ನು ಹೊರತರಲಾಗಿದೆ. ಅವುಗಳಲ್ಲಿ ಒಂಬತ್ತು ಕನ್ನಡ, ಒಂದೊಂದು ಹಿಂದಿ ಮತ್ತು ಉರ್ದು ಭಾಷೆಯಲ್ಲಿದೆ. ಇವುಗಳ ತಯಾರಿಕೆಯ ತಾಂತ್ರಿಕ ಗುಣಮಟ್ಟ ಉನ್ನತವಾಗಿದ್ದು, ಹೊರಕವಚ ಸುಂದರವಾಗಿದೆ. ಇವುಗಳಲ್ಲಿ ಪ್ರಸಿದ್ಧ ಹಾಸ್ಯನಟರು, ಕಲಾವಿದರು, ಹಿನ್ನೆಲೆ ಗಾಯಕರು ಮತ್ತು ರಂಗಭೂಮಿ ನಟರು ತಮ್ಮ ಕಂಠದಾನ ಮಾಡಿದ್ದಾರೆ. ಮೊದಲ ಕ್ಯಾಸೆಟ್ಟು ಅಪಹರಣವಾದ ಹತ್ತು ದಿನಗಳ ನಂತರ ಹೊರಬಂದರೆ, ಕೊನೆಯ ಕ್ಯಾಸೆಟ್ಟು ಅಪಹರಣವಾದ ಎರಡು ತಿಂಗಳ ನಂತರ ಬಿಡುಗಡೆಯಾಗಿದೆ. ಲಂಕೇಶ್ ಪತ್ರಿಕೆಯ ಲೇಖನವೊಂದು ನಮಗೆ ತಿಳಿಸುವ ಹಾಗೆ ಪ್ರತಿಯೊಂದು ಆಡಿಯೋ ಕಂಪನಿಗಳು ಪ್ರತಿ ಕ್ಯಾಸೆಟ್ಟಿನ 20-25 ಸಾವಿರ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಗಾಂಧಿಬಜಾರಿನ ಒಂದು ಚಿಕ್ಕ ಕ್ಯಾಸೆಟ್ ಅಂಗಡಿಯಲ್ಲಿ ಒಂದು ವಾರಕ್ಕೆ ಸುಮಾರು 100 ಕ್ಯಾಸೆಟ್ಟುಗಳು ಮಾರಾಟವಾಗಿವೆ(ಬೆಲೆ ರೂ. 25 ರಿಂದ 30)3. ಮೈಸೂರು, ಕೋಲಾರ ಮತ್ತಿತ್ತರ ಊರುಗಳಿಂದ ಬೆಂಗಳೂರಿಗೆ ಬರುವ ಚಿಲ್ಲರೆ ವ್ಯಾಪಾರಿಗಳಲ್ಲಿ ಪ್ರತಿಯೊಬ್ಬರೂ ಸುಮಾರು 30 ಪ್ರತಿಗಳನ್ನು ಕೊಳ್ಳುತ್ತಾರೆ.
ಅವುಗಳ ರಚನೆ ಸರಳ ಸ್ವರೂಪದ್ದಾಗಿವೆ. ಅವು ಹರಿಕತೆಯ ಧಾಟಿಯಲ್ಲಿದ್ದು, ಎರಡು ಗಂಡು ಧ್ವನಿ ಕೇಳಿ ಬರುತ್ತದೆ. ಒಬ್ಬರ ಪ್ರಶ್ನೆಗೆ ಮತ್ತೊಬ್ಬರು ಉತ್ತರಿಸಿದ್ದು, ಯಾವಾಗಲಾದರೊಮ್ಮೆ ಮಗದೊಬ್ಬರ ಪ್ರವೇಶವಿರುತ್ತದೆ. ಸ್ತ್ರೀ ಪಾತ್ರಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ. ಸಂಭಾಷಣೆಗಳ ನಡುವೆ ಹಾಡುಗಳನ್ನು ಮೇಲಿಂದ ಮೇಲೆ ಬಳಸಲಾಗಿದೆ. ಆ ಹಾಡುಗಳಲ್ಲಿ ಕೆಲವನ್ನು  ಹೆಂಗಸರು ಹಾಡಿದ್ದಾರೆ. ಅವು ಸಂದರ್ಭಕ್ಕೆ ತಕ್ಕ ಹಾಗೆ ರಚನೆಯಾಗಿರದಿದ್ದರೂ ರಾಜಕುಮಾರ್ ಹಾಡಿದ ಇಲ್ಲವೆ ಅವರ ಮೇಲೆ ಚಿತ್ರೀಕರಿಸಿದ ಪ್ರಸಿದ್ಧ ಹಾಡುಗಳ ರಿಮಿಕ್ಸ್ ಮಾಡಿದ ಚೌಚೌ ಹಾಡುಗಳಿವೆ. ಉದಾಹರಣೆಗೆ, ಎರಡು ಕನಸು (1974) ಚಿತ್ರದ  'ಎಂದೆಂದು ನಿಮ್ಮನು ಮರೆತು ನಾನಿರಲಾರೆ' ಎಂಬ ಮಂಜುಳ ಜೊತೆ ಹಾಡುವ ಯುಗಳ ಗೀತೆಯನ್ನು  'ಎಂದೆಂದು ನಿಮ್ಮನು ಮರೆತು ನಾನಿರಲಾರೆ / ನಾನೆಂದು ಕನ್ನಡ ಬಿಟ್ಟು ಬದುಕಿರಲಾರೆ' ಎಂದು ಬದಲಾಯಿಸಲಾಗಿದೆ. ಈ ಮೂಲಕ ರಾಜಕುಮಾರ್ ತನ್ನ ಅಭಿಮಾನಗಳೊಂದಿಗೆ ಮತ್ತು ಕನ್ನಡ ನುಡಿಯೊಂದಿಗೆ ಯುಗಳ ಗೀತೆ ಹಾಡುತ್ತಿರುವಂತೆ ಮಾಡಲಾಗಿದೆ. ರಾಜಕುಮಾರ್ ಕನ್ನಡ ಮತ್ತು ಕನ್ನಡಾಭಿಮಾನಿಗಳನ್ನು ಮರೆತು ಬದುಕಿರಲು ಸಾಧ್ಯವಿಲ್ಲ / ಕನ್ನಡವನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ (ಮಂಗನ ಕೈಯಲ್ಲಿ ಮಾಣಿಕ್ಯ)ವೆಂದು ಹೇಳಿಸಲಾಗಿದೆ. ಸಿನಿಮಾ ಹಾಡುಗಳನ್ನು ಹೀಗೆ ಬದಲಾಯಿಸಿದಾಗ, ಬದಲಾದ ಪದಗಳು ಪ್ರಸ್ತುತ ಸಂದರ್ಭಕ್ಕೆ ಸಂಬಂಧಿಸಿರುತ್ತವೆ. ಇಲ್ಲವೆ ರಾಜಕುಮಾರ್ ಅಭಿಮಾನಿಗಳನ್ನು ಕುರಿತು ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಕೆಲವು ಕ್ಯಾಸೆಟ್ ಗಳಲ್ಲಿ ಆ ಸಂದರ್ಭಕ್ಕೆ ರಚನೆ ಮಾಡಿದ ಹಾಡುಗಳು ಸಂಗ್ರಹವಾಗಿವೆ (ನಾಡಿನ ಅಣ್ಣ ಕಾಡಿನಲ್ಲಿ, ರಾಜಣ್ಣ ನಾಡಿಗೆ ಬಾರಣ್ಣ). ಒಂದು ಕ್ಯಾಸೆಟ್ಟಿನಲ್ಲಿ ಜನಪದ ಪ್ರದರ್ಶನ ಕಲೆಯಾದ ಕಂಸಾಳೆ ಶೈಲಿ ಬಳಕೆಯಾಗಿದ್ದರೆ, ಮತ್ತೊಂದರಲ್ಲಿ ಉತ್ತರ ಕರ್ನಾಟಕದ ಆಡುಮಾತಿನ ಶೈಲಿ ಅಳವಡಿಸಿಲಾಗಿದೆ. ಒಂದು ಕ್ಯಾಸೆಟ್ ಜಾನಪದ ಶೈಲಿಯಿಂದ ಹೇಳಿಕೊಂಡರೂ ವಾಸ್ತವವಾಗಿ ಸಿನಿಮಾ ಗೀತೆಗಳ ಧಾಟಿಯೆ ಆಗಿದೆ. ಎರಡು ಟೇಪುಗಳನ್ನು ಸಂಜೆ ಸ್ಫೋಟ, ಪೋಲೀಸರ ಹೋರಾಟ ಮತ್ತು ಸ್ಟಾರ್ ಆಫ್ ಬೆಂಗಳೂರು ಪತ್ರಿಕೆಗಳ ಸಂಪಾದಕರ ತಂಡ ಸಂಯುಕ್ತವಾಗಿ ತಯಾರಿಸಿದೆ. ಒಂದನ್ನು ಎಐಎಡಿಎಂಕೆ ಪದಾಧಿಕಾರಿ ಕೆ.ಮುತ್ತು ಪ್ರಾಯೋಜಿಸಿದ್ದರೆ ಮತ್ತೊಂದರ ರಚನೆಯನ್ನು ತಮಿಳಿಗ ಬೆಂಗಳೂರು ಪಳಿನಿ ತಯಾರು ಮಾಡಿದ್ದಾರೆ.
ಕ್ಯಾಸೆಟ್ಟುಗಳ ಭಾಷೆ ಮತ್ತು ಪ್ರತಿಮೆಗಳ ಬಳಕೆ ಹಾಗೂ ಪತ್ರಿಕೆಗಳ ಲೇಖನಗಳು ಮತ್ತು ಸಂಪಾದಕೀಯಗಳ ನಡುವೆ ಮಹತ್ವಪೂರ್ಣವಾದ ಸಾಮ್ಯತೆ ಇದೆ. ಆದರೆ ಅವುಗಳ ದನಿಗಳಲ್ಲಿ ವ್ಯತ್ಯಾಸವಿದೆ. ಪತ್ರಿಕೆಗಳಲ್ಲಿ ಗಾಂಭಿರ್ಯ ಮತ್ತು ಅಪರೂಪದ ಅಣಕವಿದ್ದರೆ ಕ್ಯಾಸೆಟ್ಟುಗಳಲ್ಲಿ ರಾಜ್ ಕುಮಾರ್ ಕುರಿತ ಪ್ರೀತಿ ಮತ್ತು ಹಾಸ್ಯ ಅಭಿವ್ಯಕ್ತಗೊಂಡಿದೆ. ಪತ್ರಿಕೆಗಳಲ್ಲಿ ಗೊಂದಲ ಕುರಿತಂತೆ ಅಪಕ್ವ ರಾಜಕಾರಣಿಗಳನ್ನು ದೂಷಿಸಿ ಕ್ರ್ರಿಯಾಶೀಲರಾಗಲು ಉದ್ದೀಪಿಸಲಾಗಿದೆ. ಕ್ಯಾಸೆಟ್ಟುಗಳಲ್ಲಿ ಕೂಡ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಿ ಚುಚ್ಚಲಾಗಿದೆ. ಏಕೆ ವೀರಪ್ಪನ್ ಈ ರಾಜಕಾರಣಿಗಳನ್ನು ಅಪಹರಿಸಿಲ್ಲ? ಏಕೆ ಅವನು ವರ್ಲ್ಡ್ ಬ್ಯಾಂಕ್ ಹಣ ನುಂಗಿದ ವಿಧಾನಸೌಧದ ಬಿಳಿ ಆನೆಗಳನ್ನು ಅಪಹರಣ ಮಾಡಲಿಲ್ಲ?'' (ಅರಣ್ಯದಲ್ಲಿ ಅಣ್ಣಾವ್ರು). ರಾಜಕಾರಣಿಗಳನ್ನು ಅಪಹರಣ ಮಾಡಿದರೆ ಜನತೆ ಗಂಭೀರವಾಗಿ ಪರಿಗಣಿಸುವುದಿಲ್ಲ, ಇದರಿಂದ ವೀರಪ್ಪನ್ ಉದ್ದೇಶ ಈಡೇರುವುದಿಲ್ಲ ಎಂಬುದು ಸಾಮಾನ್ಯ ಉತ್ತರ. ಖಾದಿ ಮತ್ತು ಖಾಕಿ ತೊಡುವವರೆಲ್ಲ ಸೀರೆ ಉಟ್ಟುಕೊಂಡು ಬಳೆ ತೊಡಲಿ, ಸೌಟು ಹಿಡಿಯಲಿ ಎಂದು ಕ್ಯಾಸೆಟ್ಟೊಂದು ಟೀಕೆ ಮಾಡುತ್ತದೆ (ಕಾಡಿನಲ್ಲಿ ನಮ್ಮ ಅಣ್ಣಾವ್ರು). ಈ 'ನಷ್ಟ; ಮತ್ತು 'ದುಃಖ'ದ ನಿರೂಪಣೆಗಳಲ್ಲಿ ಪ್ರಸ್ತುತ ಸಂದರ್ಭ ರೂಪಿತವಾಗಿದ್ದು, ಕನ್ನಡಿಗನ ದುಸ್ಥಿತಿಯ ಚಿತ್ರಣ ಪ್ರಮುಖ ಪಾತ್ರವಹಿಸುತ್ತದೆ.
ಕ್ಯಾಸೆಟ್ಟಿನ ಪಾತ್ರಗಳಾದ ಕಲ್ಲಣ್ಣ-ಈರಣ್ಣ, ಸಂಗ್ಯಾ-ಬಾಳ್ಯಾ, ಬಶೀರ್-ಕಹತೂನಬ್ಬ ತಮ್ಮ ನೆಚ್ಚಿನ ನಾಯಕನಿಗೆ ಒದಗಿಬಂದ ದುಸ್ಥಿತಿ ಕುರಿತು ಸಂತಾಪ ವ್ಯಕ್ತಪಡಿಸುತ್ತವೆ. ಅಲ್ಲದೆ ಅವು ತಮ್ಮಲ್ಲೊಬ್ಬನನ್ನು ಅಥವಾ ವೀರಪ್ಪನ್ ನನ್ನು ಉದ್ದೇಶಿಸಿ, ಅಪಮಾನಿಸುವ ಹಾಸ್ಯ ಅಳವಡಿಸಿಕೊಂಡಿವೆ. ಬಹುಪಾಲು ಕ್ಯಾಸೆಟ್ಟುಗಳಲ್ಲಿ ಮಂಡ್ಯ ಶೈಲಿಯ ಆಡುಮಾತನ್ನು ಅಳವಡಿಸಿಕೊಳ್ಳಲಾಗಿದೆ. ದಕ್ಷಿಣ ಕರ್ನಾಟಕದ ಹಳೆಯ ಮೈಸೂರು ಪ್ರಾಂತ್ಯಕ್ಕೆ ಸೇರಿದ ಮಂಡ್ಯದ ಮಹತ್ವವನ್ನು ಇಲ್ಲಿ ಗುರುತಿಸಬಹುದು. ಮಂಡ್ಯ ಬೆಂಗಳೂರು ಮೈಸೂರು ನಡುವಿನ ತುಂಬ ಫಲವತ್ತಾದ ಉಳುಮೆ ಭೂಮಿ ಹೊಂದಿದ ಪ್ರದೇಶ. ಇಲ್ಲಿಗೆ 1930ರಲ್ಲಿ ಮೈಸೂರಿನ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯ ಕಟ್ಟಿಸಿದ ಕಾವೇರಿ ನದಿ ಆಧಾರಿತ ಕಾಲುವೆಗಳು ನೀರನ್ನೊದಗಿಸುತ್ತವೆ. ಒಕ್ಕಲಿಗ ಕೇಂದ್ರಿತ ರಾಜಕೀಯ ಮತ್ತು ಆರ್ಥಿಕ ವಲಯ ಸುಭದ್ರವಾಗಿದೆ. ಶ್ರೀಮಂತ ಗೌಡ ಜನಾಂಗದ ಒಕ್ಕಲಿಗರು / ರೈತರು ಒಂದೆರಡು ದಶಕಗಳಿಂದ ಆದಿಚುಂಚನಗಿರಿ ಮಠಕ್ಕೆ ಕೊಡುಗೆ ನೀಡುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಹಲವಾರು ವರ್ಷಗಳಿಂದ ಮಂತ್ರಿಮಂಡಲದಲ್ಲಿ ಮಂಡ್ಯ ಶಾಸಕರಿಗೆ ಪ್ರಾತಿನಿಧ್ಯ ಒದಗಿಸಿವೆ. ಪ್ರಸಕ್ತ (ಹಿಂದಿನ) ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು ಮಂಡ್ಯ ಪ್ರದೇಶದಿಂದ ಬಂದವರಾಗಿದ್ದು, ಈ ಹುದ್ದೆಗೇರಿದ ಈ ಪ್ರದೇಶದ ಮೊದಲ ಶಾಸಕರು. ಕನ್ನಡ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಮಧ್ಯಮ ವರ್ಗದ ಆಡುಮಾತು ನಗರದ ಕೂಲಿಕಾರ್ಮಿಕರ ಭಾಷಾಶೈಲಿಗೆ ತುಂಬ ಹತ್ತಿರವಾಗಿದ್ದು ಹಾಸ್ಯ ನಿರೂಪಣೆ ಹೆಚ್ಚಾಗಿ ಬಳಕೆಯಾಗುತ್ತದೆ.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ಕ್ಯಾಸೆಟ್ಟುಗಳಲ್ಲಿ ರಾಜ್ ಕುಮಾರ್ ರ ವೈಭವೀಕರಣ ಮತ್ತು ಅಪಹರಣಕಾರನ ಹನನ ಮಾಡುತ್ತಿರುವುದು ಕಂಡುಬರುತ್ತದೆ. ಕ್ಯಾಸೆಟ್ಟುಗಳಿಂದ ಮೈಪಡೆದ ರಾಜ್ ಕುಮಾರ್ ರ ಚಿತ್ರ ಕನ್ನಡಿಗರ (ಅಭಿಮಾನಿ-ವಾಚ್ಯಾರ್ಥದಲ್ಲಿ ಮತ್ತೊಬ್ಬರ ಬಗೆಗೆ ಗೌರವಾದರ ಹೊಂದಿರುವವನು) ಚಿತ್ರವನ್ನು ರೂಪಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ರಾಜ್ ಕುಮಾರ್ ಅವರನ್ನು ಘೋಷ ಉದ್ಘೋಷದ ಶೈಲಿಯಲ್ಲಿ ಹೊಗಳಲಾಗುತ್ತದೆ. ಒಂದಾದ ಮೇಲೊಂದು ಅವರ ಬಿರುದುಗಳನ್ನು ಕನ್ನಡ ಕಂಠೀರವ, ಕನ್ನಡ ಕುಲತಿಲಕ, ಕೆಂಟುಕಿ ಕರ್ನಲ್ (ಅವರಿಗೆ ದೊರೆತ ಅಮೆರಿಗನ್ನಡ ಪ್ರಶಸ್ತಿಗೆ ಸಂಬಂಧಿಸಿದೆ), ದಾದಾ ಸಾಹೇಬ್ ಫಾಲ್ಕೆ ವಿಜೇತ, ಬಡವರ ಬಂಧು, ಪದ್ಮಭೂಷಣ, ಕನ್ನಡಿಗರ ದೇವರು, ಬಹದ್ದೂರ್ ಗಂಡು ಎಂದು ಉಲ್ಲೇಖಿಸಲಾಗುತ್ತದೆ. ಒಬ್ಬರು ಘೋಷಣೆ ಹಾಕಿದರೆ ಇಡೀ ಸಮೂಹ ಸರಳವಾಗಿ 'ರಾಜಣ್ಣ' ಅಥವಾ 'ಡಾ.ರಾಜ್ ಅವರಿಗೆ ಜಯವಾಗಲಿ' ಎಂದು ಜಪಿಸುವ ರೀತಿಯಲ್ಲಿ ಪ್ರತಿಘೋಷಣೆ ಕೂಗುತ್ತದೆ. ಅಂಥ ಉನ್ನತ ಕನ್ನಡಿಗನ ಅಪಹರಣ ಕುರಿತು ಉಗ್ರ ಪ್ರತಿಭಟನೆ (ವೀರಪ್ಪನ್ ಬೇಡಿಕೆಗಳನ್ನೆಲ್ಲ ಟೇಪುಗಳಲ್ಲಿ ನಮೂದಿಸಿದ್ದರೂ) ಸಾಮಾನ್ಯವಾಗಿ  ಎರಡು ವಿವಾದಗಳಲ್ಲಿ ಕೇಂದ್ರಿಕೃತವಾಗಿರುತ್ತದೆ.  ಒಂದು-ಕಾವೇರಿ ನೀರು, ಎರಡು-ಭಾಷೆಯ ಪ್ರಶ್ನೆ. ಎಐಡಿಎಂಕೆ ಪದಾಧಿಕಾರಿಗಳು ಪ್ರಾಯೋಜಿಸಿದ ಕ್ಯಾಸೆಟ್ಟು ಹಾಗೂ ಹಿಂದಿ ಮತ್ತು ಉರ್ದು ಕ್ಯಾಸೆಟ್ಟುಗಳು ಭಾಷಾ ವಿವಾದವನ್ನು ಹೆಸರಿಸುವುದೆ ಇಲ್ಲ. ಇವರ ಆತಂಕ, ಶಾಂತಿಯುತ ಸಹಜೀವನ ಮಾಡುವುದನ್ನು ಕುರಿತಾಗಿದೆ: ಹಮಾರಾ ಸ್ಟೇಟ್ ಅಚ್ಛಾ ರೆಹನಾ''(ನಮ್ಮ ರಾಜ್ಯ ಚೆನ್ನಾಗಿರಬೇಕು) ಎಂದು ಬಶೀರ್ 'ಆಜ್ ಕಾ ವೀರಪ್ಪನ್' ಕ್ಯಾಸೆಟ್ಟಿನಲ್ಲಿ ಹೇಳಿದ್ದಾನೆ. ಇದನ್ನು ಕೋಲಾರದ ಕಹತೂನಬ್ಬ ನಾಟಕ ಕಂಪನಿ ತೆಲುಗು ಮತ್ತು ಕನ್ನಡ ಭಾಗಗಳನ್ನು ಹೊರತುಪಡಿಸಿ (ಕನ್ನಡ ಹಾಸ್ಯ ನಟ ಧೀರೇಂದ್ರ ಗೋಪಾಲ್, ತೆಲುಗು ಹಾಸ್ಯ ನಟ ನೂತನ್ ಪ್ರಸಾದ್ ಮತ್ತು ಎನ್.ಟಿ.ರಾಮರಾವ್ ಅವರ ಅನುಕರಣೆ ಮೂಲಕ) ಸಂಪೂರ್ಣವಾಗಿ ದಖನಿ ಉರ್ದುವಿನಲ್ಲಿ ಪ್ರಸ್ತುತ ಪಡಿಸಿದೆ. ಅದರ ಕೇಂದ್ರಬಿಂದು ನದಿನೀರಿನ ಪ್ರಶ್ನೆಯಾಗಿದ್ದು, ವೀರಪ್ಪನ್ ಅದರ ಮೇಲೆ ನ್ಯಾಯಯುತವಲ್ಲದ ಅಧಿಕಾರ ಚಲಾಯಿಸುವುದಾಗಿದೆ.ಜಂಗಲ್ ಮೆ, ಉಸೆ ಕೈಕು ಕಾವೇರಿ ಕ ಪಾನಿ ಕ ಜರೂರತ್ ರೆ?'' (ಅಡವಿಯಲ್ಲಿರೋ ಅವನಿಗೆ ಕಾವೇರಿ ನೀರಿನ ಅಗತ್ಯವೇನು?). ಗೌಡ ಮತ್ತು ಅವನ ಕಾರಿನ ಕುರಿತಾದ ಜನಪ್ರಿಯ ದಂತಕತೆಯನ್ನು ಒಂದಕ್ಕಿಂತ ಹೆಚ್ಚು ಕ್ಯಾಸೆಟ್ಟುಗಳಲ್ಲಿ ಹೇಳಲಾಗಿದೆ4 . ಗೌಡನೊಬ್ಬ ಒಮ್ಮೆ ತಮಿಳುನಾಡಿನಲ್ಲಿ ಕಾರು ನಡೆಸಿಕೊಂಡು ಹೋಗುತ್ತಿದ್ದ. ದಾರಿ ಮಧ್ಯದಲ್ಲಿ ಅವನ ಕಾರು ಅಪಘಾತಕ್ಕೆ ಈಡಾಯಿತು. ಕಾರಿನ ಹಿಂದಿನ ಚಕ್ರ ಕೆಸರಿನಲ್ಲಿ ಹೂತುಹೋಯಿತು. ಅವನಿಗೆ ಏನು ಮಾಡಬೇಕೆಂದು ತೋಚದಿದ್ದಾಗ ಅವನ ಮುಂದೆ ಹಾದು ಹೋಗುತ್ತಿದ್ದ ಐದು ಜನ ಅವನನ್ನು ಕನ್ನಡದಲ್ಲಿ ಮಾತನಾಡಿಸಿ ಸಹಾಯ ಮಾಡಬಹುದೆ ಎಂದು ಕೇಳಿದರು. ಗೌಡ ಅಚ್ಚರಿಗೊಂಡು ನಿಮಗೆ ಕನ್ನಡ ಹೇಗೆ ಗೊತ್ತು ಎಂದು ಕೇಳಿದ. ನಾವು ಮಂಡ್ಯದಲ್ಲಿ ಕೂಲಿಕಾರರಾಗಿದ್ದೀವಿ ಎಂದರು. ನಂತರ ಅವರು ಕಾರನ್ನು ಕೆಸರಿನಿಂದ ಹೊರಗೆಳೆದು ನಿಲ್ಲಿಸಿದರು. ಗೌಡ ಕೃತಜ್ಞತೆಯಿಂದ ನೋಟಿನ ಕಂತೆ ಹೊರತೆಗೆದು ಅವರಿಗೆ ಒಂದಲ್ಲ, ಎರಡಲ್ಲ, ಮೂರು ಐದುನೂರು ರೂಪಾಯಿಯ ನೋಟು ಕೊಟ್ಟ. ಅವರು ಪ್ರತಿಭಟಿಸಿ ನಾವು ಸಹಾಯ ಮಾಡಲು ಮಾತ್ರ ಆಸಕ್ತರು, ಅದಕ್ಕೆ ಹಣ ಪಡೆಯಲು ಬಯಸುವುದಿಲ್ಲವೆಂದು ಹೇಳಿ ಹಣ ಪಡೆಯಲು ನಿರಾಕರಿಸಿದರು. ಗೌಡನ ಒತ್ತಾಯಕ್ಕೆ ಮಣಿದು ಅವರು ಕೊನೆಗೂ ಹಣ ಪಡೆದರು. ಅವನು ಹೊರಡುತ್ತ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದರಿಂದ ನಿಮ್ಮ ಊರಿಗೆ ಹೆಚ್ಚು ನೀರು ಬಂದಿರಬೇಕಲ್ಲ? ಎಂದು ಕೇಳಿದ. ಅವರು, ಹೌದು ನಮಗೆ ಹೆಚ್ಚು ನೀರು ಬಂತು ಎಂದು ಹೇಳಿದರು. ಹಾಗಾದರೆ ನೀವು ಒಳ್ಳೆಯ ಬೆಳೆ ಬೆಳೆದಿರಬೇಕು ಎಂದು ಗೌಡ ಕೇಳಿದ. ಓ... ಇಲ್ಲ ನಾವು ಏನನ್ನೂ ಬೆಳೆಯಲಿಲ್ಲವೆಂದು ತಮಿಳು ರೈತರು ಹೇಳಿದರು. ನಾವಿಲ್ಲಿ ಹಳ್ಳ ತೋಡಿದ್ದೀವಿ. ರಸ್ತೆ ಪಕ್ಕ ನಿಂತು ಕಾಯುತ್ತೀವಿ. ಪ್ರತಿದಿನ ಐದಾರು ಕಾರುಗಳು ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನಾವು ಡ್ರೈವರ್ ಗಳಿಗೆ ಸಹಾಯ ಮಾಡ್ತೀವಿ. ಈ ಮೂಲಕ ಚೆನ್ನಾಗಿ ಹಣ ಗಳಿಸ್ತೀವಿ. ಈ ಕತೆ ಕೇಳಿದ ಮೇಲೆ ಗೌಡ 'ತಮಿಳರು ಎಷ್ಟೊಂದು ಜಾಣರು' ಎಂದು ತೀವ್ರ ವಿಷಾದದಿಂದ ಹೇಳುತ್ತಾನೆ. ಇಲ್ಲಿ ವೀರಪ್ಪನ್ ನ ನಿಜವಾದ ಬಲಿಪಶುವಾಗಿ ಮಂಡ್ಯದ ಗೌಡ ಚಿತ್ರಿತವಾಗಿರುವುದನ್ನು ಕಾಣಬಹುದು. ಕತೆಯಲ್ಲಿ ಚಿತ್ರಿತವಾಗಿರುವ ಹಾಗೆ ಕಾವೇರಿ ನೀರು ತಮಿಳುನಾಡಿಗೆ ಹೋಗುತ್ತಿರುವುದರಿಂದ ಮಂಡ್ಯಗೌಡ ವಂಚಿತನಾಗಿದ್ದಾನೆ. ``ಕಾಡುಗಳ್ಳ ಕದ್ದ ಮುತ್ತು'' ಕ್ಯಾಸೆಟ್ನ ಪಾತ್ರವೊಂದು ಹೀಗೆ ಹೇಳುತ್ತದೆ-'ಅವರಿಗೆ' ಮೂರು ಬೆಳೆ. 'ನಮಗೆ' ಬರೀ ಎರಡು ಬೆಳೆ. ಮತ್ತೊಂದು ಕ್ಯಾಸೆಟ್ಟಿನಲ್ಲಿ-ಮಕ್ಕಳ ಅಂಡು ತೊಳೆಯಲು ಇಲ್ಲಿ ನೀರಿಲ್ಲ. ಇವನಿಗೆ ಹೆಚ್ಚು ಟಿಎಂಸಿ ನೀರು ಬಿಡಬೇಕು'', (ನರಹಂತಕನ ಬಲೆಯಲ್ಲಿ ಕರುನಾಡಿನ ಹೃದಯ) ಎಂದು ಹೇಳಿದೆ. ಇದರ ಉಪಶೀರ್ಷಿಕೆ 'ಅಭಿಮಾನಿಗಳ ಹೃದಯದಾಳದಿಂದ' ಎಂದಿದೆ. ಈ ಕ್ಯಾಸೆಟ್ಟಿನ ಪರಿಕಲ್ಪನೆ ಮತ್ತು ಸಂಭಾಷಣೆ, ರಚನೆ ತಮಿಳಿಗ ಬೆಂಗಳೂರು ಪಳನಿ ಅವರದ್ದು. ಇದನ್ನು ಕೆ.ದೇವರಾಜ್ ಗೋಕಾಕ್ ಅವರು ಉತ್ತರ ಕರ್ನಾಟಕದ ಶೈಲಿಯಲ್ಲಿ ಅನುವಾದಿಸಿದ್ದಾರೆ.

