ಭಾನುವಾರ, ಜೂನ್ 12, 2011

ರಕ್ಷಕ

ಸುಮಾರು 1991ರಲ್ಲಿ  ಇಂಡಿಯನ್ ಲಿಟರೇಚರ್ ನ ಸಂಚಿಕೆಯೊಂದರಲ್ಲಿ ಒ ಎನ್ ವಿ ಕುರುಪ್ ಅವರ ಈ ಕವಿತೆ ಓದಿದೆ. ದೈವದ ಸರ್ವಶಕ್ತ ಕಲ್ಪನೆ ಮತ್ತು ದೀನನೊಬ್ಬ ದೈವದ ನೆರವು ನಂಬಿ ಕುಳಿತ ಸ್ಥಿತಿ - ಈ ಚಿತ್ರದಲ್ಲಿರುವ ವೈರುಧ್ಯ.  ಓದುಗನಿಗಿದು ಸತ್ಯ ಗೋಚರ ಮಾಡಿಸುತ್ತಿರುವ ರೀತಿ ಬೇರೆ ಬಗೆಯದಾಗಿ ಕಂಡಿತು. ಅದರ ಗುಂಗಿನಲ್ಲಿ ಕನ್ನಡ ರೂಪವೂ ಸಿದ್ಧವಾಗಿ ಸಂಚಯದಲ್ಲಿ ಪ್ರಕಟವೂ ಆಯಿತು. ಇದನ್ನು ನನ್ನ ಬೊಡ್ಡೆ ಚಿಗುರು ಸಂಕಲನದಲ್ಲಿ ಸೇರಿಸಿದ್ದೆ. ಈಗ ನಿಮ್ಮ ಮುಂದಿರಿಸುತ್ತಿದ್ದೇನೆ.  

#
ಮಲಯಾಳಂ- ಒ ಎನ್ ವಿ ಕುರುಪ್

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ಸಾಸಿವೆ ಸಾಸಿರ ಹೆಸರು ಏನೊ
ತಿಳಿಯಲಾರೆವು ನಿನ್ನ ನಿಜನಾಮವನ್ನು
ಅರಿಯಲಾರೆವು ನಿನ್ನ ಮೊಗಭಾವವನ್ನು
ಕಂಡರಿಯೆವು ನಿನ್ನ ಹೆಜ್ಜೆ ಗುರುತುಗಳನ್ನು
ಹೊಸತು ಅವತಾರ ಹೊತ್ತು ಬರುವೆಯೆಂದು
ಕಾದಿರುವೆವು ನಾವು ದೀನ ಯಾವಾಗಲೂ

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ನಿನ್ನ ಬಣ್ಣವದು ಏನು? ಹೇಗಂತೆ ಅಣ್ಣ?
ಅದು ನೀಲಿ ಹೂವಂತೆ? ಬೆಣ್ಣೆಯಂತೆ?
ನಮಗೆ ತಿಳಿಯದೊ ಅಣ್ಣ
ನಿನ್ನ ಮೊಗವದು ಹೇಗೊ ತಿಳಿಯದು
ನಿನ್ನ ದನಿಯದು ಹೇಗೊ ತಿಳಿಯದು
ದಲ್ಲಾಳಿ ದೀವಾಳಿ ಯಾವಾಗಲೂ ನಾವು
ಕಾದಿರುವೆವು ನೀನು ಬರುವೆಯೆಂದು

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ನಿನ್ನ ವಸನವದು ಏನು? ಹೇಗಂತೆ ಚೆಂದ?
ರೇಷಿಮೆಯೊ ಹತ್ತಿಯೊ? ಎಲೆ ಬಳ್ಳಿ ಚರ್ಮವೊ?
ಅದು ಏನೊ ಅರಿಯೆವು
ಮುಂಗೈ ಮುಂದಕ್ಕೆ ಉಗುರು ಹಚ್ಚೆ?
ಕೋಲು ಕೋಲಿನ ಕೊಳಲು ನಿನ್ನ ಕೈಯಲ್ಲಿ?
ಹೇಗಾದರೂ ಸರಿಯೆ ಮೈದೋರಿ ನಮ್ಮಲ್ಲಿ
ಹುಚ್ಚೆದ್ದು ನಮ್ಮೊಳಗೆ ಬರುವನವನು
ಆ ರಕ್ಷಕನಿಗಾಗಿ ನಾವು ಇಹೆವು

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ಮಲಯಾಳಂ-ಒ ಎನ್ ವಿ ಕುರುಪ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