ತಮಿಳರು ಮತ್ತು ನಾವು
ಯಾರು ಕನ್ನಡಿಗರು ಎಂಬ ಪ್ರಶ್ನೆಯನ್ನು ಯಾರು ಕನ್ನಡಿಗರಲ್ಲ ಎಂಬ ಅರ್ಥದಲ್ಲಿ ಕೇಳಲಾಗುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಆಗಸ್ಟ್ 25, 2000 ಸಂಚಿಕೆಯ ಸಂಪಾದಕೀಯ ತಮಿಳರು ತಮ್ಮ ಭಾಷೆಯ ಬಗ್ಗೆ ದುರಭಿಮಾನ ಹೊಂದಿರುವುದನ್ನು ಸೂಚಿಸುತ್ತದೆ. ಈ ದುರಭಿಮಾನದಿಂದ ಉಂಟಾದ ಅತಿರೇಕವನ್ನು 'ನಮ್ಮ' ನಿರಭಿಮಾನದಿಂದ ಹುಟ್ಟಿದ ಕಡು ದುಃಖದೊಂದಿಗೆ ಹೋಲಿಸಿ ಅದರ ವೈರುಧ್ಯವನ್ನು ಕಾಣಿಸಲಾಗಿದೆ. ತಮಿಳರು ರಾಷ್ಟ್ರ ವಿರೋಧಿಗಳು (ಎಲ್ ಟಿಟಿಇ ಮತ್ತು ಐಎಸ್ಐಗಳೊಂದಿಗಿನ ಸಂಪರ್ಕ ಎಲ್ಲರಿಗೂ ತಿಳಿದ ವಿಷಯ) ಮತ್ತು ಆತ್ಮಾಹುತಿ ಚಟುವಟಿಕೆಯಲ್ಲಿ ಪ್ರವೃತ್ತರು. ನಾವು ಅಂಥವರಲ್ಲ, ನಾವು 'ಮರ್ಯಾದಸ್ಥ' ಜನ, ಎಂದು ಈ ಸಂಪಾದಕೀಯ ಹೇಳುತ್ತದೆ.
ವೀರಪ್ಪನ್ ನನ್ನು, ಅವನ ಜೀವನದ ಈ ಹಂತದಲ್ಲಿ, ಒಬ್ಬ ಕಳ್ಳ, ದರೋಡೆಕೋರ ಎಂದಷ್ಟೇ ಅಲ್ಲದೆ ತಮಿಳಿಗ ಎಂದೂ ಗುರುತಿಸಲಾಗುತ್ತದೆ. ಈ ಬಗೆಯ ಮರುಗುರುತಿಸುವಿಕೆ ವೀರಪ್ಪನ್ ನ ಸಹಚರರಿಗೆ ಸಂಬಂಧಿಸಿದುದಾಗಿದೆ. ಕೆಲವರು ಇದನ್ನು ಹೊಸ ಬಗೆಯ ಬೇಡಿಕೆ ಎಂದು ಗ್ರ್ರಹಿಸುತ್ತಾರೆ. ತಮಿಳುನಾಡಿನಲ್ಲಿ ಇದು ತನ್ನದೆ ಆದ ಪರಿಣಾಮಗಳನ್ನು ಸ್ಪಷ್ಟವಾಗಿಯೆ ಮೂಡಿಸಲಿದೆ. ನಾವಿಲ್ಲಿ ಕನ್ನಡ ಗುರುತನ್ನು ಕುರಿತ ಚರ್ಚೆ ಇದರ ಪರಿಣಾಮವನ್ನು ಗಮನಿಸುವುದರ ಬಗ್ಗೆ ಆಸಕ್ತರಾಗಿದ್ದೇವೆ. ಹಾಯ್ ಬೆಂಗಳೂರು ಪತ್ರಿಕೆಯ ಆಗಸ್ಟ್ 25ರ ಸಂಚಿಕೆಯ ಸಂಪಾದಕೀಯ ``ಕನ್ನಡಿಗರ ಆತ್ಮಾಭಿಮಾನ ಕೆದಕಲು ಪರಭಾಷೆಯನ್ನಾಡುವ ಜನ ಹಿಂದೆಂದು ಈ ರೀತಿ ಕನ್ನಡಿಗರ ಮನದಾಳಕ್ಕೆ ಕೈ ಹಾಕಿರಲಿಲ್ಲ''ವೆಂದು ಹೇಳುತ್ತದೆ. ಒಂದು ವಾರದ ನಂತರ ಅಂದರೆ, ಸೆಪ್ಟಂಬರ್ 1, 2001ರಂದು ಹಾಯ್ ಬೆಂಗಳೂರು ``ಇಷ್ಟೆಲ್ಲ ನಡೆದ ಮೇಲೂ ನಾವು ಅಸಹಾಯಕರಾಗಿ ಸಹನೆಶೀಲತೆಯನ್ನು ಉಳಿಸಿಕೊಳ್ಳಬೇಕೆ?'' ಎಂದು ವಾಚ್ಯವಾಗಿಯೆ ಕೇಳಿತು. ಈ ಸಂಪಾದಕೀಯ ತಮಿಳು ಉಗ್ರರ ಎದುರು ಕನ್ನಡಿಗರು ಪೂರ್ವಸಿದ್ಧರಾಗಿರದ ಬಗ್ಗೆ ಮಾತನಾಡುತ್ತದೆ. ವೀರಪ್ಪನ್, ಮಾರನ್ ಮತ್ತು ಕರುಣಾನಿಧಿ-      ಎಲ್ ಟಿಟಿಇ, ಹೆರಾಯಿನ್ ಮತ್ತು ಶಸ್ತ್ರಾಸ್ತ್ರ ಮಾರಾಟದ ನಡುವಿನ ಸಂಬಂಧವನ್ನು ಸೂಚಿಸುತ್ತದೆ. 'ಅವರ' ಮೆಶಿನ್ ಗನ್ನು ಮತ್ತು ನೆಲಬಾಂಬುಗಳೊಂದಿಗೆ 'ನಮ್ಮ' ಪೂಜೆ, ಭಜನೆ, ಉರುಳುಸೇವೆಗಳಿಗಿರುವ ವೈರುಧ್ಯವನ್ನು ಕಾಣಿಸುತ್ತದೆ. ಕನ್ನಡಿಗರು ಏಕೆ ನಿಧಾನವಾಗಿ ಅಸಹಾಯ ಸ್ಥಿತಿಗೆ ಮರುಳುತಿದ್ದಾರೆ ಎಂದು ಕೇಳಲಾಗಿದೆ. ನಮ್ಮ ನಲ್ಲಿಯ ನೀರು ಕೂಡ ಇಷ್ಟರಲ್ಲೆ ಅವರ ಗನ್ ಬ್ಯಾರೆಲ್ ಗಳಿಂದ ನಿಯತ್ರಿತವಾಗುತ್ತದೆ ಎಂದು ಹಾಯ್ ಬೆಂಗಳೂರು ಎಚ್ಚರಿಸುತ್ತದೆ.
ಸಾರ್ವಜನಿಕ ವಲಯದಲ್ಲಿ ಪೌರುಷತ್ವ ಮತ್ತೆ ಮತ್ತೆ ಕನ್ನಡಿಗರ ಸಹನೆ ಕುರಿತ ಕಲ್ಪನೆಯಾಗಿ ಮರುಕೊಳಿಸುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಪ್ರಕಾರ ಕರ್ನಾಟಕ ಸರಕಾರ 200 ತಮಿಳು ಶಾಲೆಗಳನ್ನು ನಡೆಸುತ್ತಿದೆ. ಬೆಂಗಳೂರು ಒಂದರಲ್ಲೆ 12 ಜನ ತಮಿಳು ಕಾರ್ಪೋರೇಟರುಗಳಿದ್ದಾರೆ. ಹಲವಾರು ತಮಿಳು ಐಎಎಸ್ ಅಧಿಕಾರಿಗಳು, ಪೋಲಿಸ್ ಪಡೆ ಮತು ಶಾಸಕರು ಇಲ್ಲಿದ್ದಾರೆ. ಅವರನ್ನೆಲ್ಲ ನಾವು ಪ್ರೀತಿಸಿದ್ದೇವೆ. ಅವರನ್ನು ನಾವು ಸಹಿಸಿಕೊಂಡಿದ್ದೇವೆ. ಆದರೆ ತಮಿಳುನಾಡಿನಲ್ಲಾದ ಬದಲಾವಣೆಯ ಹಿನ್ನೆಲೆಯಲ್ಲಿ ನಾವು ನಮ್ಮ ಅಸಹಾಯಕ ಸಹನೆಯನ್ನು ಮುಂದುವರಿಸಬೇಕೆ? ಈ ಪ್ರಶ್ನೆಯನ್ನು ನಾವು ನಮಗೆ ಕೇಳಿಕೊಳ್ಳಬೇಕು'' (ಸೆಪ್ಟಂಬರ್ 1, 2000). ಕನ್ನಡಿಗರು ಮತ್ತು ತಮಿಳಗರ ನಡುವಿನ ವೈರುಧ್ಯದ ಬಗ್ಗೆ ಕ್ಯಾಸೆಟ್ಟು ಮತ್ತು ಪತ್ರಿಕೆಗಳಲ್ಲಿ ನೀಡಲಾಗಿರುವ ಸಾಮಾನ್ಯ ಉದಾಹರಣೆ ಹೀಗಿದೆ: 'ಬೆಂಗಳೂರಿನಲ್ಲಿ ತಮಿಳರ ಕೊಳಚೆ ಪ್ರದೇಶಗಳು ಇರುವ ಹಾಗೆ ಚೆನ್ನೈನಲ್ಲಿ ಕನ್ನಡಿಗರ ಕೊಳಚೆ ಪ್ರದೇಶಗಳಿವೆಯೆ?' ತಮಿಳುನಾಡಿನಲ್ಲಿ ಕನ್ನಡಿಗರೆ ಇಲ್ಲವೆಂಬುದು ಇಲ್ಲಿಯ ಅಂಶವಲ್ಲ. ಆದರೆ ಅವರು ಸ್ಥಳೀಯರೊಂದಿಗೆ ಬೆರತುಹೋಗಿದ್ದಾರೆಯೆ ಹೊರತು ಕರ್ನಾಟಕದ ತಮಿಳರ ಹಾಗೆ ಅವಿಧೇಯರಾಗಿ ಉಳಿದಿಲ್ಲ. ಈ ಅಂಶ  ಒಂದು ದೃಷ್ಟಿಯಿಂದ ಕನ್ನಡಿಗರ ಒಳ್ಳೆಯ ಸ್ವಭಾವವನ್ನು ನಿರೂಪಿಸುತ್ತಿರಬಹುದು, ಮತ್ತೊಂದು ದೃಷ್ಟಿಯಿಂದ ತಮಿಳರ ಸ್ಥಳೀಯ ಜನಸಂಖ್ಯೆಯ ಒಂದು ಭಾಗವೆಂದು ಒತ್ತಿ ಹೇಳದೆ ಪ್ರತ್ಯೇಕ 'ತಮಿಳರ ಕೊಳಚೆ ಪ್ರದೇಶಗಳು' ತಲೆ ಎತ್ತುವಲ್ಲಿ ಕನ್ನಡಿಗರ ಸಹನೆ ಒಪ್ಪಿಗೆ ನೀಡಿದೆ ಎಂಬಂಶವನ್ನು ಅದು ಸ್ಥಳೀಯರಲ್ಲಿ ಮೂಡಿಸುತ್ತದೆ.
ಹೀಗಿದ್ದರೂ ತಮಿಳರು ತಮ್ಮ ಸುತ್ತಲ ಕನ್ನಡವನ್ನು ಮರೆತು ಬಿಟ್ಟಿಲ್ಲ. ಕತ್ತೇಗೇನು ಗೊತ್ತು ಕಸ್ತೂರಿ ಕಂಪು ಎಂಬ ಕ್ಯಾಸೆಟ್ಟಿನಲ್ಲಿ ಹೇಳಿರುವ ಹಾಗೆ ಸಜ್ಜನ ತಮಿಳರೂ ಇದ್ದಾರೆ. ಈ ಕ್ಯಾಸೆಟ್ಟಿನಲ್ಲಿ ರಾಜ್ ಕುಮಾರ್ ಕನ್ನಡಿಗರ ಅಣ್ಣನಾಗಿರುವ ಹಾಗೆಯೆ ತಮಿಳರಿಗೂ ಅಣ್ಣನಾಗಿದ್ದಾರೆ. ತಮಿಳರೂ ರಾಜ್ ಕುಮಾರ್ ನನ್ನು ಆರಾಧಿಸುತ್ತಾರೆ. ಕನ್ನಡ ವಾಕ್ಯದಲ್ಲಿ ತಮಿಳು ಪದಗಳನ್ನು ಬಳಸುವ ಶೈಲಿಯಲ್ಲಿ ಮಾತನಾಡುತ್ತ, ರಾಜಣ್ಣ ನಿಮಕ್ಕೂ ಅಣ್ಣ, ನಮಕ್ಕೂ ಅಣ್ಣ. ಅವರ ಮೇಲೆ ನಮಗೆ ರುಂಬ ಭಕ್ತಿ ಇರ್ಕದು'' ಎಂದು ಒಳ್ಳೆಯ ತಮಿಳನ್ನು ಹೇಳುತ್ತಾನೆ. ಮತೊಬ್ಬ ಸಜ್ಜನ ತಮಿಳಿಗ ಅಂದರೆ ಬೆಂಗಳೂರು ರೌಡಿ, ಬೆಕ್ಕಿನ ಕಣ್ಣು ರಾಜೇಂದ್ರ (ಆಗಸ್ಟ್ 25, 2000ರ ಅಗ್ನಿ ಸಂಚಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ). ಅವನು ಭಾಷೆ ಆಧಾರಿತ ಕೃತ್ಯಗಳು ಮತು ಹಿಂಸೆಯನ್ನು ಖಂಡಿಸುತ್ತಾನೆ ಮತು ಹೀಗೆ ಕೇಳಿಕೊಳ್ಳುತ್ತಾನೆ : ``ಆ ಪಾತಕಿಗಳೊಂದಿಗೆ ನಮ್ಮನ್ನು ಹೋಲಿಸಬೇಡಿ''. ಇದೇ ಸಂಚಿಕೆಯ ಸಂಪಾದಕೀಯದಲ್ಲಿ ಅಗ್ನಿ ಪತ್ರಿಕೆ ಮರಗೆಲಸ ಮಾಡುವ ಷಣ್ಮಗುಂ ಮತ್ತು ಕಂತ್ರಾಟುದಾರ ಅಣ್ಣಾಮಲೈ ಕುರಿತು ಚರ್ಚಿಸಿದೆ: ``ಅವರ ಹಿರಿಯರು ತಮಿಳುನಾಡಿನಿಂದ ಬಂದಿರಬಹುದು. ಆದರೆ ಅವರಿಗೆ ಇಲ್ಲಿರಲು ಹಕ್ಕುಗಳಿವೆ. ಅವರನ್ನು ಕನ್ನಡಿಗರನ್ನಾಗಿ ಮಾಡುವ ಪರಿಸ್ಥಿತಿಯನ್ನು ನಾವು ನಿರ್ಮಿಸಬೇಕಿದೆ. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯುವ, ಮಾತಾಡುವ ಸ್ಥಿತಿಯನ್ನು ನಾವು ಸೃಷ್ಟಿಸಬೇಕು''. ಪ್ರಭುತ್ವ ಮತು ನಾಗರಿಕ ಸಮಾಜದ ತಪ್ಪಿನಿಂದಾಗಿ ಕನ್ನಡ ಬಲಹೀನವಾಗಿದೆ ಎಂಬ ಬಹುಜನಪ್ರಿಯ ಗ್ರಹಿಕೆ ಇಲ್ಲಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೆಯ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ವೀರಪ್ಪನ್ ನ ಬೇಡಿಕೆಯನ್ನು ಕುರಿತು ಕ್ಯಾಸೆಟ್ಟೊಂದರಲ್ಲಿ ಹೀಗೆ ಉದ್ಗಾರ ತೆಗೆಯಲಾಗಿದೆ: ``ನಾವು ಕನ್ನಡವನ್ನು ಮೊದಲ ಭಾಷೆಯನ್ನಾಗಿ ಮಾಡಲು ಹೋರಾಡುತಿದ್ದೇವೆ. ಅವನು ತಮಿಳನ್ನು ಮತ್ತೊಂದು ಅಧಿಕೃತ ಭಾಷೆಯನ್ನಾಗಿ ಮಾಡಬಯಸಿದ್ದಾನೆ!''5
ಬಿಕ್ಕಟ್ಟು ಬೆಳೆದಂತೆಲ್ಲ ಒಂದು ನಿರ್ದಿಷ್ಟ ಕನ್ನಡ ಅಸಹಾಯಕತೆ ಕಾಣಿಸಿಕೊಳ್ಳುತ್ತದೆ. ಇದು ಪ್ರಭುತ್ವ ಆ ಸಂದರ್ಭಕ್ಕೆ  ಪ್ರತಿಕ್ರಿಯಿಸಿದ ರೀತಿಯ ನಿರ್ವಚನಾ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಹಾಯ್ ಬೆಂಗಳೂರು ಪತ್ರಿಕೆಯ ಸೆಪ್ಟಂಬರ್ 15, 2000ದ ಸಂಚಿಕೆಯ ಸಂಪಾದಕೀಯ ಖಿನ್ನತೆಯಿಂದ ಕೂಡಿದೆ:ತಮಿಳರು ಕನ್ನಡಿಗರನ್ನು ತಮಾಷೆಯ ವಸ್ತುವಾಗಿ ನೋಡುತ್ತಾರೆ. ರಾಜ್ ಕುಮಾರ್ ಕಾಡಿನಲ್ಲಿ ನಲವತ್ತು ದಿನ ಅಸ್ವಸ್ಥರಾಗಿ ಕಳೆದ ನೋವನ್ನು ಒಂದು ದಿನ ಮರೆತುಬಿಡಬಹುದು: ಆದರೆ ಅವರು ತಮಿಳರಿಂದ ಅನುಭವಿಸಿದ ಅಪಮಾನವನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡಿಗರು ವಿಜಯದ ಕ್ಷಣವನ್ನು ಎದುರು ನೋಡುತ್ತ ಮನೆಯಲ್ಲಿ ಕುಳಿತುಕೊಳ್ಳುವುದು ದಿನನಿತ್ಯದ ದಿನಚರಿಯಾಗಿಬಿಟ್ಟಿದೆ. ನಮಗೆಲ್ಲರಿಗಿಂತ ನೀವು(ಎಸ್.ಎಂ.ಕೃಷ್ಣ) ಹೆಚ್ಚು ಅಪಾಯಕಾರಿಯಾಗಿ ಕುಳಿತಿದ್ದೀರಿ. ಇದು ಘಟಿಸಬಾರದು, ಸ್ವಾಮಿ, ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.''
ಮೊದಲ ಕ್ಯಾಸೆಟ್ಟಾಗಿ ಬಿಡುಗಡೆಯಾದ 'ಮಂಗನ ಕೈಯಲ್ಲಿ ಮಾಣಿಕ್ಯ', ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕೀಯದ ಕೆಲವು ಅಂಶಗಳನ್ನು ಪುನರುಚ್ಛರಿಸುತ್ತದೆ. ಕನ್ನಡಿಗರ ಅಭಿಮಾನ ಶೂನ್ಯತೆ ಮತು ತಮಿಳರ ದುರಭಿಮಾನ-ಇದೇ ನುಡಿಗಟ್ಟುಗಳಲ್ಲಿ ಅವರ ನಡುವಿನ ವೈರುಧ್ಯ ಕಾಣಿಸಲಾಗಿದೆ. ಕರ್ನಾಟಕದಲ್ಲಿ ತಮಿಳರ, ಮರಾಠಿಗರ ಹಲವು ಕಾಲನಿಗಳಿವೆ. 'ಅಲ್ಲಿ ಕನ್ನಡಿಗರೂ ವಾಸ ಮಾಡುತ್ತಿದ್ದು ಅವರ ಪ್ರತ್ಯೇಕ ಪ್ರದೇಶಗಳು ಕಾಣುವುದಿಲ್ಲ. ಕರ್ನಾಟಕದಲ್ಲಿ ಕನ್ನಡವನ್ನು ಹುಡಕಬೇಕಾಗಿಬಂದಿದೆ-ಇನ್ನೇನು ನಾವೆಲ್ಲ ನಮ್ಮ ನಾಡನ್ನು ಬಿಟ್ಟುಹೋಗಬಹುದಾದ ಪರಿಸ್ಥಿತಿ ಬರಬಹುದು. ಕರ್ನಾಟಕ ಸಹನೆ, ಶಾಂತಿ ಮತ್ತು ಸಹಜೀವನಕ್ಕೆ ಮತೊಂದು ಹೆಸರು. ಅಣ್ಣಾವ್ರ ಅಪಹರಣವಾದಾಗ ಏನಾಯಿತು? ಕರ್ನಾಟಕ ಹೊತ್ತಿಕೊಂಡು ಉರಿಯಬೇಕಾಗಿತ್ತು. ಆಗ ನಾವು ದಂಗೆ ಏಳುವ ಬದಲು ಯಾಗಯಜ್ಞ ಮಾಡಿದೆವು. ಹಿಂಸೆಯ ಬದಲು ಪ್ರಾರ್ಥನೆ ಮಾಡಿದೆವು. ಶಪಿಸುವ ಬದಲು ಮಂತ್ರ ಜಪಿಸಿದೆವು. ನಾವು ಅವರ ವಿರುದ್ಧ ಕೈ ಎತ್ತುವ ಬದಲು ಅವರೊಂದಿಗೆ ಕೈ ಜೋಡಿಸಿದೆವು. ಉರುಳಿಸುವ ಬದಲು ಉರುಳುಸೇವೆ ಮಾಡಿದೆವು. ಕ್ರಾಂತಿ ತಿಲಕವಿಟ್ಟುಕೊಳ್ಳುವ ಬದಲು ಶಾಂತಿ ಸಿಂಧೂರವಿಟ್ಟುಕೊಂಡೆವು.'' 6
ಕನ್ನಡದ ಪುರುಷತ್ವ
ಅಗ್ನಿ ಪತ್ರಿಕೆ ಸೆಪ್ಟಂಬರ್ 18, 2000ರ ಸಂಚಿಕೆಯ ಸಂಪಾದಕೀಯದಲ್ಲಿ ಜನರು ಕಾಡಿಗೆ ಹೋಗಿ ರಾಜ್ ಕುಮಾರ್ ನನ್ನು ಕಾಪಾಡಬೇಕೆಂದು ಕರೆ ನೀಡಿತು. ಸಾವಿರಾರು ಯುವಕರು ತಮಗೆ ಫೋನ್ ಕರೆ ಮಾಡಿ ಕಾಡಿಗೆ ಹೋಗಲು ಸಿದ್ಧರಿರುವುದರ ಬಗ್ಗೆ ಪ್ರತಿಕ್ರಿಯಿಸುತ್ತ ಸಂಪಾದಕ ಶ್ರೀಧರ್, ಬೆರಳೆಣಿಕೆ ಜನ ಮಾತ್ರ ನೀಡಿದ ಎಚ್ಚರಿಕೆಯನ್ನು ಶಾಂತಿ/ಅಹಿಂಸೆ ಹೇಡಿತನವಾಗದಿರಲಿ'' ಎಂದು ಖಂಡಿಸಿದರು(ಅಗ್ನಿ,ಆಗಸ್ಟ್ 25). ಒಂದು ತಿಂಗಳ ನಂತರವೂ ಭಯ ಬಿಡಿ. ಕುರಿಗಳಾಗದಿರಿ''(ಸೆಪ್ಟಂಬರ್ 22) ಎಂದು ಓದುಗರನ್ನು ಪ್ರೇರೇಪಿಸಿದರು. ಹಾಯ್ ಬೆಂಗಳೂರು ಮತ್ತು ಅಗ್ನಿಯ ಹೇಡಿಗಳಾಗದಿರಿ ಎಂದು ಉದ್ರೇಕಿಸುವ ಮಾತುಗಳನ್ನು ಕನ್ನಡಿಗರು ಮತ್ತು ತಮಿಳರನ್ನು ಪರಸ್ಪರ ವಿರೋಧಿ ರೂಪದಲ್ಲಿ ಚಿತ್ರಿಸುವುದರೊಂದಿಗೆ ಜೋಡಿಸಿ ನೋಡಿದರೆ ಹೊಸ ಕನ್ನಡ ವ್ಯಕ್ತಿತ್ವ ರೂಪುಗೊಳ್ಳುತ್ತಿರುವುದನ್ನು ಕಾಣಬಹುದು. ಅಗ್ನಿ ಪತ್ರಿಕೆಯ ಶ್ರೀಧರ್ ಆಗಸ್ಟ್ 25ರ ಸಂಚಿಕೆಯ ಲೇಖನದಲ್ಲಿ 'ಹುಲಿಯಲ್ಲಿ ಹಿಜಡಾ' ಎಂದು ವಿರೋಧಿ ದೃಷ್ಟಿಕೋನದಿಂದ ವ್ಯಾಖ್ಯಾನ ಮಾಡುವುದನ್ನು ಮುಂದುವರೆಸಿದರು. ಈ ಲೇಖಕರು ನಿಜವಾದ ಗಂಡಸು ಅಂದರೆ ಯಾರು?'' ಎಂದು ಕೇಳಿದರು. ವೀರಪ್ಪನ್ದು ಎರಡು ಬಗೆಯ ಚಿತ್ರಗಳಿವೆ. ಒಂದು-ಮೀಸೆ ಇರುವ ಚಿತ್ರ. ಇನ್ನೊಂದು-ಮೀಸೆಯಿರದ ಚಿತ್ರ. ಇವು ಕಾಡಿನಲ್ಲಿ ಇನ್ನುಳಿದ ಫೋಟೋಗಳೊಂದಿಗೆ ತೆಗೆದ ಚಿತ್ರಗಳು. ವೀರಪ್ಪನ್ ಗೆ ನಿಜವಾದ ಮ್ಯಾನ್ಲಿ ಮೌಲ್ಯ ಮತ್ತು ಗಂಡಸುತನಗಳಿವೆಯೆ? ಮುಕ್ತ ಮನಸ್ಸಿನಿಂದ ಈ ಪ್ರಶ್ನೆಯನ್ನು ಪರಿಶೀಲಿಸೋಣ. ಪಾತಕ ಜಗತ್ತಿನ ಬಗೆಗೆ ನನಗಿರುವ ತಿಳುವಳಿಕೆ ಮತ್ತು ಅನುಭವ ನಿಮಗೆ ಗೊತ್ತಿದೆ. ಮನುಷ್ಯ ಗುಣಗಳನ್ನು ನಿಜವಾಗಿಯೂ ಹೊಂದಿರುವವನು ತಾನು ಮಾಡುವುದನ್ನು ವೈಭವೀಕರಿಸುವುದೆ ಮರೆತುಬಿಡುತ್ತಾನೆ. ಕೇವಲ ಅಶಕ್ತರು ಮತ್ತು ಹೇಡಿಗಳು ಮಾತ್ರ ತಮ್ಮ ಕೃತ್ಯಗಳನ್ನು ಬಡಾಯಿ ಕೊಚ್ಚಿಕೊಳ್ಳುತ್ತಾರೆ (ಶ್ರೀಧರ್, ದಿನವೊಂದಕ್ಕೆ ಐವತ್ತು ಕಿ.ಲೋ.ಮೀಟರ್ ನಡೆಯುವುದು, ಕಾಡನ್ನು ಚೆನ್ನಾಗಿ ತಿಳಿದಿರುವುದು, ಉಳಿದ ವಿಷಯಗಳೊಂದಿಗೆ ಮ್ಯಾನ್ಲಿ ರೂಪಿಸುತ್ತದೆಯೆ ಎಂದು ಕೇಳುತ್ತಾರೆ. ಇಷ್ಟು ದೂರದ ಹಾದಿಯನ್ನು ಯಾವುದೇ ಅಭ್ಯಾಸವಿಲ್ಲದೆ ಪ್ರತಿಯೊಬ್ಬರೂ ನಡೆಯಲು ಸಾಧ್ಯ, ಕಾಡಿನಲ್ಲಿ ವಾಸಿಸುವ ಪ್ರತಿಯೊಂದು ಬುಡಕಟ್ಟಿಗೂ ಇದು ಚೆನ್ನಾಗಿ ಗೊತ್ತು ಎಂದು ಹೇಳುತ್ತಾರೆ. ಹೀಗಿರುವಾಗ ಹೇಗೆ ವಿಶೇಷ ಗುಣವಾಗುತ್ತೆ?). ಹಿಟ್ಲರ್ ಒಬ್ಬ ಹಿಜಡಾನಾಗಿದ್ದ. ಅವನಲ್ಲಿ ಅಲ್ಪಸ್ವಲ್ಪವಾದರೂ ಮ್ಯಾನ್ಲಿನೆಸ್ ಇದ್ದಿದ್ದರೆ ಅವನು ಅಷ್ಟು ಕ್ರೂರಿಯಾಗುತ್ತಿರಲಿಲ್ಲ. ಹಾಗಿದ್ದರೆ ವೀರಪ್ಪನ್ ನನ್ನು ನಾವು ಏನೆಂದು ಕರೆಯಬೇಕು? ಹೆಣ್ಣಿಗನೆ, ಲಿಂಗ ಪರಿವರ್ತನೆ, ಲಿಂಗವಿಲ್ಲದವನೆ? ನಮ್ಮ ಹುಡುಗರು ಏಕದನಿಯಲ್ಲಿ ಹೇಳುತ್ತಾರೆ : ಚಕ್ಕಾ (ಷಂಡ).''7 ಈ ಲೇಖನದಲ್ಲೆಲ್ಲೂ ರಾಜ್ ಕುಮಾರ್ ರವರ ಹೆಸರು ಪ್ರಸ್ತಾಪವಾಗಿಲ್ಲ. ಆದರೂ ವೀರಪ್ಪನ್ನ ಮ್ಯಾನ್ಲಿನೆಸ್ ನ ಚರ್ಚೆಯಲ್ಲಿ ರಾಜ್ ಕುಮಾರ್ ಅವ್ಯಕ್ತವಾಗಿ ಸೂಚಿತ ಕೇಂದ್ರವಾಗಿದ್ದಾರೆ.
ವೀರಪ್ಪನ್ನಲ್ಲಿ ಎದ್ದುಕಾಣುವ ಮುಖ್ಯ ಲಕ್ಷಣವೆಂದರೆ ಅವನ ದೊಡ್ಡಮೀಸೆ. ಅದು ಗಂಡಸುತನದ ಚರ್ಚಿಗೆ ಅನುಕೂಲಕರವಾಗಿ ಒದಗಿದೆ. ವೀರಪ್ಪನ್ನನ್ನು ಕ್ಯಾಸೆಟ್ಟೊಂದರಲ್ಲಿ ಹೀಗೆ ನೇರವಾಗಿ ಸಂಬೋಧಿಸಲಾಗಿದೆ: ನಿನ್ನ ಮೀಸೆಗೆ ಬೆಂಕಿ ಹಾಕ/ ಗಂಡಸಾದರೆ ಎದುರಿಗೆ ಬಾರೋ.../ ಕನ್ನಡದೋರು ಗಂಡುಗಳು/ ನಿನಗೆ ಯಾಕೋ ಗೊತಿಲ್ಲ'' ('ರಾಜಣ್ಣ ನಾಡಿಗೆ ಬಾರಣ್ಣ'ದಿಂದ). ಹಲವು ಕ್ಯಾಸೆಟ್ಟುಗಳಲ್ಲಿ ಖಳನಾಯಕನ ಪ್ರತಿಷ್ಠೆಗೆ ಮಸಿ ಬಳಿಯಲು ಉಪಾಯವೊಂದನ್ನು ಅನುಸರಿಸಲಾಗಿದೆ, ಅದೆಂದರೆ ತೃಣೀಕರಿಸುವುದು.  'ವೀರಯೋಧರು ಕೂಡ ಹೀಗೆ ಆಟವಾಡಿಲ್ಲ. ಇವನು ಆಟವಾಡುವ ಧೈರ್ಯ ಮಾಡಿದ್ದಾನೆ. ಅವನ ಮೀಸೆ ತುಂಬ, ಕಸ, ಕಡ್ಡಿ, ಕೊಳೆ, ಹುಳ, ತಿಗಣೆ ತುಂಬಿವೆ,' (ಕಾಡಗಳ್ಳ ಕದ್ದ ಮುತ್ತು). ಉಸ್ಕಾ ಮುಚ್ಚಾ ಮೆ ಮಟ್ಟಿ ಪಡೊ. ಉಸ್ಕಾ ಮುಚ್ಚಾ ಮೆ ಕೀಡಾ ಪಡೊ'' (ಅವನ ಮೀಸೆಗೆ ಮಣ್ಣು ಹಾಕ, ಅವನ ಮೀಸೆಗೆ ಹುಳ ಬೀಳ) ಎಂದು 'ಆಜ್ ಕಾ ವೀರಪ್ಪನ್'ನಲ್ಲಿ ಬಶೀರ್ ಮತ್ತು ಅವನ ಸ್ನೇಹಿತರು ಹೇಳುತ್ತಾರೆ.
'ಕಾಡಿನಲ್ಲಿ ಕನ್ನಡ ರತ್ನ' ಕ್ಯಾಸೆಟ್ಟಿನಲ್ಲಿ ರಾಜ್ ಕುಮಾರ್ ಮತ್ತು ವೀರಪ್ಪನ್ ನಡುವೆ ಉದ್ದವಾದ ಸಂಭಾಷಣೆ ನಡೆಯುತ್ತದೆ. ಅದು ಮೀಸೆಯ ಲಕ್ಪ್ಷಣಗಳನ್ನು ಕೇಂದ್ರೀಕರಿಸಿದ ಚರ್ಚೆಯಾಗಿದೆ. ಕ್ಯಾಸೆಟ್ಟಿನ ನುಣುಪು ಹೊದಿಕೆ ಮೇಲೆ ಪ್ರಸ್ತುತ ದಿನಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೀಟಾಗಿ ಶೇವ್ ಮಾಡಿದ ಮತ್ತು ನುಣುಪು ತಲೆಯ, ಅಭಿಮಾನಿಗಳನ್ನು  ಅಭಿನಂದಿಸುತ್ತಿರುವ ರಾಜ್ ಕುಮಾರ್ ಚಿತ್ರ ಹಾಗೂ ಗಡ್ಡ-ಮೀಸೆ ಎದ್ದು ಕಾಣುವ ವೀರಪ್ಪನ್ ನ ವ್ಯಂಗ್ಯ ಚಿತ್ರವಿದೆ. ಕಾಡಿನಲ್ಲಿ ರಾಜ್ ಕುಮಾರ್ ಮತ್ತು ವೀರಪ್ಪನ್ ಮಾತಾಡುತ್ತಿದ್ದಾರೆ. ವೀರಪ್ಪನ್ ತನ್ನ ಹಿತ ಕಾಪಾಡಿಕೊಳ್ಳಲು ಶರಣಾಗತನಾಗಬೇಕೆಂದು ರಾಜ್ ಕುಮಾರ್ ಒತ್ತಾಯಿಸುತ್ತಾರೆ. ಆಗ ವೀರಪ್ಪನ್ ಹೇಳುತ್ತಾನೆ : ನಾನು ಶರಣಾದರೆ ನನ್ನ ಮೀಸೆಗೆ ಅವಮಾನ''. ರಾಜ್ ಕುಮಾರ್ ಹೇಳುತಾರೆ: ನಿಮಗೆ ಬಹಳ ಅದ್ಭುತ ಮೀಸೆ ಇದೆ ಅಂತ ತಿಳಿದಿದ್ದೀರಾ?  ನೀವು ನನ್ನ ಅಪ್ಪಾಜಿ ಪುಟ್ಟಸ್ವಾಮಯ್ಯ ಅವರ ಹೆಸರು ಕೇಳಿದ್ದೀರಾ? ನಮ್ಮ ಅಪ್ಪಾಜಿಗೆ ನಿಮ್ಮ ಮೀಸೆಗಿಂತ ದೊಡ್ಡ ಮೀಸೆಯಿತ್ತು. ನಿಮ್ಮಿಬ್ಬರ ನಡುವಿನ ವ್ಯತ್ಯಾಸವೆಂದರೆ  ನಮ್ಮ ಅಪ್ಪಾಜಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಾಗ ಮೀಸೆ ತಿರುವುತ್ತಿದ್ದರು. ನೀವು? ಇನ್ನೊಬ್ಬರಿಗೆ ಹಿಂಸೆಕೊಟ್ಟಾಗ, ಕೊಲೆ ಮಾಡಿದಾಗ ಮೀಸೆ ತಿರುವುತ್ತೀರಿ.  ವೀರಪ್ಪನ್ ನಿಮ್ಮ ಮೀಸೆಗೆ ಒಂದು ಪೈಸೆ ಬೆಲೆನೂ ಇಲ್ಲ. ನಾನು ನಿಮ್ಮ ಮೀಸೆಯನ್ನು ದಿಟ್ಟಿಸಿ ನೋಡಿದಾಗ ನನಗೇನೂ ಭಯವಿಲ್ಲ. ನಿಮ್ಮನ್ನು ನೋಡಿ ನಗು ಬರುತ್ತೆ ಅಷ್ಟೆ.. ಕೇವಲ ಮೀಸೆಯಿಂದ ಯಾರಾದರೂ ಜನರನ್ನು ಭಯಪಡಿಸುವುದಾದರೆ ಎಲ್ಲರೂ ಮೀಸೆ ಬೆಳೆಸುತ್ತಿದ್ದರಷ್ಟೆ.. ಜನರನ್ನು ಹೆದರಿಸುವ ಬದಲು, ಅವರಲ್ಲಿ ಪ್ರೀತಿಯಿಂದ ನಂಬಿಕೆ ಹುಟ್ಟಿಸಬೇಕು''.
ಸಭ್ಯ ಹಾಗೂ ಆತ್ಮೀಯನ ಹಾಗೆ ಕಾಣುವ ರಾಜ್ ಕುಮಾರ್ ಕನ್ನಡತನ ಮತ್ತು ಕನ್ನಡ ಪುರುಷತ್ವದ ಸಾಧ್ಯತೆಗಳನ್ನು ಒಳಗೊಂಡಿದ್ದಾರೆ. ಅವರ ಈ ವ್ಯಕ್ತಿತ್ವವೇ ಸಾಂಪ್ರದಾಯಿಕ ಪುರುಷತ್ವದ ಸಾಧ್ಯತೆಗಳನ್ನು ಸಾಧಿಸಬಹುದಾದ ತಮ್ಮ ಅಭಿಮಾನಿಗಳನ್ನು ಹಿಂಸೆಯಿಂದ ಹಿಂದೆ ಉಳಿಯುವಂತೆ ಮಾಡಿದೆ. ರಾಜ್ ಕುಮಾರ್ ರ ಬಹುಪಾಲು ಐತಿಹಾಸಿಕ, ಪ್ರಣಯ, ಸಿಐಡಿ ಚಿತ್ರಗಳ ಪುರುಷತ್ವದ ಇಮೇಜಿಗಿಂತ ಅವರ ಇಂದಿನ ವಯಸ್ಸಾದ ವ್ಯಕ್ತಿತ್ವ ಸಮಕಾಲೀನ ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿರುವಂತೆ ಕಾಣುತ್ತದೆ. ಅವರು ತಮ್ಮ ಅಭಿಮಾನಿಗಳು ಹಿಂಸಾಕೃತ್ಯದಲ್ಲಿ ತೊಡಗದಿರಲು ಮಾಡಿಕೊಂಡ ಮನವಿಯ ಮುದ್ರಿತ ಟೇಪುಗಳನ್ನು ಅಥವಾ ಅವರ ಕುಟುಂಬದ ಸದಸ್ಯರು ಅಭಿಮಾನಿಗಳು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಎಂದು ಮಾಡಿಕೊಂಡ ವಿನಂತಿಗಳನ್ನು ಕ್ಯಾಸೆಟ್ಟು ಮತು ಪತ್ರಿಕೆಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಕ್ಯಾಸೆಟ್ಟಿನ ಪಾತ್ರಗಳು ಈ ಮನವಿಯನ್ನು ಪುನರುಚ್ಚರಿಸುತ್ತಾ ಕಾಡಿನಲ್ಲಾಗಲೀ ನಾಡಿನಲ್ಲಾಗಲೀ ಹಿಂಸೆಗೆ ಇಳಿಯದಂತೆ ತಮ್ಮನ್ನು ತಡೆದಿರುವುದು ರಾಜ್ ಕುಮಾರ್ ರವರ ಈ ಮಾತುಗಳೇ ಎಂದು ಹೇಳುತ್ತವೆ.
ಇನ್ನೂ ಕೆಲವು ವ್ಶೆರುಧ್ಯಗಳು ಪುರುಷತ್ವದ ಪ್ರಶ್ನೆಯನ್ನು ಮತ್ತಷ್ಟ್ಟು ವಿಸ್ತರಿಸುತ್ತದೆ. ವೀರಪ್ಪನ್ ಮತ್ತು ರಾಜ್ ಕುಮಾರ್ ಗೆ ಸಂಬಂಧಿಸಿದ ಉಲ್ಲೇಖಗಳು ಕ್ರಮವಾಗಿ ಕಾಡು ಮತು ನಾಡನ್ನು ಪ್ರತಿನಿಧಿಸುತ್ತವೆ. ಪಾಶವೀ ಶಕ್ತಿಯನ್ನು ಸಾತ್ವಿಕ ಶಕ್ತಿಯೊಂದಿಗೆ, ಸ್ಫೋಟಕ ಆಕ್ರಮಣಕಾರಿತನವನ್ನು ನಿರ್ಲಿಪ್ತತೆಯೊಂದಿಗೆ, ರಕ್ತ ಪಿಪಾಸುತನವನ್ನು ಸಭ್ಯತೆಯೊಂದಿಗೆ ಹೋಲಿಸಿ ವೈರುಧ್ಯವನ್ನು ತೋರಿಸಲಾಗಿದೆ. 'ತುಂಬಿದ ಮಡಕೆಯು ತುಳುಕದೆಂಬ ಮಾತಿದೆ, ನಿನ್ನ ಬಾಳು ಮಟ್ಟಿಗೆ ನ್ಶೆಜಚಿತ್ರವಾಗಿದೆ' ಎಂಬ ಕ್ಯಾಸೆಟ್ಟಿನ ಹಾಡು ವೀರಪ್ಪನ್ನ ಹಿಂಸಾ ಜೀವನಕ್ಕೆ ಸಮರ್ಥ ಪ್ರತಿಕ್ರಿಯೆಯಾದ ರಾಜ್ಕುಮಾರ್ರ ಶಾಂತಿಮಂತ್ರವನ್ನು ಮೆಚ್ಚುಗೆಯಿಂದ ಉಲ್ಲೇಖಿಸುತ್ತದೆ8. ತಮಿಳು ಭಾಷಾಭಿಮಾನದೊಂದಿಗೆ ವೀರಪ್ಪನ್ ನನ್ನು ಮರುಗುರುತಿಸುವುದು ಸದ್ಯ ಕರ್ನಾಟಕದಲ್ಲಿ ಸಂಶಯಕ್ಕಡೆಯಿಲ್ಲದಂತೆ ನಡೆಯುತಿರುವ ಪ್ರಕ್ರಿಯೆಯಾಗಿದೆ. ಇದು ತಮಿಳು ವಿರುದ್ಧ ಕನ್ನಡ, ವೀರಪ್ಪನ್ ವಿರುದ್ಧ ರಾಜ್ ಕುಮಾರ್/ ಅಭಿಮಾನಿ ಎಂಬ ಭಾಷಿಕ ಪುರುಷತ್ವಗಳ ಹುಟ್ಟುವಿಕೆಗೆ ಅವಕಾಶ ಒದಗಿಸಿದೆ. ಕನ್ನಡ ರಾಷ್ಟ್ರೀಯ ವಿಚಾರಧಾರೆಯೊಳಗಿನ ಹಲವು ವಿರೋಧಾಭಾಸಗಳನ್ನು ಸೂಚಿಸುವುದರಿಂದ ಕನ್ನೆಡದ ಗುರುತು ಅಗತ್ಯವಾಗಿ ಸೀಳು ವ್ಯಕ್ತಿತ್ವ (ದ್ವಂದ್ವ ವ್ತಕ್ತಿತ್ವ)ವಾಗೇ ರೂಪು ತಳೆದಿದೆ. ಅಭಿಮಾನಿ ಹಿಂಸಾತ್ಮಾಕ ಭಾಷೆಯನ್ನು ಒಂದು ಆಚರಣಾತ್ಮಕ ಹಾವಭಾವವಾಗಿಯೇ ಬಳಸಬೇಕು ಹಾಗೂ ರಾಜ್ ಕುಮಾರ್ ರವರ ಮಾತು ಅವನನ್ನು ನಿಯಂತ್ರಿಸುತ್ತದೆ ಎಂಬಂತಿರಬೇಕು. ಇಂಥ ಇಬ್ಬಗೆಯ ನಡವಳಿಕೆ ಕನ್ನಡದ ಅಭಿಮಾನವನ್ನು ಕಾಪಾಡುವಲ್ಲಿ ಅಗತ್ಯವಾಗಿದೆ9. ಅಣ್ಣಾವ್ರ ಮಾತುಗಳು ಅಥವಾ ಅವರ ಉದಾಹರಣೆಗಳಷ್ಟೆ ಸಾಲುವುದಿಲ್ಲ, ಅವರ ಅಭಿಮಾನಿಗಳನ್ನು ತಡೆಹಿಡಿಯಲು ಅದನ್ನು ಮರುಉತ್ಪಾದಿಸಬೇಕಾಗಿದೆ. ಈ ಅಪಹರಣದ ವಿಚಾರೆಧಾರೆಯಲ್ಲಿ ರಾಜ್ ಕುಮಾರ್ ರ ದೇಹವು ಅವರ ಭಾಷೆ ಮತ್ತು ಹಾವಭಾವಗಳಂತೆ ತಿದ್ದುಪಡಿಗೊಳಗಾಗುತ್ತದೆ. ಕ್ಯಾಸೆಟ್ಟೊಂದರಲ್ಲಿ ರಾಜ್ ಕುಮಾರ್ ಚಿತ್ರಗಳಾದ 'ರಣಧೀರ ಕಂಠೀರವ', 'ರೌಡಿ ರಂಗಣ್ಣ', 'ಚೂರಿ ಚಿಕ್ಕಣ್ಣ', 'ಸಿಪಾಯಿ ರಾಮು', 'ಬಬ್ರುವಾಹನ' (ಅತಿಪುರುಷತ್ವ ನಾಯಕ), 'ಬೇಡರ ಕಣ್ಣಪ್ಪ', 'ಭಕ್ತ ಅಂಬರೀಷ' (ಭಕ್ತನಾಗಿ)10 ಕ್ರಮವಾಗಿ ಹೆಸರಿಸುವುದನ್ನು ಕಾಣುತ್ತೇವೆ. 'ಕನ್ನಡಿಗರ ಹೃದಯಾಂತರಾಳದ ಮಾತು' ಎಂದು ಉಪಶೀರ್ಷಿಕೆಯಿರುವ ಮತ್ತೊಂದು ಕ್ಯಾಸೆಟ್ಟಿನ ರಿಮಿಕ್ಸ್ ಹಾಡಿನಲ್ಲಿ ರಾಜ್ ಕುಮಾರ್ ರನ್ನು ಬಹಾದ್ದೂರ್ ಗಂಡು, ಭೂಪತಿ ಗಂಡು, ಬೆಂಕಿ ಚೆಂಡು, ಫಿರಂಗಿ ಗುಂಡು ಎಂದು ಕರೆಯಲಾಗಿದೆ.11 ರಾಜ್ ಕುಮಾರ್ ರ ದೇಹವನ್ನು 'ಗರಡಿ (ಅಖಾಡ)ಯಲ್ಲಿರುವ ದೇಹವೆಂದು ವಿವರಿಸಲಾಗಿದೆ12.
ಅವರು ಮೈ ಮನಸುಗಳನ್ನು ಶುದ್ಧೀಕರಿಸಿಕೊಂಡ ಒಬ್ಬ ಹಠಯೋಗಿಯ ಹಾಗೆ ಅವರನ್ನು ತೋರಿಸಿದ್ದಾರೆ. ಕ್ಯಾಸೆಟ್ಟೊಂದರಲ್ಲಿ ಯೋಗದ ಮಹತ್ವ ಸೂಚಿಸುವ ಕತೆಯೂ ಇದೆ. ಕಾಡಿನಲ್ಲಿ ವೀರಪ್ಪನ್ ಸೂರ್ಯನಮಸ್ಕಾರ ಮಾಡುವುದು ಹೇಗೆ ಎಂದು ರಾಜ್ ಕುಮಾರ್ ಗೆ ಹೇಳಿಕೊಡಲು ಪ್ರಯತ್ನಿಸುತ್ತಾನೆ. ರಾಜ್ ಕುಮಾರ್ ಮುಗುಳು ನಗುತ್ತ ಹಲವಾರು ಆಸನಗಳಲ್ಲಿ ಮಗ್ನರಾಗುತ್ತಾರೆ. ಅವರು ತಮ್ಮ ಹೊಟ್ಟೆಯ ಮಾಂಸಖಂಡಗಳನ್ನು 'ರಾಗಿಮುದ್ದೆ ತಿರುಗಿಸುವ ಹಾಗೆ' ತಿರುಗಿಸುವ ಹಂತದಲ್ಲಿ ತಮ್ಮ ಮೂಗಿನ ಹೊಳ್ಳೆಗಳಿಂದ ನೀರನ್ನು ಒಳಗೆಳೆದುಕೊಂಡು ಹೊರಬಿಡುತ್ತಾರೆ. ಅವರ ಪರಿಣತಿಗೆ ಸಾಕ್ಷಿಯಾಗಿ ವೀರಪ್ಪನ್, ಅವರ ಕಾಲಿಗೆ ಎರಗುತ್ತಾನೆ13.  ಈ ಚಿತ್ರಕ್ಕೆ ವಿರುದ್ಧವಾಗಿ ಈ ಮುಂದೆ ನೀಡಿರುವ ರೂಪಕಗಳಲ್ಲಿ ರಾಜ್ ಕುಮಾರ್ ರ ಮಗುವಿನ ಸ್ವಭಾವ ಕುರಿತು ಸತತವಾಗಿ ಪುನರುಕ್ತವಾಗಿರುವುದನ್ನು ನೋಡಬಹುದು: ಹಿತ್ತಲಿನಲ್ಲಿ ಆಡುತ್ತಿದ್ದ ಮಗು ರಾಜ್ ಕುಮಾರ್ ನನ್ನು ಕದ್ದೊಯ್ಯಲಾಗಿದೆ (ಪತ್ರಿಕೆಗಳು, ಕ್ಯಾಸೆಟ್ಟುಗಳು); ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಬಿಟ್ಟೆವು (ಅಗ್ನಿ, ಆಗಸ್ಟ್ 25, 2000); ನಮ್ಮ ಬಟ್ಟೆ ಮುಳ್ಳಿನ ಮೇಲೆ ಬಿತ್ತು (ಕಾಡುಗಳ್ಳ ಕದ್ದ ಮುತ್ತು); ಅವರು ಹೇಳಿದರೆ ನಾವು ಹೂವನ್ನು ರಥದಲ್ಲಿಟ್ಟು ಕರೆ ತರುತ್ತೇವೆ (ಕತ್ತಗೇನು ಗೊತ್ತು ಕಸ್ತೂರಿ ಕಂಪು); ನಾಡಿನ ತಂದೆ, ಅಭಿಮಾನಗಳ ಅಣ್ಣ, ತನ್ನ ಮುಗ್ಧತೆಯಲ್ಲೊಂದು ಮಗು, ರತ್ನ, ಮುತ್ತು, ದೇವರು, ಅರಗಿಳಿ. ಅವರದು ಹಾಲಿನಂಥಾ ಮನಸ್ಸು ಎಂದು  'ಅಡವಿಯಲ್ಲಿ ಅಣ್ಣಾವ್ರು' ಕ್ಯಾಸೆಟ್ಟಿನ ಪಾತ್ರವೊಂದು ಹೇಳುತ್ತದೆ.
ಏಕೀಕೃತ ಕನ್ನಡ ಗುರುತಿನ ಹೆಸರಿನಲ್ಲಿ ಮಾತನಾಡಬೇಕು ಎಂಬ ಒತ್ತಡವಿರುವ ಈ ಕಾಲದಲ್ಲಿ ಅಭಿಮಾನಿಗಳ ಹಿಂಸಾಕೃತ್ಯಗಳ ಬಯಕೆ ಮತು ವೀರಪ್ಪನ್ ನ ಪ್ರಸಿದ್ಧ ಸೆರೆಯಾಳಾದ ರಾಜ್ ಕುಮಾರ್ ರ ಯೌಗಿಕ ಮೂರ್ತಿಯನ್ನು ಒಟ್ಟಾಗಿ ಬೆಸೆಯುವ ಭಾರ ಕನ್ನಡತನದ ಅಭಿವ್ಯಕ್ತಿಯ ಮೇಲಿದೆ. ಈ ವಿರುದ್ಧಾಂಶಗಳನ್ನು ಒಟ್ಟಿಗೆ ಸೇರಿಸಲು ಮಾಡಿದ ಪ್ರಯತ್ನ ಯಾವಾಗಲೂ ಯಶಸ್ಸು ಕಾಣುವುದಿಲ್ಲ. ಹಾಗಾಗಿಯೆ ಪುರುಷತ್ವ ಮರುರೂಪಿಸುವ ಈ ಪ್ರಕ್ರಿಯೆಯಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಸ್ಪಷ್ಟವಾಗಿದ್ದು, ಆಶಾವಾದಿಯಾಗಿ ಉಳಿಯಲು ಸಾಕಷ್ಟು ಆಧಾರ ಒದಗಿಸಿದೆ.


ಟಿಪ್ಪಣಿ
(ಈ ಲೇಖನದಲ್ಲಿ ಬಳಸಲಾದ ಸಾಮಗ್ರಿಯನ್ನು ಬೆಂಗಳೂರಿನ ದಿ ಸೆಂಟರ್ ಫಾರ್ ದಿ ಸ್ಟಡಿ ಆಫ್ ಕಲ್ಚರ್ ಅಂಡ್ ಸೊಸ್ಶೆಟಿಯ ಮೀಡಿಯಾ ಅಂಡ್ ಕಲ್ಚರ್ ಆರ್ಕೈವ್ಸ್ ನಿಂದ ಪಡೆಯಲಾಗಿದೆ. ನನಗೆ ನೆರವು ಮತು ಪ್ರೋತ್ಸಾಹ ನೀಡಿದ ಆಶಿಶ್ ರಾಜಾಧ್ಯಕ್ಷ , ಎಂ.ಮಾಧವ ಪ್ರಸಾದ್, ಎಸ್.ವಿ.ಶ್ರೀನಿವಾಸ್, ಪಿ.ರಾಧಿಕಾ ಮತು ಎಂ.ರಾಜು ಅವರಿಗೆ ಆಭಾರಿಯಾಗಿದ್ದೇನೆ.)
1.    ಹಾಯ್ ಬೆಂಗಳೂರು ಐದು ವರುಷಗಳಷ್ಟು ಹಳೆಯದು. ಅದರ ಪ್ರತಿಯೊಂದು ಸಂಚಿಕೆಗೆ ಹದಿನೆಂಟು ಲಕ್ಷ ಓದುಗರಿದ್ದಾರೆಂದು ಹೇಳಿಕೊಳ್ಳಲಾಗಿದೆ. ನಂಬಲರ್ಹ ಮೂಲಗಳ ಪ್ರಕಾರ ಒಂದು ಲಕ್ಷಕ್ಕೂ ಕಡಿಮೆ ಪತ್ರಿಕೆಗಳು ಮುದ್ರಣವಾಗುತ್ತವೆ.
2.    ಕ್ಯಾಸೆಟ್ ಆಗಮನ ಉತ್ತರ ಭಾರತದ ಸಂಗೀತದ ತಯಾರಿಕೆಯಲ್ಲಿ ಮತ್ತು ವಿತರಣೆಯಲ್ಲಿ ಹೇಗೆ ದುಡಿಯುವ ವರ್ಗ ಭಾಗವಾಯಿತು ಎಂಬ ಪೀಟರ್ ಮ್ಯಾನುಯಲ್ ನ ವಾದವನ್ನು ದಕ್ಷಿಣ ಭಾರತಕ್ಕೂ ಅನ್ವಯಿಸಬಹುದಾಗಿದೆ. ನೋಡಿ-ಮ್ಯಾನುಯಲ್, ಕ್ಯಾಸೆಟ್ ಕಲ್ಚರ್: ಪಾಪುಲರ್ ಮ್ಯೂಜಿಕ್ ಅಂಡ್ ಟೆಕ್ನಾಲಜಿ ಇನ್ ನಾರ್ತ್ ಇಂಡಿಯಾ (ಚಿಕಾಗೊ,1993)
3.    ಮೂಲ: 'ಕಾಡಿನಲ್ಲಿ ರಾಜ್, ಸಂಗೀತದಲ್ಲಿ ವೀರಪ್ಪನ್'-ಬಸವರಾಜು, ಲಂಕೇಶ್ ಪತ್ರಿಕೆ, ಸೆಪ್ಟಂಬರ್ 20, 2000, ಪು.15.
4.    ಇಲ್ಲಿ ನೀಡಿರುವ ಕತೆಯ ನಿರೂಪಣೆ 'ಕಾಡುಗಳ್ಳ ಕದ್ದ ಮುತು' ಆಡಿಯೊ ಕ್ಯಾಸೆಟ್ಟಿನದು.
5.    'ಕತ್ತಗೇನು ಗೊತ್ತು ಕಸ್ತೂರಿ ಕಂಪು' ಆಡಿಯೊ ಕ್ಯಾಸೆಟ್ಟಿನಿಂದ.
6.    ಈ ಬಗೆಯ ವ್ಶೆರುಧ್ಯಗಳನ್ನು ಕಟ್ಟಿದ ಶ್ರೇಯಸ್ಸು ಯುವ ಚಿತ್ರ ನಿದೇರ್ಶಕ ಎಸ್.ನಾರಾಯಣ್ ಅವರಿಗೆ ಸಲ್ಲುತ್ತದೆ.
7.    ಅಗ್ನಿ ಆರಂಭವಾದಾಗಿನಿಂದ ಅದರೊಂದಿಗೆ ತೊಡಗಿಸಿಕೊಂಡು ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆಯುತಿದ್ದ ಕವಯಿತ್ರಿ ಪ್ರತಿಭಾ ನಂದಕುಮಾರ್ ಪ್ರಸ್ತುತ ವಿಷಯದ ಮೇಲೂ ವಿಸ್ತೃತ ಚರ್ಚೆ ನಡೆಸಿದ್ದಾರೆ ಎಂದು ನಂಬಲಾಗಿದೆ. ಶ್ರೀಧರ್ ಅವರು 'ನಮ್ಮ ಹುಡುಗರು' ಚೌಕಟ್ಟಿನಲ್ಲಿ ಎಂದಾಗ ಆಕೆಯ ಪಾಲುದಾರಿಕೆ ಅದೃಶ್ಯವಾಗುತ್ತದೆ..
8.    'ಕಾಡುಗಳ್ಳ ಕದ್ದ ಮುತ್ತು'ನಲ್ಲಿ.
9.    ವೀರಪ್ಪನ್ನ ವಿರುದ್ಧದ ಬೆದರಿಕೆ ಮತ್ತು ಶಾಪಗಳು ಈ ಬಗೆಯ ಇಬ್ಬಗೆಯ ಫೆನಾಮಿನನ್ ಬಗ್ಗೆ ನಮಗೆ ಸೂಚನೆ ನೀಡುತ್ತವೆ. ನಮಗೆ ಅವಕಾಶ ಕೊಟ್ಟರೆ ಆ ಲೋಫರ್ ನ ಪಾಪರ್ ಮಾಡಿ, ಪೀಸ್ ಪೀಸ್ ಮಾಡಿ ನರಿಗೆ ಎಸೀತೀವಿ ಎಂದು ಅಭಿಮಾನಿ ಹೇಳುತ್ತಾನೆ(ಕತ್ತಗೇನು ಗೊತ್ತು ಕಸ್ತೂರಿ ಕಂಪು).
10.    ಕಾಡುಗಳ್ಳ ಕದ್ದ ಮುತ್ತು.
11.    ಕತ್ತಗೇನು ಗೊತ್ತು ಕಸ್ತೂರಿ ಕಂಪು.
12.    ಇಮ್ಮಡಿ ಪುಲಕೇಶಿ (1967) ಚಿತ್ರದ ಆರಂಭದ ಸ್ಮರಣಾರ್ಹ ಸನ್ನಿವೇಶದಲ್ಲಿ ರಾಜ್ ಕುಮಾರ್ ಯುವರಾಜನಾಗಿ ನಟಿಸಿದ್ದಾರೆ. ಬೀಳುತ್ತಿರುವ ಎತ್ತರದ ಮರದಿಂದ ಸಾಮ್ರಾಜ್ಯದ ರಾಜಕುಮಾರಿಯನ್ನು ಕಾಪಾಡಲು ಅವರು ತಮ್ಮ ದೇಹವನ್ನು ಬಳಸಿದ್ದಾರೆ. ಇದು ಅವರ ಏಕರಾಷ್ಟ್ರೀಯತೆಯ (ಹೋಮೋ ನ್ಯಾಷನಲಿಸ್) ಆರಂಭಿಕ ದೃಶ್ಯ ಪ್ರತಿನಿಧೀಕರಣ.
13.    ನರಹಂತಕನ ಬಲೆಯಲ್ಲಿ ಕರುನಾಡಿನ ಹೃದಯ.

ಪಾರಿಭಾಷಿಕ ಪದಗಳು
ಪಬ್ಲಿಕ್ ಸ್ಪಿಯರ್ - ಸಾರ್ವಜನಿಕ ವಲಯ
ಐಡೆಂಟಿಟಿ - ಗುರುತು
ಮ್ಯಾಸ್ಕ್ಯುಲಾನಿಟಿ - ಪುರುಷತ್ವ
ಮ್ಯಾಸ್ಕ್ಯುಲಾನಿಟಿ- ಪೌರುಷತ್ವ


-ತೇಜಸ್ವಿನಿ ನಿರಂಜನ

ಶನಿವಾರ, ಮೇ 14, 2011

ನವ ಚಾರಿತ್ರಿಕವಾದ ಮತ್ತು ಸಾಂಸ್ಕೃತಿಕ ಉಪಭೋಗವಾದ



-ಪೀಟರ್ ಬ್ಯಾರಿ

ನವಚಾರಿತ್ರಿಕವಾದ
ಅಮೆರಿಕದ ವಿಮರ್ಶಕ ಸ್ಟಿಫನ್ ಗ್ರೀನ್ ಬ್ಲಾಟ್ ಎಂಬುವನು 'ನವಚಾರಿತ್ರಿಕವಾದ' ಎಂಬ ಪಾರಿಭಾಷಿಕ ಪದವನ್ನು ಮೊದಲಿಗೆ ಟಂಕಿಸಿದನು. `ರೆನೈಸಾನ್ಸ್ ಸೆಲ್ಫ್ - ಫ್ಯಾಷನಿಂಗ್ : ಫ್ರಂ ಮೋರ್ ಟು ಶೇಕ್ಸ್ಪಿಯರ್' (1980) ಎಂಬ ಅವನ ಕೃತಿಯಿಂದ ಅದರ ಆರಂಭವನ್ನು ಸಾಮಾನ್ಯವಾಗಿ  ಗುರುತಿಸಲಾಗಿದೆ. ಈ ಪ್ರವೃತ್ತಿಯನ್ನು 1970ರ ಅವಧಿಯಲ್ಲಿ ಪ್ರಕಟವಾದ ವಿವಿಧ ವಿಮರ್ಶಕರ ಕೃತಿಗಳಲ್ಲೂ ಗುರುತಿಸಲು ಸಾಧ್ಯ. 'ದಿ ಟ್ರ್ಯಾಜಿಡಿ ಆಫ್ ಸ್ಟೇಟ್ : ಎ ಸ್ಟಡಿ  ಆಫ್ ಜಕೋಬಿಯನ್ ಡ್ರಾಮಾ' ಎಂಬ ಜೆ.ಡಬ್ಲ್ಯು.ಲಿವರ್ನ ಕೃತಿ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. (ಇದು 1971ರಲ್ಲಿ ಮೆಥ್ಯೂನ್ ಅವರಿಂದ ಮೊದಲು ಪ್ರಕಟವಾಯಿತು. ನಂತರ 1987ರಲ್ಲಿ ಜೊನಾಥನ್ ಡೊಲಿಮೊರ್ ಅವರ ಮುನ್ನುಡಿಯೊಂದಿಗೆ ಹೊರಬಂದಿತು.) ಜಕೋಬಿಯನ್ ರಂಗಭೂಮಿ ಕುರಿತು ಸಾಂಪ್ರದಾಯಿಕ ವಿಮರ್ಶಕರ ದೃಷ್ಟಿಕೋನವನ್ನು ಪ್ರಶ್ನಿಸಿದ ಈ ಕಿರುಕೃತಿ ಹೊಸಶಕೆಯನ್ನು ಆರಂಭಿಸಿತು. ನಾಟಕಗಳನ್ನು ಹಿಂದಿನ ವಿಮರ್ಶಕರಿಗಿಂತ ಹೆಚ್ಚು ಸೂಕ್ಷ್ಮವಾಗಿ ತಮ್ಮ ಯುಗದ ರಾಜಕೀಯ ಘಟನೆಗಳೊಂದಿಗೆ ತಳುಕು ಹಾಕಿತು.
ಇತಿಹಾಸದ ಒಂದು ಕಾಲಮಾನಕ್ಕೆ ಸೇರಿದ ಸಾಹಿತ್ಯಿಕ ಅಸಾಹಿತ್ಯಿಕ ಪಠ್ಯಗಳ 'ಸಮಾನಾಂತರ' ಓದಿಗೆ ನೆಲೆ ಒದಗಿಸಿದ ವಿಧಾನವೆಂದು ನವಚಾರಿತ್ರಿಕವಾದವನ್ನು ಸರಳವಾಗಿ ವ್ಯಾಖ್ಯೆ. ಮಾಡಲಾಗಿದೆ. ನವಚಾರಿತ್ರಿಕವಾದ ಸಾಹಿತ್ಯ ಪಠ್ಯದ 'ಅವಕಾಶ'ವನ್ನು (ಮೇಲುನೋಟಕ್ಕಾದರೂ) ನಿರಾಕರಿಸುತ್ತದೆ. ಸಾಹಿತ್ಯದ 'ಪೂರ್ವಪೀಠಿಕೆ' ಹಾಗೂ ಐತಿಹಾಸಿಕ 'ಹಿನ್ನೆಲೆ'ಯ ಬದಲಿಗೆ ಅದು ಸಾಹಿತ್ಯಿಕ ಹಾಗೂ ಅಸಾಹಿತ್ಯಿಕ ಪಠ್ಯಗಳನ್ನು ಸಮಾನವಾಗಿ ಕಂಡು ಪರಸ್ಪರ ಪ್ರಶ್ನಿಸುವ ಇಲ್ಲವೆ ನಿರಂತರವಾಗಿ ಸಂವೇದಿಸುವ ಅಧ್ಯಯನ ಮಾದರಿಯೊಂದನ್ನು ಅನುಸರಿಸಿ ಮನದಟ್ಟು ಮಾಡಿಕೊಡುತ್ತ್ತದೆ. ಈ 'ಸಮಾನ ದೃಷ್ಟಿಕೋನ'ವನ್ನು ಅಮೆರಿಕನ್ ವಿಮರ್ಶಕ ಲೂಯಿಸ್ ಮಾಂಟ್ರೊಸ್ ನೀಡಿರುವ ನವಚಾರಿತ್ರಿಕವಾದದ ವ್ಯಾಖ್ಯೆಯಲ್ಲಿ ಸೂಚಿಸಲಾಗಿದೆ. ಆತ ಅದನ್ನು 'ಪಠ್ಯದ ಐತಿಹಾಸಿಕತೆ ಮತ್ತು ಐತಿಹಾಸಿಕ ಪಠ್ಯ'ದ ಉಭಯ ಹಿತಾಸಕ್ತಿಗಳಲ್ಲಿ ವ್ಯಾಖ್ಯೆ ಮಾಡಿದ್ದಾನೆ. ಗ್ರೀನ್ ಬ್ಲಾಟ್ ನ ಮಾತುಗಳಲ್ಲೆ ಹೇಳುವುದಾದರೆ 'ಸಾಹಿತ್ಯಿಕ ಪಠ್ಯಗಳನ್ನು ಮಾತ್ರ ಸಾಂಪ್ರದಾಯಿಕವಾಗಿ ಗಮನಿಸುವುದರೊಂದಿಗೆ ಗತದ ಪಠ್ಯ ಗುರುತುಗಳನ್ನೆಲ್ಲ ಓದುವ ಉದ್ದೇಶಿತ ಇಚ್ಛೆಯನ್ನದು ಹೊಂದಿದೆ. ಹಾಗಾಗಿ ನವಚಾರಿತ್ರಿಕವಾದ (ಅದರ ಹೆಸರೆ ಸೂಚಿಸುವಂತೆ) ವೈರುಧ್ಯ (ಕೆಲವರಿಗೆ ಹಗರಣ)ವನ್ನು ರೂಪಿಸುತ್ತದೆ. ಇದು ಸಾಹಿತ್ಯಕ್ಕೆ ಅವಕಾಶ ನೀಡದೆಯೂ ಸಾಹಿತ್ಯವನ್ನು ಪ್ರಸ್ತಾಪಿಸುತ್ತದೆ' (ಆದರೂ ಈ ಹೇಳಿಕೆಗೆ ಕೆಲವು ಅರ್ಹತೆಗಳು ಅಗತ್ಯವೆಂಬುದನ್ನು ನಂತರದಲ್ಲಿ ಕಾಣುತ್ತೇವೆ).
ನವಚಾರಿತ್ರಿಕವಾದದ ಮಾದರಿ ಪ್ರಬಂಧವೊಂದು ಸಾಹಿತ್ಯಿಕ ಪಠ್ಯವನ್ನು ಅಸಾಹಿತ್ಯಿಕ ಪಠ್ಯದ 'ಚೌಕಟ್ಟಿ'ನೊಳಗೆ ಇಟ್ಟು ನೋಡುತ್ತದೆ. ಸಾಹಿತ್ಯಿಕ ಅಧ್ಯಯನದ ದೃಷ್ಟಿಕೋನದಿಂದ ಗ್ರೀನ್ಬ್ಲಾಟ್ನ ಮುಖ್ಯ ಅನ್ವೇಷಣೆಯಾದ 'ಈ ಯುಗದ ಯುರೋಪಿನ ಪ್ರಮುಖ ಶಕ್ತ ದೇಶಗಳೆಲ್ಲ ಅನುಸರಿಸಿದ ಭಯಾನಕ ವಸಾಹತುಶಾಹಿ ನೀತಿಗಳ' (ದಿ ಮಾಡ್ರನಿಸ್ಟ್ ಶೇಕ್ಸ್ ಪಿಯರ್ ನಲ್ಲಿ  ಹ್ಯೂ ಗ್ರಾಡಿ) ಜೊತೆಗೆ ಪುನರುತ್ಥಾನ ಕಾಲದ ನಾಟಕಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡುತ್ತದೆ. ಒಂದಲ್ಲ ಒಂದು ಬಗೆಯಲ್ಲಿ ನಾಟಕದ ವಸ್ತು ಒಳಗೊಂಡ ಸಮಕಾಲೀನ ಐತಿಹಾಸಿಕ ದಾಖಲೆಯ ವಿಶ್ಲೇಷಣೆಯನ್ನು ಸಾಮಾನ್ಯವಾಗಿ ಲೇಖನದ ಆರಂಭದಲ್ಲೆ ಮಾಡುವ ಮೂಲಕ 'ದಮನಕ್ಕೆ ಒಳಪಟ್ಟ ಇತರರನ್ನು ಮೂಲೆಗೊತ್ತುವ ಹಾಗೂ ಅಮಾನವೀಯಗೊಳಿಸುವ' (ಗ್ರಾಡಿ) ಕಡೆಗೆ  ಗಮನ ಸೆಳೆಯುತ್ತದೆ. ಗ್ರೀನ್ ಬ್ಲಾಟ್ ಸ್ವತಹ ಸೂಕ್ತ ಐತಿಹಾಸಿಕ ದಾಖಲೆಯನ್ನು 'ಐತಿಹ್ಯ'ದ ಹಾಗೆ ನೋಡುತ್ತಾನೆ. ನವಚಾರಿತ್ರಿಕವಾದದ ಮಾದರಿ ಪ್ರಬಂಧವೊಂದು ನಾಟಕದ ಬಗ್ಗೆ ಈ ಹಿಂದೆ ಪ್ರಕಟವಾದ ವ್ಯಾಖ್ಯಾನಗಳು ಮತ್ತು ರೂಢಿಗತ ಶೈಕ್ಷಣಿಕ ಪೂರ್ವಸಿದ್ಧತೆಯನ್ನು ಕೈ ಬಿಡುತ್ತದೆ ಹಾಗೂ ಈಗಾಗಲೆ ಸಂಕೇತ ನೀಡಿದ ಹಾಗೆ ಪ್ರಭಾವಶಾಲಿಯಾದ ನಾಟಕೀಯ ಐತಿಹ್ಯದೊಂದಿಗೆ ಆರಂಭವಾಗುತ್ತದೆ. ಉದಾಹರಣೆಗೆ, ಲೂಯಿಸ್ ಮಾಂಟ್ರೊಸ್ ನಂತರದ ಕಾಲದಲ್ಲಿ ಚರ್ಚೆ ಮಾಡಿದ ಪ್ರಬಂಧದ ಮೊದಲ ವ್ಯಾಕ್ಯವಿದು: 'ಎಲಿಜಬೆತನ್ ಕನಸು ಅಂದರೆ ಶೇಕ್ಸ್ಪಿಯರ್ನ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಅಲ್ಲವಾದರೂ 1597ರ  ಜನವರಿ 23ರಂದು ಸೈಮನ್ ಫೋರ್ಮನ್ ಕಂಡ ಕನಸನ್ನು ವಿವರಿಸಲು ಬಯಸುತ್ತೇನೆ'. ಈ ಬಗೆಯ ನಾಟಕೀಯ ಆರಂಭಗಳು ಮತ್ತೆ ಮತ್ತೆ ಸ್ಥಳ ಮತ್ತು ತಾರೀಕನ್ನು ಉಲ್ಲೇಖಿಸುತ್ತವೆ ಹಾಗೂ ದಾಖಲಾತಿಯ ಎಲ್ಲ ಬಲವನ್ನು ಹೊಂದಿರುತ್ತವೆ. ಕಣ್ಣಾರೆ ಕಂಡ ವಿವರವೊಂದು 'ಇತಿಹಾಸ'ಕ್ಕಿಂತ ಜೀವಂತ ಅನುಭವ ಗುಣವನ್ನು ಸಶಕ್ತವಾಗಿ ಆವಾಹಿಸುತ್ತದೆ. ಈ ಐತಿಹಾಸಿಕ ದಾಖಲಾತಿಗಳು ಸಂದರ್ಭಗಳ ಹಾಗೆ ಅಪ್ರಧಾನವಾಗದೆ ಇರುವವರೆಗೆ ಅವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ನಾವದನ್ನು 'ಸಂದರ್ಭಗಳು' ಎನ್ನುವ ಬದಲಿಗೆ 'ಸಹಪಠ್ಯಗಳು' ಎಂದು ಕರೆಯುತ್ತೇವೆ. ಪಠ್ಯ ಮತ್ತು ಸಹಪಠ್ಯ ಒಂದು ಐತಿಹಾಸಿಕ 'ಕ್ಷಣ'ದ ಅಭಿವ್ಯಕ್ತ್ತಿಗಳ ಹಾಗೆ ಕಂಡು ಬಳಸಲಾಗುತ್ತದೆ ಮತ್ತು ಆ ಪ್ರಕಾರವಾಗಿಯೇ ವ್ಯಾಖ್ಯಾನ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರಿಚರ್ಡ್ ವಿಲ್ಸನ್ ಮತ್ತು ರಿಚರ್ಡ್ ಡಟ್ಟನ್ ತಮ್ಮ 'ನ್ಯೂ ಹಿಸ್ಟಾರಿಸಿಜಂ ಅಂಡ್ ರೆನೈಸಾನ್ಸ್ ಡ್ರಾಮ' ಎಂಬ ಪ್ರಬಂಧ ಸಂಕಲನದ ಮುನ್ನುಡಿಯಲ್ಲಿ ಹೀಗೆ ವಿವರಿಸಿದ್ದಾರೆ :
ಅಲ್ಲಿ (ಈ ಮೊದಲು) ವಿಮರ್ಶೆ ಶೇಕ್ಸ್ ಪಿಯರ್ ನನ್ನು ಇಂಗ್ಲಿಶ್ ಆಡುನುಡಿಯ ಅವತಾರ ಪುರುಷನ ಹಾಗೆ ನಿಗೂಢಗೊಳಿಸಿತ್ತು. ಇದು (ನವಚಾರಿತ್ರಿಕವಾದ) ನಾಟಕಗಳು ವಸಾಹತು ದಾಖಲೆಗಳು, ವೈದ್ಯಕೀಯ ಹಾಗೂ ದಂಡನೆಯಂಥ ಇತರ ಬರೆಹದ ಪಠ್ಯಗಳಲ್ಲಿ ಹೂತು ಹೋಗಿರುವುದನ್ನು  ತೋರಿಸಿಕೊಟ್ಟಿತು. ಪತ್ರಾಗಾರದ ಕಾಗದದ ಕಟ್ಟುಗಳೊಳಗಿಂದ ಓದಿದರೆ, ಅವು ಪ್ರತಿನಿಧಿಸುವಂಥದ್ದು ಸಾಮರಸ್ಯವನ್ನಲ್ಲ- ಆದರೆ ಕಾರ್ನಿವಾಲ್ ಮೇಲೆ ಪ್ಯೂರಿಟನ್ನರ  ಹಿಂಸಾತ್ಮಕ ದಾಳಿಯನ್ನು, ಗುಲಾಮಿತನದ ಹೇರಿಕೆಯನ್ನು, ಪುರುಷಶಾಹಿ ತಲೆ ಎತ್ತುವುದನ್ನು, ಹಾದಿ ತಪ್ಪಿದವನ ಬೇಟೆಯಾಡುವುದನ್ನು ಹಾಗೂ ಫೂಕೊ ಕರೆದಿರುವ 'ಬಂಧನ ಯುಗದ ಸೆರೆಮನೆ ವಾಸವೆ ಸಮಾಜದ ಮುಂಬೆಳಗಿನ ಕಾಲದಲ್ಲಿ ಸೆರೆಮನೆ ಬಾಗಿಲು ಮುರಿಯುವುದನ್ನು' (ವಿಲ್ಸ್ನ್ ಮತ್ತು ಡಟ್ಟನ್, ಪು.8).
ಇದು ಸಂಕ್ಷಿಪ್ತವಾಗಿ ನವಚಾರಿತ್ರಿಕವಾದದ ಆಶಯ ಮತ್ತು ಆಕಾಂಕ್ಷೆಗಳನ್ನು ತಿಳಿಸಿಕೊಡುತ್ತದೆ. ಸಾಹಿತ್ಯದ ಓದು  ಕುರಿತ ನುಡಿಕಟ್ಟು 'ಪತ್ರಾಗಾರದ ಕಾಗದದ ಕಟ್ಟುಗಳೊಳಗಿಂದ' ಎಂಬುದು ಇದರ ವಿಸ್ತೃತ ಬೀಜರೂಪವಾಗಿದೆ.

ಹಳೆಯ ಮತ್ತು ನವಚಾರಿತ್ರಿಕವಾದಗಳು: ಕೆಲವು ವ್ಯತ್ಯಾಸಗಳು
ನವಚಾರಿತ್ರಿಕವಾದವನ್ನು ಸಾಹಿತ್ಯಿಕ ಹಾಗೂ ಅಸಾಹಿತ್ಯಿಕ ಪಠ್ಯಗಳ ಸಮಾನಾಂತರ ಅಧ್ಯಯನವೆಂದು  ಹೇಳಿದಾಗ 'ಸಮಾನಾಂತರ' ಎಂಬ ಪದಕ್ಕೂ ಐತಿಹಾಸಿಕ ಅಂಕಿಅಂಶಗಳನ್ನು ಬಳಸಿಕೊಳ್ಳುತ್ತಿದ್ದ ಈ ಮೊದಲಿನ ಸಾಹಿತ್ಯ ಪ್ರಸ್ತಾಪಕ್ಕೂ ನಡುವೆ ಮೂಲಭೂತ ವ್ಯತ್ಯಾಸವನ್ನು ಪೂರ್ಣಗೊಳಿಸಿದಂತಾಗುತ್ತದೆ. ಈ ಮೊದಲಿನ ಪ್ರಸ್ತಾಪಗಳು ವಸ್ತುಮೌಲ್ಯವಿದ್ದ ಸಾಹಿತ್ಯ ಪಠ್ಯಗಳ ನಡುವೆ ಆಭರಣಗಳ ಹಾಗೆ ಕ್ರಮಬದ್ಧ ಶ್ರೇಣಿಯ ಪ್ರತ್ಯೇಕತೆಯನ್ನು ಉಂಟುಮಾಡಿದ್ದವು. ಐತಿಹಾಸಿಕ 'ಹಿನ್ನೆಲೆ' ಹೆಚ್ಚು ಉಪಯುಕ್ತವಲ್ಲದ ವ್ಯಾಖ್ಯೆಯೊಂದಿಗೆ ಕೇವಲ ಆವರಣವಾಗುಳಿದಿತ್ತು.
ಸಾಹಿತ್ಯಿಕ ಮತ್ತು ಅಸಾಹಿತ್ಯಿಕ ವಾದಗಳ ಸಾಮಗ್ರಿಗಳಿಗೆ 'ಸಮಾನ ಮಹತ್ವ' ನೀಡುವ ಪದ್ಧತಿ 'ಹಳೆಯ' ಮತ್ತು 'ನವ' ಚಾರಿತ್ರಿಕವಾದಗಳ ನಡುವಿನ ಪ್ರಧಾನ ಮತ್ತು ಮೊದಲ ವ್ಯತ್ಯಾಸವಾಗಿದೆ. ಹಳೆಯ ಚಾರಿತ್ರಿಕವಾದದ ಪ್ರತಿನಿಧಿಯಾಗಿ ಇ.ಎಂ.ಡಬ್ಲ್ಯು.ಟಿಲ್ಯಾರ್ಡ್ನ 'ದಿ ಎಲಿಜಬೆತನ್ ವರ್ಲ್ಡ್ ಪಿಕ್ಚರ್' (1943) ಮತ್ತು 'ಶೇಕ್ಸ್ ಪಿಯರ್ಸ್ ಹಿಸ್ಟರಿ ಪ್ಲೇಸ್' (1944) ಎಂಬ ಕೃತಿಗಳನ್ನು ಉಲ್ಲೇಖಿಸಬಹುದು. ನವಚಾರಿತ್ರಿಕವಾದ ಇವಕ್ಕೆ ವಿರುದ್ಧವಾಗಿ ತನ್ನನ್ನು ಮೇಲಿಂದ ಮೇಲೆ ವ್ಯಾಖ್ಯಾನಿಸಿಕೊಂಡಿದೆ. ಶೇಕ್ಸ್ ಪಿಯರ್ ನ ನಾಟಕಗಳಲ್ಲಿ ಪ್ರತಿಬಿಂಬಿತವಾಗಿರುವ ಎಲಿಜಬೆತನ್ ಮನೋಭಾವವನ್ನು ಮಾದರಿಗೊಳಿಸಿರುವ ಹಾಗೆಯೆ ಈ ಪುಸ್ತಕಗಳು ಟಿಲ್ ಯಾರ್ಡ್ ಕಂಡಿರುವ ಸಾಂಪ್ರದಾಯಿಕ ಮನಸಿನ (ಸಮಾಜ, ದೈವ, ನಿಮರ್ಿತ ಜಗತ್ತು ಮುಂತಾದ) ನಡವಳಿಕೆಯ ರೀತಿಯನ್ನೂ ವಿವರಿಸಿವೆ.  ಶೇಕ್ಸ್ ಪಿಯರ್ ಕುರಿತ (1970ರ ಮೂಲಕ) 'ಪರಂಪರಾಗತ' ಪ್ರಸ್ತಾಪವೆ 'ನಿಕಟ ಓದಿ'ನ ಪರಿಪಾಲನೆ ಮತ್ತು 'ಪ್ರತಿಮಾ ಸ್ವರೂಪ'ಗಳ ಬಿಚ್ಚುನೋಟದಿಂದ ಕೂಡಿದ್ದು ಐತಿಹಾಸಿಕ ಚೌಕಟ್ಟನ್ನು ಲಕ್ಷಣೀಕರಿಸಿದೆ.
ಹಳೆಯ ಮತ್ತು ನವಚಾರಿತ್ರಿಕವಾದಗಳ ಎರಡನೆಯ ಮುಖ್ಯ ವ್ಯತ್ಯಾಸವನ್ನು ಈ ಮೊದಲ ಉಲ್ಲೇಖಿತ ನುಡಿಕಟ್ಟು 'ಪತ್ರಾಗಾರದ ಕಾಗದ ಕಟ್ಟು'ನಲ್ಲಿ 'ಪತ್ರಾಗಾರ' ಎಂಬ ಪದ ಪೂರ್ಣಗೊಳಿಸಿದೆ. ನವಚಾರಿತ್ರಿಕವಾದ ಚಾರಿತ್ರಿಕ ಚಳವಳಿಯಾಗಿರದೆ ನಿಜವಾದ ಚರಿತ್ರೆಯಾಗಿದೆ ಎಂಬುದನ್ನು ಈ ಪದ ಸೂಚಿಸುತ್ತದೆ. ಅದು ಬರೆಹ ದಾಖಲೆಗಳಲ್ಲಿ ನಮೂದಾಗಿರುವ ಹಾಗೂ ಪ್ರತಿನಿಧಿತವಾಗಿರುವ ಇತಿಹಾಸದಲ್ಲಿ - ಪಠ್ಯದ ಇತಿಹಾಸದಲ್ಲಿ - ಆಸಕ್ತವಾಗಿದೆ. ಐತಿಹಾಸಿಕ ಸಂಗತಿಗಳು ಮರಳಿ ಪಡೆಯದ ಹಾಗೆ ಹಾಳಾಗುವಂಥವು ಎಂದು ವಾದಿಸಲಾಗಿದೆ. ಈ ಮಾತಿನ ಒತ್ತು, ಲೇಖಕನ ಆಲೋಚನೆಗಳು, ಭಾವನೆಗಳು, ಉದ್ದೇಶಗಳು ಮರಳಿ ಪಡೆಯಲಾರದಂಥವು ಅಥವಾ ಮರುರಚಿಸಲಾಗದಂಥವು ಎಂಬ ಸಾಹಿತ್ಯಿಕ ಅಧ್ಯಯನಗಳ ಬಹುದಿನಗಳ ಜನಪ್ರಿಯ ನೋಟದ ಪ್ರಭಾವವನ್ನು ಒಳಗೊಂಡಿದೆ. ಹಾಗಾಗಿ ನಮ್ಮ ಕೈ ಸೇರಿದ ಸಾಹಿತ್ಯ ಕೃತಿಯಿಂದ ಜೀವಂತ ವ್ಯಕ್ತಿಯೊಬ್ಬ ಸಂಪೂರ್ಣವಾಗಿ ನಿರಾಕರಣೆಗೆ ಒಳಪಡುತ್ತಾನೆ. ಹಾಗೆಯೆ ಭೂತ ಕಾಲದ ಜಗತ್ತು ಕೂಡ ಪುನರ್ ಸ್ಥಾಪನೆಯಾಗುತ್ತದೆ. ಈ ಭೂತ ಕಾಲದ ಸಂಗತಿಗಳು ಮತ್ತು ನಡವಳಿಕೆಗಳು ನವಚಾರಿತ್ರಿಕವಾದಿಗಳಿಗೆ ಸದ್ಯದ ಸಂಗತಿಯಾಗಿ ಉಳಿದಿವೆ. ಈ ಮೊದಲು ಇವು ಸಾಹಿತ್ಯ ಪಠ್ಯಗಳಿಗೆ ಸೀಮಿತವಾಗಿದ್ದ ನಿಕಟ ಬಿಚ್ಚುನೋಟ ಮಾದರಿಯ ಬರವಣಿಗೆಗೆ ವಿಷಯ ಸೂಕ್ಷ್ಮತೆಯನ್ನು ಉಂಟು ಮಾಡಿದ್ದವು.
ವಿರಚನವಾದದ ಪ್ರಭಾವದಿಂದಲೆ ಅದು ಭೂತಕಾಲದ ಪಠ್ಯ ಸಂಬಂಧಿ ದಾಖಲೆಗೆ ಮೊದಲ ಆದ್ಯತೆಯನ್ನು  ನೀಡಿತು. ಪಠ್ಯದಾಚೆಗೆ ಏನೂ ಇಲ್ಲ, ವಿಶೇಷಾರ್ಥದಲ್ಲಿ ಹೇಳಬೇಕೆಂದರೆ ಭೂತ ಕಾಲದ ಪ್ರತಿಯೊಂದು ಅಂಶವೂ ಪಠ್ಯೀಕೃತ ರೂಪದಲ್ಲೇ ನಮಗೆ ಸಿಗುತ್ತದೆ ಎಂಬ ಡೆರಿಡಾನ ದೃಷ್ಟಿಕೋನವನ್ನು ನವಚಾರಿತ್ರಿಕವಾದ ಒಪ್ಪುತ್ತದೆ. ಆದರೆ ಅದರದು 'ಮೂರು ಬಗೆಯ ಕಾರ್ಯ ವಿಧಾನ'. ಮೊದಲನೆಯದು ವಿಚಾರಗಳು ಅಥವಾ ನಿಲುವುಗಳು ಅಥವಾ ತನ್ನ ಕಾಲದ ವ್ಯಾಖ್ಯಾನಾತ್ಮಕ ಆಚರಣೆಗಳು, ನಂತರದ್ದು ನಮ್ಮದು, ಕೊನೆಯದು ತಿರುಚುತ್ತಿರುವ ಭಾಷೆಯ ಜಾಲದ್ದು. ಪಠ್ಯದಲ್ಲಿ  ಏನೇ ಪ್ರತಿನಿಧಿತವಾದರೂ ಅದು ಆ ಮೂಲಕ ಸಿದ್ಧಗೊಂಡ ಮರು ತಯಾರಿಕೆಯಾಗಿದೆ. ನವಚಾರಿತ್ರಿಕವಾದಿಗಳ ಪ್ರಬಂಧಗಳು ಯಾವಾಗಲೂ ಇನ್ನೊಂದು ಪುನರ್ನಿರ್ಮಾಣವನ್ನು, ಭೂತ ಕಾಲದ ಇನ್ನೊಂದು ಪರಿವರ್ತನೆಯನ್ನು ತಾನೇ ರಚಿಸುತ್ತದೆ, ನಾಟಕ ಅಥವಾ ಕವಿತೆ ಚರ್ಚೆಯ ವಿಷಯವಾಗಿರುವಾಗಲೇ ಆಯ್ದ ದಾಖಲೆಯನ್ನು ಮುಖಾಮುಖಿಯಾಗಿಸುತ್ತದೆೆ. ಈ ಆಯ್ದ ದಾಖಲೆಗಳು ನಾಟಕಕ್ಕೆ ನಿಜವಾಗಿ 'ಸುಸಂಗತ'ವಲ್ಲದಿದ್ದರೆ ಅವನ್ನು ಬಲಹೀನಗೊಳಿಸುವ  ಕುರಿತು ಆಕ್ಷೇಪ ಎತ್ತಲಾಗಿದೆ. ಇದರ ಉದ್ದೇಶ ಭೂತ ಕಾಲದಲ್ಲಿ ತನ್ನನ್ನು ಪ್ರತಿನಿಧಿಸುವುದಲ್ಲ, ಅದನ್ನು ಮರು ಏರ್ಪಾಟು ಮಾಡುವ ಮೂಲಕ ಹೊಸ ವಾಸ್ತವವನ್ನು ಮಂಡಿಸುವುದು.

ನವಚಾರಿತ್ರಿಕವಾದ ಮತ್ತು ಫೂಕೊ
ನವಚಾರಿತ್ರಿಕವಾದ ಸ್ಥಾಪಿತ ಮೌಲ್ಯಗಳ ವಿರುದ್ಧ ದೃಢ ನಿಶ್ಚಯವುಳ್ಳದ್ದು, ಯಾವಾಗಲೂ ವ್ಯಕ್ತಿಗತ ಸ್ವಾತಂತ್ರ್ಯದ ಉದಾರ ವಿಚಾರಗಳ ಪರ ಧ್ವನಿತವಾಗುವಂಥದ್ದು ಹಾಗೂ ಎಲ್ಲ ಬಗೆಯ ಭಿನ್ನತೆ ಮತ್ತು 'ತಿರುವು'ಗಳನ್ನು ಪ್ರಸಿದ್ಧ ಪಡಿಸುವಂಥದ್ದು, ಒಪ್ಪಿಕೊಳ್ಳುವಂಥದ್ದು. ಅದೇ ವೇಳೆಯಲ್ಲಿ ಏಕಕಾಲಕ್ಕೆ ದಮನಿಸುವ ಪ್ರಭುತ್ವ ಶಕ್ತಿಯ ಕಣ್ಣೆದುರು ಉಳಿದುಕೊಂಡವರಿಗೆ ಎದೆಗುಂದಿಸುವಂಥದ್ದು ಎಂದು ತೋರುತ್ತದೆ. ಆದರೂ ವ್ಯಕ್ತಿಗತ ಜೀವನದ ಅಂತರಂಗಿಕ ನೆಲೆಗಳಿಗೆಲ್ಲ ನುಸುಳಬಲ್ಲ ಹಾಗೂ ಕಳಂಕಿತವಾಗಿಸಬಲ್ಲ ಹಾಗೆ ಪ್ರಕಟವಾಗುತ್ತದೆ. ಪ್ರಭುತ್ವದ ಈ ತಿಳುವಳಿಕೆ ಸರ್ವಶಕ್ತಶಾಲಿ ಹಾಗೂ ಪೂರ್ಣ ನೋಟ ಬೀರುವ ಕಟ್ಟೆಗಳ ಹಾಗೆ. ಇದನ್ನು ಸಂರಚನೋತ್ತರ ಸಾಂಸ್ಕೃತಿಕ ಚರಿತ್ರಕಾರ ಮೈಕೆಲ್ ಫೂಕೊನಿಂದ ಪಡೆಯಲಾಗಿದೆ. ಪ್ರಭುತ್ವ - ಪೂರ್ಣ ನೋಟದ ಕಣ್ಗಾವಲು ಎಂಬುದು ಆತನ ಪ್ರಭಾವಯುತ ಪ್ರತಿಮೆ. ಪೂರ್ಣನೋಟದ ಕಟ್ಟೆ (ಪ್ಯನೊಪ್ಟಿಕಾನ್) ಎಂಬುದು ಹದಿನೆಂಟನೆಯ ಶತಮಾನದ ಪ್ರಯೋಜನವಾದಿ ಜೆರೆಮಿ ಬಾಂಥಮ್ ರೂಪಿಸಿದ ವೃತ್ತಾಕಾರ ಸೆರೆಮನೆಯ ವಿನ್ಯಾಸ. ಈ ವಿನ್ಯಾಸ ಶ್ರೇಣೀಕೃತ ಅಂತಸ್ತಿನ ಕೋಣೆಗಳನ್ನು ಒಳಗೊಂಡಿದ್ದು, ವೃತ್ತದ ಕೇಂದ್ರ ನೆಲೆಯಿಂದ ಒಬ್ಬನೇ ಕಾವಲುಗಾರ ಎಲ್ಲವನ್ನೂ ನಿಗಾ ವಹಿಸಬಲ್ಲುದಾಗಿತ್ತು. ಹೀಗಿದ್ದರೂ ಪ್ರಭುತ್ವ ತನ್ನ ಪೂರ್ಣ ನೋಟದ ಕಣ್ಗಾವಲನ್ನು ದೈಹಿಕ ಬಲ ಮತ್ತು ಹೆದರಿಸುವಿಕೆಯಿಂದ ಮಾಡದೆ 'ವ್ಯಾಖ್ಯಾನಾತ್ಮಕ ಆಚರಣೆಗಳ' ಶಕ್ತಿಯಿಂದ ನಿರ್ವಹಿಸುತ್ತದೆ. (ಫೂಕೊನ ಪಾರಿಭಾಷಿಕ ಪದ ಬಳಸಲು ಡಿಸ್ಕೋರ್ಸ್-'ವ್ಯಾಖ್ಯಾನ' ಎಂಬ ನಾಮಪದದಿಂದ ಡಿಸ್ಕೋರ್ಸ್-'ವ್ಯಾಖ್ಯಾನಾತ್ಮಕ ' ಎಂಬ ಗುಣವಾಚಕವನ್ನು ಪಡೆಯಲಾಗಿದೆ.) ಅದು ತನ್ನ ವಿಚಾರವನ್ನು ರಾಜಕಾರಣ ಎಂಬ ದೇಹದ ತುಂಬ ಸುತ್ತುತ್ತದೆ.
ವ್ಯಾಖ್ಯಾನವೆಂಬುದು ಕೇವಲ ಬರವಣಿಗೆ ಅಥವಾ ಮಾತಾಡುವ ಮಾರ್ಗವಲ್ಲವಾದರೂ ಸಮಾಜದ ಎಲ್ಲ ಜನರ ಆಲೋಚನೆಯನ್ನು ಒಳಗೊಂಡ ಸಮಸ್ತ 'ಮಾನಸಿಕ ಸ್ಥಿತಿ' ಮತ್ತು ವಿಚಾರವಾಗಿದೆ. ವ್ಯಾಖ್ಯಾನ ಏಕವ್ಯಕ್ತಿ ಮತ್ತು ಏಕಾಕೃತಿಯದಾಗಿರದೆ ಯಾವಾಗಲೂ ಬಹುರೂಪದಲ್ಲಿ ಇರುತ್ತದೆ. ಹಾಗಾಗಿ ಅಧಿಕಾರ ಸ್ವರೂಪಗಳ ಕಾರ್ಯಾಚರಣೆ ಕುಟುಂಬದಲ್ಲಿ ಹೇಗೋ ಹಾಗೆ ಸರಕಾರದ ಸ್ಥರಗಳಲ್ಲೂ ಒಂದು ಮಹತ್ವದ ಅಂಶವಾಗಿರುತ್ತದೆ. ಇದರಿಂದಾಗಿ ಅದರ ಸ್ಪರ್ಧೆ ರಾಜಕಾರಣಕ್ಕಷ್ಟೇ ಅಲ್ಲದೆ ಲೈಂಗಿಕ ರಾಜಕಾರಣದ ಬದಲಾವಣೆಯ ಹೋರಾಟವನ್ನೂ ಒಳಗೊಂಡಿರಬಹುದು. ಹಾಗೆಯೆ ಸ್ತ್ರೀವಾದಿ ವಿಮರ್ಶೆಯಲ್ಲಿ ತುಂಬ ಆಸಕ್ತವಾಗಿರುವ ವ್ಯಕ್ತಿಗತ ಪರಿಧಿ ಹಲವು ಮಾರ್ಗಗಳಲ್ಲಿ ರಾಜಕೀಯ ಕಾರ್ಯ ಸಾಧ್ಯ ಪರಿಧಿಯಾಗಿ ಬದಲಾಗುತ್ತದೆ. ಅಂದರೆ ನಾವಿಲ್ಲಿ ರಾಜಕಾರಣದ ಆಶಾವಾದದ ನೆಲೆಯನ್ನು ಕಾಣುತ್ತೇವೆ. ಮತ್ತೊಂದು ಕಡೆ ರಾಜಕೀಯ ಶಕ್ತಿ ಕಾರ್ಯ ಪ್ರವೃತ್ತವಾಗಿದ್ದಾಗ ಹಾಗೂ ಹಲವಾರು ಪರಿಧಿಗಳನ್ನು ವ್ಯಾಪಿಸುತ್ತಿರುವಾಗ, ಮೂಲಭೂತ ಬದಲಾವಣೆ ಮತ್ತು ಪರಿವರ್ತನೆಯ ಸಾಧ್ಯತೆ ತುಂಬಾ ದೂರದಲ್ಲಿರುವಂತೆ ತೋರುತ್ತದೆ.
ಸಮಗ್ರವಾಗಿ ನವಚಾರಿತ್ರಿಕವಾದ ಈ ಬಗೆಯ 'ಆಲೋಚನಾ ನಿಯಂತ್ರಣ'ವನ್ನು ಒತ್ತಿ ಹೇಳುವಂತೆ ತೋರುತ್ತದೆ. ಅಲ್ಲದೆ 'ದಾರಿ ತಪ್ಪಿದ' ಆಲೋಚನೆ ವಾಚ್ಯವಾಗಿ ಆಲೋಚಿಸಲಾಗದೆ (ಅಥವಾ ಆಲೋಚಿಸಲು ಮಾತ್ರ ಸಾಧ್ಯವಾಗಿ) ಇರುವುದು ಆಗಿರಬಹುದು ಎಂಬ ತೊಡಕಿನಿಂದ ಕೂಡಿದೆ. ಹಾಗಾಗಿ ಪ್ರಭುತ್ವ ಏಕಶಿಲ್ಪ ರಚನೆಯ ಹಾಗೆ ಕಾಣುತ್ತದೆ ಮತ್ತು ಬದಲಾವಣೆ ಬಹುಪಾಲು ಅಸಾಧ್ಯವಾಗಿ ಪರಿಣಮಿಸುತ್ತದೆ. ಪ್ರಭುತ್ವ ಶಿಕ್ಷೆ, ಸೆರೆಮನೆಗಳು, ವೈದ್ಯಕೀಯ ವೃತ್ತಿ ಹಾಗೂ ಲೈಂಗಿಕತೆ ಬಗೆಗಿನ ಶಾಸನಗಳಂಥ ನಿಭಾಯಿಸಬಲ್ಲ ಶಕ್ತಿ ನೀಡುವ ಸಂಸ್ಥೆಗಳತ್ತ ಫೂಕೊನ ಕೃತಿ ನೋಡುತ್ತದೆ. ಆಲ್ಥೂಸರ್ನಲ್ಲಿ 'ನಿಗ್ರಹಿಸುವ ಸ್ವರೂಪಗಳು' ಮತ್ತು 'ವೈಚಾರಿಕ ಸ್ವರೂಪಗಳು' ನಡುವೆ ಕಾಣುವುದಕ್ಕಿಂತ ಹೆಚ್ಚು ಬಿಗುವಿಲ್ಲದ ವೈಶಿಷ್ಟ್ಯಗಳನ್ನು ಫೂಕೊ ಹುಟ್ಟುಹಾಕುತ್ತಾನೆ. ಅದೇ ಬಗೆಯಲ್ಲಿ ಗ್ರಾಮ್ಸ್ಕಿಯ 'ಯಾಜಮಾನ್ಯತೆ' ಮತ್ತು ಫೂಕೊನ 'ವ್ಯಾಖ್ಯಾನಾತ್ಮಕ ಆಚರಣೆಗಳು' ನಡುವೆ ಸ್ಪಷ್ಟ ಸಂಬಂಧವಿದೆ. ಈ ಎಲ್ಲ ಸಂಬಂಧಗಳಿಂದಾಗಿ ಯಾರಿಂದ ಪ್ರಭುತ್ವ ಅಧಿಕಾರಹೀನಗೊಂಡಿತೋ ಅವರಿಂದಲೇ ಅಧಿಕಾರ ಮಾರ್ಗವನ್ನು ಅಂತರಂಗಿಕವನ್ನಾಗಿಸಿಕೊಂಡಿತು. ಅದರಿಂದಾಗಿ ಅದನ್ನು ಹೊರಗಿನಿಂದ ನಿರಂತರವಾಗಿ ನಿರ್ಬಂಧಿಸಲಾಗದಂತಾಯಿತು.
ನವಚಾರಿತ್ರಿಕವಾದ 'ಚಾರಿತ್ರಿಕವಾದ' ಎಂಬ ಪದವನ್ನು ಉತ್ತರಪದವಾಗಿ ಹೊಂದಿದೆ.  ಆದರೂ ಅಸಾಹಿತ್ಯಿಕ ಪಠ್ಯಗಳನ್ನು ಸಾಹಿತ್ಯಿಕ ವಿಮರ್ಶೆಯ ರೀತಿಯಲ್ಲಿ ತೀವ್ರ 'ನಿಕಟ ಓದಿ'ಗೆ ಒಳಪಡಿಸುತ್ತದೆ. ಇದು ಸಾಹಿತ್ಯಿಕ ಅಧ್ಯಯನಗಳ ಸಾಮ್ರಾಜ್ಯದ ಮಹತ್ತರ ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲೇಬೇಕು. ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವ ಸಂಗ್ರಹ ಮಾಡುವ ಬದಲು ಅಪರೂಪಕ್ಕೊಮ್ಮೊ ತನ್ನನ್ನೆ ಇಡಿಯಾಗಿ ಒಪ್ಪಿಸಿಕೊಂಡು ಬಿಡುತ್ತದೆ. (ದಾಖಲೆಯ ಸಾಂದರ್ಭೀಕರಣ ಸಾಮಾನ್ಯವಾಗಿ ಕ್ವಚಿತ್ತಾಗಿರುತ್ತದೆ, ಹೆಚ್ಚೆಂದರೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡುವ ಲೇಖನ ಉದ್ಯೋಗವಾಗಿರುತ್ತದೆ.) ನವಚಾರಿತ್ರಿಕವಾದದ ಅನ್ವೇಷಣೆ ಶೈಕ್ಷಣಿಕವಾಗಿ ಪ್ರತಿಯೊಂದನ್ನೂ ಒರೆಸಿ ಹಾಕಿದೆ. ಆದರೂ ನಂತರದಲ್ಲಿನ ಅದರ ಪಠ್ಯ ಪೂರ್ವಕಾಲದ ಬರವಣಿಗೆಯನ್ನು ಒಮ್ಮೆ ಗಮನಿಸಬಹುದು. ಇದರಿಂದ ಇದು 'ಹಾಳೆ ಮೇಲಿನ ಪದಗಳು' ಮಾತ್ರವಾಗಿದೆ. ಅವನ್ನು ಸಂದರ್ಭದಿಂದ ಸಡಿಲಿಸಿ ಸಾಮಗ್ರಿಯನ್ನು ಪ್ರತ್ಯೇಕಗೊಳಿಸಿದ, ಅಸಾಂದರ್ಭಿಕಗೊಳಿಸಿದ  ಪದ್ಯದ ಹಾಗೆ ಅಧ್ಯಯನ ಮಾಡುವ 1920ರಲ್ಲಿ ಐ.ಎ.ರಿಚರ್ಡ್ಸ್ ವಿಮರ್ಶೆಗೆ ನೀಡಿದ ಕ್ರಮವನ್ನು ಒಳಗೊಂಡಿದೆ. ಹೀಗೆ ಕೆಲವುಸಲ  ಐತಿಹಾಸಿಕ ಪಠ್ಯ ಲೈಂಗಿಕತೆಯ ನಡತೆಯಲ್ಲಾದ ಕೆಲವಂಶಗಳ ಬದಲಾವಣೆಯನ್ನು ಪ್ರತಿಪಾದಿಸುವ ಏಕಮಾತ್ರ ಸಾಕ್ಷಿಯಾಗಿ ಬಿಡುತ್ತದೆ. ಇಂಥ ಏಕಮಾತ್ರ ದಾಖಲೆಯನ್ನು ಆಧರಿಸಿದ ವಿಶ್ಲೇಷಣಾತ್ಮಕ ನಿಲುವು ಮಹತ್ವದ್ದಾಗುತ್ತದೆ. ಹಾಗಾಗಿ ಇತಿಹಾಸಕಾರರು ಮೆಚ್ಚಿದ ಅಥವಾ ನವಚಾರಿತ್ರಿಕವಾದ ಹೆಚ್ಚು ಪ್ರಾಮುಖ್ಯತೆಗೆ ನೀಡಿದ ವಿಧಾನಗಳನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇದೊಂದು ಇತಿಹಾಸ ಹೀನತೆಯ ಪರವಾಗಿ ಗಟ್ಟಿದನಿ ಎತ್ತುವ ಇತಿಹಾಸ 'ರಚನೆ'ಯ ಹಾದಿಯಾಗಿದೆ.

ನವಚಾರಿತ್ರಿಕವಾದದ ಅನುಕೂಲತೆಗಳು ಮತ್ತು ಅನಾನುಕೂಲತೆಗಳು
ಹೀಗಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ನವಚಾರಿತ್ರಿಕವಾದದ ಮನವಿ ಯಾವ ಅನುಮಾನವಿಲ್ಲದೆ ಮಹತ್ತರವಾದುದಾಗಿದೆ. ಮೊದಲನೆಯದು, ಸಂರಚನೋತ್ತರವಾದಿಗಳ ಚಿಂತನೆ ಕುರಿತು ಕಂಡುಕೊಂಡಿದ್ದಾಗಿದ್ದರೂ ಬಹಳಷ್ಟು ಭಾಗ ಶಬ್ದ ಸಂಪತ್ತು ಮತ್ತು ನಿಬಿಡ ಶೈಲಿಯಿಂದ ಕೂಡಿದ ಸಂರಚನೋತ್ತರ ಲಕ್ಷಣವನ್ನು ದೂರ ಮಾಡಿದೆ, ಹೆಚ್ಚು ಸುಗಮವಾದ ರೀತಿಯಲ್ಲಿ ಬರವಣಿಗೆ ಮಾಡಿ ತನ್ನ ಅಂಕಿಅಂಶಗಳನ್ನು ಮಂಡಿಸಿ ಮುಕ್ತಾಯ ಮಾಡುತ್ತದೆ. ಕೆಲವು ಬಾರಿ ಅಂಕಿಅಂಶಗಳ ವಿಶ್ಲೇಷಣಾ ರೀತಿಯನ್ನು ಪ್ರಶ್ನೆ ಮಾಡುವುದು ಸುಲಭವೂ ಆಗಿರುತ್ತದೆ. ಇದಕ್ಕೆ ಭಾಗಶಹ (ಫ್ರಾಯಿಡ್ ನ ಸಿದ್ಧಾಂತಗಳಲ್ಲಿ ಆಗಿರುವಂತೆ) ವ್ಯಾಖ್ಯಾನಗಳು ಪ್ರಾಯೋಗಿಕ ನೆಲೆಗಟ್ಟನ್ನು ಆಧರಿಸಿರುವುದು ಹಾಗೂ ಪರಿಶೀಲನೆಗೆ ಮುಕ್ತವಾಗಿ ದೊರಕುವಂತೆ ಮಾಡಿರುವುದು ಕಾರಣವಾಗಿರಬಹುದು. ಎರಡೆನೆಯದು, ಸಾಮಗ್ರಿ ಸ್ವತಹ ಆಕರ್ಷಕವಾಗಿದ್ದು, ಸಾಹಿತ್ಯಿಕ ಅಧ್ಯಯನದ ಸಂದರ್ಭದಲ್ಲಿ ಸಂಪೂರ್ಣವಾಗಿ ವಿಶಿಷ್ಟವಾಗಿದೆ. ಈ ಪ್ರಬಂಧಗಳು ಬೇರೆ ಯಾವುದೇ ವಿಮರ್ಶಾ ಪ್ರಸ್ತಾವದಿಂದ ರಚಿತವಾದವುಗಳಿಗಿಂತ ಭಿನ್ನ ಬಗೆಯದಾಗಿ ಕಾಣುವಂತಿವೆ, ಈ ಪ್ರಬಂಧಗಳಲ್ಲಿ ಸಾಹಿತ್ಯ ಕೃತಿಯ ಹಿಂದಿನ ಚರ್ಚೆಯನ್ನು ಉಲ್ಲೇಖಿಸದಿರುವ ಫಲವಾಗಿ ಕೂಡಲೆ ಸಾಹಿತ್ಯ ವಿದ್ಯಾರ್ಥಿಯ 'ಗೊಂದಲಗಳಿಲ್ಲದ ' 'ಕತ್ತರಿಸಿ ಹಾಕುವ ' ಭಾವನೆ ಅವಕ್ಕೆ ಗಟ್ಟಿತನ ಮತ್ತು ನಾಟಕೀಯ ಶಕ್ತಿಯನ್ನು ನೀಡುತ್ತದೆ. ಮೂರನೆಯದು, ನವಚಾರಿತ್ರಿಕವಾದಿಗಳ ಬರವಣಿಗೆಗೆ ರಾಜಕಾರಣದ ಮೊನಚು ಯಾವಾಗಲೂ ಹರಿತವಾಗಿರುತ್ತದೆ. ಆದರೆ ಅದೇ ವೇಳೆಯಲ್ಲಿ ಮಾರ್ಕ್ಸಿಸ್ಟ್ ವಿಮರ್ಶೆಯ 'ನೇರ ಸ್ವಭಾವ'ದಲ್ಲಿ ಅದು ಮೇಲಿಂದ ಮೇಲೆ ಎದುರಾದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಹೆಚ್ಚು ಬಹಿರಂಗವಾಗದ ಚರ್ಚಾಸ್ಪದ ವಿಷಯವೆಂದು ತೋರುತ್ತದೆ. ಅಲ್ಲದೆ ತನ್ನದೇ ದನಿಯುಳ್ಳ ಐತಿಹಾಸಿಕ ಸಾಕ್ಷ್ಯಾಧಾರಗಳಿಗೆ ಅವಕಾಶ ಮಾಡಿಕೊಡಲು ಹೆಚ್ಚು ಆಸಕ್ತವಾಗಿರುತ್ತದೆ.

ಸ್ವಲ್ಪ ಯೋಚಿಸಿ
ಸಾಹಿತ್ಯಿಕ ಸಾಮಾಗ್ರಿ ಮತ್ತು ಸಮಕಾಲೀನ ಸಾಹಿತ್ಯೇತರ ಪಠ್ಯಗಳನ್ನು ನವಚಾರಿತ್ರಿಕವಾದ ಮುಖಾಮುಖಿ 'ಮಾಡುತ್ತಿದೆ'. ಈ ಸೂತ್ರ ಬಳಸಿದ ಪ್ರಕಟಿತ ಪ್ರಬಂಧಗಳನ್ನು ಈಗ ತಾನೆ ಓದಿ ಅದನ್ನು ರೂಪಿಸಲು ಹೇಗೆ ತಾನೆ  ಸಾಧ್ಯ? ಉದಾಹರಣೆಗೆ, ಶೇಕ್ಸ್ ಪಿಯರ್ ನ ಕಾಮಿಡಿ ಕುರಿತು ಪ್ರಬಂಧ ರಚನೆಗೆ ನವಚಾರಿತ್ರಿಕವಾದಿಗಳ ವಿಧಾನವನ್ನು ಅನುಸರಿಸಲು ಇಚ್ಛಿಸಿದಿರಿ ಎಂದು ಇಟ್ಟುಕೊಳ್ಳೋಣ. ಶೇಕ್ಸ್ ಪಿಯರ್ ನ ಕಾಮಿಡಿಗಳಿಗೆ ತಕ್ಕ ಐತಿಹಾಸಿಕ ಸಾಮಗ್ರಿ ಎಲ್ಲಿ ತಡುಕುತ್ತೀರಿ? ಸಾಮಗ್ರಿಯೋನೋ ಪತ್ತೆ ಮಾಡಿದಿರಿ. ನಂತರ ನಿಮ್ಮ ಪ್ರಬಂಧದ ಚೌಕಟ್ಟು ಏನಾಗಿರುತ್ತದೆ?
ಇದು ಒಳಗೊಂಡಿರುವ ಕಷ್ಟ ಪರಂಪರೆಯನ್ನು ಪರಿಶೀಲಿಸಲು ನಾನು ಬಯಸುವುದಿಲ್ಲ. ಆದರೆ ಇಲ್ಲೊಂದು ಸಲಹೆ ನೀಡುತ್ತೇನೆ: ಶೇಕ್ಸ್ ಪಿಯರ್ ನ ಕಾಮಿಡಿಗಳ ವಸ್ತು 'ಮನೆ'ಯಾಗಿದೆ. ಹಾಗೆಯೆ, ಲೈಂಗಿಕ ನೀತಿ, ಪ್ರೇಮದ ನಡವಳಿಕೆ, ಸ್ತ್ರೀ ಪುರುಷರ ಸಂಬಂಧಗಳು ಮತ್ತು ತಲೆಮಾರುಗಳ ಸಂಘರ್ಷಗಳಿಗೆ ಸಂಬಂಧಿಸಿದುದಾಗಿದೆ. ಹೀಗಿದ್ದರೂ ನಾವು ಸಾಮಾಜಿಕ ಮತ್ತು ಕೌಟುಂಬಿಕ ಚರಿತ್ರೆ ಕುರಿತ ಸಾಮಗ್ರಿಗಾಗಿ ಹುಡುಕಾಟ ನಡೆಸುತ್ತಿರುತ್ತೇವೆ.
ಲಾರೆನ್ಸ್ ಸ್ಟೋನ್ ನ ಜನಪ್ರಿಯ ಪುಸ್ತಕ 'ಇಂಗ್ಲೆಂಡಿನಲ್ಲಿ ಕುಟುಂಬ, ಮದುವೆ ಮತ್ತು ಕಾಮ-1500-1800' ('ದಿ ಫ್ಯಾಮಿಲಿ, ಸೆಕ್ಸ್  ಅಂಡ್ ಮ್ಯಾರೇಜ್ ಇನ್ ಇಂಗ್ಲೆಂಡ್ 1500-1800', ಪೆಂಗ್ವಿನ್ 1979) ಎಂಬ ಪುಸ್ತಕ ಇಲ್ಲಿ ಪ್ರಸ್ತುತವಾದುದು. ಈ ಕೃತಿಯಲ್ಲಿನ ಪುರುಷಶಾಹಿಯ ಮರು ಬಲಪಡಿಸುವಿಕೆ (ದಿ ರಿ ಇನ್ಫೋರ್ಸಮೆಂಟ್ ಆಫ್ ಪೆಟ್ರಿಯಾಕರ್) ಎಂಬ ಐದನೆಯ ಅಧ್ಯಾಯ ಉಪಯುಕ್ತ ಸಾಮಗ್ರಿಗಳಿಂದ ಕೂಡಿದೆ. ಗಂಡ ಮತ್ತು ಹೆಂಡತಿ (ಹಸ್ಬೆಂಡ್ ಅಂಡ್ ವೈಫ್) ಎಂಬ ಮೂರನೆಯ ಭಾಗದಲ್ಲಿ ಮಡದಿಯರ ಅಧೀನತೆ (ದಿ ಸಬಾರ್ಡಿನೇಶನ್ ಆಫ್ ವೈವ್ಸ್) ಹಾಗೂ ಮಹಿಳೆಯರ ಶಿಕ್ಷಣ (ದಿ ಎಜುಕೇಶನ್ ಆಫ್ ವುಮನ್) ಎಂಬ ಉಪಭಾಗಗಳಿವೆ. ಅಧ್ಯಾಯ ಏಳು ಮತ್ತು ಎಂಟು ಮದುವೆ  ಮತ್ತು ನ್ಯಾಯಾಲಯ (ಮ್ಯಾರೇಜ್ ಅಂಡ್ ಕೋರ್ಟ್ ಶಿಪ್) ಕುರಿತಿದ್ದರೆ ಐದನೆಯ ಭಾಗ ಕಾಮ (ಸೆಕ್ಸ್)ವನ್ನು ಕುರಿತಿದೆ.
ಅಷ್ಟು ಜನಪ್ರಿಯವಲ್ಲದ ಆದರೆ ನವಚಾರಿತ್ರಿಕವಾದಿಗಳು ಬಳಸಿದ ಸಮಾನ ಅಂಕಿಅಂಶಗಳನ್ನು ಒಳಗೊಂಡ ಕೃತಿ-ಸೆಕ್ಸ್ನ್ ಮಿಡ್ಲಸೆಕ್ಸ್ : ಪಾಪ್ಯುಲರ್ ಮೋರ್ಸ್ ಇನ್ ಮಸ್ಯಾಚುಸೆಟ್ಸ್ ಕಂಟ್ರಿ, 1649-1699- ರಾಜರ್ ಥಾಮಸನ್, ಯುನಿವಸಿಟರ್ಿ ಆಫ್ ಮಸ್ಯಾಚುಸೆಟ್ಸ್ ಪ್ರೆಸ್ (1986). ಈ ಪುಸ್ತಕದ ಮೊದಲ ಭಾಗದಲ್ಲಿ ಪಡ್ಡೆ ಮೂರ್ಗಳು (ಅಡೊಲಸೆಂಟೆ ಮೂರ್ಸ್), ಎರಡನೆಯ ಭಾಗದಲ್ಲಿ ವಿವಾಹಿತ ಮೋರ್ಗಳನ್ನು (ಮ್ಯಾರಿಡ್ಸ್ ಮೋರ್ಸ್) ಕುರಿತಿವೆ.
ಈ ಬಗೆಯ ಪ್ರಕಟಿತ ಚಾರಿತ್ರಿಕ ಅಂಕಿ ಅಂಶ ಮತ್ತು ಸಾಮಾಜಿಕ ಚರಿತ್ರೆ, ಹೊಸ ಚಾರಿತ್ರಿಕ ಪ್ರಸ್ತಾವಕ್ಕೆ `ಸಹಪಠ್ಯ'ವಾಗಿ ಸುಲಭ ಆಕರಗಳನ್ನು ಒದಗಿಸುತ್ತದೆ. ವಿಧಾನದೊಂದಿಗಿನ ಸಮಸ್ಯೆಗಳನ್ನು ಉಪಮಾರ್ಗಗಳಲ್ಲಿ ಕಳೆದುಕೊಳ್ಳದೆ ಮುಂದೆ ಸಾಗಿಹೋದರೆ ಕೊನೆಯ ಪಕ್ಷ ನವಚಾರಿತ್ರಿಕವಾದದ ವಿಮರ್ಶೆಯ ಪ್ರಾಯೋಗಿಕ ನೆಲೆಯನ್ನು 'ಅಂಗೈ ಮೇಲೆ ಅನುಭವ' ಪಡೆಯಬಹುದು.

ನವಚಾರಿತ್ರಿಕವಾದಿಗಳ ಕಾರ್ಯವಿಧಾನ
1, ಅವರು ಸಾಹಿತ್ಯಿಕ ಮತ್ತು ಅಸಾಹಿತ್ಯಿಕ ಪಠ್ಯಗಳನ್ನು ಮುಖಾಮುಖಿ ಮಾಡುತ್ತಾರೆ. ಅಸಾಹಿತ್ಯಿಕ ಪಠ್ಯದ ಬೆಳಕಿನಲ್ಲಿ ಸಾಹಿತ್ಯಿಕ ಪಠ್ಯವನ್ನು  ನೀಡುತ್ತಾರೆ.
2. ಈ ಮೂಲಕ ಅವರು ಅಂಗೀಕೃತ ಪಠ್ಯವನ್ನು 'ಅಪ್ರಸಿದ್ಧ'ಗೊಳಿಸುತ್ತಾರೆ. ಇದುವರೆಗಿನ ಸಾಹಿತ್ಯಿಕ ವಿದ್ವತ್ತಿನ ಸಂಚಿತ ಪ್ರಭಾವದಿಂದ ಸಾಹಿತ್ಯವನ್ನು ಬೇರೆ ಮಾಡುತ್ತಾರೆ ಹಾಗೂ ಹೊಚ್ಚ ಹೊಸದಾಗಿ ನೋಡುತ್ತಾರೆ.
3. ಅವರು (ಪಠ್ಯ ಮತ್ತು ಸಹಪಠ್ಯ ಎರಡರೊಳಗೂ) ಪ್ರಭುತ್ವ ಶಕ್ತಿ ಹಾಗೂ ಅದನ್ನು ಹೇಗೆ ನಿಭಾಯಿಸಲಾಗಿದೆ ಎಂಬ ವಿವಾದಗಳ ಕುರಿತು, ವಸಾಹತುಶಾಹಿ ಪ್ರಕ್ರಿಯೆ ಮತ್ತದರ ಸಹವತರ್ಿ 'ಮನೋವೃತ್ತಿ' ಕುರಿತು ಗಮನ ಕೇಂದ್ರೀಕರಿಸುತ್ತಾರೆ.
4. ಅವರು ಹಾಗೆ ಮಾಡುತ್ತ ಸಂರಚನೋತ್ತರವಾದ ನಿಲುವಿನ ದೃಷ್ಟಿಕೋನವನ್ನು -ವಿಶೇಷವಾಗಿ ವಾಸ್ತವದ ಪ್ರತಿಯೊಂದೂ ಮುಖ ಪಠ್ಯೀಕೃತಗೊಂಡಿದೆ ಎಂಬ ಡೆರಿಡಾನ ತಿಳುವಳಿಕೆಯನ್ನು ಮತ್ತು ಫೂಕೊನ ಪ್ರಬಲ 'ವ್ಯಾಖ್ಯಾನಾತ್ಮಕ ಆಚರಣೆಗಳು' ನಿರ್ಣಯಿಸಲ್ಪಟ್ಟ ಸಾಮಾಜಿಕ ಸಂರಚನೆಯ ವಿಚಾರವನ್ನು -ಬಳಸಿಕೊಳ್ಳುತ್ತಾರೆ.

ನವಚಾರಿತ್ರಿಕವಾದ ; ಒಂದು ಉದಾಹರಣೆ
ನವಚಾರಿತ್ರಿಕವಾದದ ಪ್ರಾಯೋಗಿಕ ಉದಾಹರಣೆಗಾಗಿ ಗ್ರೀನ್ ಬ್ಲಾಟ್ ನ ಬದಲು ಲೂಯಿಸ್ ಮಾಂಟ್ರೋಸ್ ನ ಪ್ರಬಂಧವೊಂದನ್ನ್ರು ಪರಿಶೀಲನೆಗೆ ಒಳಪಡಿಸಬಹುದು. ಆತನ ಪ್ರಬಂಧ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಅಂಡ್ ದಿ ಶೇಪಿಂಗ್ ಫ್ಯಾಂಟಸೀಸ್ ಆಫ್ ಎಲಿಜಬೆತನ್ ಕಲ್ಚರ್: ಜೆಂಡರ್, ಪವರ್, ಫಾರಂ' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಮತ್ತು ಎಲಿಜಬೆತನ್ ಸಂಸ್ಕೃತಿ ರೂಪಿತ ರಮ್ಯಾದ್ಭುತಗಳು : ಲಿಂಗ, ಅಧಿಕಾರ, ರೂಪ) ಇದು ನವಚಾರಿತ್ರಿಕವಾದದ 'ತಾಯಿ ಪತ್ರಿಕೆ'ಯಾದ ಅಮೆರಿಕೆಯ ನಿಯತಕಾಲಿಕೆ 'ರೆಪ್ರಸೆಂಟೇಶನ್ಸ್'ನಲ್ಲಿ ಮೊದಲು ಪ್ರಕಟಗೊಂಡು ವಿಲ್ಸನ್ ಮತ್ತು ಡಟ್ಟನ್ ಪ್ರಕಾಶನ ಸಂಸ್ಥೆಯಿಂದ ಮರುಮುದ್ರಣ ಕಂಡಿತು. ಮಾಂಟ್ರೋಸ್ ನ ನವಚಾರಿತ್ರಿಕವಾದ ಕುರಿತ ಪ್ರಸಿದ್ಧ ವ್ಯಾಖ್ಯೆಯೆಂದರೆ ಅದು ಪಠ್ಯದ ಚಾರಿತ್ರಿಕತೆ ಮತ್ತು ಚರಿತ್ರೆಯ ಮೂಲಪಠ್ಯವನ್ನು ಕೇಂದ್ರೀಕರಿಸಿರುತ್ತದೆ. ಪ್ರಬಂಧ ಈ ಹೇಳಿಕೆಯನ್ನು ಮೈ ತಳೆದಿರುವಂತೆ ಕಾಣುತ್ತದೆ. ಆತನ ಒಟ್ಟಾರೆ ಸಿದ್ಧಾಂತ : 'ಸಂಸ್ಕೃತಿ ಯಾವುದರಿಂದ ಹುಟ್ಟಿದೆಯೋ ಅದು ಸಂಸ್ಕೃತಿಯನ್ನು ಹುಟ್ಟಿಸುವ, ಮತ್ತು ರಮ್ಯಾದ್ಭುತಗಳು ಯಾವುದರಿಂದ ರೂಪಿತವಾಗಿದೆಯೋ ಅವು ರಮ್ಯಾದ್ಭುತವನ್ನು ರೂಪಿಸುವ ' ಆಟವಾಗಿದೆ (ಪು.130). ಹಾಗೆಯೆ ಎಲಿಜಬೆತ್(ಕನ್ನೆ) ರಾಣಿಯ ಆಚರಣೆ, ಸ್ಪೆನ್ಸರ್ನ  'ದಿ ಫೇರಿ ಕ್ಚೀನ್'ನಂಥ ಸಾಹಿತ್ಯ ಮತ್ತು ಇಡೀ ತಂಡದ ಆಸ್ಥಾನ ನೃತ್ಯ, ಮೆರವಣಿಗೆ ಇವೆರಡನ್ನೂ ಪೋಷಿಸಿವೆ ಹಾಗೂ ಅಂಥ ಸಾಹಿತ್ಯವನ್ನು ಸೃಷ್ಟಿಸಿವೆ. ಸಾಹಿತ್ಯ ಮತ್ತು ಜೀವನ ಒಂದನ್ನೊಂದು ಉದ್ದೀಪಿಸಿದೆ ಹಾಗೂ ಪರಸ್ಪರ ಪಾತ್ರ ವಹಿಸಿದೆ. ನಿಗೂಢ ಹಾಗೂ ಮಾಂತ್ರಿಕ ಶಕ್ತಿಯ ಕನ್ಯತ್ವ ಪಡೆದಿರುವ ಎಲಿಜಬೆತ್ ತನ್ನನ್ನು ರಾಣಿಯ ಹಾಗೆ ಸಾಕಾರಗೊಳಿಸಬಲ್ಲಳು. ಏಕೆಂದರೆ, ಇಂಥ ಪ್ರತಿಮೆಗಳನ್ನು ಆಸ್ಥಾನದ ಮೊಗವಾಡ ನಾಟಕಗಳು, ವಿನೋದ ನಾಟಕಗಳು ಮತ್ತು ಜಾನಪದ ಮಹಾಕಾವ್ಯಗಳಲ್ಲಿ ಚಾಲ್ತಿಗೆ ತರಲಾಗಿದೆ. ಇದಕ್ಕೆ ಪೂರಕವಾಗಿ ಎಲಿಜಬೆತಳ ಚಿತ್ತವೂ ಅಂಥ ಕೃತಿ ಮತ್ತು ಪ್ರತಿಮೆಗಳ ಉತ್ಪನ್ನ ಮತ್ತು ಉತ್ತೇಜನವನ್ನು ಉದ್ದೀಪಿಸುತ್ತದೆ. ಇದರಿಂದಾಗಿ ಈ ಅರ್ಥದಲ್ಲಿ ಚರಿತ್ರೆಯನ್ನು ಮೂಲಪಾಠವನ್ನಾಗಿಯೂ ಪಠ್ಯಗಳನ್ನು ಚಾರಿತ್ರಿಕವನ್ನಾಗಿಯೂ ಮಾಡಲಾಯಿತು. ಚಲನಚಿತ್ರದ ಗಂಡಸುತನ ಮತ್ತು ಹೆಣ್ಣುತನದ ಪ್ರತಿಮೆಗಳು ನಮ್ಮ ಜೀವನವನ್ನು ವ್ಯಾಪಿಸಿರುವುದು ಹಾಗೂ ನಮ್ಮನ್ನು ಪ್ರತಿನಿಧಿಸುವ ಮಾರ್ಗವನ್ನು ನಮಗೆ ನೀಡಿರುವುದು ಒಂದು ಸರಳ ಆಧುನಿಕ ಪರ್ಯಾಯವಾಗಿದೆ. ಅದು ನಮಗೆ 'ಪಾತ್ರ ಮಾದರಿ'ಗಳನ್ನು ನೀಡುತ್ತದೆ ಮತ್ತು ಅದರೊಳಗೆ ನಾವು ಬಂದಿಯಾಗಿ ಬಿಡುತ್ತೇವೆ. ಹಾಗಾಗಿ ವಾಸ್ತವ ಜೀವನ ಜೀವನದ ಸಿನಿಮೀಯ ಪ್ರಾತಿನಿಧ್ಯವನ್ನು ಅಣಕಿಸುತ್ತದೆ.
ಮಾಂಟ್ರೋಸ್ನ ಪ್ರಬಂಧ ಕೂಡ ನವಚಾರಿತ್ರಿಕವಾದದ ಅತಿ ಉತ್ತಮ ವಾದವನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಮನೋವಿಶ್ಲೇಷಣೆಯನ್ನು ವಿಶೇಷವಾಗಿ ಫ್ರಾಯಿಡ್ ನ ಕನಸಿನ ವಿಶ್ಲೇಷಣೆ ಮತ್ತು ಸ್ತ್ರೀವಾದವನ್ನು ಚಿತ್ರಿಸುತ್ತದೆ. ಅದು ಸೈಮನ್ ಫೋರ್ಮನ್ನ ಕನಸಿನ ವಿವರಗಳೊಂದಿಗೆ ಆರಂಭಗೊಳ್ಳುತ್ತದೆ. ಈಗಾಗಲೇ ಹೇಳಿರುವಂತೆ, ಫೋರ್ಮನ್ ರಾಣಿಯೊಂದಿಗಿನ ಶೃಂಗಾರ ಸಮಾಗಮವನ್ನು, ನಂತರ ಹಿರಿಯ ಹೆಂಗಸರೊಂದಿಗಿನ ಸಂಬಂಧವನ್ನು ವಿವರಿಸುತ್ತಾನೆ. ರಾಣಿಗಾಗಿ 'ಕಾಯುವುದು' (ಕಾಯುತ್ತ ಕುಳಿತುಕೊಳ್ಳುವುದು) ಹಾಗೂ ಆಕೆಗಾಗಿ 'ಕಾಯುವುದು' (ಉದ್ವಿಗ್ನಗೊಳ್ಳುವುದು) ಎಂಬ ಶ್ಲೇಷೆಯಾಗಿ ಕನಸು ಬದಲಾಗುತ್ತದೆ. ಆಕೆಯ ಉಡುಪು ಕೆಸರಿನಲ್ಲಿ ಜೋತು ಬಿದ್ದಿದೆ. ಇದಕ್ಕೆ ಕಾರಣವಾದ ಆಕೆಯ ಉದರವನ್ನು ಎತ್ತಿ ಕಟ್ಟುವ ಮೂಲಕ ಅವನು ಸಮಸ್ಯೆಗೆ ಪರಿಹಾರ ನೀಡುತ್ತಾನೆ (ಅಂದರೆ ಕಾಯುವುದು ನಿನಗಾಗಿ ಹೊರತು ಕಾಯುವುದು ನಿನ್ನಿಂದಾಗಿ ಅಲ್ಲ). ಕನಸಿನಲ್ಲಿ ಫೋರ್ಮನ್ ನು 'ಎತ್ತರದ, ಕೆಂಪುಗಡ್ಡದ ನೇಕಾರ'ನ ಪೀಡನೆಗೊಳಗಾಗಿದ್ದ ರಾಣಿಯನ್ನು ಆಗ ತಾನೇ ಕಾಪಾಡಿಕೊಳ್ಳುತ್ತಾನೆ. ಮಾಂಟ್ರೋಸ್ ಇದನ್ನು ಎಡಿಪಸ್ ಕಾಂಪ್ಲೆಕ್ಸ್ಗೆ ಸಂಬಂಧಿಸಿದ ತ್ರಿಕೋನ ಸಮಸ್ಯೆಯ ಹಾಗೆ ನಿರೂಪಿಸುತ್ತಾನೆ. ದೇಶದ ಮಾತೆಯ ಹಾಗೆ ತನ್ನನ್ನು ಬಿಂಬಿಸಿಕೊಂಡಿರುವ  ರಾಣಿಯ ಯೋಜನೆಗೆ ಇದನ್ನು ಸಂಬಂಧ ಕಲ್ಪಿಸುತ್ತಾನೆ. ಆದರೆ ಆಕೆ ಮುಕ್ತ ವಿಲಾಸಿನಿ ಹಾಗೂ ಉದ್ರೇಕಕಾರಿ ಕನ್ನೆಯ ಹಾಗೆ. ಮಾಂಟ್ರೋಸ್ ಆಕೆಯ ಉಡುಪು ವಿನ್ಯಾಸದ ಅತಿರೇಕವನ್ನು ನಿರೂಪಿಸಲು ಫ್ರೆಂಚ್ ರಾಯಭಾರಿಯ ವಿವರಗಳನ್ನು ಉದ್ಧರಿಸುತ್ತಾನೆ (ಅವಳು ತನ್ನ ಉಡುಪಿನ ಮುಂಭಾಗ ತೆರೆದಿಟ್ಟಂತೆ ಧರಿಸಿದ್ದಳು. ಇದರಿಂದ ಅವಳ ಅಂತರಂಗವನ್ನು ಯಾರೂ ತಿಳಿಯಬಲ್ಲವರಾಗಿದ್ದರು. ಪು.111).  ಆನಂತರ ಅವನು ಈ ಎಲ್ಲವನ್ನೂ -ಅಧಿಕಾರವೆಲ್ಲ ಪುರುಷತ್ವದಲ್ಲಿ ಉಳಿದುಬಿಟ್ಟಿರುವ, ಹೆಣ್ಣು ಎಂದಿಗೂ ಅಧಿಕಾರ ಚಲಾಯಿಸದಿದ್ದರೂ ತನಗೆ ಸಂಬಂಧಿಸಿದ ಸ್ತ್ರೀ-ಪುರುಷರನ್ನೊಳಗೊಂಡು ಎಲ್ಲ ವಿಷಯಗಳ ಮೇಲೆ ಹಾಗೂ ತನ್ನ ಪುರುಷ ಆಸ್ಥಾನಿಕರ ಜೀವನೋಪಾಯವನ್ನು ನಿಲ್ಲಿಸುವ ಅಥವಾ ಮುಂದುವರೆಸುವ -ಜೀವನದ ಪರಮಾಧಿಕಾರ ಹೊಂದಿರುವ ಸುವ್ಯವಸ್ಥಿತ ಪುರುಷ ಪ್ರಧಾನ ವ್ಯವಸ್ಥೆಯ ವಿಚಿತ್ರ ಪರಿಸ್ಥಿತಿ ಹುಟ್ಟು ಹಾಕಿರುವ ಬಿಕ್ಕಿಟ್ಟಿಗೆ ಸಂಬಂಧ ಕಲ್ಪಿಸುತ್ತಾನೆ. ಶೇಕ್ಸ್ಪಿಯರ್ನ ನಾಟಕಗಳಲ್ಲಿ ರಾಣಿ 'ಯಜಮಾನಿಕೆ' ನಡೆಸುವ ಹಾಗೂ ಆ ಮೂಲಕ ಸ್ತ್ರೀಯಾಗಿದ್ದ ಹಲವಾರು ನಿದರ್ಶನಗಳು ಇವೆ. ಅಮೆಜೋನಿಯನ್ ರಾಣಿ ಹಿಪ್ಪೊಲೈಟಳು ಥೆಸಿಯಸ್ನಿಂದ ಸೋಲು ಅನುಭವಿಸುತ್ತಾಳೆ. ನಂತರ ಅವನಿಗೆ ತನ್ನನ್ನು ಒಪ್ಪಿಸಿಕೊಂಡು ಮದುವೆಯಾಗುತ್ತಾಳೆ. ಅತಿಸುಂದರಿಯರ ರಾಣಿಯಾದ ಟೈಟಾನಿಯಾ ತನ್ನ ಬದಲಾದ ಹುಡುಗನ ಪ್ರೀತಿ ವಿಷಯದಲ್ಲಿ ತನ್ನ ಗಂಡ ಒಬೆರಾನ್ನನ್ನು ದೂಷಿತನನ್ನಾಗಿ ಮಾಡುತ್ತಾಳೆ. ಇದರಿಂದಾಗಿ ಆಕೆ ಅವನಿಂದ ಅಪಮಾನಿತಳಾಗುವಲ್ಲಿ ಯಕ್ಷ ಒಂದು ಸಲ ಮಾಟಮಂತ್ರ ನಡೆಸುತ್ತಾನೆ. ಇದರ ಪರಿಣಾಮವಾಗಿ ನಿದ್ದೆಯಿಂದ ಆಕೆ ಎಚ್ಚರಗೊಂಡಾಗ ಮೊದಲು ಕಂಡ ವ್ಯಕ್ತಿಯನ್ನು ಪ್ರೇಮಿಸುತ್ತಾಳೆ. ಇಡೀ ನಾಟಕ ಹೆಣ್ಣುಮಕ್ಕಳ ಮೇಲಿನ ತಂದೆಯರ ಹಕ್ಕುಗಳು, ಹೆಂಡತಿಯರ ಮೇಲಿನ ಗಂಡಂದಿರ ಹಕ್ಕುಗಳು ಹಾಗೂ ಪುರುಷರ ಪೂರ್ವಭಾವಿ ಬಯಕೆಗಳಿಗೆ ಸ್ತ್ರೀಯರು ಈಡಾಗುವುದೇ ತುಂಬಿಹೋಗಿದೆ.  ನಾಟಕ 'ಹರ್ಷ'ದಿಂದ ಕೊನೆಯಾಗುವುದು ಪುರುಷ ಪ್ರಾಧಾನ್ಯತೆಯ ಬಲಪಡಿಸುವಿಕೆಯನ್ನು ಅವಲಂಬಿಸಿದೆ.
ಎ ಮಿಡ್ಸಮ್ಮರ್ ನೈಟ್ಸ್ಡ್ರೀಮ್ನ ಸಂಭ್ರಮದ ಮುಕ್ತಾಯ; ಅದರ ರಮ್ಯ ಮನೋಭಾವದ ಆಚರಣೆ ಮತ್ತು ಪ್ರಜನನ ಶಕ್ತಿಯ ಲೈಂಗಿಕ ಮಿಲನ- ಇವು ಜೀವ ವಿರೋಧಿ ಯುದ್ಧ ಕಲಿಗಳು, ತಾಯಂದಿರ ಯಜಮಾನಿಕೆ, ಸ್ವಚ್ಛಂಧ ಸ್ವಭಾವದ ಹೆಂಡತಿಯರಲ್ಲಿರುವ ಪ್ರಕಟಿತ ಸ್ತ್ರೀ ಸ್ವಾಭಿಮಾನ ಮತ್ತು ಚೈತನ್ಯ, ಹಾಗೂ ಸಇಚ್ಛೆಯ ಹೆಣ್ಣುಮಕ್ಕಳು ಗಂಡಂದಿರ ಮತ್ತು ಯಜಮಾನರ ಹಿಡಿತಕ್ಕೊಳಪಡುವ ಪ್ರಕ್ರಿಯೆಯ ಯಶಸ್ಸನ್ನು ಅವಲಂಬಿಸಿದೆ (ಪು.120).
ಇದರಿಂದ ನಾಟಕ ನಂಬಿಕೆ ದ್ರೋಹವನ್ನು ಧ್ವನಿಸುತ್ತಿರುವ ಹಾಗೆ ಕಾಣಬಹುದಾಗಿದೆ ಎಂದು ಸೂಚಿಸಲಾಗಿದೆ. ಆದ್ದರಿಂದ
ಎಲಿಜಬೆತ್(ಕನ್ನೆ) ರಾಣಿ ತನ್ನ ಸ್ವಂತ ವಿಷಯದಲ್ಲಿ ಕನ್ಯಾಮಾತೆಯಾಗಿ ತೋರಿಸಿಕೊಂಡಾಗ ಗಂಡಸಿನ ಪ್ರಜನನ ಶಕ್ತಿ. ಸ್ವಯಂ ಜನನ ವಿಷಯ ಹಾಗೂ ಹೆಂಗಸರ ಪ್ರಭುತ್ವ ರಾಜದ್ರೋಹದ ಅಸ್ತ್ರವಾಗುತ್ತದೆ. ವೈಭವೋಪೇತ ರಾಜಾಸ್ಥಾನದಲ್ಲಿ ರಾಣಿ ಯಾವಾಗಲೂ ಆಕರ್ಷಣೆಯ ಕೇಂದ್ರ. ರಾಣಿಯ ಕನ್ಯತ್ವ ಮಾಂತ್ರಿಕವಾದ ಪ್ರಬಲ ಸ್ವತಂತ್ರ ಶಕ್ತಿ. ಹಾಗಿದ್ದರೂ ಎ ಮಿಡ್ಸಮ್ಮರ್ ನೈಟ್ಸ್ಡ್ರೀಮ್ನಲ್ಲಿ ಅಂಥ ಮಾಂತ್ರಿಕ ಶಕ್ತಿಗಳನ್ನು ರಾಜನಿಗೆ ಆರೋಪಿಸಲಾಗಿದೆ (ಪು.127).
ಇದರಿಂದ 'ಶೇಕ್ಸ್ ಪಿಯರ್ ನ ಸುಖಾಂತ ನಾಟಕ ರಾಜಪ್ರಭುತ್ವಕ್ಕೆ ಸಲ್ಲಿಸುವ ಮೇಲುತೋರಿಕೆಯ ಗೌರವಾದರವನ್ನು ಸಾಂಕೇತಿಕವಾಗಿ ತಟಸ್ಥಗೊಳಿಸುತ್ತದೆ' (ಪು.127). ಎಲಿಜಬೆತ್ಗೂ ಉಳಿದ ಹೆಂಗಸರಿಗೂ ಇರುವ ವ್ಯತ್ಯಾಸವನ್ನು ಸತತವಾಗಿ ಒತ್ತಿ ಹೇಳುವ ಮೂಲಕ ಪ್ರಭುಶಕ್ತಿಯ ಮೇಲುತುದಿಯಲ್ಲಿ ಹೆಣ್ಣೊಂದು ಉಪಸ್ಥಿತಳಿದ್ದರೂ ಪುರುಷ ಪ್ರಾಧಾನ್ಯವನ್ನು ಆಚರಣೆಯಲ್ಲಿ ಉಳಿಸಿಕೊಂಡು ಬರಲಾಗಿದ್ದು, ಇದು ಇಂದಿಗೂ ಜನಪ್ರಿಯ ತಂತ್ರವಾಗಿದೆ. ಸಮಾಜದಲ್ಲಿ ಸ್ತ್ರೀಯರ ಪಾತ್ರ ಕುರಿತು ತನ್ನ ವಿಚಾರಗಳನ್ನು ಪರಿಷ್ಕರಿಸಿದ ಟೊರಿಪಾರ್ಟಿ, ಮಹಿಳಾ ಮುಂದಾಳುಗಳನ್ನು ಹೊಂದಿದ್ದರೂ ಅವರಿಗೆ ನಾಯಕತ್ವ ನೀಡಲಿಲ್ಲ. ಇದಕ್ಕೆ ವಿರುದ್ಧವಾಗಿ 'ಉಕ್ಕಿನ ಮಹಿಳೆ'ಯ ಆಳ್ವಿಕೆಯಡಿ (ಈ ಸಂದರ್ಭದಲ್ಲಿನ ಮಾತಿನ ರೀತಿ ಆಸಕ್ತಿದಾಯಕ) ಪ್ರತಿಗಾಮಿ ವಿಚಾರಗಳನ್ನು ಗಟ್ಟಿಗೊಳಿಸಿತು. ಹಾಗೆ 'ಎಲಿಜಬೆತ್ ಆಳ್ವಿಕೆಗೆ ತನ್ನ ಸಂಸ್ಕೃತಿಯ ಪುರುಷಾಳ್ವಿಕೆ ನಾಶ ಮಾಡುವ ಉದ್ದೇಶವಿರಲಿಲ್ಲ. ಉಳಿದ ಹೆಂಗಸರೊಂದಿಗಿನ ಆಕೆಯ ವ್ಯತ್ಯಾಸಗಳ ಮೇಲೆ ಬಿದ್ದ ಒತ್ತು ಇದನ್ನು ಬಲಪಡಿಸಲು ನೆರವಾಯಿತು' (ಪು.124). ಆಸ್ಥಾನಿಕರು ಮತ್ತು ಹೊಗಳುಭಟರು ಜೊತೆಗೂಡಿ ಆಕೆಯನ್ನು ಕುರಿತು 'ಕನ್ನೆ, ಗೃಹಿಣಿ, ಮಾತೆ' ಎಂದು ನಿರಂತರ ಘೋಷಣೆ ಹಾಕಿದರೂ ನಂತರ ಆಕೆ ನಿಜವಾದ ಹೆಣ್ಣಾಗದೆ, ಧಾರ್ಮಿಕವಾಗಿ ನಿಗೂಢಳಾಗಿ ಬಿಡುತ್ತಾಳೆ. ಇಡೀ ಪ್ರಬಂಧ ನಿಷ್ಟೂರ ಪುರುಷ ಪ್ರಧಾನ ಸಮಾಜ ರಚನೆ ಮತ್ತು ಸ್ತ್ರೀ ಸಾಮ್ರಾಜ್ಯ ಜೊತೆಯಲ್ಲಿರುವುದನ್ನು ಹೆಸರಿಸುವಲ್ಲಿ ಮುಂದೆ ಬಂದ ಪುರುಷ ಪ್ರಯತ್ನದ ಆಟದ ವಿವರಗಳೊಂದಿಗೆ ಹೆಣೆಯುತ್ತದೆ. ಪುರುಷ ಆಸ್ಥಾನಿಕರು ಒಂದು ಬಗೆಯಲ್ಲಿ 'ಎಲಿಜಬೆತ್(ಕನ್ಯಾ) ರಾಣಿ'ಯ ಬ್ರಹ್ಮಚರ್ಯ ಸೇವಕರಾಗಿದ್ದು 'ನಿರ್ವೀರ್ಯಗೊಳಿಸುವಿಕೆ'ಯಲ್ಲಿ ಒಳಗಾಗಿದ್ದಿರಬಹುದಾಗಿದೆ. ಆಕೆಯಿಂದ ಅವರು ತಮ್ಮ ಏಳಿಗೆ ಬಯಸಿದವರಾಗಿದ್ದು, ದೇಶಮಾತೆಯ ಮೆಚ್ಚುಗೆ ಗಳಿಸಲು ಬಯಸುತ್ತಿರುವ ಮಕ್ಕಳ ಹಾಗೆ ತೋರುತ್ತಾರೆ (ರಾಲೆ ಮತ್ತು ಗ್ರೆವಿಲ್ಲೆ ಈ ಉಪಮೆಯನ್ನು ಅಭಿನಯಿಸಲಾಗದೆ ಹೋದ, ಮಿತಿ ಮೀರಿದ ಹಾಗೂ ಹೆಚ್ಚು ಲಂಬಿಸಿದ ಮನರಂಜನೆಯೆಂದು ಮಾಂಟ್ರೋಸ್ ವಿವರಿಸುತ್ತಾನೆ). ಪ್ರಾಯೋಗಿಕವಾಗಿ ಏನು ಹೇಳಲಾಗಿದೆಯೋ ಈ ಎಲ್ಲವನ್ನು ಅದು ಪಠ್ಯದ ಚಾರಿತ್ರಿಕತೆ ಮತ್ತು ಚರಿತ್ರೆಯ ಮೂಲ ಪಾಠದ ಮೇಲೆ ಒತ್ತು ಹಾಕಿ ಪ್ರದಶರ್ಿಸುತ್ತದೆ.

ಸಾಂಸ್ಕೃತಿಕ ಉಪಭೋಗವಾದ
ಬ್ರಿಟಿಶ್ ವಿಮರ್ಶಕ ಗ್ರಾಹಂ ಹೊಲ್ಡರ್ನೆಸ್ ಸಾಂಸ್ಕೃತಿಕ ಉಪಭೋಗವಾದವನ್ನು 'ಇತಿಹಾಸ ಲೇಖನ ರಾಜಕೀಯಗೊಳಿಸಿದ ರೂಪ'ವೆಂದು ವಿವರಿಸುತ್ತಾನೆ. ಇದನ್ನು (ಸಾಹಿತ್ಯಿಕ ಪಠ್ಯ ಒಳಗೊಂಡ) ಐತಿಹಾಸಿಕ ಸಾಮಗ್ರಿಯ ಅಧ್ಯಯನವೆಂದು ರಾಜಕೀಯ ಚೌಕಟ್ಟಿನಲ್ಲಿ ಕೂಡ ವಿವರಿಸಲು ಸಾಧ್ಯ. ವರ್ತಮಾನವನ್ನು ಒಳಗೊಂಡ ಈ ಚೌಕಟ್ಟು ರೂಪ ತಳೆಯಲು ಸಾಹಿತ್ಯಿಕ ಪಠ್ಯಗಳು ಹಲವು ರೀತಿಯಲ್ಲಿ ನೆರವಾಗಿವೆ. ಅತ್ಯುತ್ತಮ ಸಾಂಸ್ಕೃತಿಕ ಉಪಭೋಗವಾದಿಗಳೆಂದು ಹೆಸರು ಪಡೆದ ಜೋನಾಥನ್ ಡೋಲಿಮೋರ್ ಮತ್ತು ಅಲನ್ ಸಿನ್ ಫಿಲ್ಡ್ ಎಂಬುವರು ತಮ್ಮ ಸಂಪಾದಿತ ಪ್ರಬಂಧ ಸಂಕಲನ ಕೃತಿಗೆ ಉಪಶೀರ್ಷಿಕೆಯಾಗಿ `ಪೊಲಿಟಿಕಲ್ ಶೇಕ್ಸ್ ಪಿಯರ್' ಎಂದಿಡುವ ಮೂಲಕ ಸಾಂಸ್ಕೃತಿಕ  ಉಪಭೋಗವಾದ ಎಂಬ ಪದವನ್ನು 1985ರಲ್ಲಿ ಚಲಾವಣೆಗೆ ತಂದರು. ಅವರು ಈ ಪದವನ್ನು ತಮ್ಮ ಮುನ್ನುಡಿಯಲ್ಲಿ ನಾಲ್ಕು ಗುಣ ಲಕ್ಷಣಗಳ್ಳುಳ್ಳ ವಿಮರ್ಶಾತ್ಮಕ ವಿಧಾನವೊಂದಕ್ಕೆ ಹೆಸರಿಡುವ ಹಾಗೆ ವ್ಯಾಖ್ಯಾನಿಸಿದ್ದಾರೆ. ಅದು ಒಳಗೊಂಡ ಅಂಶಗಳು ಹೀಗಿವೆ:
1.    ಐತಿಹಾಸಿಕ ಸಂದರ್ಭ
2.    ಸೈದ್ಧಾಂತಿಕ ಸಂದರ್ಭ
3.    ರಾಜಕೀಯ ಬದ್ಧತೆ
4.    ಪಠ್ಯದ ಬಿಚ್ಚುನೋಟ
ಇವಲ್ಲಿ ಪ್ರತಿಯೊಂದಕ್ಕೂ ಸಂಕ್ಷಿಪ್ತ ಟಿಪ್ಪಣಿ ಮಾಡಬಹುದು. ಮೊದಲನೆಯದು 'ಐತಿಹಾಸಿಕ ಸಂದರ್ಭ' ಕುರಿತ ಒತ್ತು 'ಸಾಹಿತ್ಯಿಕ ಪಠ್ಯಕ್ಕೆ ಪರಂಪರಾಗತವಾಗಿ ಮಾನ್ಯವಾಗಿರುವ ಅತೀತತೆಯ ಮಹತ್ವವನ್ನು ನಾಶ ಮಾಡುತ್ತದೆ. ಇಲ್ಲಿ 'ಅತೀತ' ಪದದ ಅರ್ಥವನ್ನು 'ಕಾಲಾತೀತ"ವೆಂದಿರಿಸಿಕೊಂಡಿದೆ. ಸ್ವಂತ ನಿಲುವುಗಳನ್ನು ತೆಗೆದುಕೊಂಡಾಗ ಸ್ಪಷ್ಟ ಆಕ್ಷೇಪಣೆಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ.  ಇಂದು ಕೂಡ ನಾವು ಶೇಕ್ಸ್ಪಿಯರ್ನನ್ನು ಓದುತ್ತಿದ್ದರೆ, ಅಧ್ಯಯನ ಮಾಡುತ್ತಿದ್ದರೆ ಸರಳವಾಗಿ ಅವನ ಕೃತಿಗಳು 'ಕಾಲಾತೀತ'ವೆಂಬುದನ್ನು ಸಾಬೀತು ಪಡಿಸಿದಂತೆಯೇ ಆಗುತ್ತದೆ. ಅವು ರಚನೆಗೊಂಡ ಕಾಲದ ಐತಿಹಾಸಿಕ ಸಂಗತಿಗಳ ಮಿತಿಗೆ ಒಳಪಟ್ಟಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇದು ಕೇವಲ ಗಾತ್ರದ ವಿಷಯ. ಸಾಂಸ್ಕೃತಿಕ ಉಪಭೋಗದ ಈ ಅಂಶದ ಮುಖ್ಯ ಉದ್ದೇಶವೆಂದರೆ ಸಾಹಿತ್ಯ ಪಠ್ಯಕ್ಕೆ ಈ ಹಿಂದಿನ ಅಧ್ಯಯನಗಳಲ್ಲಿ ಕಡೆಗಣಿಸಿದ್ದ 'ತನ್ನ ಇತಿಹಾಸಗಳನ್ನು ಮರಳಿ ಪಡೆಯುವ ಅವಕಾಶ ದೊರಕಿಸಿಕೊಡುವುದು. ನಾಟಕಗಳಿಗೆ ಸಂಬಂಧಿಸಿದಂತೆ ಇಂಥ ವಿಷಯಗಳಲ್ಲಿ ಇತಿಹಾಸ ಮರಳಿ ಪಡೆದ ರೀತಿ 'ಗ್ರಾಮೀಣ ಜನರ ತುಳಿತ ಮತ್ತು ರಕ್ಷಣೆಗಳು, ಪ್ರಭುತ್ವ ಶಕ್ತಿ ಹಾಗೂ ಅದಕ್ಕೆ ಅಡೆತಡೆಮಾಟಮಂತ್ರ, ಸ್ವೇಚ್ಛಾ ವಿಹಾರೋತ್ಸವ ಒಳಗೊಂಡಿರುವಿಕೆ ಮತ್ತು ಸವಾಲು' (ಡೋಲಿಮೋರ್ ಮತ್ತು ಸಿನ್ಫೀಲ್ಡ್, ಪು.3)ಗಳ ಹಾಗೆ ಒಳಪಡುತ್ತದೆ. ಎರಡನೆಯದು, ಸೈದ್ಧಾಂತಿಕ ವಿಧಾನದ ಮೇಲಿನ ಒತ್ತು 1970ರಿಂದ ಪ್ರಮುಖವಾಗಿರುವ ಸಂರಚನಾವಾದ, ಸಂರಚನೋತ್ತರವಾದ ಹಾಗೂ ಇತರ ಪ್ರಸ್ತಾವಗಳ ಪಾಠ ಸ್ವೀಕರಿಸಿದ ಹಾಗೂ ಉದಾರ ಮಾನವತಾವಾದದಿಂದ ಬಿಡುಗಡೆ ಹೊಂದಿದ ಗುರುತಾಗಿದೆ. ಮೂರನೆಯದು, ರಾಜಕೀಯ ಬದ್ಧತೆಯ ಒತ್ತು ಮಾಕ್ಸರ್್ವಾದಿ ಹಾಗೂ ಸ್ತ್ರೀವಾದಿ ದೃಷ್ಟಿಕೋನಗಳ ಪ್ರಭಾವ ಹಾಗೂ ಇದುವರೆಗೂ ಶೇಕ್ಸ್ಪಿಯರ್ ವಿಮಶರ್ೆಯಲ್ಲಿ ಪ್ರಧಾನವಾಗಿದ್ದ ಸಂಪ್ರದಾಯವಾದಿ ಕ್ರಿಶ್ಚಿಯನ್ ಚೌಕಟ್ಟಿನಿಂದ ಹೊರಬಂದ ಸೂಚನೆಯಾಗಿದೆ. ಕೊನೆಯದು, ಪಠ್ಯದ ಬಿಚ್ಚುನೋಟದ ಮೇಲಿನ ಒತ್ತು ಎಲ್ಲಿಯೂ ಕಡೆಗಣಿಸಲಾಗದ ವಿಮರ್ಶೆಯ ಪಾರಂಪರಿಕ ಪ್ರಸ್ತಾವನೆಗಳು ನೆಲೆಗೊಳ್ಳುವಂತೆ ಮಾಡಿದೆ. ಇದು ಕಟ್ಟುವ ಬದ್ಧತೆಯನ್ನಷ್ಟೆ ಹೊಂದಿರದೆ, ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಪ್ರಮುಖ ಪ್ರತಿಮೆಗಳು, ಶೈಕ್ಷಣಿಕ ವಲಯದ ವೃತ್ತಿ ಪರ ಹಾಗೂ ಸತತ ಸಮೂಹದ ಗಮನ ಸೆಳೆದಿರುವ, ಮುಖ್ಯವಾಗಿ ಅಂಗೀಕೃತ ಪಠ್ಯಗಳ ಮೇಲೆ ಪ್ರಯೋಗಿಸುವುದಾಗಿದೆ.
'ಸಾಂಸ್ಕೃತಿಕ ಉಪಭೋಗ' ಎಂಬ ಪರಿಭಾಷೆಯಲ್ಲಿರುವ ಎರಡು ಪದಗಳನ್ನು ಹೆಚ್ಚು ಸ್ಪಷ್ಟ ಮಾಡಲಾಗಿದೆ. 'ಸಂಸ್ಕೃತಿ' (ಟಿ.ವಿ., ಜನಪ್ರಿಯ ಸಂಗೀತ, ಮತ್ತು ಕಾದಂಬರಿಯಂಥ) ಸಂಸ್ಕೃತಿಯ ಎಲ್ಲ ರೂಪಗಳನ್ನು ಒಳಗೊಂಡಿದೆ. ಅಂದರೆ ಶೇಕ್ಸ್ಪಿಯರ್ನ ನಾಟಕದ ಹಾಗೆ ಈ ಪ್ರಸ್ಥಾವನೆ 'ಉನ್ನತ' ಸಾಂಸ್ಕೃತಿಕ ರೂಪಗಳಿಗೆ ಸೀಮಿತವಾಗುವುದಿಲ್ಲ. ಬದಲಿಗೆ 'ಉಪಭೋಗವಾದ' 'ಆದರ್ಶವಾದ'ದ ವೈರುಧ್ಯವನ್ನು ಸೂಚಿಸುತ್ತದೆ. ಉನ್ನತ ಸಂಸ್ಕೃತಿ ಪ್ರತಿಭಾವಂತರ ವ್ಯಕ್ತಿಗತ ಮನಸ್ಸಿನ ಮುಕ್ತ ಮತ್ತು ಸ್ವತಂತ್ರ ಕ್ರೀಡಾ ಮನೋಭಾವವನ್ನು ಪ್ರತಿನಿಧಿಸುತ್ತದೆ ಎಂಬುದು ಆದರ್ಶವಾದಿಯ ನಂಬುಗೆಯಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ 'ಉಪಭೋಗವಾದ'ದ ನಂಬುಗೆಯೆಂದರೆ 'ಸಂಸ್ಕೃತಿ ಉನ್ನತ ಸಂಬಂಧಗಳನ್ನು ಹಾಗೂ ಭೌತಿಕ ಶಕ್ತಿಗಳನ್ನು ಮೀರಲು' ಸಾಧ್ಯವಿಲ್ಲ. 'ಸಂಸ್ಕೃತಿಯೆಂಬುದು ಕೇವಲ ಆಥರ್ಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಸರಳವಾಗಿ ಬಿಂಬಿಸುವುದಿಲ್ಲ. ಅದು ಸ್ವತಂತ್ರವೂ ಇರಲಾಗುವುದಿಲ್ಲ'. ಉಪಭೋಗವಾದ ಕುರಿತ ಈ ವ್ಯಾಖ್ಯಾನಗಳು ಮಾಕ್ಸರ್್ವಾದಿ ವಿಮಶರ್ೆಯ ಪ್ರಮಾಣಭೂತ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಅದು ಸಾಂಸ್ಕೃತಿಕ ಉಪಭೋಗವಾದ ಹಾಗೂ 'ನೇರ' ಮಾಕ್ಸರ್್ವಾದಿ ವಿಮರ್ಶೆ ನಡುವಿನ ವ್ಯತ್ಯಾಸಗಳನ್ನು ಬಳಸಿಕೊಳ್ಳಲು ಕಷ್ಟಪಡುವ ಬಿಂದು ತಲುಪುತ್ತದೆ. ಹೀಗಿದ್ದರೂ ಸುಸಂಬದ್ಧವಾದ ಇತಿಹಾಸ ಕೇವಲ ನಾಲ್ಕು ನೂರು ವರ್ಷಗಳ ಹಿಂದಿನದಲ್ಲ ಎಂದೂ ಹೇಳಲಾಗುತ್ತದೆ. ಆದರೆ ಆ ಕಾಲಗಳಲ್ಲೆ (ನಮ್ಮ ಕಾಲವೂ ಒಳಗೊಂಡು) ಶೇಕ್ಸ್ ಪಿಯರ್ ನಿಗೆ ಹುಟ್ಟು-ಮರುಹುಟ್ಟು ನೀಡಲಾಯಿತು. ಹಾಗೆಯೆ ಸಾಂಸ್ಕೃತಿಕ ಉಪಭೋಗವಾದದಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ  ಬಗ್ಗೆ ಒತ್ತು ನೀಡಲಾಯಿತು. ಈ ಮೂಲಕ ಶೇಕ್ಸ್ ಪಿಯರ್ ಈಗ ನಮ್ಮ ಕೈಗೆ ತಲುಪುವಂತೆ ಮಾಡಲಾಗಿದೆ. ರಾಯಲ್ ಶೇಕ್ಸ್ಪಿಯರ್ ಕಂಪನಿ, ಸಿನಿಮೋದ್ಯಮ, ಶಾಲಾ ಕಾಲೇಜುಗಳಿಗಾಗಿ ಪಠ್ಯ ಪುಸ್ತಕ ಮುದ್ರಿಸುವ ಪ್ರಕಾಶಕರು ಹಾಗೂ ರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆಗಳು, ವಿಶೇಷವಾಗಿ ಎಲ್ಲ ಶಾಲಾ ಹುಡುಗರು ಶೇಕ್ಸ್ಪಿಯರ್ ನಾಟಕಗಳ ಅಧ್ಯಯನ ಮಾಡುವ ಅಗತ್ಯತೆಯನ್ನು ನಾಶಗೊಳಿಸಿದ್ದಾರೆ.
ಬ್ರಿಟಿಶ್ ಎಡಗುಂಪಿನ ವಿಮರ್ಶಕ ರೇಮಂಡ್ಸ್ ವಿಲಿಯಮ್ಸ್ನಿಂದಾಗಿ ಸಾಂಸ್ಕೃತಿಕ ಉಪಭೋಗವಾದ ತನ್ನ (ಹೆಸರು) ದೃಷ್ಟಿಕೋನವನ್ನು ಹೆಚ್ಚು ಸ್ಪಷ್ಟ ತಳೆಯಿತು. ಫೂಕೊನ 'ಸಂಕಥನ'ದ(ಡಿಸ್ಕೋರ್ಸ್) ತಿಳುವಳಿಕೆ ಬದಲು ವಿಲಿಯಮ್ಸ್ 'ಭಾವನಾ ರಚನೆಗಳು' ಎಂಬ ಪಾರಿಭಾಷಿಕ ಪದ ಶೋಧಿಸಿದನು. ಇವು 'ಜೀವಿಸಿದ ಹಾಗೆ ಹಾಗೂ ಭಾವಿಸಿದ ಹಾಗೆ ಇರುವ ಅರ್ಥಗಳು, ಮೌಲ್ಯಗಳು'. ಭಾವನಾ ರಚನೆಗಳು ಸಮಾಜದಲ್ಲಿನ ಪ್ರಬಲ ವೈಚಾರಿಕ ಆಕೃತಿಗಳಿಗೆ ಹಾಗೂ ನಂಬಿಕೆಗಳು, ಮೌಲ್ಯಗಳು ಪ್ರಕಟಿತ ವ್ಯವಸ್ಥೆಗಳಿಗೆ ಎರಡಕ್ಕೂ ಪ್ರತಿರೋಧವುಳ್ಳದ್ದಾಗಿದೆ. ಇವು (ಡಿಕನ್ಸ್, ಬ್ರೂಂಟ್ಸ್ ಮೊದಲಾದವರ ಮೌಲ್ಯಗಳು ವಿಕ್ಟೋರಿಯನ್ ಕಾಲದ ವಾಣೀಜ್ಯೀಕೃತ ಹಾಗೂ ಅನುಭೋಗ ಮೌಲ್ಯಗಳೊಂದಿಗಿನ ಭಿನ್ನತೆಯನ್ನು ಮಾನವನ ಭಾವನಾ ರಚನೆಗಳು ಪ್ರತಿನಿಧಿಸುವ ಹಾಗೆ) ಯಥಾವತ್ತಾದ ಸ್ಥಾನಮಾನವನ್ನು ವಿರೋಧಿಸುತ್ತದೆ. ಇದರ ಫಲವಾಗಿ ಸಾಂಸ್ಕೃತಿಕ ಉಪಭೋಗವಾದ ಬದಲಾವಣೆಯ ಸಾಧ್ಯತೆ ಬಗ್ಗೆ ಹೆಚ್ಚು ಆಶಾವಾದಿ ನಿಲುವು ಹೊಂದಿದೆ, ಕೆಲವು ವೇಳೆ ವೈರುದ್ಧಾತ್ಮಕ ಮೌಲ್ಯಗಳ ಆಕರದ ಹಾಗೆ ಸಾಹಿತ್ಯವನ್ನು ನೋಡುವ ಇಚ್ಛೆ ಹೊಂದಿದೆ. ಸಾಂಸ್ಕೃತಿಕ ಉಪಭೋಗವಾದ ವರ್ತಮಾನದ 'ಓದು'ವಿಕೆಗಾಗಿ ಗತದ ನಿದರ್ಿಷ್ಟ ಬಳಕೆಯನ್ನು ಒಳಗೊಳ್ಳುತ್ತದೆ. ಗತವನ್ನು ಎತ್ತ್ತಿ ಹೇಳುವ ಅಥವಾ ತುಳಿದಿಡುವ ನಮ್ಮ ಆಯ್ಕೆಯ ಮೂಲಕ ನಮ್ಮದೇ ಸಮಾಜದ ರಾಜಕಾರಣವನ್ನು ನಿರೂಪಿಸುತ್ತದೆ. ಬ್ರಿಟಿಶ್ ಸಂಸ್ಕೃತಿಯೊಳಗೆ ಶೇಕ್ಸ್ ಪಿಯರ್ ಸಂಪ್ರದಾಯವಾದಿ ಮೂರ್ತಿಯ ಹಾಗೆ, ಅಂಧಶ್ರದ್ಧೆಯ ಪಾತ್ರದ ಹಾಗೆ ಕಾಣುವುದನ್ನು ನಿರ್ನಾಮ ಮಾಡಿರುವುದರ ಬಗೆಗೆ ಬ್ರಿಟಿಶ್ ಕಾರ್ಯವಿದೆ. ಈ ರೂಪದ ಸಾಂಸ್ಕೃತಿಕ ಉಪಭೋಗವಾದಕ್ಕೆ 'ದಿ ಶೇಕ್ಸ್ ಪಿಯರ್ ಮಿತ್'- ಗ್ರಾಹಂ ಹೋಲ್ಡರ್ ನೆಸ್, 'ಆಲ್ಟರ್ನೇಟೀವ್ ಶೇಕ್ಸ್ ಪಿಯರ್' - ಸಂ.ಜಾನ್ ಡಕಾಕಿಸ್, ಮತ್ತು ' ದಟ್ ಶೇಕ್ಸ್ ಪಿಯರ್ ರಾಗ್ ' - ಟೆರೆನ್ಸ್  ಹಾಕೀಸ್ (ಈ ವಿಚಿತ್ರ ಹೆಸರು ಟಿ.ಎಸ್.ಎಲಿಯೆಟ್ನ ದಿ ವೇಸ್ಟ್ ಲ್ಯಾಂಡ್ ಪ್ರಸ್ಥಾವನೆಯಿಂದ ತೆಗೆದುಕೊಳ್ಳಲಾಗಿದೆ) ಈ ಮೂರೂ 'ಹೊಸದನಿ'ಯ ಪುಸ್ತಕಗಳು ಅನುಕೂಲಕರ ಮಾದರಿಯಾಗಿವೆ. ಈ ಪುಸ್ತಕಗಳ ಕುರಿತು  ಪ್ರಕಟವಾದ ವಿಮರ್ಶೆಗಳಿಗೆ ಪ್ರತಿಕ್ರಿಯೆಯಾಗಿ 'ಬಾರ್ಡೊಲಾಟ್ರಿ' ಶೀರ್ಷಿಕೆಯಡಿ 'ಲಂಡನ್ ರಿವ್ಯೂ ಆಫ್ ಬುಕ್ಸ್' ಪತ್ರಿಕೆಯಲ್ಲಿ ಒಂದು ವರ್ಷದ ಕಾಲ ಪತ್ರ ವ್ಯಹಾರ ನಡೆದಿದೆ.

ಸಾಂಸ್ಕೃತಿಕ ಉಪಭೋಗವಾದ ನವಚಾರಿತ್ರಿಕವಾದದಿಂದ ಹೇಗೆ ಭಿನ್ನ?
ಸಾಂಸ್ಕೃತಿಕ ಉಪಭೋಗವಾದವನ್ನು ಅದರ ಅಮೆರಿಕಾದ ಪ್ರತಿಸ್ಪರ್ಧೆಯಾದ ನವಚಾರಿತ್ರಿಕವಾದದೊಂದಿಗೆ ಮೇಲಿಂದ ಮೇಲೆ ಚರ್ಚೆಗಳಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎರಡು ಚಳವಳಿಗಳು ಒಂದೇ ಕುಟುಂಬಕ್ಕೆ ಸೇರಿದವು. ಹೀಗಿದ್ದರೂ ಅವೆರಡರ ನಡುವೆ ಕೌಟುಂಬಿಕ ಜಗಳ ನಡೆಯುತ್ತಲೆ ಇರುತ್ತದೆ. 'ಪೊಲಿಟಿಕಲ್ ಶೇಕ್ಸ್ ಪಿಯರ್' ನವಚಾರಿತ್ರಿಕವಾದಿಗಳ ಪ್ರಬಂಧವನ್ನೊಳಗೊಂಡಿದೆ. ಈ ಕೃತಿಯ ಪ್ರಸ್ತಾವನೆ ಈ ಎರಡು ಚಳವಳಿಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ,
ಮೊದಲನೆಯದಾಗಿ, ಡೋಲಿಮೋರ್ ಮತ್ತು ಸಿನ್ ಫೀಲ್ಡ್ ಒಂದು ಅಚ್ಚುಕಟ್ಟಾದ ಭೇದಗಣನೆಯಲ್ಲಿ ಮಾರ್ಕ್ಸ್ನನ್ನು ಪರಿಣಾಮಕಾರಿಯಾಗಿ ಉಲ್ಲೇಖಿಸುತ್ತಾರೆ: 'ಪುರುಷರು ಮತ್ತು ಮಹಿಳೆಯರು ತಮ್ಮದೆ ಸ್ವಂತ ಚರಿತ್ರೆಯನ್ನು ರೂಪಿಸುತ್ತಾರಾದರೂ ತಮ್ಮದೆ ಸ್ವಂತ ಆಯ್ಕೆಯ ಪರಿಸ್ಥಿತಿಗಳಲ್ಲಲ್ಲ' (ಪುಟ.3). ಸಾಂಸ್ಕೃತಿಕ ಉಪಭೋಗವಾದಿಗಳ ಪ್ರಕಾರ ಪುರುಷರು ಮತ್ತು ಮಹಿಳೆಯರು ತಮ್ಮದೆ ಸ್ವಂತ ಚರಿತ್ರೆ ಕಟ್ಟುವಲ್ಲಿ ಮಧ್ಯೆ ಪ್ರವೇಶಿಸಲು ಆಸಕ್ತರಾಗಿರುತ್ತಾರೆ. ಆದರೆ ನವಚಾರಿತ್ರಿಕವಾದಿಗಳ ಪ್ರಕಾರ ತಮ್ಮನ್ನು ನಿರ್ಬಂಧಿಸಿರುವ 'ವೈಚಾರಿಕ ಆಕೃತಿಗಳು ಹಾಗೂ ಸಾಮಾಜಿಕ ಅಧಿಕಾರ'ದ ಮೇಲೆ, ತಾವು ಮಾಡುವ ಹಾಗೆ, ಆದರ್ಶವಲ್ಲದ ಸಂದರ್ಭಗಳ ಮೇಲೆ ಕೇಂದ್ರೀಕರಿಸಲು ಒಲವು ತೋರುತ್ತಾರೆ. ಇದರ ಫಲಿತವೆಂದರೆ ಆಶಾವಾದಿ ರಾಜಕಾರಣ ಹಾಗೂ ನಿರಾಶಾವಾದಿ ರಾಜಕಾರಣಗಳ ನಡುವಿನ ವ್ಯತ್ಯಾಸ.
ಎರಡನೆಯದಾಗಿ, ನವಚಾರಿತ್ರಿಕವಾದಿಗಳು ಜ್ಞಾನ ಪಡೆಯುವ ಸಾಧ್ಯತೆಯ ಬಗೆಗೆ ಅದರ ವೈಚಾರಿಕ ಸಂದೇಹವಾದದೊಂದಿಗಿನ ನಿರ್ದಿಷ್ಟ ಸಂರಚನೋತ್ತರ ವಾದದ ಕಥನಕ್ಕೆ ಸಮ್ಮತಿ ನೀಡುವ ಮೂಲಕ ಪರಿಣಾಮಕಾರಿ ರಾಜಕಾರಣದ ಸ್ಥಾನಮಾನಗಳಿಂದ ತಮ್ಮನ್ನು ಕಡಿದುಕೊಂಡರೆೆಂದು ಸಾಂಸ್ಕೃತಿಕ ಉಪಭೋಗವಾದಿಗಳು ನೋಡುತ್ತಾರೆ. ಆದರೂ ಸಂರಚನೋತ್ತರವಾದದ ಉನ್ನತ ಜ್ಞಾನ, ಭಾಷೆ, ಸತ್ಯ ಮೊದಲಾದವನ್ನು ಸಮಸ್ಯೆಗೆ ಒಳಪಡಿಸುವ ದೃಷ್ಟಿಕೋನವನ್ನು ನವಚಾರಿತ್ರಿಕವಾದ ಸ್ವೀಕರಿಸಿತು ಮತ್ತು ತನ್ನ ಮುಖ್ಯ ಭಾಗವನ್ನಾಗಿ ಮಾಡಿಕೊಂಡಿತು. ಈ ಆರೋಪದ ವಿರುದ್ಧ ನವಚಾರಿತ್ರಿಕವಾದದ ಸಮರ್ಥನೆಯೆಂದರೆ ಎಲ್ಲ ಬಗೆಯ ಜ್ಞಾನಗಳ ಆಂತರಿಕ ರಚನೆಯ ಅನಿಶ್ಚಿತತೆಯ ಬಗ್ಗೆ ಎಚ್ಚರದಿಂದಿರುವುದು, ಅಂದರೆ ನಾವು ಸತ್ಯಗಳನ್ನು ಸ್ಥಾಪಿಸುವ ಪ್ರಯತ್ನ ಕೈಬಿಡುವುದು ಎಂದರ್ಥವಲ್ಲ, ಸರಳವಾಗಿ ಹೇಳಬೇಕೆಂದರೆ ನಾವು ಒಳಗೊಂಡಿರುವ ಅಪಾಯಗಳ ಮತ್ತು ಮಿತಿಗಳ ಪ್ರಜ್ಞಾವಂತಿಕೆಯನ್ನು ಪಡೆದಿರುವುದು, ಹಾಗೆಯೆ ತಮ್ಮದೇ ಬೌದ್ಧಿಕ ವಿಚಾರಣೆಗೆ ವಿಶೇಷ ಅಧಿಕಾರ ನೀಡುವುದು. ಇದು ಗಂಡಾಂತರಕಾರಿ ನೀರೆಂದು ತಿಳಿದೂ ಸಮುದ್ರ ಸಂಚಾರ ಮಾಡುವ ಹಾಗೆ ಎಲ್ಲ ಪೂರ್ವಭಾವಿ ಎಚ್ಚರಿಕೆಯನ್ನು ಸೂಕ್ಷ್ಮವಾಗಿ ತೆಗೆದುಕೊಂಡ, ಎಲ್ಲ ದೀಪಗಳು ಉರಿಯುತ್ತಿರುವ ಮತ್ತು ಅಪಾಯದ ಅರಿವಿಲ್ಲದೆ ಉಲ್ಲಾಸದಿಂದಿರುವ ಸ್ಥಿತಿ. ಹೀಗೆ ನವಚಾರಿತ್ರಿಕವಾದ (ಪೀಟರ್ ವಿಡ್ಡೋಸನ್ರ ಮಾತುಗಳಲ್ಲಿ) ಪ್ರತಿಪಾದಿಸುವುದೆಂದು ಫೂಕೊ 'ಅಸತ್ಯ ಪೂರ್ವಾಧಾರಿತ ರೂಪದ ಇತಿಹಾಸಜ್ಞರ ಅಧ್ಯಯನ ಪಠ್ಯಗಳಿ'ಗೆ (ಪು.161) ಪ್ರವೇಶ ನೀಡುತ್ತಾನೆ. ಅವನು ಹೇಳುವ ಮಾತುಗಳಲ್ಲಿ ಅವನಿಗೆ ನಂಬಿಕೆ ಇಲ್ಲ ಎಂಬುದು ಇದರರ್ಥವಲ್ಲ. ಆದರೆ ಸ್ಥಾಪಿಸುವ ಸತ್ಯಗಳ ಪ್ರತಿಪಾದನೆಯಲ್ಲಿರುವ ಅಪಾಯಗಳು, ಕಷ್ಟಗಳು ಎಂಥವು ಎಂಬುದರ ಅರಿವು ಅವನಿಗಿದೆ ಎಂದಾಗುತ್ತದೆ.
ನವಚಾರಿತ್ರಿಕವಾದ ಮತ್ತು ಸಾಂಸ್ಕೃತಿಕ ಉಪಭೋಗವಾದಗಳ ನಡುವೆ ಮೂರನೆಯ ಮುಖ್ಯ ವ್ಯತ್ಯಾಸವೆಂದರೆ ಎಲ್ಲಿ ಹಿಂದಿನ ಸಹ-ಪಠ್ಯಗಳು ಶೇಕ್ಸ್ಪಿಯರ್ನ ಸಮಕಾಲೀನ ದಾಖಲಾತಿಗಳೋ ಅವು ನಂತರ ಇಂದಿನ ರಾಯಲ್ ಶೇಕ್ಸ್ಪಿಯರ್ ಕಂಪನಿ ತಯಾರಿಕೆಯ  ಕಾರ್ಯಕ್ರಮಗಳ ಟಿಪ್ಪಣಿ, ಖಾರಿ ಯುದ್ಧವೊಂದರ ವಿಮಾನ ಚಾಲಕ ಉಲ್ಲೇಖಿಸಿದ ಶೇಕ್ಸ್ಪಿಯರ್ನ ಸಾಲುಗಳು, ಅಥವಾ  ಸರಕಾರವೊಂದರ ಸಚಿವರ ಶಿಕ್ಷಣ ಕುರಿತ ಅಭಿಪ್ರಾಯಗಳು ಆಗಿರುತ್ತವೆ. ಇದನ್ನು ಬೇರೊಂದು ರೀತಿಯಲ್ಲಿ ಹೇಳಬೇಕೆಂದರೆ, ನವಚಾರಿತ್ರಿಕವಾದಿ ಸಾಹಿತ್ಯಿಕ  ಪಠ್ಯವನ್ನು ಅದರದೆ ಕಾಲದ ರಾಜಕಾರಣದ ಸಂದರ್ಭದಲ್ಲಿಟ್ಟು ನೋಡುತ್ತಾನೆ, ಸಾಂಸ್ಕೃತಿಕ ಉಪಭೋಗವಾದಿ ಅದನ್ನು ನಮ್ಮ ಕಾಲದಲ್ಲಿಟ್ಟು  ನೋಡುತ್ತಾನೆ. ಇದು ರಾಜಕಾರಣದ ಮೇಲೆ ಒತ್ತು ನೀಡುವಲ್ಲಿ ಈ ಎರಡು ವಿಧಾನಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಸುತ್ತದೆ. ಅಲ್ಲದೆ ರಾಜಕಾರಣದ ವ್ಯತ್ಯಾಸವನ್ನು ತಮ್ಮ ಸಾಮಾನ್ಯ ಮತ ಭೇದವೆಂದು ಈ ಮೂರೂ ವ್ಯತ್ಯಾಸಗಳು ಹೆಚ್ಚಾಗಿ ವಿವರಿಸಿವೆ.

ಸ್ವಲ್ಪ ಯೋಚಿಸಿ
ಸಾಂಸ್ಕೃತಿಕ ಉಪಭೋಗವಾದ ಮತ್ತು ನವಚಾರಿತ್ರಿಕವಾದಗಳ ನಡುವಿನ ವ್ಯತ್ಯಾಗಳನ್ನು ಬಿಡಿಸಿ ಹೇಳುವುದರಲ್ಲೆ ನಾವು ಕಾಲಕಳೆದೆವು ಎಂಬುದು ವಾಸ್ತವವಾಗಿದೆ. ಇದು ಅವೆರಡರ ನಡುವೆ ಇರುವ ಪರಸ್ಪರ ವ್ಯಾಪಿಸುವ ಗಮನಾರ್ಹ ಅಂಶವನ್ನು ಸೂಚಿಸುತ್ತದೆ. ಅವು ಮೂಲಭೂತವಾಗಿ ಒಂದೆಯಾಗಿದ್ದು ಎರಡು ಬೇರೆ ದೇಶಗಳಲ್ಲಿ ಮೈ ತಳೆದ ಕಾರಣದಿಂದಾಗಿ ಉಂಟಾದ ಸ್ವರೂಪ ವೈವಿಧ್ಯತೆಯೆ? ಅಥವಾ (ಸಾಂಸ್ಕತಿಕ ಉಪಭೋಗವಾದಿಗಳು ವಿಶೇಷವಾಗಿ ಒತ್ತಿ ಹೇಳುವ ಹಾಗೆ) ವೈಚಾರಿಕ ಪ್ರತಿಪಾದನೆ ಮೂಡಿರುವಷ್ಟು ತೀವ್ರತರವಾಗಿರುವುದೆ?
ಬಹುಶಹ ಎರಡು ರೀತಿಯ ಪ್ರಬಂಧಗಳನ್ನು ಓದುವ ಮೂಲಕ ಮತ್ತು ಹೋಲಿಸುವ ಮೂಲಕ ಈ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲು ಸಾಧ್ಯ. ಆರೋಪಿತವಾದ ವ್ಯತ್ಯಾಸಗಳು ಮುಖ್ಯವಾಗಿ ಎರಡು ರೂಪಗಳಲ್ಲಿ ನೆಲೆಸಿವೆ. ಮೊದಲನೆಯದು: ರಾಜಕಾರಣದ ದೃಷ್ಟಿಕೋನದಲ್ಲಿ, ಎರಡನೆಯದು: ಸಂರಚನೋತ್ತರವಾದ ದೃಷ್ಟಿಕೋನದ ಮೇಲೆ ಒತ್ತು ಹಾಕಿರುವ ಪ್ರಮಾಣದಲ್ಲಿ.
ಪ್ರಶ್ನೆ ಕುರಿತು ಆಲೋಚನೆ ಮಾಡುತ್ತ, ಈ ಪುಸ್ತಕದಲ್ಲಿ ಪ್ರತಿಯೊಂದು ಉದಾಹರಣೆಗಳಲ್ಲಿರುವ ಸ್ಪಷ್ಟ ಮನೋಭಾವವನ್ನು ಆರಂಭಿಸಿ. ನೀಡಿರುವ ಸಂಕ್ಷಿಪ್ತ ವಿವರಗಳಿಂದಲೇ ನಿರ್ಣಯ ನೀಡಲು ಸಾಧ್ಯ. ನಂತರದಲ್ಲಿ ಎರಡು ಕೃತಿಗಳನ್ನು ಓದಿ ಮತ್ತು ಹೋಲಿಸಿ ನೋಡಿ.  (ಈ ಭಾಗದ ಕೊನೆಯಲ್ಲಿ ನೀಡಿರುವ ಹೆಚ್ಚಿನ ಓದಿಗಾಗಿ ಪಟ್ಟಿ ಗಮನಿಸಿ.)
ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸಗಳು ಭಾಗಶಹ ಅವು ಭಿನ್ನ ಭೌದ್ಧಿಕ ಚೌಕಟ್ಟಿನ ಫಲ. ನವಚಾರಿತ್ರಿಕವಾದ ಫೂಕೊನಿಂದ ಹೆಚ್ಚು ಪ್ರಭಾವಿತಗೊಂಡಿದೆ. ಆತನ 'ವ್ಯಾಖ್ಯಾನಾತ್ಮಕ ಆಚರಣೆಗಳು' ಅದರ ಪ್ರಮುಖ ವಿಚಾರವನ್ನು ಹೆಚ್ಚು ಪುಷ್ಟಿಗೊಳಿಸುವಂಥದ್ದಾಗಿದೆ. ಇನ್ನೊಂದು ಕಡೆ ಸಾಂಸ್ಕೃತಿಕ ಉಪಭೋಗವಾದ ರೇಮಂಡ್ ವಿಲಿಯಮ್ಸ್ಗೆ ಹೆಚ್ಚು ಉಪಕೃತವಾಗಿದೆ. ಆತನ 'ಭಾವನಾ ರಚನೆಗಳು' ಅದರ ಪ್ರಮುಖ ವಿಚಾರಗಳಿಗೆ ಗಟ್ಟಿತನ ತಂದುಕೊಟ್ಟ ಬೀಜಗಳನ್ನು ಒಳಗೊಂಡಿದೆ. ಈ ಎರಡೂ ವಿಮರ್ಶಾ ವಿಧಾನಗಳ ಬಗೆಗಿನ ಸಂದೇಹ ನವಚಾರಿತ್ರಿಕವಾದಿಗಳಿಗೆ ಹೇಗೆ ಇಂಗ್ಲಿಶರ ಅಂತರ್ಯುದ್ಧ ಎಂದಿಗೆ ಪ್ರಾರಂಭವಾಗಿತ್ತು ಎಂದು ವಿವರಣೆ ನೀಡುವುದು ಕಷ್ಟಕರವಾಗಿತ್ತೋ (ಅಲ್ಲಿಂದೀಚೆಗೆ ಅವರು ಗಟ್ಟಿತನ ತಂದುಕೊಡಲು ಗುಣಾತ್ಮಕವಾಗಿ ಅಸಾಧ್ಯವಾದ ವೈರುದ್ಧಾತ್ಮಕ ಪ್ರಭುತ್ವ ಶಕ್ತಿ ಬಗ್ಗೆ ಆಲೋಚನೆ ಮಾಡಿದಂತೆ ತೋರುತ್ತದೆ) ಹಾಗೆಯೆ ಸಾಂಸ್ಕೃತಿಕ ಉಪಭೋಗವಾದಿಗಳಿಗೂ ಹೇಗೆ ಅದು ಎಂದಿಗೆ ಮುಕ್ತಾಯಗೊಂಡಿತ್ತು ಎಂದು ವಿವರಣೆ ನೀಡುವುದು ಕಷ್ಟಕರವಾಗಿತ್ತು ಎಂದು ಸೂಚಿಸುತ್ತದೆ (ಅಲ್ಲೀಂದಿಚೆಗೆ ಸ್ಥಂಭನ ಉಂಟುಮಾಡುವಂತೆ ತೋರಲು ಅಸಾಧ್ಯವಾದ ಅವರ 'ಭಾವನಾ ರಚನೆಗಳು' ನಿರಂತರವಾಗಿ ಹೊಸ ವಿಚಾರಗಳನ್ನು ಹೊರಹಾಕಿದೆ). ಹೀಗಿದ್ದರೂ ಆಚರಣೆಯಲ್ಲಿ ಈ ಎರಡು ವಿಧಾನಗಳ ನಡುವೆ ಮತ್ತೆ ಮತ್ತೆ ಉಂಟಾದ ರಾಜಕಾರಣ ವ್ಯತ್ಯಾಸಗಳು ಪೂರ್ಣ ದ್ವಿವಿಧವಾದಿಗಳು ಧ್ವನಿಸುವುದಕ್ಕಿಂತ ಖಂಡಿತವಾಗಿ ಮೊದಲೇ ಹೇಳಬಹುದಾಗಿದ್ದು ಏಕರೂಪವಾಗಿಲ್ಲ.

ಸಾಂಸ್ಕೃತಿಕ ಉಪಭೋಗವಾದಿ ವಿಮರ್ಶಕರ ಕಾರ್ಯಸ್ವರೂಪ
1. ಅವರು ಸಾಹಿತ್ಯಿಕ ಪಠ್ಯ (ಹೆಚ್ಚಾಗಿ ಪುನರುತ್ಥಾನ ಕಾಲದ ನಾಟಕ)ವನ್ನು ನಮಗೆ 'ಅದರ ಇತಿಹಾಸಗಳನ್ನು ಮರಳಿ ಪಡೆದ'  ಶಕ್ತಿಯನ್ನುಂಟು ಮಾಡುವ ಹಾಗೆ ಓದುತ್ತಾರೆ. ಅಂದರೆ ಕೃತಿ ಒಳಗೊಂಡ ಶೋಷಣೆಯ ಸಾಂದರ್ಭಿಕ ರೂಪವನ್ನು ತಿಳಿಸಿಕೊಡುತ್ತಾರೆ.
2. ಅದೇ ವೇಳೆಯಲ್ಲಿ ಅವರು ಕೃತಿಯಲ್ಲಿನ ಪ್ರಸ್ತುತ ಸಾಗಣೆ ಮತ್ತು ಸಾಂದರ್ಭಿಕಗೊಳಿಸುವ ಅಂಶಗಳನ್ನು ಮುನ್ನಲೆಗೆ ತರುತ್ತಾರೆ. ಅವು ಆ ಇತಿಹಾಸಗಳು ಮೊದಲ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿದವುಗಳಾಗಿವೆ. (ಉದಾಹರಣೆಗೆ, ಇತಿಹಾಸದ ಪರಿಭಾಷೆಯಲ್ಲಿ ವೈಭವೋಪೇತ, ರಾಷ್ಟ್ರಕವಿ, ಸಾಂಸ್ಕೃತಿಕ ನೇತಾರ ಮುಂತಾದ ಪದಗಳ ಹಾಗೆ 'ಪಿತ್ರಾರ್ಜಿತ' ಕಾರ್ಖಾನೆಯ ಶೇಕ್ಸ್ಪಿಯರ್ ಮೂಟೆ ಕಟ್ಟುತ್ತಿರುವುದು.)
3. ಅವರು ಮಾರ್ಕ್ಸ್ವಾದ ಮತ್ತು ಸ್ತ್ರೀವಾದಗಳ ಸಂಯೋಜಿತ ವಿಮರ್ಶಾ ವಿಧಾನವನ್ನು ಪಠ್ಯಕ್ಕೆ  ವಿಶೇಷವಾಗಿ ಮೇಲಿನವುಗಳಲ್ಲಿ ಮೊದಲನೆಯದನ್ನು ವ್ಯವಸ್ಥಿತವಾಗಿ ಮಾಡಲು ಬಳಸುತ್ತಾರೆ, ಹಾಗೂ ನಿರ್ದಿಷ್ಟವಾಗಿ ಶೇಕ್ಸ್ಪಿಯರ್ ವಿಮರ್ಶೆಯಲ್ಲಿ ಹಿಂದಿನ ಪ್ರಬಲ ಸಂಪ್ರದಾಯವಾದಿ ಸಾಮಾಜಿಕ, ರಾಜಕೀಯ, ಧಾಮರ್ಿಕ ಪ್ರಮೇಯಗಳನ್ನು ಮುರಿಯಲು ಬಳಸುತ್ತಾರೆ.
4. ಅವರು ಪಠ್ಯದ ನಿಕಟ ಬಿಚ್ಚುನೋಟ ತಂತ್ರವನ್ನು ಬಳಸುತ್ತಾರೆ. ಆದರೆ ಸಂರಚನಾ ಮತ್ತು ಸಂರಚನೋತ್ತರ ವಾದದ ತಂತ್ರಗಳನ್ನು ಹೆಚ್ಚು ಅಳವಡಿಸಿಕೊಳ್ಳುತ್ತಾರೆ. ವಿಶೇಷವಾಗಿ ಸಂಪ್ರದಾಯವಾದಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪ್ರಮೇಯಗಳ ಚೌಕಟ್ಟಿನೊಳಗೆ ಪಠ್ಯದ ನಿಕಟ ವಿಶ್ಲೇಷಣಾ ಪರಂಪರೆಯ ಉತ್ತರಾಧಿಕಾರ ಗುಣ ಮುರಿಯುವುದನ್ನು ಗುರುತಿಸಲು ಉಪಯೋಗಿಸುತ್ತಾರೆ.
5. ಅದೇ ವೇಳೆಯಲ್ಲಿ ಅವರು ಸಾಮಾನ್ಯ ನಿಯಮದ ಪರಂಪರಾಗತ ತಿಳುವಳಿಕೆಯೊಳಗೆ ಪರಿಣಾಮಕಾರಿ ರಾಜಕಾರಣ ಮಧ್ಯಪ್ರವೇಶ ಸ್ಥಾಪಿಸಲು ಎಂದಿಗೂ ಕಷ್ಟವಾಗುವ ಹೆಚ್ಚಾಗಿ ಅಸ್ಪಷ್ಟ ಕೃತಿಗಳ ಬರವಣಿಗೆಯ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ (ಉದಾಹರಣೆಗೆ, ಶಾಲಾ ಶೈಕ್ಷಣಿಕ ಚಟುವಟಿಕೆ ಕುರಿತ ಚರ್ಚಾಗೋಷ್ಟಿಗಳು ಅಥವಾ ರಾಷ್ಟ್ರೀಯ ಸಮಗ್ರತೆ).

ಸಾಂಸ್ಕೃತಿಕ ಉಪಭೋಗವಾದಕ್ಕೊಂದು ಉದಾಹರಣೆ
ಈ ವಿಧಾನದ ಅಸಾಂಪ್ರದಾಯಿಕ ಭಿನ್ನತೆಗೊಂದು ಉದಾಹರಣೆಯಾಗಿದೆ.  ಅಂದರೆ ಟೆರೆನ್ಸ್ ಹಾಕೀಸ್ನ 'ದಟ್ ಶೇಕ್ಸ್ ಪಿಯರ್ ರ್ಯಾಗ್ಸ್' ಪುಸ್ತಕದ 'ತೆಲ್ಮಾ' ಪ್ರಬಂಧ ಈ ಪುಸ್ತಕದಲ್ಲಿ ನಾಲ್ಕನೆಯ ಬರಹ. ಪ್ರತಿಯೊಂದೂ ಬರೆಹ ಶತಮಾನದ ಮೊದಲ ಭಾಗದ ಪ್ರಮುಖ ಶೇಕ್ಸ್ ಪಿಯರ್ ವಿಮರ್ಶಕರ ಕೃತಿಯೊಂದನ್ನು ಕೇಂದ್ರೀಕರಿಸಿದೆ. ಶೇಕ್ಸ್ ಪಿಯರ್ ಹೇಗೆ ತಮಗೆ ಸಂಬಂಧ ಪಟ್ಟಿದ್ದಾನೆ ಹಾಗೂ ಹೇಗೆ ತಮ್ಮನ್ನು ಸಂಸ್ಕರಿಸಿದ್ದಾನೆ ಎಂಬ ದೃಷ್ಟಿಕೋನ ಕೃತಿಯ ಒಟ್ಟಾರೆ ತಂತ್ರವನ್ನು ಒಳಗೊಂಡಿದೆ. 1930ರ 'ವಾಟ್ ಹ್ಯಾಪನ್ಸ್ ಇನ್ ಹ್ಯಾಮ್ಲೆಟ್?' ಎಂಬ ಕೃತಿಯಿಂದ ಹೆಸರು ಪಡೆದ ವಿಮರ್ಶಕ ಜಾನ್ ಡೋವರ್ ವಿಲ್ಸನ್ ಎಂಬುವನು ಈ ಅಧ್ಯಾಯವನ್ನು ಬರೆದಿದ್ದಾನೆ. ಈ ಪುಸ್ತಕದ ಆರಂಭಿಕ ಭಾಗ 'ಹ್ಯಾಮ್ಲೆಟ್' ನಾಟಕದ ಚಕ್ರೀಯ ಮತ್ತು ಔಚಿತ್ಯಪೂರ್ಣ ಅಂಶಗಳ ಮೇಲೆ ಒತ್ತು ಹಾಕುತ್ತ ಬಗೆದು ನೋಡುತ್ತದೆ. ಅವೆಂದರೆ : ಆರಂಭ ಹೇಗೆ ಮುಕ್ತಾಯವನ್ನು ಪ್ರತಿಧ್ವನಿಸುತ್ತದೆ, ಒಂದೇ ಬಗೆಯ ಸನ್ನಿವೇಶ (ಹಲವು ತಂದೆ-ಮಗ ಪರ್ಯಾಯಗಳ ಹಾಗೆ) ಹಲವು ಬಾರಿ ಹೇಗೆ ಸಂಭವಿಸುತ್ತದೆ ಹಾಗೂ ಯಾವುದೇ ಪ್ರದರ್ಶನದ ಆರಂಭ ಮತ್ತು ಮುಕ್ತಾಯ ಹೇಗೆ ಅನಿಶ್ಚಿತವಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತದೆ. ಇದರಿಂದ ನಾಟಕ ಜನತೆಯ ಮನಸ್ಸಿನಲ್ಲಿ ಅದನ್ನು ಅವರು ನೋಡುವ ಮೊದಲೇ ಈಗಾಗಲೇ ಯಾವುದೋ ಹಾದಿಯಲ್ಲಿ ಸಾಂಸ್ಕೃತಿಕವಾಗಿ ನೆಲೆಸಿರುತ್ತದೆ ಎಂದು ತೋರಿಸಿಕೊಡುತ್ತದೆ. ನಾಟಕದಲ್ಲಿ (ವರ್ತಮಾನಕ್ಕಿಂತ ಉತ್ತಮವಾದ ಭೂತಕ್ಕಾಗಿ) ಸಿಂಹಾವಲೋಕನ ಮಾಡುವ ಪುನರಾವರ್ತಿತ ಉದ್ದೇಶ ಹಾಕೀಸ್ನಿಗೆ ತನ್ನ ಶೀಷರ್ಿಕೆಯ 'ತೆಲ್ಮಾ' ನೆರಳುಗಳ ಮೂಲಕ ನಿಜವಾದ ನಾಟಕ 'ತಲೆಕೆಳಗಾದ' ಹ್ಯಾಮ್ಲೆಟ್ಅನ್ನು ಕಲ್ಪಿಸಲು ದಾರಿ ತೋರಿಸಿದೆ.
ಎರಡನೆಯ ಭಾಗವನ್ನು 'ಟು ದಿ ಸಂಡರ್ ಲ್ಯಾಂಡ್ ಸ್ಟೇಷನ್' ಎಂದು ಹೆಸರಿಡಲಾಗಿದೆ. ಇದು 'ಟು ದಿ ಫಿನ್ಲ್ಯಾಂಡ್ ಸ್ಟೇಷನ್' ಎಂದು ಕರೆದಿರುವ ರಷ್ಯಾ ಕಾಂತ್ರಿಯ ಸುಪ್ರಸಿದ್ಧ ಇತಿಹಾಸ ಶೀರ್ಷಿಕೆಯನ್ನು ಅಪ್ರತ್ಯಕ್ಷವಾಗಿ ಸೂಚಿಸುತ್ತದೆ. ಯುದ್ಧ ಸಾಮಾಗ್ರಿ ಕಾರ್ಖಾನೆಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಕಳಿಸಿಕೊಟ್ಟ ಪರಿಣಾಮವಾಗಿ ಜಾನ್ ಡೋವರ್ ವಿಲ್ಸನ್ನು 1917ರಲ್ಲಿ ಸಂಡರ್ಲ್ಯಾಂಡ್ಗೆ ರೈಲಿನಲ್ಲಿ ಪಯಣಿಸಿದ ವಿವರಗಳನ್ನು ನೀಡಿದೆ ಹಾಗೂ ಡಬ್ಲ್ಯು. ಡಬ್ಲ್ಯು. ಗ್ರೇಗ್ನ 'ಹ್ಯಾಮ್ಲೆಟ್' ಕುರಿತ ಲೇಖನ ಓದಲಾಗಿದೆ. ಅದು ರಾಜನು ಮೂಕ ನಾಟಕಕ್ಕೆ ಮುಕ್ತವಾಗಿ ಪ್ರತಿಕ್ರಿಯೆ ನೀಡಲು ವಿಫಲನಾಗುವುದು, ಆತ ಕತೆ ಪುಸ್ತಕಗಳ ಖಳ ನಾಯಕನಾಗಿರದೆ ಒಂದು ಬಗೆಯ ಸಂಕೀರ್ಣ ವ್ಯಕ್ತಿತ್ವದವನಾಗಿದ್ದುದೆ ಕಾರಣವೆಂದು ವಾದ ಮಂಡಿಸುತ್ತದೆ. ಅವನು ಇದೇ ಆಗಿದ್ದರೆ ನಂತರ ನಮ್ಮ ಗಮನವನ್ನು ಸ್ವಲ್ಪವಾದರೂ ತನ್ನ ಕಡೆ ಸೆಳೆಯಲು ಆರಂಭಿಸುತ್ತಿದ್ದ. ಆದರೆ ಹ್ಯಾಮ್ಲೆಟ್ ಕುರಿತು ಪ್ರತ್ಯೇಕವಾಗಿ ಕೇಂದ್ರೀಕರಿಸುವುದರಿಂದ ತಾನೇ ಬೇರೆ ಕಡೆಗೆ ಗಮನ ಹೊರಳಿಸಿದ್ದಾನೆ. ಇದು ರೊಮ್ಯಾಂಟಿಕ್ ಕಾಲದ ನಾಟಕಕ್ಕೆ ಪ್ರತಿಕ್ರಿಯಿಸುವ ಪರಂಪರಾಗತ ಮಾರ್ಗವಾಗಿದೆ. ಈ ತಿಳುವಳಿಕೆಯ ಬಗ್ಗೆ ವಿಲ್ಸನ್ನ ಕೆರಳಿದ ಸಿಟ್ಟು ತನ್ನ ರಷ್ಯಾ ಕುರಿತ ಪ್ರಕಟಿತ ಬರಹಗಳಲ್ಲಿ ವ್ಯವಸ್ಥೆಗಾಗಿ ವ್ಯಕ್ತವಾದ ದುರಭಿಮಾನದ ಬಯಕೆಗೆ ಸಂಬಂಧಿಸಿದುದಾಗಿದೆ. ಅದು ರಷ್ಯಾವನ್ನು ಚಿತ್ರವತ್ತಾದ 'ಜೈವಿಕ' ಊಳಿಗಮಾನ್ಯ ಪ್ರಭುತ್ವದ ಹಾಗೆ ನೋಡುತ್ತದೆ. ಅದರ ಬದಲು ತನ್ನ ಸಾಮಾಜಿಕ ಮಾರ್ಗವನ್ನು ಹಂಬಲದಿಂದ ಗೌರವಿಸುವ ಹಾಗೂ ಭಯವನ್ನು ತೊರೆದಿರುವ ಇಂಗ್ಲೆಂಡಿನ ಹಾಗೆ ರಷ್ಯಾವನ್ನು ಕಾಣಬಯಸುತ್ತಾನೆ. ಗ್ರೇಗ್ಗೆ  ತನ್ನ ಪ್ರತ್ಯುತ್ತರದಲ್ಲಿ ಮತ್ತು ನಂತರ ತನ್ನ 'ಹ್ಯಾಮ್ಲೆಟ್' ಪುಸ್ತಕದಲ್ಲಿ ಬೆದರಿಕೆಗೆ ಒಳಗಾದ ಸಾಂಸ್ಕೃತಿಕ ಪ್ರತಿಮೆ, ಹ್ಯಾಮ್ಲೆಟ್ನ ರಕ್ಷಣೆಗಾಗಿ ಡೋವರ್ ವಿಲ್ಸನ್ ಧಾವಿಸುವಿಕೆ-ಇವೆಲ್ಲಾ ರೋಗ ಸೂಚಕ ಲಕ್ಷಣಗಳ ಹಾಗೆಯೆ ಕಾಣುತ್ತದೆ. ಮೊದಲ ಜಾಗತಿಕ ಯುದ್ಧದ ಸ್ವಲ್ಪ ಕಾಲದ ನಂತರ ವಿಲ್ಸನ್ ನ್ಯೂಬೋಲ್ಟ್ ಕಮಿಟಿ ಸದಸ್ಯರಾದನು. ಈ ಕಮಿಟಿ ಇಂಗಿಶ್ ಬೋಧನೆ ಕುರಿತ ವರದಿ ಹಾಗೂ ರಷ್ಯಾದಲ್ಲಿ ಹಠತ್ತಾಗಿ ಸಂಭವಿಸಿದ ಅಪಾಯದಿಂದ ರಾಷ್ಟ್ರವನ್ನು ಪಾರು ಮಾಡುವ ಸಾಮಾಜಿಕ ಸುಸಂಬದ್ಧತೆಯ ರೂಪವೊಂದನ್ನು ಒದಗಿಸುವ ಹಾಗೆ ಕಂಡಿತು. 'ವಾಟ್ ಹಾಪನ್ಸ್ ಇನ್ ಹ್ಯಾಮ್ಲೆಟ್?' ಕುರಿತು  ನೆವಿಲ್ಲೆ ಚೆಂಬರ್ಲಿನ್ ಹೊಗಳಿ ಬರೆದ ಪತ್ರದಿಂದಲೂ ಹಾಕೀಸ್ ಉಲ್ಲೇಖಿಸುತ್ತಾನೆ, ಅಲ್ಲದೆ ವ್ಯತ್ಯಾಸವನ್ನೊಳಗೊಂಡ ಮತ್ತು ಸಮಾಧಾನ ಪಡಿಸುವ ಮಾದರಿಯೊಂದನ್ನು ಹುಟ್ಟು ಹಾಕುತ್ತಾನೆ. ಇಪ್ಪತ್ತನೆಯ ಶತಮಾನದ ಜೀವನ ವಿಧಾನದಿಂದ ಹಲವಾರು ಸಹ-ಪಠ್ಯಗಳಲ್ಲಿ ನಾಟಕ ವಿಶ್ಲೇಷಣಾ ಮಾರ್ಗವೊಂದನ್ನು ಇದು ಗೊತ್ತು ಮಾಡಿತು, ಹಾಗೆಯೆ ಇಡೀ ನಾಟಕ ಸಾಂಸ್ಕೃತಿಕವಾಗಿ ಪರಿವರ್ತನೆ ಹೊಂದಿತು. ನಾಟಕದ ಕೊನೆಯಲ್ಲಿ ಹೆಚ್ಚುವರಿ ರಂಗ ನಿರ್ದೇಶನವೊಂದು ಒಳತೂರಿರುವುದನ್ನು ಹಾಕೀಸ್ನ ಅಂತಿಮ ಓದುವಿಕೆ ಒಳಗೊಂಡಿದೆ. ಈ ಬಗೆಯ ವಿಮರ್ಶೆಗೆ ಆತ ಅನುಸರಿಸಿದ ಮಾದರಿಯೆಂದರೆ ತಾನು ಪಡೆದ ಪಠ್ಯವನ್ನು ತಲುಪಿಸಿದ ಆದರೆ ತಾನು ಪ್ರದರ್ಶಿಸುವುದನ್ನು ಪರಿವರ್ತಿಸುವ ಜಾಸ್ ಸಂಗೀತಗಾರನ ಮಾದರಿಯದು. ವಿಮರ್ಶೆಯ ವಿಭಿನ್ನ ಗುಣ ಲಕ್ಷಣದ ಹಾಗೆ ಸಾಂಸ್ಕೃತಿಕ ಉಪಭೋಗವಾದ ಅದನ್ನು ತೆಗೆದುಕೊಂಡಿರಬಹುದು.
ಈ ಬಗೆಯ ಬರವಣಿಗೆಯಲ್ಲಿ 'ಸ್ಥಾನ' ಗೊತ್ತು ಪಡಿಸುವಿಕೆ ಹೇಗೆಂದು ತಿಳಿಯುವುದು ಕಷ್ಟ. ಇದರ ದನಿ ಜೀವಂತವಾಗಿ ಮತ್ತು ಆಸಕ್ತಿದಾಯಕವಾಗಿ, ವ್ಯಕ್ತಿಗತ ಮತ್ತು ಪ್ರವೃತ್ತಮಯವಾಗಿರುತ್ತದೆ, ಶಾಸ್ತ್ರೀಯ ಬರವಣಿಗೆಯ ಬಹುಪಾಲು ನಿಯಮಾನುಸರಣೆಯನ್ನು ಸಡಿಲಿಸುತ್ತದೆ. ಆರಂಭಗಳು ನಾಟಕೀಯವಾಗಿರುತ್ತವೆ, ಏಕಾಏಕಿ ಬದಲಾವಣೆಗೆ ಒಳಗಾಗುತ್ತವೆ, ಗರಿಷ್ಟ ಪರಿಣಾಮದ ಕ್ಷಣದ ವರೆಗೆ ಸನ್ನಿವೇಶ ಅಥವಾ ಸನ್ನಿವೇಶಗಳಂತೆ ತೋರುವ ಮಾಲೆಗಳಾಗಿದ್ದು ನಿಕಟವಾಗಿ ಹೆಣೆದುಕೊಂಡಿರುತ್ತವೆ. ಈ ಎಲ್ಲ ಲಕ್ಷಣಗಳು ಕಾದಂಬರಿಯದ್ದಾಗಿದೆ- ನವಚಾರಿತ್ರಿಕವಾದದಲ್ಲಿ ಸಾಹಿತ್ಯ ಮತ್ತು ಚರಿತ್ರೆ ಪರಸ್ಪರ ಹೆಣೆದುಕೊಂಡಿರುವ ಹಾಗೆ. ಇಲ್ಲಿ 'ಸೃಜನಶೀಲ ಬರವಣಿಗೆ' ಎಂಬಂಥ ಸ್ಪಷ್ಟವಾದ ವಿವೇಕವೊಂದಿದ್ದು, ಅದು ಸಾಹಿತ್ಯ ಮತ್ತು ವಿಮರ್ಶೆ ನಡುವಿನ ಯಾವುದೇ ಸಂಪೂರ್ಣ ಭಿನ್ನತೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನವಚಾರಿತ್ರಿಕವಾದದ ನಮ್ಮ ಕಾಲಕ್ಕಿಂತ ಹೆಚ್ಚಾಗಿ ಸ್ವಂತ ಸಂದರ್ಭದಲ್ಲಿ ಕೂಡ ದೃಷ್ಟಿಕೋನ ಮತ್ತು ಚಾರಿತ್ರಿಕಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಓದಿಗಾಗಿ

ಚೇಸ್, ಸಿಂತಿಯಾ, ಎಡಿಟರ್. ರೊಮ್ಯಂಟಿಸಂ, (ಲಾಂಗ್ಮ್ಯಾನ್ ಕ್ರಿಟಿಕ್ ರೀಡರ್ಸ್, 1993) ನವಚಾರಿತ್ರಿಕವಾದಿ ವಿಧಾನಗಳ ಮೂರು ಉದಾಹರಣೆಗಳನ್ನು ಒಳಗೊಂಡಿದೆ. ಅವು : ಕೋಲ್ರಿಡ್ಜ್ ನ ಕ್ರಿಸ್ಟಬೆಲ್ ಬಗ್ಗೆ ಕರೆನ್ ಸ್ವಾನ್, ಕೀಟ್ಸ್ ಕುರಿತು ಮೇಜರಿ ಲಾನ್ಸನ್ ಹಾಗೂ ಬೈರನ್ನನ ಸರ್ಡಾನಪಲಸ್ ಮೇಲೆ ಜರೊಮಿ ಕ್ರಿಸ್ಟೆನ್ಸೆನ್ರ ಅಧ್ಯಾಯಗಳು.

ಡಾಲಿಮೋರ್, ಜೊನಾಥನ್ ಅಂಡ್ ಸಿನ್ಫೀಲ್ಡ್, ಅಲನ್, ಎಡಿಟರ್ಸ್. ಪೊಲಿಟಿಕಲ್ ಶೇಕ್ಸ್ಪಿಯರ್: ನ್ಯೂ ಎಸೇಸ್ ಇನ್ ಕಲ್ಚರಲ್ ಮೆಟೀರಿಯಲಿಜಂ (ಮ್ಯಾಂಚಸ್ಟರ್ ಯೂನಿವರ್ಸಿಟಿ ಪ್ರೆಸ್, ಸೆಕೆಂಡ್ ಎಡಿಷನ್ 1994) ಪ್ರ್ರಸ್ತಾವನೆ ನವಚಾರಿತ್ರಿಕವಾದ ಕುರಿತು ಉಪಯುಕ್ತ ವಿವರಗಳನ್ನು ನೀಡುತ್ತದೆ. ಹಾಗೂ ಅದು ಹೇಗೆ ಸಾಂಸ್ಕೃತಿಕ ಉಪಭೋಗವಾದದಿಂದ ಭಿನ್ನ ಎಂಬುದನ್ನು ವಿವರಿಸುತ್ತದೆ. ಈ ಕೃತಿ ಗ್ರೀನ್ಬ್ಲಾಟ್ನ ಇನ್ವಿಸಿಬಲ್ ಬುಲೆಟ್ಸ್ ಪ್ರಬಂಧವನ್ನು ಮರು ಮುದ್ರಿಸಿದೆ.

ಡ್ರಾಕೀಸ್, ಜಾನ್, ಎಡಿಟರ್.ಆಲ್ಟರ್ನೇಟೀವ್ ಶೇಕ್ಸ್ಪಿಯರ್ (ಮ್ಯಾಥ್ಯೂನ್, 1985) ಈ ಪ್ರಬಂಧಗಳಲ್ಲಿ 'ಸಾಂಸ್ಕೃತಿಕ ಉಪಭೋಗವಾದ ' ಪಾರಿಭಾಷಿಕ ಪದವನ್ನು ಬಳಸಿಕೊಂಡಿಲ್ಲ. ಆದರೆ ಅವು ಈ ವಿಧಾನವನ್ನು ಸಾಮಾನ್ಯವಾಗಿ ಪ್ರತಿನಿಧಿಸುತ್ತವೆ. ಅವು 'ಶೇಕ್ಸ್ಪಿಯರ್ ವಿಮಶರ್ೆಯ ಸ್ಥಾಪಿತ ನಿಯಮಗಳ ಮುರಿತಕ್ಕೆ ಚಾಲನೆ ನೀಡಲು 'ಐತಿಹಾಸಿಕವಾಗಿ ನಿದರ್ಿಷ್ಟ ಓದುಗಳನ್ನು ಹುಟ್ಟು ಹಾಕಿದ ಮಾರ್ಗಗಳ ಶೋಧನೆಗಳು' ವಿನಾಯಿತಿ ನೀಡಲು ಕೇಳುತ್ತವೆ.

ಗ್ರಾಡಿ, ಹ್ಯೂ, ದಿ ಮಾಡ್ರನಿಸ್ಟ್ ಶೇಕ್ಸ್ಪಿಯರ್ (ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 1991) ಪುಟ 225-235 ನವಚಾರಿತ್ರಿಕವಾದ ಕುರಿತವು. ಯಾವಾಗಲೂ ಚುರುಕಾಗಿ ಓದಿಸಿಕೊಂಡು ಹೋಗಬಲ್ಲ ಉತ್ತಮ ಕೃತಿ. ಟಿಲ್ಯಾಡರ್್ ಕುರಿತ ನಾಲ್ಕನೆಯ ಅಧ್ಯಾಯ ('ಹಳೆಯ ಚಾರಿತ್ರಿಕವಾದ') ತುಂಬಾ ಉಪಯುಕ್ತ. ಐದನೆಯ ಅಧ್ಯಾಯ ಶೇಕ್ಸ್ಪಿಯರ್ನಿಗೆ ಸಮಕಾಲೀನ ವಿಮಶರ್ಾ ವಿಧಾನಗಳನ್ನು ಹೇಗೆ ಅನ್ವಯಿಸಬೇಕೆಂದು ಚಚರ್ಿಸುತ್ತದೆ.

ಗ್ರೀನ್ಬ್ಲಾಟ್, ಸ್ಟೀಫನ್, ಶೇಕ್ಸ್ಪೀರಿಯನ್ ನೆಗೋಷಿಯೇಷನ್ಸ್: ದಿ ಸರ್ಕ್ಯುಲೇಷನ್ ಆಫ್ ಸೋಷಿಯಲ್ ಎನರ್ಜಿ ಇನ್ ರೆನೈಸಾನ್ಸ್ ಇಂಗ್ಲೆಂಡ್, (ಕ್ಯಾಲಿಫೋರ್ನಿಯಾ ಪ್ರೆಸ್, 1991) ಶೇಕ್ಸ್ಪಿಯರ್ ಕಾಮಿಡಿಗಳಲ್ಲಿ ಉಡುಪುಗಳ ಅದಲು ಬದಲು ಕುರಿತ ಪ್ರಬಂಧ ಫಿಕ್ಷನ್ ಅಂಡ್ ಫ್ರಿಕ್ಷನ್, ನವಚಾರಿತ್ರಿಕವಾದ ಕುರಿತು ಮೂಲಭೂತ ವಿಷಯಗಳು ಚೆನ್ನಾಗಿವೆ. ಈ ಕೃತಿಯ ಅತ್ಯುತ್ತಮ ಬರಹ ಇನ್ವಿಸಿಬಲ್ ಬುಲೆಟ್ಸ್ ಪ್ರಬಂಧ.

ಹಾಕೀಸ್, ಟೆರೆನ್ಸ್, ದಟ್ ಶೇಕ್ಸ್ಪೀರಿಯನ್ ರ್ಯಾಗ್  (ಮ್ಯಾಥ್ಯೂನ್, 1986)ಸಾಂಸ್ಕೃತಿಕ ಉಪಭೋಗವಾದದ ಉದಾಹರಣೆಗಳು ಕಾರ್ಯರೂಪಕ್ಕಿಳಿಸಲಾಗಿದೆ. ಇಡೀ ಪುಸ್ತಕ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಆ ಓದು ಗಾಬರಿಗೊಳಿಸುವ ಕೆಲವು ಶೇಕ್ಸ್ಪಿಯರ್ನ ವೈರುಧ್ಯಗಳು ಹಾಗೂ ಅವನನ್ನು ನಾವು ಎದುರುಗೊಳ್ಳುವ ಸಂದರ್ಭಗಳು ಉಂಟು ಮಾಡುತ್ತದೆ.

ಹೋಲ್ಡರ್ನೆಸ್, ಗ್ರಾಹಂ, ದಿ ಶೇಕ್ಸ್ಪಿಯರ್ ಮಿತ್ (ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್, 1988) `ಸಾಂಸ್ಕೃತಿಕವಾಗಿ ಹುಟ್ಟು ಹಾಕಿದ ಮತ್ತು ಐತಿಹಾಸಿಕವಾಗಿ ನಿರ್ಣಯಿಸಿದ ಶೇಕ್ಸ್ಪಿಯರ್ ದಂತಕತೆಗಳ' ಅಧ್ಯಯನ , ಜೊತೆಗೆ 'ದೂರದರ್ಶನ, ಪತ್ರಿಕೋದ್ಯಮ, ರಂಗಭೂಮಿ, ಶಿಕ್ಷಣ ಕ್ಷೇತ್ರಗಳಲ್ಲಿನ ಶೇಕ್ಸ್ಪಿಯರ್ನ ಪ್ರಮುಖ ಮಧ್ಯಸ್ಥಗಾರರೊಂದಿಗಿನ ಸಂದರ್ಶನ'

ಲೆವಿನ್ಸನ್, ಮೆಜರಿ, ಎಡಿಟರ್: ರಿಥಿಂಕಿಂಗ್ ಹಿಸ್ಟಾರಿಸಿಸಂ: ಕಲ್ಚರಲ್ ರೀಡಿಂಗ್ಸ್ ಇನ್ ರೋಮ್ಯಾಂಟಿಕ್ ಹಿಸ್ಟರಿ (ಬ್ಲ್ಯಾಕ್ ವೆಲ್, 1989) ನವಚಾರಿತ್ರಿಕವಾದವನ್ನು ರೊಮ್ಯಾಂಟಿಸಮ್ಗೆ ಅನ್ವಯಿಸಲಾಗಿದೆ.

ವೀಸ್ಸೆರ್, ಹೆಚ್. ಆರಂ, ಎಡಿಟರ್: ದಿ ನ್ಯೂ ಹಿಸ್ಟಾರಿಸಿಸಂ (ರುಟ್ಲೆಡ್ಜ್, 1989) ಒಂದು ಉಪಯುಕ್ತ, ಮೌಲ್ಯಯುತ ಆಕರ ಗ್ರಂಥ.

ವಿಲ್ಸನ್, ರಿಚರ್ಡ್ ಅಂಡ್ ಡಟ್ಟನ್, ರಿಚರ್ಡ್, ಎಡಟರ್ಸ್: ನ್ಯೂ ಹಿಸ್ಟಾರಿಸಿಸಂ ಅಂಡ್ ರೆನೈಸಾನ್ಸ್ ಡ್ರಾಮ (ಲಾಂಗ್ಮ್ಯಾನ್, 1992) ಪ್ರಮುಖ ಲೇಖನಗಳ ಒಂದು ಉಪಯುಕ್ತ ಸಂಗ್ರಹ, ಉತ್ತಮವಾಗಿ ಪರಿಚಯಿಸಲಾಗಿದೆ.

-ಪೀಟರ್ ಬ್ಯಾರಿ